ರಾಷ್ಟ್ರೀಯ ಸ್ವಯಂ ಸೇವಕ ಸಂಘ(ಆರ್ಎಸ್ಎಸ್) ಕ್ಯಾಂಪಸ್ನಲ್ಲಿ ತನಗಾದ ಲೈಂಗಿಕ ಕಿರುಕುಳದಿಂದ ನೊಂದು 26 ವರ್ಷದ ಆನಂದು ಅಜಿ ಆತ್ಮಹತ್ಯೆ ಮಾಡಿಕೊಂಡಿದ್ದು, ಸದ್ಯ ಈ ವಿಚಾರ ತೀವ್ರ ರಾಜಕೀಯ ಚರ್ಚೆಗೆ ಗ್ರಾಸವಾಗಿದೆ. ಕಾಂಗ್ರೆಸ್ ಮತ್ತು ಎಡ ಪಕ್ಷ ಸಿಪಿಐಎಂ, ಭಾರತ ಪ್ರಜಾಸತ್ತಾತ್ಮಕ ಯುವಜನ ಫೆಡರೇಷನ್(ಡಿವೈಎಫ್ಐ) ಸಂಘಟನೆಯು ಈ ಪ್ರಕರಣದಲ್ಲಿ ಆಳವಾದ ತನಿಖೆ ನಡೆಯಬೇಕು ಎಂದು ಆಗ್ರಹಿಸಿದೆ, ದೂರೂ ನೀಡಿದೆ.
ಆನಂದು ಅಜಿ ತಿರುವನಂತಪುರದ ತಂಪನೂರಿನಲ್ಲಿರುವ ಹೋಟೆಲ್ ಕೋಣೆಯಲ್ಲಿ ಇತ್ತೀಚೆಗೆ ಆತ್ಮಹತ್ಯೆ ಮಾಡಿಕೊಂಡಿದ್ದು, ಅದಕ್ಕೂ ಮುನ್ನ ತನ್ನ ಮೇಲಾದ ಲೈಂಗಿಕ ದೌರ್ಜನ್ಯದ ಬಗ್ಗೆ ಇನ್ಸ್ಟಾಗ್ರಾಮ್ನಲ್ಲಿ ಪೋಸ್ಟ್ ಮಾಡಿದ್ದಾರೆ. ಆರ್ಎಸ್ಎಸ್ ಶಿಬಿರಗಳಲ್ಲಿ ಪದೇ ಪದೇ ಲೈಂಗಿಕ ದೌರ್ಜನ್ಯಕ್ಕೆ ಒಳಗಾಗಿದ್ದು ಇದರಿಂದಾಗಿ ತೀವ್ರ ಮಾನಸಿಕ ಒತ್ತಡದಿಂದ ಬಳಲುತ್ತಿದ್ದೆ ಎಂದು ಯುವಕ ಪೋಸ್ಟ್ನಲ್ಲಿ ತಿಳಿಸಿದ್ದಾರೆ.
ಇದನ್ನು ಓದಿದ್ದೀರಾ? ಕೇರಳ | ದೇವಸ್ಥಾನಗಳಲ್ಲಿ ಆರ್ಎಸ್ಎಸ್ ಚಟುವಟಿಕೆ, ಪಥಸಂಚಲನ ನಿಷೇಧ
ಸದ್ಯ ಈ ಪ್ರಕರಣಕ್ಕೆ ಸಂಬಂಧಿಸಿ ಪೊಲೀಸರು ತನಿಖೆ ನಡೆಸುತ್ತಿದ್ದಾರೆ ಎಂದು ಹೇಳಲಾಗಿದೆ. ಆದರೆ ಪ್ರಕರಣವು ರಾಜಕೀಯವಾಗಿ ತೀವ್ರ ಚರ್ಚೆಗೆ ಗ್ರಾಸವಾಗಿದೆ. ಅದೂ ಆರ್ಎಸ್ಎಸ್ ನೂರು ವರ್ಷದ ಆಚರಣೆಯಲ್ಲಿರುವಾಗ ಈ ಗಂಭೀರ ಆರೋಪವು ಹೆಚ್ಚು ಮುನ್ನೆಲೆಗೆ ಬಂದಿದೆ.
ಏನಿದು ಪ್ರಕರಣ? ಯುವಕನ ಆರೋಪಗಳೇನು?
ಕೊಟ್ಟಯಂ ಮೂಲದ ಸಾಫ್ಟ್ವೇರ್ ಎಂಜಿನಿಯರ್ ಆನಂದು ಅಜಿ ಅಕ್ಟೋಬರ್ 9ರಂದು ಆತ್ಮಹತ್ಯೆ ಮಾಡಿಕೊಂಡಿದ್ದಾನೆ. ಯುವಕ ಇನ್ಸ್ಟಾಗ್ರಾಂನಲ್ಲಿ ಪೋಸ್ಟ್ ಒಂದನ್ನು ಶೆಡ್ಯೂಲ್ ಮಾಡಿದ್ದು, ಪೋಸ್ಟ್ನಲ್ಲಿ ತಾನು ನಾಲ್ಕು ವರ್ಷದ ಬಾಲಕನಾಗಿರುವಾಗಿನಿಂದ ತನ್ನ ಮೇಲೆ ಆರ್ಎಸ್ಎಸ್ ಸದಸ್ಯರಿಂದಾದ ಲೈಂಗಿಕ ಕಿರುಕುಳದ ಬಗ್ಗೆ, ಅದರಿಂದ ತನ್ನಗಾದ ಮಾನಸಿಕ ಒತ್ತಡದ ಬಗ್ಗೆ ಉಲ್ಲೇಖಿಸಿದ್ದಾರೆ. ತಾನು ಮಾತ್ರವಲ್ಲದೆ ಇನ್ನೂ ಹಲವು ಮಂದಿಯ ಮೇಲೆ ಆರ್ಎಸ್ಎಸ್ ಶಾಖೆ ವೇಳೆ ಇದೇ ರೀತಿ ಲೈಂಗಿಕ ಕಿರುಕುಳ ನಡೆದಿದೆ ಎಂದು ಆರೋಪಿಸಿದ್ದಾರೆ.
ಈ ಎಲ್ಲಾ ಬೆಳವಣಿಗೆ ಬೆನ್ನಲ್ಲೇ ಆರ್ಎಸ್ಎಸ್, ಬಿಜೆಪಿ ಈ ಆರೋಪವನ್ನು ಅಲ್ಲಗಳೆದಿದ್ದು, ಆಧಾರರಹಿತ ಎಂದು ಕರೆದಿದೆ. ಅಜಿ ಪೋಸ್ಟ್ ಅನ್ನು ಎಡಿಟ್ ಮಾಡಲಾಗಿದೆ. ಈ ಬಗ್ಗೆ ತನಿಖೆ ನಡೆಯಬೇಕು ಎಂದು ಆಗ್ರಹಿಸಿದೆ.
ದೂರು ದಾಖಲಿಸಿದ ಕಾಂಗ್ರೆಸ್, ಡಿವೈಎಫ್ಐ
ಸಿಪಿಐಎಂ, ಡಿವೈಎಫ್ಐ, ಕಾಂಗ್ರೆಸ್ ಈಗಾಗಲೇ ಈ ಪ್ರಕರಣದ ಆಳವಾದ ತನಿಖೆಯಾಗಬೇಕು ಎಂದು ಒತ್ತಾಯಿಸಿದೆ. ಈ ಸಂಬಂಧ ದೂರೂ ನೀಡಿದೆ. ತೀವ್ರ ಆಕ್ರೋಶ ವ್ಯಕ್ತವಾಗುತ್ತಿದ್ದಂತೆ ಪೊಲೀಸರು ಎನ್ಎಂ ಎಂಬ ಆರೋಪಿಯನ್ನು ಗುರುತಿಸಿದೆ ಎಂದು ಹೇಳಲಾಗಿದೆ.
ಈ ಬಗ್ಗೆ ಎಕ್ಸ್ನಲ್ಲಿ ಪೋಸ್ಟ್ ಮಾಡಿರುವ ವಯನಾಡು ಸಂಸದೆ ಪ್ರಿಯಾಂಕಾ ಗಾಂಧಿ, “ಆನಂದು ಅಜಿ ತನ್ನ ಪೋಸ್ಟ್ನಲ್ಲಿ ತಾನು ಪದೇ ಪದೇ ಆರ್ಎಸ್ಎಸ್ ಸದಸ್ಯರಿಂದ ಲೈಂಗಿಕ ಕಿರುಕುಳಕ್ಕೆ ಒಳಗಾದೆ ಎಂದು ಆರೋಪಿಸಿದ್ದಾನೆ. ಆರ್ಎಸ್ಎಸ್ ನಾಯಕತ್ವವು ಕೂಡಲೇ ಕ್ರಮಕೈಗೊಳ್ಳಬೇಕು” ಎಂದು ಆಗ್ರಹಿಸಿದ್ದಾರೆ.
ಇದನ್ನು ಓದಿದ್ದೀರಾ? ಕೇರಳ | ಆರ್ಎಸ್ಎಸ್ ಮುಖಂಡನ ಮನೆಯಲ್ಲಿ 770 ಕೆಜಿ ಸ್ಫೋಟಕ ಪತ್ತೆ
“ಈ ಆರೋಪ ನಿಜವಾದರೆ ಖಂಡಿತವಾಗಿಯೂ ಗಂಭೀರವಾದುದ್ದು. ಭಾರತದಾದ್ಯಂತ ಲಕ್ಷಾಂತರ ಮಕ್ಕಳು, ಹದಿಹರೆಯದವರು ಈ ಶಿಬಿರಗಳಲ್ಲಿ ಭಾಗಿಯಾಗುತ್ತಾರೆ. ಆದ್ದರಿಂದ ಈ ಕುರಿತು ಕ್ರಮ ಅಗತ್ಯ. ಬಾಲಕಿಯರಂತೆಯೇ ಬಾಲಕರ ಮೇಲೆ ನಡೆಯುವ ಲೈಂಗಿಕ ದೌರ್ಜನ್ಯವೂ ಒಂದು ಪಿಡುಗು. ಈ ಘೋರ ಅಪರಾಧಗಳ ಬಗ್ಗೆ ಮೌನ ಮುರಿಯಬೇಕು” ಎಂದು ಪ್ರಿಯಾಂಕ ಹೇಳಿದ್ದಾರೆ. ಕಾಂಗ್ರೆಸ್ ನಾಯಕ ಪವನ್ ಖೇರಾ ಕೂಡಾ ಈ ಬಗ್ಗೆ ತನಿಖೆಗೆ ಆಗ್ರಹಿಸಿದ್ದಾರೆ.
ವರದಿಗಳ ಪ್ರಕಾರ, ತಂಪನೂರು ಪೊಲೀಸರು ಅಸಹಜ ಸಾವು ಪ್ರಕರಣ ದಾಖಲಿಸಿಕೊಂಡಿದ್ದಾರೆ. ಆನಂದು ಕುಟುಂಬದ ಹೇಳಿಕೆಯನ್ನೂ ಪೊಲೀಸರು ಪಡೆದಿದ್ದು, ಎನ್ಎಂ ಎಂಬ ವ್ಯಕ್ತಿ ಬಗ್ಗೆ ಕುಟುಂಬ ಹೆಚ್ಚಿನ ಮಾಹಿತಿ ನೀಡಿದೆ ಎನ್ನಲಾಗಿದೆ. ಬಾಲ್ಯದಲ್ಲೇ ಲೈಂಗಿಕ ದೌರ್ಜನ್ಯ ನಡೆದಿದೆಯೇ ಎಂಬ ಬಗ್ಗೆ ತನಿಖೆ ನಡೆಸಿ ಬಳಿಕ ಪೋಕ್ಸೋ ಪ್ರಕರಣ ದಾಖಲಿಸುವ ಸಾಧ್ಯತೆಯಿದೆ.
ನೆನಪಿಡಿ: ಸಮಸ್ಯೆಗಳಿಗೆ ಆತ್ಮಹತ್ಯೆ ಪರಿಹಾರವಲ್ಲ… ಆತ್ಮಹತ್ಯೆಗಳ ಕುರಿತು ಚರ್ಚಿಸುವುದು ಕೂಡ ಕೆಲವರಿಗೆ ಪ್ರಚೋದನೆ ನೀಡಬಹುದು. ಸಮಸ್ಯೆಗಳ ಬಗ್ಗೆ ಆಪ್ತರೊಂದಿಗೆ ಹಂಚಿಕೊಳ್ಳುವುದರಿಂದ, ಸಮಾಲೋಚನೆ ನಡೆಸುವುದರಿಂದ ಆತ್ಮಸ್ಥೈರ್ಯ ಹೆಚ್ಚುತ್ತದೆ. ಆತ್ಮಹತ್ಯೆಗಳನ್ನು ತಡೆಯಬಹುದು. ತುರ್ತು ಪರಿಸ್ಥಿತಿಯಿದ್ದರೆ ಕರೆ ಮೂಲಕ ವೈದ್ಯರನ್ನು ಸಂಪರ್ಕಿಸಿ. ಬೆಂಗಳೂರು ಸಹಾಯವಾಣಿ 080-25497777, ನಿಮಾನ್ಸ್ ಸಹಾಯವಾಣಿ 080-46110007, ಆರೋಗ್ಯ ಸಹಾಯವಾಣಿ 104.





