“ಮಾಜಿ ಮುಖ್ಯಮಂತ್ರಿ ಬಿ ಎಸ್ ಯಡಿಯೂರಪ್ಪ ವಿರುದ್ಧ ಗಂಭೀರವಾಗಿರುವ ಪೋಕ್ಸೊ ಪ್ರಕರಣ ದಾಖಲಾಗಿ ಮೂರು ತಿಂಗಳು ಕಳೆದರೂ ತ್ವರಿತವಾಗಿ ತನಿಖೆ ನಡೆಯದಿರುವುದು ಎದ್ದು ಕಾಣಿಸುತ್ತೆ. ಇದರ ಅರ್ಥ ಬಲಾಢ್ಯರು ಹೇಗೆ ಕಾನೂನು ವ್ಯವಸ್ಥೆಯಿಂದ ತಪ್ಪಿಸಿಕೊಂಡು ರಾಜಾರೋಷವಾಗಿ ಓಡಾಡುತ್ತಾರೆ ಎಂಬುದಕ್ಕೆ ಇದು ನಿದರ್ಶನ…”
ಬಿ ಎಸ್ ಯಡಿಯೂರಪ್ಪ ವಿರುದ್ಧ ದಾಖಲಾಗಿರುವ ಪೋಕ್ಸೊ ಪ್ರಕರಣದಲ್ಲಿ ಸಂತ್ರಸ್ತೆ ಪರ ವಕಾಲತ್ತು ವಹಿಸಿರುವ ಹೈಕೋರ್ಟ್ ಹಿರಿಯ ವಕೀಲ ಎಸ್ ಬಾಲನ್ ಮಾತಿದು. ಯಡಿಯೂರಪ್ಪ ಬಂಧನ ಕೋರಿ ನ್ಯಾಯಾಲಯಕ್ಕೆ ರೀಟ್ ಅರ್ಜಿ ಸಲ್ಲಿಸಿರುವ ಬಾಲನ್ ಅವರು ಪ್ರಕರಣ ಕುರಿತು ಶುಕ್ರವಾರ ಈ.ದಿನ.ಕಾಮ್ ಜೊತೆ ಮಾತನಾಡಿದರು.
“ಮಾಜಿ ಮುಖ್ಯಮಂತ್ರಿ ಯಡಿಯೂರಪ್ಪ ಅವರು ನೆಲದ ಕಾನೂನಿಗೆ ಗೌರವ ಕೊಡದೇ ತಮಗೆ ಹೇಗೆ ಬೇಕೋ ಹಾಗೇ ಪ್ರಕರಣವನ್ನು ನಿರ್ಲಕ್ಷಿಸಿ ನಡೆದುಕೊಳ್ಳುತ್ತಿದ್ದಾರೆ. ಹಾಗೆಯೇ ಯಡಿಯೂರಪ್ಪ ವಿಚಾರದಲ್ಲಿ ಕಾನೂನು ರಕ್ಷಕರೇ ಕಾನೂನು ಉಲ್ಲಂಘಿಸಿ ಮೂರು ತಿಂಗಳುಗಳ ಕಾಲ ಕಾಲಹರಣ ಮಾಡಿದ್ದಾರೆ. ಪೋಕ್ಸೊ ಪ್ರಕರಣ ಗಂಭೀರತೆ ಬಗ್ಗೆ ಇವರಿಗೆ ಅರಿವು ಇರಬೇಕಿತ್ತು” ಎಂದು ತನಿಖಾಧಿಕಾರಿಗಳ ನಡೆ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿದರು.
“ನೊಂದ ಬಾಲಕಿಯ ಪರಿಸ್ಥಿತಿಯನ್ನು ಯಾರು ಅರ್ಥಮಾಡಿಕೊಳ್ಳಬೇಕು. ಈಗ ಬಾಲಕಿಯ ತಾಯಿ ಬೇರೆ ಸಾವನ್ನಪ್ಪಿದ್ದಾರೆ. ಈ ಸಾವಿನ ಬಗ್ಗೆ ತನಿಖಾಧಿಕಾರಿಗಳು ಏನು ಮಾಹಿತಿ ಸಂಗ್ರಹಿಸಿದ್ದಾರೆ? ಮರಣೋತ್ತರ ಪರೀಕ್ಷೆ ನಡೆದಿದೆಯಾ? ಯಡಿಯೂರಪ್ಪರಂತಹ ನಾಯಕರ ಮೇಲೆ ಆರೋಪ ಮಾಡಿದ ಮೇಲೆಯೇ ಅವರಿಗೆ ದಿಢೀರ್ ಆಗಿ ಆರೋಗ್ಯ ಸಮಸ್ಯೆ ಹೇಗೆ ಉಂಟಾಯಿತು? ತನ್ನ ಮಗಳಿಗೆ ಹೀಗಾಯಿತಲ್ಲ ಅಂತ ಆ ತಾಯಿ ಖಿನ್ನತೆಗೆ ಹೋಗಿ ಆರೋಗ್ಯ ಸಮಸ್ಯೆ ಉಂಟಾಗಿರಲುಬಹುದಲ್ಲ” ಎಂದು ಅನುಮಾನಿಸಿದರು.
“ಸಂತ್ರಸ್ತ ಬಾಲಕಿ ಮತ್ತು ತಾಯಿ ಯಡಿಯೂರಪ್ಪ ಅವರ ಹತ್ತಿರ ನ್ಯಾಯ ಸಿಗುತ್ತದೆ ಎಂದು ಅವರನ್ನು ಭೇಟಿ ಮಾಡಲು ಹೋಗಿದ್ದರು. ಆದರೆ ಯಡಿಯೂರಪ್ಪ ಅವರು ಬಾಲಕಿಯನ್ನು ಮಾತ್ರ ತಮ್ಮ ರೂಮಿಗೆ ಕರೆದುಕೊಂಡು ಹೋಗಿದ್ದೇಕೆ? ಎಫ್ಐಆರ್ನಲ್ಲಿ ಕೆಲುವು ಅಂಶ ಉಲ್ಲೇಖವಾಗಿದೆ. ಆ ಪ್ರಕಾರ ಹೇಳುವುದಾದರೆ ಬಾಲಕಿಯ ಬಟ್ಟೆಯೊಳಗೆ ಕೈ ಹಾಕಿ ಯಡಿಯೂರಪ್ಪ ಅಂಗಾಂಗ ಮುಟ್ಟಿದ್ದಾರೆ ಎಂದು ಉಲ್ಲೇಖಿಸಲಾಗಿದೆ. ಡಿಎನ್ಎ ಪರೀಕ್ಷೆ ನಡೆಯಬೇಕು ಅಲ್ವಾ? ಅವರ ಮನೆಯ ಎಲ್ಲ ಸಿಸಿ ಟಿವಿ ಕ್ಯಾಮೆರಾಗಳನ್ನು ಸೀಸ್ ಮಾಡಬೇಕಿತ್ತು. ಅದು ಕೂಡ ಇಲ್ಲಿ ನಡೆದಿಲ್ಲ. ತುಂಬಾ ನಿರ್ಲಕ್ಷ್ಯದಿಂದ ಈ ಪ್ರಕರಣವನ್ನು ನೋಡಲಾಗಿದೆ” ಎಂದು ವಿವರಿಸಿದರು.
“ನಾವು ಯಡಿಯೂರಪ್ಪ ಬಂಧನ ಕುರಿತು ಹೈಕೋರ್ಟ್ನಲ್ಲಿ ರಿಟ್ ಅರ್ಜಿ ಹಾಕಿದ ಮೇಲೆ ಪೊಲೀಸರು ಎಚ್ಚೆತ್ತುಕೊಂಡಿದ್ದಾರೆ. ಮೂರು ತಿಂಗಳು ಏನು ಮಾಡುತ್ತಿದ್ದರು. ಸಾಮಾನ್ಯರಿಗೊಂದು ಕಾನೂನು ಬಲಾಡ್ಯರಿಗೊಂದು ಕಾನೂನು ಎಂಬಂತಾಗಿದೆ. ದೂರು ದಾಖಲಾಗಿ ಮೂರು ತಿಂಗಳಾದ್ರೆ ಸಾಕ್ಷಿಗಳ ನಾಶ ನಡೆದಿರುವುದಿಲ್ಲವೇ? ಗಂಭೀರವಾಗಿ ತನಿಖೆ ನಡೆದು ಆರೋಪ ನಿಜ ಆದರೆ ಯಡಿಯೂರಪ್ಪ ಅವರಿಗೆ ಮೂರು ವರ್ಷ ಶಿಕ್ಷೆ ಆಗುತ್ತದೆ. ಈಗ ಅವರು ಎಲ್ಲಿ ಇದ್ದಾರೋ ಗೊತ್ತಿಲ್ಲ. ಈ ಪ್ರಕರಣದಲ್ಲಿ ಯಡಿಯೂರಪ್ಪ ಸುಪ್ರೀಂ ಕೋರ್ಟ್ ಮೊರೆ ಹೋಗಲೂಬಹುದು. ಆದರೆ ತನಿಖೆ ನಡೆಯಬೇಕಲ್ಲ? ಅದು ಇನ್ನಾದರೂ ನಡೆಯಲಿ” ಎಂದು ಆಗ್ರಹಿಸಿದರು.





