ಸೋನಿಯಾ ಗಾಂಧಿ ಅವರು ಕಂಡ ರಾಜಕೀಯದ ಪರಿಸ್ಥಿತಿಯೇ ಬೇರೆ, ರಾಹುಲ್ ಗಾಂಧಿ ಅವರು ಕಾಣುತ್ತಿರುವ ರಾಜಕೀಯ ಪರಿಸ್ಥಿತಿಯೇ ಬೇರೆ. ಪಕ್ಷದ ಒಳಗೂ ಮತ್ತು ಹೊರಗೂ ಪಕ್ಷವನ್ನು ವೃದ್ಧಿಸುವುದಕ್ಕೆ ರಾಹುಲ್ ಗಾಂಧಿ ಪ್ರಯತ್ನಿಸುತ್ತಿದ್ದಾರೆ. ʼರಾಹುಲ್ ಗಾಂಧಿ ಒಬ್ಬ ಪ್ರಜಾಪ್ರಭುತ್ವವಾದಿʼ ಎಂದು ತಮಿಳುನಾಡಿನಿಂದ ರಾಜ್ಯಸಭೆಗೆ ಕಾಂಗ್ರೆಸ್ನಿಂದ ಆಯ್ಕೆಯಾದ ಕ್ರಿಸ್ಟೋಫರ್ ತಿಲಕ್, ʼದಿ ನ್ಯೂ ಇಂಡಿಯನ್ ಎಕ್ಸ್ಪ್ರೆಸ್ʼಗೆ ನೀಡಿದ ಸಂದರ್ಶನದಲ್ಲಿ ಅಭಿಪ್ರಾಯ ಪಟ್ಟಿದ್ದಾರೆ. ಮಾತ್ರವಲ್ಲದೆ, ರಾಜ್ಯಸಭೆಯಲ್ಲಿ ಮಹಿಳೆಯರು, ದಲಿತರು ಮತ್ತು ಒಬಿಸಿಗಳು ಸೇರಿದಂತೆ ಅಂಚಿನಲ್ಲಿರುವ ಸಮುದಾಯಗಳ ಪರವಾಗಿ, ಅವರ ಧ್ವನಿಯಾಗಿ ಕೆಲಸ ಮಾಡುತ್ತೇನೆ ಎಂದು ಹೇಳಿದ್ದಾರೆ.
1.ರಾಜ್ಯಸಭಾ ಸ್ಥಾನಕ್ಕೆ ಹಲವು ಹಿರಿಯರ ಲಾಬಿಯ ನಡುವೆ, ನೀವು ತಮಿಳುನಾಡಿನಿಂದ ಆಯ್ಕೆಯಾಗಿದ್ದೀರಿ. ಈ ಬಗ್ಗೆ ನಿಮ್ಮ ಅಭಿಪ್ರಾಯ?
ಇದು ನನಗೂ ಸಹ ಬಹಳ ಅಚ್ಚರಿಯ ಸಂಗತಿ. ಇದು ತಮಿಳುನಾಡಿನಂತಹ ರಾಜ್ಯದಲ್ಲಿ ಕಾಂಗ್ರೆಸ್ ಹೊಸ ಹೆಜ್ಜೆಯನ್ನು ಇಡುತ್ತಿರುವುದನ್ನು ಸ್ಪಷ್ಟವಾಗಿ ಹೇಳುತ್ತದೆ. ನನ್ನ ಮೇಲೆ ದೊಡ್ಡ ಜವಾಬ್ದಾರಿ ಇದೆ ಎಂದು ನಾನು ಭಾವಿಸುತ್ತೇನೆ.
2. ತಮಿಳುನಾಡಿಗೆ ಸಂಬಂಧಿಸಿದಂತೆ ಯಾವ ವಿಷಯಗಳ ಬಗ್ಗೆ ಕೇಂದ್ರದ ಗಮನ ಸೆಳೆಯಲು ಯತ್ನಿಸುತ್ತೀರಿ?
ಬಿಜೆಪಿ ನೇತೃತ್ವದ ಕೇಂದ್ರ ಸರ್ಕಾರ ಕೆಲವು ರಾಜ್ಯ ಸರ್ಕಾರಗಳ ಬಗ್ಗೆ ʼಪಕ್ಷಪಾತಿ ಧೋರಣೆʼಯನ್ನು ಹೊಂದಿದೆ. ತನ್ನ ನಿಲುವನ್ನು ಪ್ರಶ್ನಿಸುವ ರಾಜ್ಯ ಸರ್ಕಾರಗಳನ್ನು ಕಡೆಗಣಿಸುತ್ತಿದೆ. ಕೇಂದ್ರದಿಂದ ಬರಬೇಕಿರುವ ತೆರಿಗೆ ಪಾಲನ್ನು ನೀಡದೆ ಸತಾಯಿಸುತ್ತಿದೆ. ಅನುದಾನ ನೀಡುವುದರಲ್ಲಿಯೂ ತಾರತಮ್ಯ ಮಾಡುತ್ತಿದೆ. ಇನ್ನು, ಮಹಿಳೆಯರು, ದಲಿತರು ಮತ್ತು ಒಬಿಸಿಗಳು ಸೇರಿದಂತೆ ಅಂಚಿನಲ್ಲಿರುವ ವರ್ಗಗಳ ಬಗ್ಗೆ ಕೇಂದ್ರದಲ್ಲಿರುವ ಸರ್ಕಾರ ಹೆಚ್ಚು ಮುತುವರ್ಜಿ ವಹಿಸಬೇಕಿದೆ. ಯುವ ಸಬಲೀಕರಣದ ಬಗ್ಗೆ ಹೆಚ್ಚು ಮಹತ್ವ ನೀಡಬೇಕಿದೆ. ಈ ಎಲ್ಲದರ ಬಗ್ಗೆ ನಾನು ಧ್ವನಿಯಾಗಿರಲು ಬಯಸುತ್ತೇನೆ.
3. ಜಾತಿ ಆಧಾರಿತ ಹಿಂಸಾಚಾರ ಮತ್ತು ಕಾನೂನು ಸುವ್ಯವಸ್ಥೆಗಳನ್ನು ಸರಿಪಡಿಸಲು ಡಿಎಂಕೆ ನೇತೃತ್ವದ ತಮಿಳುನಾಡು ರಾಜ್ಯ ಸರ್ಕಾರ ಸೋತಿದೆಯೆ?
ಅಧಿಕಾರದಲ್ಲಿರುವ ರಾಜಕೀಯ ಪಕ್ಷವಾಗಿ, ಡಿಎಂಕೆ ನೇತೃತ್ವದ ರಾಜ್ಯ ಸರ್ಕಾರ ಜಾತಿ ಆಧಾರಿತ ಹಿಂಸಾಚಾರವನ್ನು ತಡೆಯಲು ಪ್ರಯತ್ನ ಮಾಡುತ್ತಿದೆ. ಆದಾಗ್ಯೂ, ಇಂದು ಕೊರತೆ ಕಾಣಿಸುತ್ತಿರುವುದು ದಲಿತ ಚಳುವಳಿಯ ಬಲ. ಸುಮಾರು ಎರಡು ದಶಕಗಳ ಹಿಂದೆ ಈ ಚಳುವಳಿಗಳು ಬಲವಾಗಿತ್ತು. ಸರ್ಕಾರವನ್ನು ಒತ್ತಾಯಿಸಿ ಕ್ರಮ ತೆಗೆದುಕೊಳ್ಳುವಂತೆ ಮಾಡುವಷ್ಟು ಚಳುವಳಿಗಳು ಪ್ರಬಲವಾಗಿದ್ದವು. ಇಂದು, ಈ ಚಳುವಳಿಗಳ ಭಾಗವಾಗಿದ್ದ ಅನೇಕ ಸಾಮಾಜಿಕ ಹೋರಾಟಗಾರರು ಚುನಾವಣಾ ರಾಜಕೀಯದಲ್ಲಿ ತೊಡಗಿಕೊಂಡಿದ್ದಾರೆ. ಪ್ರಮುಖ ರಾಜಕೀಯ ಪಕ್ಷಗಳೊಂದಿಗೆ ಮೈತ್ರಿ ಮಾಡಿಕೊಂಡಿದ್ದಾರೆ.
ಇದನ್ನೂ ಓದಿ : ಅಸ್ಸಾಂ ಅಖಾಡ: ಬಿಜೆಪಿ ಮಿತ್ರಪಕ್ಷ ಎಜಿಪಿಯಿಂದ ಶೇ. 50 ಮುಸ್ಲಿಂ ಅಭ್ಯರ್ಥಿಗಳು; ಏನಿದು ‘ಕಮಲ’ದ…
4. ರಾಜ್ಯಸಭೆಯಲ್ಲಿ ಕೇಂದ್ರ-ರಾಜ್ಯಗಳ ವಿಷಯದ ಕುರಿತು ನೀವು ಪ್ರಸ್ತಾಪಿಸಲು ಯೋಜಿಸಿರುವ ಅಂಶಗಳು ಯಾವುವು?
ನಿರ್ದೇಶಕ ತತ್ವಗಳು ಸೇರಿದಂತೆ ಎಲ್ಲಾ ಸಾಂವಿಧಾನಿಕ ನಿಬಂಧನೆಗಳನ್ನು ಹಿಂದಿನ ಕಾಂಗ್ರೆಸ್ ಸರ್ಕಾರ ಪಾಲಿಸುತ್ತಿತ್ತು. ಈ ಮೂಲಭೂತ ತತ್ವಗಳನ್ನು ಈಗ ಬಿಜೆಪಿ ಸರ್ಕಾರ ದುರ್ಬಲಗೊಳಿಸುತ್ತಿದೆ. ಆದ್ದರಿಂದ, ಕೇಂದ್ರ ಸರ್ಕಾರದ ನಿಜವಾದ ಉದ್ದೇಶವನ್ನು ಪ್ರಶ್ನಿಸಬೇಕು. ಬೇರೆಲ್ಲಾ ವಿಷಯಗಳ ಬಗ್ಗೆ ಪ್ರಸ್ತಾಪಿಸುವುದಕ್ಕಿಂತ, ಇಂತೆಲ್ಲಾ ವಿಷಯಗಳ ಬಗ್ಗೆ ಚರ್ಚೆಯಾಗಬೇಕಿದೆ. ನಾನು ಇಂತಹ ವಿಷಯಗಳ ಮೇಲೆ ಪ್ರಶ್ನಿಸಲು ಪ್ರಯತ್ನಿಸುವೆ.
5. ಸೋನಿಯಾ ಗಾಂಧಿ ಮತ್ತು ರಾಹುಲ್ ಗಾಂಧಿಯವರ ರಾಜಕೀಯ ನಡೆ ಮತ್ತು ಕಾರ್ಯವಿಧಾನಗಳಲ್ಲಿ ವ್ಯತ್ಯಾಸಗಳಿವೆ ಎಂದು ಕಾಣಿಸುತ್ತದೆ. ನೀವು ಅದನ್ನು ಹೇಗೆ ನೋಡುತ್ತೀರಿ?
ಹೌದು, ಇಬ್ಬರ ಕಾರ್ಯವಿಧಾನಗಳಲ್ಲಿ ವ್ಯತ್ಯಾಸಗಳಿವೆ. ಸೋನಿಯಾ ಗಾಂಧಿ ಅವರ ನಾಯಕತ್ವದ ಅವಧಿ ಇಂದಿನ ಸನ್ನಿವೇಶಕ್ಕಿಂತ ಭಿನ್ನವಾಗಿತ್ತು. ಸೋನಿಯಾ ಗಾಂಧಿ ಅವರು ನೋಡಿದ ರಾಜಕೀಯ ಪರಸ್ಥಿತಿಗೂ, ರಾಹುಲ್ ಗಾಂಧಿ ನೋಡುತ್ತಿರುವ ರಾಜಕೀಯ ಪರಿಸ್ಥಿತಿಗೂ ವ್ಯತ್ಯಾಸವಿದೆ. ರಾಜಕೀಯ ಪರಿಸ್ಥಿತಿಗೆ ತಕ್ಕಂತೆ ನಡೆದುಕೊಳ್ಳಬೇಕಾಗುತ್ತದೆ. ಕಾರ್ಯವಿಧಾನಗಳನ್ನು ರೂಪಿಸಬೇಕಾಗುತ್ತದೆ. ರಾಹುಲ್ ಗಾಂಧಿ ಪಕ್ಷದ ಒಳಗೂ, ಹೊರಗೂ ಪಕ್ಷವನ್ನು ವೃದ್ಧಿಸುವುದಕ್ಕೆ ಅನೇಕ ಉಪಕ್ರಮಗಳನ್ನು ತೆಗೆದುಕೊಳ್ಳುತ್ತಿದ್ದಾರೆ. ಪಕ್ಷಕ್ಕೆ ಯುವ ಸಮುದಾಯವನ್ನು ಆಕರ್ಷಿಸುವುದಕ್ಕೆ ಪ್ರಯತ್ನಿಸುತ್ತಿದ್ದಾರೆ. ದೇಶಾದ್ಯಂತ ಪಕ್ಷವನ್ನು ಬಲಪಡಿಸುವಂತಹ ಮಹತ್ವದ ಹೆಜ್ಜೆಯನ್ನು ಇಟ್ಟಿದ್ದಾರೆ.
6. ಚುನಾವಣಾ ರಾಜಕೀಯದ ವಿಷಯದಲ್ಲಿ ರಾಹುಲ್ ಗಾಂಧಿ ಅವರ ಕಾರ್ಯವಿಧಾನ ತಮಿಳುನಾಡು ಮತ್ತು ಬಿಹಾರ ಸೇರಿದಂತೆ ಕೆಲವು ರಾಜ್ಯಗಳಲ್ಲಿ ಅಸಮಾಧಾನವನ್ನು ಸೃಷ್ಟಿಸಿದೆ ಎಂಬ ಅಭಿಪ್ರಾಯವಿದೆ. ನೀವು ಇದನ್ನು ಹೇಗೆ ನೋಡುತ್ತೀರಿ?
ಕಾಂಗ್ರೆಸ್ ಪಕ್ಷ ಎಲ್ಲಾ ರಾಜ್ಯಗಳಲ್ಲಿ ಒಂದೇ ತಂತ್ರಗಾರಿಕೆಯನ್ನು ಪಾಲಿಸುವುದಿಲ್ಲ. ರಾಜ್ಯದ ನಾಗರಿಕರ ಹಿತಾಸಕ್ತಿಯಿಂದ ಮತ್ತು ಚುನಾವಣಾ ಹಿತಾಸಕ್ತಿಯಿಂದ ಬೇರೆ ಬೇರೆ ತಂತ್ರಗಾರಿಕೆಯನ್ನು ಕಾಂಗ್ರೆಸ್ ರೂಪಿಸುತ್ತದೆ. ಚುನಾವಣೆ, ರಾಜಕೀಯ ಮೈತ್ರಿಯ ವಿಷಯಗಳಲ್ಲಿ ಅಸಮಾಧಾನಗಳಿರುವುದು ಸಹಜ. ಚುನಾವಣೆಯಲ್ಲಿ ಸೋಲುವುದು ಮತ್ತು ಗೆಲ್ಲುವುದನ್ನು ಮತದಾರರು ನಿರ್ಧರಿಸುತ್ತಾರೆ. ಪಕ್ಷದಲ್ಲಿ ರಾಹುಲ್ ಗಾಂಧಿ ಏಕಾಂಗಿಯಾಗಿ ಹೋರಾಡುತ್ತಿದ್ದಾರೆ. ಅವರೊಬ್ಬ ಪ್ರಜಾಪ್ರಭುತ್ವವಾದಿ. ಆರ್ಎಸ್ಎಸ್ ಸಂಘ ಪರಿವಾರ ಮತ್ತು ಬಿಜೆಪಿ ವಿರುದ್ಧ ತೀವ್ರವಾಗಿ ಹೋರಾಡುವ ದೇಶದ ಏಕೈಕ ನಾಯಕ. ಭಾರತೀಯ ಯುವ ಕಾಂಗ್ರೆಸ್ಗೆ ನಾಯಕತ್ವವನ್ನು ಆಯ್ಕೆ ಮಾಡುವ ವ್ಯವಸ್ಥೆಯನ್ನು ತಂದವರು ಅವರು. ಅವರಿಗೆ ದೇಶದ ಬಗ್ಗೆ ವಿಭಿನ್ನ ಯೋಜನೆ, ಯೋಚನೆಗಳಿವೆ.
ಸೌಜನ್ಯ : The New Indian Express
ಕನ್ನಡಕ್ಕೆ : ಶ್ರೀರಾಜ್ ವಕ್ವಾಡಿ





