ಬಿಹಾರ ಚುನಾವಣೆಯಲ್ಲಿ ತೀರಾ ಕಳಪೆ ಪ್ರದರ್ಶನ ತೋರಿದ ಚುನಾವಣಾ ತಂತ್ರಜ್ಞ ಪ್ರಶಾಂತ್ ಕಿಶೋರ್ ನೇತೃತ್ವದ ಜನ ಸುರಾಜ್ ಪಕ್ಷವು ಶನಿವಾರ ಪಂಚಾಯತ್ ಮಟ್ಟದಿಂದ ರಾಜ್ಯ ಮಟ್ಟದವರೆಗೆ ತನ್ನ ಎಲ್ಲಾ ಸಾಂಸ್ಥಿಕ ಘಟಕಗಳನ್ನು ವಿಸರ್ಜಿಸಿದೆ.
ರಾಜ್ಯ ಅಧ್ಯಕ್ಷ ಮನೋಜ್ ಭಾರ್ತಿ ಅಧ್ಯಕ್ಷತೆಯಲ್ಲಿ ಪಟನಾದಲ್ಲಿ ರಾಷ್ಟ್ರೀಯ ಮಂಡಳಿ ಸಭೆ ನಡೆದಿದ್ದು ಈ ಸಭೆಯಲ್ಲಿ ನಿರ್ಧಾರ ಕೈಗೊಳ್ಳಲಾಗಿದೆ. ಈ ಬಗ್ಗೆ ಜನ ಸುರಾಜ್ ಪಕ್ಷದ ವಕ್ತಾರ ಸೈಯದ್ ಮಸಿಹ್ ಉದ್ದೀನ್ ಹೇಳಿಕೆ ನೀಡಿದ್ದು, “ಮುಂದಿನ ಒಂದೂವರೆ ತಿಂಗಳಲ್ಲಿ ಹೊಸ ಘಟಕಗಳನ್ನು ರಚಿಸಲಾಗುವುದು” ಎಂದು ಹೇಳಿದ್ದಾರೆ.
ಇದನ್ನು ಓದಿದ್ದೀರಾ? ಚುನಾವಣಾ ತಂತ್ರಗಾರ ಪ್ರಶಾಂತ್ ಕಿಶೋರ್ ‘ಬಿಜೆಪಿ ಏಜೆಂಟ್’ : ತೇಜಸ್ವಿ ಯಾದವ್
ಮಾಜಿ ಸೇನಾ ಉಪಾಧ್ಯಕ್ಷ ಎಸ್ಕೆ ಸಿಂಗ್, ಮಾಜಿ ಕೇಂದ್ರ ಸಚಿವ ರಾಮಚಂದ್ರ ಪ್ರಸಾದ್ ಸಿಂಗ್ ಮತ್ತು ಹಿರಿಯ ವಕೀಲ ವೈವಿ ಗಿರಿ ಮುಂತಾದ ಪಕ್ಷದ ನಾಯಕರೊಂದಿಗೆ ಕಿಶೋರ್ ಕೂಡ ಸಭೆಯಲ್ಲಿ ಉಪಸ್ಥಿತರಿದ್ದರು.
“ಪಕ್ಷವು ತನ್ನ ಹಿರಿಯ ನಾಯಕರಿಗೆ ರಾಜ್ಯದ 12 ವಿಭಾಗಗಳ ಜವಾಬ್ದಾರಿಯನ್ನು ವಹಿಸಿದ್ದು ಅವರು ಪರಿಣಾಮಕಾರಿ ಮತ್ತು ಸಕ್ರಿಯ ಸಾಂಸ್ಥಿಕ ರಚನೆಯನ್ನು ಪುನರ್ನಿರ್ಮಿಸುತ್ತಾರೆ. ಪಕ್ಷದ ನಾಯಕರ ಈ ತಂಡವು ಸೋಲಿಗೆ ಕಾರಣ ಗುರುತಿಸುವ ಕಾರ್ಯ ಮಾಡುತ್ತದೆ. ಅಶಿಸ್ತು ಅಥವಾ ಆಂತರಿಕ ದ್ರೋಹ ಮಾಡಿದ ನಾಯಕರ ಬಗ್ಗೆ ವರದಿಯನ್ನು ಸಲ್ಲಿಸಲಿದೆ” ಎಂದು ಹೇಳಿಕೆಯಲ್ಲಿ ತಿಳಿಸಲಾಗಿದೆ.
ಬಿಹಾರ ಚುನಾವಣೆಯಲ್ಲಿ ಗೇಮ್ ಚೇಂಜರ್ ಆಗುವುದಾಗಿ ಹೇಳಿಕೊಂಡಿದ್ದ ಪ್ರಶಾಂತ್ ಕಿಶೋರ್ ಅವರ ಪಕ್ಷವು ಖಾತೆ ತೆರೆಯುವಲ್ಲಿ ವಿಫಲವಾಗಿದೆ. ಹಾಗೆಯೇ ಅಧಿಕ ಅಭ್ಯರ್ಥಿಗಳು ಠೇವಣಿಯನ್ನೂ ಕಳೆದುಕೊಂಡಿದ್ದಾರೆ.





