ಮಹಾರಾಷ್ಟ್ರ ರಾಜ್ಯ ಕಾಂಗ್ರೆಸ್ನ ಅಧಿಕೃತ ‘ಎಕ್ಸ್’ ಖಾತೆಯಲ್ಲಿ ಆಕ್ಷೇಪಾರ್ಯ ಪೋಸ್ಟ್ ಮಾಡಲಾಗಿತ್ತು ಎಂಬ ಆರೋಪದ ಮೇಲೆ ಅಪರಿಚಿತ ವ್ಯಕ್ತಿಯ ವಿರುದ್ಧ ಮುಂಬೈ ಪೊಲೀಸರು ಎಫ್ಐಆರ್ ದಾಖಲಿಸಿದ್ದಾರೆ. ಗಲಭೆಗೆ ಪ್ರಚೋದನೆ ನೀಡುವ ಉದ್ದೇಶದಿಂದ ಪೋಸ್ಟ್ ಹಾಕಿದ ಆರೋಪದ ಮೇಲೆ ಪ್ರಕರಣ ದಾಖಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಕಾಂಗ್ರೆಸ್ನ ವಿವಾದಾತ್ಮಕ ಟ್ವೀಟ್ಅನ್ನು ನೋಡಿದ ತಕ್ಷಣ ಆಡಳಿತಾರೂಢ ಬಿಜೆಪಿಯ ಸಾಮಾಜಿಕ ಮಾಧ್ಯಮ ಘಟಕದ ಸಂಚಾಲಕ ಪ್ರಕಾಶ್ ಗಡೇ ನೀಡಿದ ದೂರಿನ ಆಧಾರದ ಮೇಲೆ ಮರೀನ್ ಡ್ರೈವ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
“ಬಿಜೆಪಿ ಜನರನ್ನು ದಮನಿಸಲು ಯತ್ನಿಸಬಾರದು. ಅಂತಹ ಯತ್ನಗಳು ನಡೆದರೆ, ಲೆಹ್ನಲ್ಲಿ ‘ಜನರಲ್ ಝಡ್’ ಪ್ರತಿಭಟನಾಕಾರರು ಬಿಜೆಪಿ ಕಚೇರಿಗೆ ಬೆಂಕಿ ಹಚ್ಚಿದ ಪರಿಸ್ಥಿತಿ ಇಡೀ ದೇಶಾದ್ಯಂತ ಘಟಿಸುತ್ತದೆ ಎಂಬುದಾಗಿ ಪೋಸ್ಟ್ನಲ್ಲಿ ಬೆದರಿಕೆ ಹಾಕಲಾಗಿದೆ” ಎಂದು ದೂರುದಾರ ಪ್ರಕಾಶ್ ಆರೋಪಿಸಿದ್ದಾರೆ.
“ಪೋಸ್ಟ್ನಲ್ಲಿ ಬಿಜೆಪಿ ಕಚೇರಿಗೆ ಬೆಂಕಿ ಹಚ್ಚಲಾಗಿದೆ ಎಂದು ಚಿತ್ರಿಸುವ ರೇಖಾಚಿತ್ರವೂ ಇತ್ತು. ವಿವಿಧ ವಿಷಯಗಳ ಕುರಿತಾದ ಫಲಕಗಳು ಮತ್ತು ಬ್ಯಾನರ್ಗಳನ್ನು ಹಿಡಿದು ಜನರು ಪ್ರತಿಭಟನೆ ನಡೆಸುತ್ತಿರುವುದನ್ನು ಚಿತ್ರವು ಒಳಗೊಂಡಿತ್ತು” ಎಂದು ಪ್ರಕಾಶ್ ತಮ್ಮ ದೂರಿನಲ್ಲಿ ತಿಳಿಸಿದ್ದಾರೆ.
ಈ ಲೇಖನ ಓದಿದ್ದೀರಾ?: ಜಾತಿ ಸಮೀಕ್ಷೆ: ಒಬಿಸಿಗಳಿಗೆ ವಂಚಿಸಲು ಬಿಜೆಪಿ ನಾಯಕರ ಯತ್ನ?
ಪ್ರಕಾಶ್ ಅವರ ದೂರಿನ ಆಧಾರದ ಮೇಲೆ ಭಾರತೀಯ ನ್ಯಾಯ ಸಂಹಿತಾದ (ಬಿಎನ್ಎಸ್) ಸೆಕ್ಷನ್ 192 (ಗಲಭೆಗೆ ಪ್ರಚೋದನೆ), ಸೆಕ್ಷನ್ 353(1) (ಸುಳ್ಳು ಮಾಹಿತಿ, ವದಂತಿ ಪ್ರಸಾರ) ಹಾಗೂ ಸೆಕ್ಷನ್ 353(2) (ಸಾರ್ವಜನಿಕರಲ್ಲಿ ಭಯ ಅಥವಾ ಆತಂಕ ಸೃಷ್ಟಿಸುವುದು) ಅಡಿಯಲ್ಲಿ ಪ್ರಕರಣ ದಾಖಲಿಸಲಾಗಿದೆ ಎಂದು ಪೊಲೀಸ್ ಅಧಿಕಾರಿ ತಿಳಿಸಿದ್ದಾರೆ.
ಪೋಸ್ಟ್ನಲ್ಲಿ ಉಲ್ಲೇಖಿಸಿದ್ದ ಅಂಶವು, ಲಡಾಖ್ಗೆ ರಾಜ್ಯ ಸ್ಥಾನಮಾನ ನೀಡಬೇಕು ಎಂಬ ಬೇಡಿಕೆಯೂ ಸೇರಿದಂತೆ ಪ್ರಮುಖ ಬೇಡಿಕೆಗಳನ್ನು ಇಟ್ಟುಕೊಂಡು ಲೇಹ್ನಲ್ಲಿ ಇತ್ತೀಚೆಗೆ ನಡೆದ ಪ್ರತಿಭಟನೆ ವೇಳೆ ಹಿಂಸಾಚಾರ ನಡೆದದ್ದಕ್ಕೆ ಸಂಬಂಧಿಸಿದೆ. ಆ ಪ್ರತಿಭಟನೆ ವೇಳೆ, ಪ್ರತಿಭಟನಾಕಾರರು ಬಿಜೆಪಿ ಕಚೇರಿ, ಪೊಲೀಸ್ ವಾಹನ ಸೇರಿದಂತೆ ಹಲವು ವಾಹನಗಳನ್ನು ಸುಟ್ಟುಹಾಕಿದ್ದರು.




