ಕರ್ನಾಟಕ ಗ್ರಾಮೀಣಾಭಿವೃದ್ಧಿ ಸಚಿವ ಮತ್ತು ಕಾಂಗ್ರೆಸ್ ನಾಯಕ ಪ್ರಿಯಾಂಕ್ ಖರ್ಗೆ ‘ಫಸ್ಟ್ ಕ್ಲಾಸ್ ಈಡಿಯಟ್’ ಎಂದು ಅಸ್ಸಾಂ ಮುಖ್ಯಮಂತ್ರಿ ಹಿಮಂತ ಬಿಸ್ವಾ ಶರ್ಮಾ ವಿವಾದಾತ್ಮಕ ಹೇಳಿಕೆಯನ್ನು ನೀಡಿದ್ದಾರೆ. ಸದ್ಯ ಈ ಹೇಳಿಕೆಯು ರಾಜಕೀಯವಾಗಿ ಸಂಚಲನ ಸೃಷ್ಟಿಸಿದೆ. ಬಿಸ್ವಾ ವಿರುದ್ಧ ಕಾಂಗ್ರೆಸ್ ನಾಯಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಭಾನುವಾರ ಮಾಧ್ಯಮ ಸಂವಾದದ ವೇಳೆ ಮಾತನಾಡಿದ್ದ ಖರ್ಗೆ, “ಕೇಂದ್ರ ಸರ್ಕಾರವು ಹೂಡಿಕೆಗಳನ್ನು ಕರ್ನಾಟಕದಿಂದ ಗುಜರಾತ್ ಮತ್ತು ಅಸ್ಸಾಂ ರಾಜ್ಯಗಳಿಗೆ ತಿರುಗಿಸುತ್ತಿದೆ. ಸೆಮಿಕಂಡಕ್ಟರ್ ಕೈಗಾರಿಕೆಗಳು ಬೆಂಗಳೂರಿಗೆ ಬರಲು ಬಯಸಿದೆ. ಆದರೆ ಕೇಂದ್ರ ಸರ್ಕಾರ ಅವುಗಳನ್ನು ಅಸ್ಸಾಂ ಮತ್ತು ಗುಜರಾತ್ಗೆ ಒಯ್ಯುತ್ತಿದೆ. ಅಲ್ಲೇನಿದೆ? ಅಲ್ಲಿ ಪ್ರತಿಭಾನಿತ್ವರು ಇದ್ದಾರೆಯೇ” ಎಂದು ಪ್ರಿಯಾಂಕ್ ಖರ್ಗೆ ಪ್ರಶ್ನಿಸಿದ್ದರು. ಈ ಹೇಳಿಕೆಯು ವಿವಾದಕ್ಕೆ ಕಾರಣವಾಗಿತ್ತು.
ಇದನ್ನು ಓದಿದ್ದೀರಾ? RSS ಬಗ್ಗೆ ಸಿಎಂಗೆ ಪತ್ರ: ಸಚಿವ ಪ್ರಿಯಾಂಕ್ ಖರ್ಗೆಗೆ ಬೆದರಿಕೆ ಕರೆ
ಖರ್ಗೆ ಹೇಳಿಕೆಯನ್ನು ಖಂಡಿಸಿದ ಬಿಸ್ವಾ, “ಪ್ರಿಯಾಂಕ್ ಖರ್ಗೆ ತಮ್ಮನ್ನು ತಾವು ‘ಫಸ್ಟ್ ಕ್ಲಾಸ್ ಈಡಿಯಟ್’ ಎಂದು ಬಹಿರಂಗಪಡಿಸಿದ್ದಾರೆ. ಅವರ ಹೇಳಿಕೆಯು ಅಸ್ಸಾಂನ ಯುವಕರನ್ನು ಕೀಳಾಗಿ ನೋಡುವ ಅವರ ಪೂರ್ವಾಗ್ರಹ ಪೀಡಿತ ಮನಸ್ಥಿತಿಯನ್ನು ಪ್ರತಿಬಿಂಬಿಸುತ್ತದೆ. ಯುವಕರ ಶಿಕ್ಷಣ ಮತ್ತು ಸಾಮರ್ಥ್ಯವನ್ನು ಪ್ರಶ್ನಿಸುವ ಮೂಲಕ, ಅವರು ನಮ್ಮ ರಾಜ್ಯದ ಪ್ರತಿಯೊಬ್ಬ ಯುವ ವೃತ್ತಿಪರರನ್ನು ಅವಮಾನಿಸಿದ್ದಾರೆ” ಎಂದು ಹೇಳಿದ್ದಾರೆ.
Son of @INCIndia President , Priyank Kharge, has insulted Assam’s youth and Assam Cong doesn’t even have the courage to condemn him.
— Himanta Biswa Sarma (@himantabiswa) October 27, 2025
He is a FIRST CLASS IDIOT. pic.twitter.com/bNzGTtiCTs
“ಖರ್ಗೆ ಅವರ ಮಾತುಗಳನ್ನು ಕಾಂಗ್ರೆಸ್ ಖಂಡಿಸಿಲ್ಲ. ಇದು ಈಶಾನ್ಯವನ್ನು ಅವರು ಹೇಗೆ ನೋಡುತ್ತಾರೆ ಎಂಬುದನ್ನು ಸ್ಪಷ್ಟವಾಗಿ ತೋರಿಸುತ್ತದೆ. ಖರ್ಗೆ ಅವರ ವಿಭಜನಕಾರಿ ಮತ್ತು ಅವಹೇಳನಕಾರಿ ಹೇಳಿಕೆಗಾಗಿ ಅವರ ವಿರುದ್ಧ ಕಾನೂನು ಕ್ರಮದ ಚಿಂತನೆ ನಡೆಸಿದ್ದೇವೆ” ಎಂದೂ ಈ ಸಂದರ್ಭದಲ್ಲೇ ಬಿಸ್ವಾ ತಿಳಿಸಿದ್ದಾರೆ.
ಇನ್ನು ಅಸ್ಸಾಂ ಬಿಜೆಪಿಯೂ ಎಕ್ಸ್ನಲ್ಲಿ ಪೋಸ್ಟ್ ಮಾಡಿದೆ. “ಪ್ರತಿಭೆ ಎಂದರೆ ಬಾಸ್ ಬೂಟು ನೆಕ್ಕುವುದು ಮತ್ತು ರಾಹುಲ್ ಗಾಂಧಿಯವರ ಸಾಕುಪ್ರಾಣಿಗಾಗಿ ಬಿಸ್ಕತ್ತುಗಳನ್ನು ಕಸಿದುಕೊಳ್ಳುವುದು ಎಂದಾದರೆ, ಅಸ್ಸಾಂನ ಜನರು ಪ್ರತಿಭೆಯಿಲ್ಲದವರನ್ನಾಗಿಸಿದ ದೇವರಿಗೆ ಧನ್ಯವಾದಗಳು. ಜೂನಿಯರ್ ಖರ್ಗೆ, ಹಿರಿಯ ಖರ್ಗೆಯವರ ಮಗನಾಗಿ ಹುಟ್ಟಿರುವುದನ್ನು ಹೊರತುಪಡಿಸಿ, ನಿಮಗೆ ನಿಜವಾದ ಕೌಶಲ್ಯವಿದೆಯೇ? ಈ ತಂದೆ-ಮಗನ ಫ್ರಾಂಚೈಸಿ ಅಸ್ಸಾಂ ಅನ್ನು ಅವಮಾನಿಸುವ ಅಭ್ಯಾಸವನ್ನು ಹೊಂದಿದೆ” ಎಂದು ಬಿಜೆಪಿ ಹೇಳಿದೆ.
ಕರ್ನಾಟಕದ ಬದಲಾಗಿ ಗುಜರಾತ್ ಮತ್ತು ಅಸ್ಸಾಂಗೆ ಸೆಮಿಕಂಡಕ್ಟರ್ ಕೈಗಾರಿಕೆಗಳನ್ನು ಒಯ್ಯುತ್ತಿರುವ ಬಗ್ಗೆ ಈ ಹಿಂದೆಯೂ ಖರ್ಗೆ ಅಸಮಾಧಾನ ವ್ಯಕ್ತಪಡಿಸಿದ್ದರು. ಸೆಮಿಕಂಡಕ್ಟರ್ ಕೈಗಾರಿಕೆಗಳಿಗೆ ಬೇಕಾದ ಪರಿಸರ ವ್ಯವಸ್ಥೆ ಇಲ್ಲದಿದ್ದರೂ ಗುಜರಾತ್ ಮತ್ತು ಅಸ್ಸಾಂ ಕ್ರಮವಾಗಿ ನಾಲ್ಕು, ಒಂದು ಸೆಮಿಕಂಡಕ್ಟರ್ ಘಟಕಗಳನ್ನು ಪಡೆದಿವೆ ಎಂದು ಹೇಳಿದ್ದರು.
“ಐದು ಸೆಮಿಕಂಡಕ್ಟರ್ ಘಟಕಗಳ ಪೈಕಿ ನಾಲ್ಕು ಗುಜರಾತ್ನಲ್ಲಿವೆ ಮತ್ತು ಒಂದು ಅಸ್ಸಾಂನಲ್ಲಿವೆ. ಆದರೆ ಅಲ್ಲಿ ಅದಕ್ಕೆ ತಕ್ಕುದಾದ ಪರಿಸರ ವ್ಯವಸ್ಥೆಯಿಲ್ಲ. ಅವರಿಗೆ ಅಲ್ಲಿ ಸಂಶೋಧನೆಯ ಪರಿಸರ ವ್ಯವಸ್ಥೆ ಇಲ್ಲ. ಘಟಕವನ್ನು ಬೆಳೆಸುವ, ನಾವೀನ್ಯತೆಯ ಪರಿಸರ ವ್ಯವಸ್ಥೆ ಇಲ್ಲ. ಶೇಕಡ 70ರಷ್ಟು ಚಿಪ್ ವಿನ್ಯಾಸಕಾರ ಪ್ರತಿಭೆಗಳು ಕರ್ನಾಟಕದಲ್ಲಿದೆ. ಹಾಗಿದ್ದಾಗ ಸರ್ಕಾರವು ರಾಜಕೀಯ ಪ್ರಭಾವವನ್ನು ಬಳಸಿಕೊಂಡು ಬೇರೆ ರಾಜ್ಯಕ್ಕೆ ಈ ಘಟಕಗಳನ್ನು ಕೊಂಡೊಯ್ಯುವುದು ಸರಿಯಲ್ಲ. ಇದು ಅನ್ಯಾಯ” ಎಂದೂ ಪ್ರಿಯಾಂಕ್ ಖರ್ಗೆ ಬೇಸರ ವ್ಯಕ್ತಪಡಿಸಿದ್ದರು.





