ಪ್ರಧಾನಮಂತ್ರಿ ಕಿಸಾನ್ ಸಮ್ಮಾನ ನಿಧಿ ಯೋಜನೆ (ಪಿಎಂ ಕಿಸಾನ್) 17ನೇ ಕಂತಿನ ಬಿಡುಗಡೆ ವಿಚಾರದಲ್ಲಿ ಪ್ರದಾನಿ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರ್ಕಾರವನ್ನು ತರಾಟೆಗೆ ತೆಗೆದುಕೊಂಡಿರುವ ಕಾಂಗ್ರೆಸ್, “ಪಿಎಂ ಕಿಸಾನ್ ಮೊತ್ತವು ರೈತರಿಗೆ ನೀಡುವ ‘ಪ್ರಸಾದ’ವಲ್ಲ, ಅದು ಅವರ ಕಾನೂನುಬದ್ಧ ಹಕ್ಕು” ಎಂದು ಹೇಳಿದೆ.
ಜೂನ್ 9ರಂದು ಪ್ರಧಾನಿ ನರೇಂದ್ರ ಮೋದಿ ಮೂರನೇ ಬಾರಿಗೆ ಪ್ರಮಾಣ ವಚನ ಸ್ವೀಕರಿಸಿದ ಬಳಿಕ ಮೊದಲಿಗೆ ಪಿಎಂ ಕಿಸಾನ್ನ 17ನೇ ಕಂತು ಬಿಡುಗಡೆಗೆ ಸಹಿ ಹಾಕಿದ್ದಾರೆ. ಇದನ್ನು ಹಲವಾರು ಮಾಧ್ಯಮಗಳು ಸುದ್ದಿ ಮಾಡಿದ್ದರು. ಇದನ್ನು ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಜೈರಾಮ್ ರಮೇಶ್ ಟೀಕಿಸಿದ್ದಾರೆ.
ಈ ಬಗ್ಗೆ ಎಕ್ಸ್ನಲ್ಲಿ ಪೋಸ್ಟ್ ಮಾಡಿರುವ ಜೈರಾಮ್ ರಮೇಶ್, “ಮೂರನೇ ಒಂದು ಭಾಗದ ಪ್ರಧಾನಿಯ ಪಿಆರ್ ಅಭಿಯಾನವು ಮೂರನೇ ಅವಧಿಯ ಮೊದಲ ದಿನದಿಂದ ಮತ್ತೆ ಪ್ರಾರಂಭವಾಗಿದೆ. ಅಧಿಕಾರ ವಹಿಸಿಕೊಂಡ ನಂತರ ಅವರು ಪಿಎಂ ಕಿಸಾನ್ ನಿಧಿಯ 17ನೇ ಕಂತು ನೀಡುವ ಮೊದಲ ಕಡತಕ್ಕೆ ಸಹಿ ಹಾಕಿದ್ದಾರೆ ಎಂದು ಘಂಟಾಘೋಷವಾಗಿ ಹೇಳಲಾಗುತ್ತಿದೆ. ಆದರೆ ಕಾಲಾನುಕ್ರಮವನ್ನು ಅರ್ಥಮಾಡಿಕೊಳ್ಳಿ” ಎಂದು ಹೇಳಿದ್ದಾರೆ.
ಇದನ್ನು ಓದಿದ್ದೀರಾ? 17ನೇ ಕಂತಿನ ಕಿಸಾನ್ ನಿಧಿ ಅನುದಾನ ಬಿಡುಗಡೆಗೆ ಸಹಿ ಹಾಕಿದ ಪ್ರಧಾನಿ
“ಪಿಎಂ ಕಿಸಾನ್ ನಿಧಿಯ 16ನೇ ಕಂತನ್ನು ಜನವರಿ 2024ರಲ್ಲಿ ಜಾರಿ ಮಾಡಲಾಗಿದೆ. ಪ್ರಧಾನಿಯವರು ಹಿಂದಿನ ಚುನಾವಣೆಯ ಲಾಭವನ್ನು ಪಡೆಯಬೇಕಾಗಿತ್ತು. ಆದ್ದರಿಂದ ಒಂದು ತಿಂಗಳು ವಿಳಂಬ ಮಾಡಲಾಗಿತ್ತು. 17ನೇ ಕಂತನ್ನು ಏಪ್ರಿಲ್/ಮೇ ನಡುವೆ ಜಾರಿ ಮಾಡಬೇಕಾಗಿತ್ತು. ಆದರೆ ಮಾದರಿ ನೀತಿ ಸಂಹಿತೆ ಇದ್ದ ಕಾರಣ ಜಾರಿ ಮಾಡುವುದು ವಿಳಂಬವಾಗಿದೆ” ಎಂದು ವಿವರಿಸಿದ್ದಾರೆ.
एक तिहाई प्रधानमंत्री का हेडलाइन मैनेजमेंट और PR अभियान तीसरे कार्यकाल के पहले दिन से फिर शुरू हो गया है। इस बात को लेकर ढिंढोरा पीटा जा रहा है कि उन्होंने पदभार ग्रहण करने के बाद पहली फ़ाइल पर हस्ताक्षर पीएम किसान निधि की 17वीं किस्त प्रदान करने के लिए किया है। लेकिन आप जरा… pic.twitter.com/0OZpu9z3Xf
— Jairam Ramesh (@Jairam_Ramesh) June 10, 2024
“ಇಂತಹ ಪರಿಸ್ಥಿತಿಯಲ್ಲಿ ಮೂರನೇ ಒಂದು ಭಾಗದ ಪ್ರಧಾನಿ ಈ ಕಡತಕ್ಕೆ ಸಹಿ ಹಾಕುವ ಮೂಲಕ ಯಾರಿಗೂ ದೊಡ್ಡ ಉಪಕಾರ ಮಾಡಿಲ್ಲ. ಇದು ಅವರ ಸರ್ಕಾರದ ಸ್ವಂತ ನೀತಿಯ ಪ್ರಕಾರ ರೈತರ ನ್ಯಾಯಸಮ್ಮತ ಹಕ್ಕಾಗಿದೆ. ಆಡಳಿತಾತ್ಮಕ ನಿರ್ಧಾರಗಳನ್ನು ಕೂಡಾ ಪ್ರಚಾರ ಮಾಡುವ ಅಭ್ಯಾಸ ಅವರು ಹೊಂದಿದ್ದಾರೆ. ಸ್ಪಷ್ಟವಾಗಿ ಹೇಳಬೇಕಾದರೆ ಅವರು ಜೈವಿಕ ಜೀವಿ ಅಲ್ಲ, ದೈವಿಕ ಜೀವಿ ಎಂದು ಪರಿಗಣಿಸುತ್ತಾರೆ” ಎಂದು ಲೇವಡಿ ಮಾಡಿದ್ದಾರೆ.
ಇದನ್ನು ಓದಿದ್ದೀರಾ? ರಾಯಚೂರು | ಹಲವು ಬೇಡಿಕೆ ಈಡೇರಿಕೆಗೆ ರೈತ ಸಂಘ ಆಗ್ರಹ
ಹಾಗೆಯೇ “ರೈತರ ಬಗ್ಗೆ ಅಷ್ಟೊಂದು ಕಾಳಜಿಯಿದ್ದರೆ, ಸ್ವಾಮಿನಾಥನ್ ಸೂತ್ರದ ಆಧಾರದ ಮೇಲೆ ಎಂಎಸ್ಪಿ ಕಾನೂನು ಖಾತರಿ ನೀಡಿ, ಸಾಲ ಮನ್ನಾ ಯೋಜನೆಯನ್ನು ಪರಿಣಾಮಕಾರಿಯಾಗಿ ಅನುಷ್ಠಾನಗೊಳಿಸಲು ಶಾಶ್ವತ ಆಯೋಗ ರಚಿಸಿ, ಬೆಳೆ ನಷ್ಟವಾದ 30 ದಿನಗಳೊಳಗೆ ಹಣವನ್ನು ನೇರವಾಗಿ ಖಾತೆಗೆ ವರ್ಗಾಯಿಸಿ, ರೈತರೊಂದಿಗೆ ಸಮಾಲೋಚಿಸಿ ಹೊಸ ಆಮದು-ರಫ್ತು ನೀತಿ ಜಾರಿ ಮಾಡಿ, ಕೃಷಿಗೆ ಅಗತ್ಯವಿರುವ ಎಲ್ಲ ಸರಕು ಸೇವೆಗಳಿಗೆ ಜಿಎಸ್ಟಿಯನ್ನು ತೆಗೆದುಹಾಕಿ” ಎಂದು ಆಗ್ರಹಿಸಿದ್ದಾರೆ.
ಪಿಎಂ ಕಿಸಾನ್ ಯೋಜನೆ ಮೂಲಕ ವಾರ್ಷಿಕವಾಗಿ ಆರು ಸಾವಿರ ರೂಪಾಯಿಯನ್ನು ರೈತರ ಖಾತೆಗೆ ಜಮೆ ಮಾಡಲಾಗುತ್ತದೆ. ಆರಂಭದಲ್ಲಿ ಈ ಮೊತ್ತ ಜಮೆಯಾಗುತ್ತಿದ್ದರೂ ಕೂಡಾ ಈಗ ಹಲವಾರು ನಿಯಮಗಳಿಂದಾಗಿ ರೈತರ ಖಾತೆಗೆ ಮೊತ್ತ ಜಮೆಯಾಗುತ್ತಿಲ್ಲ ಎಂಬ ಆರೋಪ ಕೇಳಿಬಂದಿದೆ.





