ಉತ್ತರಾಖಂಡದ ಬಿಜೆಪಿ ಸರ್ಕಾರವು ʼಬಲವಂತದ ಧಾರ್ಮಿಕ ಮತಾಂತರʼಗಳನ್ನು ತಡೆಯುವ ಸಲುವಾಗಿ ಏಳು ವರ್ಷಗಳ ಹಿಂದೆ ಉತ್ತರಾಖಂಡ ಧಾರ್ಮಿಕ ಸ್ವಾತಂತ್ರ್ಯ ಕಾಯ್ದೆ (ಯುಎಫ್ಆರ್ಎ) ಎಂಬ ಕರಾಳ ಕಾನೂನನ್ನು ಜಾರಿಗೆ ತಂದಿತ್ತು. ಈ ಯುಎಫ್ಆರ್ಎ ಕಾಯ್ದೆ ಅಡಿಯಲ್ಲಿ ಉತ್ತರಾಖಂಡ ಪೊಲೀಸರು ಕಳೆದ ತಿಂಗಳವರೆಗೆ 62 ಪ್ರಕರಣಗಳನ್ನು ದಾಖಲಿಸಿಕೊಂಡಿದ್ದಾರೆ.
ಈ ಕುರಿತು ದಿ ಇಂಡಿಯನ್ ಎಕ್ಸ್ಪ್ರೆಸ್ ಪತ್ರಿಕೆಯು, ಮಾಹಿತಿ ಹಕ್ಕು ಕಾಯ್ದೆಯಡಿ 30 ಅರ್ಜಿಗಳನ್ನು ಹಾಕಿದೆ. ಅದರ ಆಧಾರದ ಮೇಲೆ ಉತ್ತರಾಖಂಡದ ಧಾರ್ಮಿಕ ಸ್ವಾತಂತ್ರ್ಯ ಕಾಯ್ದೆಯಡಿ ದಾಖಲಾಗಿರುವ ಪ್ರಕರಣಗಳ ಬಗ್ಗೆ ತನಿಖೆ ನಡೆಸಿದೆ.
2018ರಲ್ಲಿ ಬಿಜೆಪಿ ಸರ್ಕಾರ ಪರಿಚಯಿಸಿರುವ ಉತ್ತರಾಖಂಡ ಧಾರ್ಮಿಕ ಸ್ವಾತಂತ್ರ್ಯ ಕಾಯ್ದೆ (ಯುಎಫ್ಆರ್ಎ) ಯನ್ನು 2022 ಮತ್ತು 2025 ರ ತಿದ್ದುಪಡಿಗಳ ಮೂಲಕ ಮತ್ತಷ್ಟು ಬಿಗಿಗೊಳಿಸಲಾಗಿದೆ. ಬಲವಂತದ ಮತಾಂತರ ಅಥವಾ ಮದುವೆಯ ಆಮಿಷವೊಡ್ಡಿ ಮತಾಂತರ ಮಾಡಿಸಿವದರಿಗೆ ಶಿಕ್ಷೆಯ ಪ್ರಮಾಣವು ಕನಿಷ್ಠ ಮೂರು ವರ್ಷದಿಂದ ಹತ್ತು ವರ್ಷಗಳವರೆಗೆ, ಹಾಗೂ 2025 ರ ತಿದ್ದುಪಡಿ ಪ್ರಕಾರ ಇದು ಜೀವಾವಧಿ ಶಿಕ್ಷೆಯವರೆಗೂ ವಿಸ್ತರಿಸುವ ಅವಕಾಶ ಮಾಡಿಕೊಟ್ಟಿದೆ.
ಮತಾಂತರವಾಗಲು ಬಯಸುವವರು, ಈ ಕಾಯ್ದೆಯಡಿ ಕನಿಷ್ಠ 30 ದಿನಗಳ ಮುಂಚಿತವಾಗಿ ಜಿಲ್ಲಾಧಿಕಾರಿಗಳಿಂದ ಅನುಮತಿ ಪಡೆದಿರಬೇಕು. ಮತಾಂತರವಾದ ವ್ಯಕ್ತಿ ಮೂಲ ಧರ್ಮಕ್ಕೆ ಬರುತ್ತೇನೆ ಎಂದರೇ ಕಾನೂನು ಬಾಹಿರವಾಗುವುದಿಲ್ಲ. ಜೊತೆಗೆ ಈ ಕಾಯ್ದೆಯಡಿಯಲ್ಲಿ ಸಂತ್ರಸ್ತರಿಗೆ ಆಪಾದಿತರಿಂದ ಗರಿಷ್ಠ 5 ಲಕ್ಷದವರೆಗೆ ಪರಿಹಾರ ಕೊಡಿಸುವ ಅವಕಾಶವಿದೆ.
ಈ ಕರಾಳ ಕಾನೂನಿನ ಬಗ್ಗೆ ದಿ ಇಂಡಿಯನ್ ಎಕ್ಸ್ಪ್ರೆಸ್ ವರದಿಯಂತೆ ʼಉತ್ತರಾಖಂಡ ರಾಜ್ಯದ 13ಜಿಲ್ಲೆಗಳಲ್ಲಿ ಯುಎಫ್ಆರ್ಎ ಅಡಿಯಲ್ಲಿ 51 ಪ್ರಕಣಗಳು ದಾಖಲಾಗಿದ್ದು, ಇಲ್ಲಿಯವರೆಗೆ ಕೇವಲ 5 ಪ್ರಕರಣಗಳು ಮಾತ್ರ ಪೂರ್ಣ ತನಿಖೆಗೆ ಒಳಪಟ್ಟಿವೆ. ಈ ಐದೂ ಪ್ರಕರಣಗಳು ಖುಲಾಸೆಗೊಂಡಿವೆ. ಈ ನಡುವೆ ಕನಿಷ್ಠ ಏಳು ಪ್ರಕರಣಗಳು ವಿಚಾರಣೆಯ ಮಧ್ಯದಲ್ಲಿಯೇ ವಜಾಗೊಳಿಸಲಾಗಿದೆʼ ಎಂದು ಹೇಳುತ್ತದೆ.
ಒಟ್ಟು 62 ಪ್ರಕರಣಗಳಲ್ಲಿ, ಸುಮಾರು 11ಪ್ರಕರಣಗಳಿಗೆ ಉತ್ತರಾಖಂಡ ಹೈಕೋರ್ಟ್ ಮತ್ತು ಸುಪ್ರೀಂ ಕೋರ್ಟ್ ಜಾಮೀನು ನೀಡಿವೆ. ಇನ್ನು ಮೂರು ಪ್ರಕರಣಗಳಲ್ಲಿ ಜಾಮೀನು ನಿರಾಕರಿಸಲಾಗಿದೆ. ಜೊತೆಗೆ ಐದು ಪ್ರಕರಣಗಳಲ್ಲಿ ಆರೋಪಿಗಳು ವಿಚಾರಣೆಗೆ ತಡೆ ನೀಡುವಂತೆ ಹೈಕೋರ್ಟ್ ಸಂಪರ್ಕಿಸಿದ್ದಾರೆ. ಈ ಕುರಿತ ಉತ್ತರಿಸಲು ರಾಜ್ಯ ಸರ್ಕಾರಕ್ಕೆ ಹೈಕೋರ್ಟ್ ಸಮಯ ನೀಡಿದೆ. ಹೀಗೆ ಅನೇಕ ಪ್ರಕರಣಗಳಲ್ಲಿ ಒಮ್ಮತದ ನಿರ್ಣಯಗಳು, ಕಾರ್ಯವಿಧಾನದ ಲೋಪಗಳನ್ನು ಗಮನಿಸಿದ ನಂತರ ಹೈಕೋರ್ಟ್ ಜಾಮೀನು ನೀಡಿದೆ. ಇದರಲ್ಲಿ ಅನೇಕ ಪ್ರಕರಣಗಳು ಸುಳ್ಳು ದೂರುಗಳ ಆಧಾರದ ಮೇಲೆ ದಾಖಲಾಗಿದ್ದವು ಎಂಬುದು ಸಾಬೀತಾಗಿದೆ.
ಯುಎಫ್ಆರ್ಎ ಅಡಿಯಲ್ಲಿ ಸುಳ್ಳು ಪ್ರಕರಣವನ್ನು ದಾಖಲಿಸಿಕೊಂಡಿರುವುದಕ್ಕೆ ಉದಾಹರಣೆ ಎಂಬಂತೆ ʼಅಮನ್ ಸಿದ್ದಿಕಿ ಎಂಬ ಮುಸ್ಲಿಂ ಸಮುದಾಯದ ಹುಡುಗನ್ನು ಪ್ರೀತಿಸಿ ಹಿಂದು ಯುವತಿ ಮದುವೆಯಾಗಿದ್ದರು. ಇದಕ್ಕೆ ಎರಡೂ ಕುಟುಂಬಗಳು ಒಪ್ಪಿಗೆಯೂ ಸೂಚಿಸಿದ್ದವು. ಮದುವೆಯಾಗುವ ಮಹಿಳೆ ಇಸ್ಲಾಂ ಧರ್ಮಕ್ಕೆ ಮತಾಂತರಗೊಳ್ಳುವುದಿಲ್ಲ ಎಂದು ಅಫಿಡವಿಟ್ ಸಲ್ಲಿಸಿದ್ದರುʼ. ಆದಾಗ್ಯೂ ಅಮನ್ ಸಿದ್ದಿಕಿಯನ್ನು ಆರು ತಿಂಗಳು ಬಂಧನದಲ್ಲಿ ಇಡಲಾಗಿತ್ತು. ಮೇ19, 2025ರಂದು ಸುಪ್ರೀಂ ಕೋರ್ಟ್ ಅವರಿಗೆ ಜಾಮೀನು ನೀಡಿ, ʼಸ್ವಂತ ಇಚ್ಚೆಯಿಂದ ಮತ್ತು ಅವರ ಪೋಷಕರ ಒಪ್ಪಿಗೆಯೊಂದಿಗೆ ನಡೆದ ಅಂತರ್ಧಮೀಯ ವಿವಾಹಕ್ಕೆ ಯಾವುದೇ ಆಕ್ಷೇಪಣೆ ತೋರಿಸುವುದು ಸರಿಯಲ್ಲʼ ಎಂದು ಸುಪ್ರೀಂ ಕೋರ್ಟ್ ರಾಜ್ಯ ಸರ್ಕಾರವನ್ನು ತರಾಟೆಗೆ ತೆಗೆದುಕೊಂಡಿತ್ತು.
ಕೆಲ ಸಂಘಟನೆಗಳು ಮತ್ತು ಮಹಿಳೆಯ ಸಹೋದರ ನೀಡಿದ ದೂರಿನ ಆಧಾರದ ಮೇಲೆ ಅಮನ್ ಸಿದ್ದಿಕಿ ಅವರನ್ನು ಭಾರತೀಯ ನ್ಯಾಯ ಸಂಹಿತೆ ಸೆಕ್ಷನ್ 318(4) ಮತ್ತು 319 ರ ಅಡಿಯಲ್ಲಿ ಉಧಮ್ ಸಿಂಗ್ ನಗರ ಜಿಲ್ಲೆಯ ರುದ್ರಾಪುರ ಠಾಣೆಯ ಪೊಲೀಸರು ಬಂಧಿಸಿದ್ದರು.
2022 ರ ತಿದ್ದುಪಡಿಯ ನಂತರ, ಕಾಯ್ದೆಯಡಿಯಲ್ಲಿ ದಾಖಲಾಗುವ ಪ್ರಕರಣಗಳ ಸಂಖ್ಯೆ ಹೆಚ್ಚಾಗುತ್ತಿದ್ದು, 2023ರಲ್ಲಿ 20 ಪ್ರಕರಣಗಳು ದಾಖಲಾಗಿದ್ದು, 2025 ರ ಸೆಪ್ಟೆಂಬರ್ ವೇಳೆಗೆ 18 ಹೆಚ್ಚುವರಿ ಪ್ರಕರಣಗಳು ದಾಖಲಾಗಿವೆ.
ಖುಲಾಸೆಗೊಂಡ ಪ್ರಕರಣಗಳು
ಪ್ರಕರಣ ದಾಖಲಾಗಿ ವಿಚಾರಣೆಯ ಹಂತಕ್ಕೆ ತಲುಪಿದ ಐದು ಪ್ರಕರಣಗಳು ಖುಲಾಸೆಗೊಂಡಿವೆ. ಈ ಐದರಲ್ಲಿ ಎರಡು ಪ್ರಕರಣಗಳು ʼಮತಾಂತರʼದಿಂದ ನೇರ ತೊಂದರೆಗೊಳಗಾಗದೆ ಮೂರನೇ ವ್ಯಕ್ತಿಯ ದೂರುಗಳಾಗಿದ್ದವು. ಮೂಲ ಕಾಯ್ದೆಯ ಪ್ರಕಾರ ನೊಂದ ವ್ಯಕ್ತಿ ಅಥವಾ ಅವರ ಪೋಷಕರು ಅಥವಾ ಸೋದರ/ಸೋದರಿ ಮಾತ್ರ ದೂರ ದಾಖಲಿಸಬೇಕು. ಇವರುಗಳು ದೂರು ದಾಖಲಿಸಲು ಸಾಧ್ಯವಾಗದಿದ್ದರೆ, ರಕ್ತಸಂಬಂಧ, ಮದುವೆ ಅಥವಾ ದತ್ತು ಸ್ವೀಕಾರದ ಮೂಲಕ ಅವರಿಗೆ ಸಂಬಂಧಿಸಿದ ವ್ಯಕ್ತಿ ದೂರು ದಾಖಲಿಸಬಹುದು. ಇದ್ಯಾವುದು ಅಲ್ಲದೆ, ಮೂರನೇ ವ್ಯಕ್ತಿಗಳು ವೈಯಕ್ತಿಕ ದ್ವೇಷದಿಂದ ದೂರು ದಾಖಲಿಸಿದ್ದರು.
ಆಕ್ಟೋಬರ್ 2021ರಲ್ಲಿ ನೈನಿತಾಲ್ನ ರಾಮನಗರದಲ್ಲಿ ಪಾದ್ರಿ ನರೇಂದ್ರ ಸಿಂಗ್ ಬಿಶ್ತ್ ಮತ್ತು ಅವರ ಪತ್ನಿ ವಿರುದ್ಧ ವಿಶ್ವ ಹಿಂದೂ ಪರಿಷತ್ತು ಆರೋಪ ಹೊರಿಸಿತ್ತು. ಸಾಮೂಹಿಕ ಮತಾಂತರದ ಆರೋಪ ಹೊರಿಸಿದ ಸಂಘಟನೆಯ ಸದಸ್ಯರು, ಬೈಬಲ್ ಶ್ಲೋಕಗಳಿರುವ ಪೋಸ್ಟರ್ಗಳನ್ನು ಹರಿದು ಪಾದ್ರಿ ನರೇಂದ್ರ ಸಿಂಗ್ ಬಿಶ್ತ್ ಅವರ ಮನೆಯನ್ನು ಧ್ವಂಸಗೊಳಿಸಿದ್ದರು.
ಬಿಶ್ತ್ ವಿರುದ್ಧ ಎಫ್ಐಆರ್ ಸಲ್ಲಿಕೆಯಾಗಿ, “ಕ್ರಿಶ್ಚಿಯನ್ ಧರ್ಮವನ್ನು ಪ್ರಚಾರ ಮಾಡುವ ಜೊತೆಗೆ ಧಾರ್ಮಿಕ ಮತಾಂತರಕ್ಕೆ ಪ್ರಚೋದನೆ ನೀಡುತ್ತಿದ್ದರು. ವಿಶೇಷವಾಗಿ ಬಡವರು ಮತ್ತು ಪರಿಶಿಷ್ಟ ಪಂಗಡ ಸಮುದಾಯದ ಸದಸ್ಯರಲ್ಲಿ ಮತಾಂತರದ ಭಾವನೆ ಬರುವಂತೆ ಮಾಡುತ್ತಿದ್ದರು” ಎಂದು ಆರೋಪಿಸಲಾಗಿತ್ತು.
ಆದರೆ, ಸೆಪ್ಟೆಂಬರ್ 17, 2025ರಂದು, ವಿಚಾರಣಾ ನ್ಯಾಯಾಲಯವು ಬಿಶ್ತ್ ಅವರನ್ನು ಖುಲಾಸೆಗೊಳಿಸಿ, ಬಿಶ್ತ್ ಅವರು ಯಾವ ವ್ಯಕ್ತಿಯನ್ನು ಮತಾಂತರಕ್ಕೆ ಯಾವಾಗ ಮತ್ತು ಹೇಗೆ ಪ್ರೇರೇಪಿಸಿದರು ಎಂಬುದನ್ನು ಹೇಳಲು ಪ್ರಾಸಿಕ್ಯೂಷನ್ ವಿಫಲವಾಗಿತ್ತು. ಈ ಪ್ರಕರಣದಲ್ಲಿ ಏಳು ದಿನಗಳ ಕಾಲ ಬಿಶ್ತ್ ಜೈಲಿನಲ್ಲಿ ಕಳೆಯಬೇಕಾಯಿತು. ಒಟ್ಟಾರೆಯಾಗಿ ಇದೊಂದು ಸುಳ್ಳು ಆರೋಪವೆಂದು ಸ್ಪಷ್ಟವಾಯಿತು.
ಇವುಗಳನ್ನು ಹೊರತು ಪಡಿಸಿ ವಿಚಾರಣೆಯ ಹಂತದಲ್ಲಿರುವ ಇತರ ಏಳು ಪ್ರಕರಣಗಳಲ್ಲಿ, ರಾಜ್ಯ ಸರ್ಕಾರವು ʼಉದ್ದೇಶ ಪೂರ್ವಕವಾಗಿ ತಪ್ಪು ನಿರೂಪಣೆʼ ಮಾಡಲಾಗಿದೆ ನ್ಯಾಯಾಲಯ ಗಮನಿಸಿದೆ. ಉತ್ತರಾಖಂಡ ಮುಖ್ಯಮಂತ್ರಿ ಪುಷ್ಕರ್ ಸಿಂಗ್ ಧಾಮಿ ಸರ್ಕಾರಕ್ಕೆ ನ್ಯಾಯಾಲಯ ಕಪಾಳ ಮೋಕ್ಷ ಮಾಡಿದೆ. ಸುಳ್ಳು ದಾಖಲೆಗಳ ಮೂಲಕ ಕಾಯ್ದೆಯನ್ನು ದುರುಪಯೋಗ ಪಡಿಸಿಕೊಳ್ಳಲಾಗುತ್ತಿದೆ ಎಂದು ಹೇಳಿದೆ.





