ಕೇಂದ್ರಾಡಳಿತ ಪ್ರದೇಶವಾಗಿರುವ ಪುದುಚೇರಿಗೆ ರಾಜ್ಯ ಸ್ಥಾನಮಾನ ನೀಡಬೇಕೆಂದು ಎಐಎಡಿಎಂಕೆ ಮುಖ್ಯಸ್ಥ ಎಡಪ್ಪಾಡಿ ಕೆ ಪಳನಿಸ್ವಾಮಿ ಆಗ್ರಹಿಸಿದ್ದಾರೆ.
ಲೋಕಸಭಾ ಚುನಾವಣೆಗೆಪುದುಚೇರಿಯಲ್ಲಿ ಸ್ಪರ್ಧಿಸಿರುವ ಎಐಎಡಿಎಂಕೆ ಅಭ್ಯರ್ಥಿ ಜಿ ತಮಿಳ್ವೇಂದನ್ ಪರವಾಗಿ ನಡೆದ ಚುನಾವಣಾ ರ್ಯಾಲಿಯಲ್ಲಿ ಅವರು ಮಾತನಾಡಿದರು. “ಪುದುಚೇರಿಯಲ್ಲಿ ಪ್ರಸ್ತುತ ಚುನಾಯಿತ ಸರ್ಕಾರವು ಯಾವುದೇ ನಿರ್ಧಾರಗಳು ಮತ್ತು ಯೋಜನೆಗಳನ್ನು ಕಾರ್ಯಗತಗೊಳಿಸಲು ಲೆಫ್ಟಿನೆಂಟ್ ಗವರ್ನರ್ ಅವರ ಅನುಮತಿಗಾಗಿ ಕಾಯುವಂತೆ ಇರುವುದು ನಿಜಕ್ಕೂ ವಿಷಾದನೀಯ. ಪುದುಚೇರಿಯನ್ನು ಪೂರ್ಣ ಪ್ರಮಾಣದ ರಾಜ್ಯವನ್ನಾಗಿ ಮೇಲ್ದರ್ಜೆಗೆ ಏರಿಸುವ ತುರ್ತು ಅಗತ್ಯವಿದೆ” ಎಂದು ಅವರು ಹೇಳಿದ್ದಾರೆ.
“ಪುದುಚೇರಿಗೆ ರಾಜ್ಯ ಸ್ಥಾನಮಾನವನ್ನು ತರಲು ಎಐಎಡಿಎಂಕೆಗೆ ಮಾತ್ರ ಧೈರ್ಯ, ಪರಿಶ್ರಮ ಮತ್ತು ಪಟ್ಟುಬಿಡದ ಛಲವಿದೆ. ಪುದುಚೇರಿಯಲ್ಲಿ ಎಐಎಡಿಎಂಕೆ ಗೆದ್ದಾಗ ಮಾತ್ರ ರಾಜ್ಯತ್ವದ ಗುರಿ ಸಾಕಾರಗೊಳ್ಳುತ್ತದೆ” ಎಂದು ಅವರು ಹೇಳಿದ್ದಾರೆ.
ಪುದುಚೇರಿ ಕೇಂದ್ರಾಡಳಿತ ಪ್ರದೇಶವು ಏಕೈಕ ಲೋಕಸಭಾ ಸ್ಥಾನವನ್ನು ಹೊಂದಿದೆ. ಅಲ್ಲಿ, ಏಪ್ರಿಲ್ 19ರಂದು ಮತದಾನ ನಡೆಯಲಿದೆ.
ಪುದುಚೇರಿ ವಿಧಾನಸಭೆಯಲ್ಲಿ ಕಾಂಗ್ರೆಸ್, ಡಿಎಂಕೆ ಮತ್ತು ಎಐಎನ್ಆರ್ಸಿ ಮೈತ್ರಿ ಅಧಿಕಾರದ ಚುಕ್ಕಾಣಿ ಹಿಡಿದಿವೆ. ಆದರೂ, ಯಾರೊಬ್ಬರೂ ಪುದುಚೇರಿ ಜನರ ಒಳಿತಿಗಾಗಿ ಶ್ರಮಿಸಲಿಲ್ಲ. ಕೇಂದ್ರದಲ್ಲಿ ಅಧಿಕಾರದಲ್ಲಿರುವ ಬಿಜೆಪಿ ಪುದುಚೇರಿಯಲ್ಲಿ ಜನರ ಕಲ್ಯಾಣ ಯೋಜನೆಗಳನ್ನು ಜಾರಿಗೆ ತರಲು ಆಸಕ್ತಿ ತೋರಿಸಿಲ್ಲ. ಅದೇ ರೀತಿ ಕೇಂದ್ರದಲ್ಲಿ ಕಾಂಗ್ರೆಸ್ ಅಧಿಕಾರದಲ್ಲಿದ್ದಾಗಲೂ ಪುದುಚೇರಿಗೆ ಏನನ್ನೂ ಮಾಡಿಲ್ಲ” ಎಂದು ಪಳನಿಸ್ವಾಮಿ ಆರೋಪಿಸಿದ್ದಾರೆ.
“ಪುದುಚೇರಿಯಲ್ಲಿ ಡ್ರಗ್ಸ್ ಹಾವಳಿ ಗಂಭೀರ ಸಮಸ್ಯೆಯಾಗಿದೆ. ಇಲ್ಲಿನ ಡ್ರಗ್ ಪೆಡ್ಲರ್ಗಳು ನೆರೆಯ ತಮಿಳುನಾಡಿನ ಜಾಫರ್ ಸಾದಿಕ್ ಅವರಂತಹ ಡ್ರಗ್ ಮಾರಾಟಗಾರರೊಂದಿಗೆ ನಂಟು ಹೊಂದಿದ್ದಾರೆ ಎಂಬ ಆರೋಪಗಳಿವೆ. ಡ್ರಗ್ಸ್ ಹಾವಳಿಯನ್ನು ನಿಯಂತ್ರಿಸದಿದ್ದರೆ ಕಾನೂನು ಮತ್ತು ಸುವ್ಯವಸ್ಥೆ ಹದಗೆಡುತ್ತದೆ” ಎಂದು ಅವರು ಹೇಳಿದ್ದಾರೆ.
“2026ರ ವಿಧಾನಸಭಾ ಚುನಾವಣೆಯಲ್ಲಿ ಎಐಎಡಿಎಂಕೆ ಪುದುಚೇರಿಯಲ್ಲಿ ಮತ್ತೆ ಅಧಿಕಾರಕ್ಕೆ ಬರಬೇಕು. ಆಗ, ಜನರ ಎಲ್ಲ ಸಮಸ್ಯೆಗಳು ಮತ್ತು ನೋವುಗಳು ಕೊನೆಗೊಳ್ಳುತ್ತವೆ” ಎಂದು ಅವರು ಹೇಳಿದ್ದಾರೆ.




