ಮೂಡಾ ಪ್ರಕರಣವನ್ನು ಅಸ್ತ್ರವಾಗಿಟ್ಟುಕೊಂಡು ರಾಜ್ಯ ಸರ್ಕಾರವನ್ನು ಅಸ್ಥಿರಗೊಳಿಸಲು ಬಿಜೆಪಿ ರಾಜಕೀಯ ಪಿತೂರಿ ನಡೆಸುತ್ತಿದೆ ಎಂದು ಭಾರತ ಕಮ್ಯುನಿಸ್ಟ್ ಪಕ್ಷ (ಸಿಪಿಐ)ದ ರಾಜ್ಯ ಮಂಡಳಿ ಭಾವಿಸುತ್ತದೆ. ಗುರುವಾರ ನಡೆದ ಪಕ್ಷದ ರಾಜ್ಯ ಕಾರ್ಯದರ್ಶಿ ಮಂಡಳಿ ಸಭೆಯಲ್ಲಿ ರಾಜ್ಯದ ರಾಜಕೀಯ ವಿದ್ಯಮಾನಗಳ ಕುರಿತು ಅವಲೋಕನ ನಡೆಸಲಾಯಿತು ಎಂದು ಪಕ್ಷದ ಪ್ರಕಟಣೆ ತಿಳಿಸಿದೆ.
ಇಡೀ ಮೂಡ ಪ್ರಕರಣವನ್ನು ತನ್ನ ರಾಜಕೀಯ ಲಾಭಕ್ಕಾಗಿಯೇ ಬಳಸಿಕೊಳ್ಳಲು ಪ್ರಯತ್ನಿಸಿದ ಬಿಜೆಪಿ, ಕೇಂದ್ರ ಸರ್ಕಾರದ ಪ್ರಭಾವ ಬಳಸಿ ರಾಜ್ಯಪಾಲರ ಮೂಲಕ ಸರ್ಕಾರವನ್ನು ಅಸ್ಥಿರಗೊಳಿಸಲು ಪ್ರಯತ್ನಿಸಿತು. ರಾಜ್ಯಪಾಲರು ನೀಡಿದ ತನಿಖೆಯ ಆದೇಶದಂತೆ ರಾಜ್ಯದ ಹೈಕೋರ್ಟ್ ಸಹ ತನಿಖೆ ನಡೆಸಲು ಆದೇಶಿಸಿದೆ. ಈ ಪ್ರಕರಣದ ಕುರಿತು ಸ್ವತಃ ಮುಖ್ಯಮಂತ್ರಿ ಸಿದ್ದರಾಮಯ್ಯನವರೇ ತನಿಖೆಗೆ ಸಿದ್ಧವಿದ್ದು ಸಹಕರಿಸುವುದಾಗಿ ಹೇಳಿದ್ದಾರೆ. ಆದುದರಿಂದ ಈ ಪ್ರಕರಣದ ಬಗ್ಗೆ ಸೂಕ್ತ ರೀತಿಯಲ್ಲಿ ತನಿಖೆ ನಡೆದು ಸತ್ಯಾಸತ್ಯತೆಗಳನ್ನು ರಾಜ್ಯದ ಜನರಿಗೆ ಗೊತ್ತಾಗಬೇಕಾಗಿದೆ ಎಂದು ಸಿಪಿಐ ಸಹ ಬಯಸುತ್ತದೆ.
ಆದರೆ ಬಹುಮತದಿಂದ ಚುನಾಯಿತಗೊಂಡು ಅಧಿಕಾರಕ್ಕೆ ಬಂದಿರುವ ಒಂದು ಚುನಾಯಿತ ರಾಜ್ಯ ಸರ್ಕಾರವನ್ನು ಅಸ್ಥಿರಗೊಳಿಸುವ ರಾಜಕೀಯ ಪಿತೂರಿಯ ಭಾಗವಾಗಿ ಮುಖ್ಯಮಂತ್ರಿಗಳ ರಾಜೀನಾಮೆ ಕೇಳುತ್ತಿರುವ ವಿರೋಧ ಪಕ್ಷವಾದ ಬಿಜೆಪಿಯ ಬೇಡಿಕೆಯು ರಾಜಕೀಯ ಪ್ರೇರಿತವಾದದ್ದಾಗಿದ್ದು, ಅಪ್ರಾಮಾಣಿಕವಾಗಿದೆ ಎಂದು ಸಿಪಿಐ ತಿಳಿಸಿದೆ.
ಮುಡಾ ಪ್ರಕರಣ | ರಾಜ್ಯ ಸರ್ಕಾರವನ್ನು ಅಸ್ಥಿರಗೊಳಿಸುವ ರಾಜಕೀಯ ಪಿತೂರಿ: ಸಿಪಿಐ
Date:
ಪೋಸ್ಟ್ ಹಂಚಿಕೊಳ್ಳಿ:




