ಇಂದೋರ್ನ ಸರ್ಕಾರಿ ಮಹಾರಾಜ ಯಶವಂತರಾವ್ ಆಸ್ಪತ್ರೆಯಲ್ಲಿ ಇಲಿ ಕಡಿತದಿಂದ ಎರಡು ನವಜಾತ ಶಿಶುಗಳು ಸಾವನ್ನಪ್ಪಿದ್ದು, ಲೋಕಸಭೆ ವಿಪಕ್ಷ ನಾಯಕ ರಾಹುಲ್ ಗಾಂಧಿ ಗುರುವಾರ ಕೇಂದ್ರ ಮತ್ತು ಮಧ್ಯಪ್ರದೇಶ ಸರ್ಕಾರವನ್ನು ತರಾಟೆಗೆ ತೆಗೆದುಕೊಂಡಿದ್ದಾರೆ. ಆರೋಗ್ಯ ಸೌಲಭ್ಯದಲ್ಲಿನ ಕಳಪೆ ನಿರ್ವಹಣೆ ವಿಚಾರದಲ್ಲಿ ಸರ್ಕಾರವನ್ನು ದೂಷಿಸಿದ ರಾಹುಲ್ “ಇದು ಆಕಸ್ಮಿಕವಾಗಿ ನಡೆದಿರುವುದಲ್ಲ, ಕೊಲೆ” ಎಂದು ಆರೋಪಿಸಿದ್ದಾರೆ.
ಇಂದೋರ್ ಆಸ್ಪತ್ರೆಯ ಮಕ್ಕಳ ಶಸ್ತ್ರಚಿಕಿತ್ಸಾ ವಾರ್ಡ್ನಲ್ಲಿ ಇಲಿಗಳು ಕಚ್ಚಿದ ಪರಿಣಾಮ ಎರಡು ನವಜಾತ ಶಿಶುಗಳು ಗಾಯಗೊಂಡು ಸಾವನ್ನಪ್ಪಿವೆ. ಆಗಸ್ಟ್ 30-31ರ ಮಧ್ಯರಾತ್ರಿ ನವಜಾತ ಶಿಶುಗಳನ್ನು ಇಲಿಗಳು ಕಚ್ಚಿದ್ದು, ಒಂದು ಮಗುವಿನ ಕೈಗೆ, ಮತ್ತೊಂದು ಮಗುವಿನ ಭುಜಕ್ಕೆ ಗಾಯವಾಗಿದೆ. ಶಿಶುಗಳು ಸಾವನ್ನಪ್ಪಿದ ಬೆನ್ನಲ್ಲೇ ಆಸ್ಪತ್ರೆ ಸಿಬ್ಬಂದಿಯನ್ನು ಅಮಾನತುಗೊಳಿಸಲಾಗಿದ್ದು, ತನಿಖೆಯನ್ನು ಪ್ರಾರಂಭಿಸಲಾಗಿದೆ.
ಇದನ್ನು ಓದಿದ್ದೀರಾ? ಮಹಾರಾಷ್ಟ್ರ ಸರ್ಕಾರಿ ಆಸ್ಪತ್ರೆಯಲ್ಲಿ ಮುಂದುವರಿದ ಸಾವಿನ ಸರಣಿ: ಮತ್ತೆ ನಾಲ್ಕು ಮಕ್ಕಳ ಸಹಿತ 7 ಮಂದಿ ಮೃತ್ಯು
ಕೇವಲ 1.2 ಕಿಲೋಗ್ರಾಂಗಳಷ್ಟು ತೂಕವಿದ್ದ ಮಗು ಮಂಗಳವಾರ ಮೃತಪಟ್ಟಿದ್ದು, ಸಾವಿಗೆ ಕಾರಣ ತೀವ್ರ ಸೋಂಕು ಮತ್ತು ಜನಿಸಿದಾಗಲೇ ಇದ್ದ ಕೆಲವು ಸಮಸ್ಯೆಗಳು ಎಂದು ವೈದ್ಯರು ಹೇಳಿಕೊಂಡಿದ್ದಾರೆ. ಎರಡನೇ ಶಿಶು ಬುಧವಾರ ಸಾವನ್ನಪ್ಪಿದೆ. ಇದಾದ ಬೆನ್ನಲ್ಲೇ ನವಜಾತ ಶಿಶುಗಳ ವಾರ್ಡ್ನಲ್ಲಿ ಇಲಿಗಳು ಇರುವ ವಿಚಾರದಲ್ಲಿ ಆಸ್ಪತ್ರೆ ಆಡಳಿತದ ನಿರ್ಲಕ್ಷ್ಯದ, ನೈರ್ಮಲ್ಯದ ವಿರುದ್ಧ ತೀವ್ರ ಆಕ್ರೋಶ ವ್ಯಕ್ತವಾಗಿದೆ.
ಎಂಜಿಎಂ ವೈದ್ಯಕೀಯ ಕಾಲೇಜಿನ ಡೀನ್ ಡಾ. ಅರವಿಂದ್ ಘಂಘೋರಿಯಾ ಅವರು ಸುರಕ್ಷತಾ ಶಿಷ್ಟಾಚಾರಗಳ ಉಲ್ಲಂಘನೆಯನ್ನು ಒಪ್ಪಿಕೊಂಡಿದ್ದು, ಈ ವಿಷಯದ ಬಗ್ಗೆ ತನಿಖೆ ನಡೆಸಲು ಉನ್ನತ ಮಟ್ಟದ ಸಮಿತಿಯನ್ನು ರಚಿಸಲಾಗಿದೆ ಎಂದು ಹೇಳಿದ್ದಾರೆ.
ಈ ಬಗ್ಗೆ ಎಕ್ಸ್ನಲ್ಲಿ ಪೋಸ್ಟ್ ಮಾಡಿರುವ ರಾಹುಲ್ ಗಾಂಧಿ, “ಇದು ಆಕಸ್ಮಿಕವಲ್ಲ, ಇದು ನೇರ ಕೊಲೆ. ಈ ಘಟನೆ ಎಷ್ಟು ಭಯಾನಕ, ಅಮಾನವೀಯ ಮತ್ತು ಸಂವೇದನಾರಹಿತವೆಂದರೆ ಈ ವಿಷಯ ಕೇಳಿ ನಾವು ನಡುಗುತ್ತೇವೆ. ಸರ್ಕಾರ ತನ್ನ ಮೂಲಭೂತ ಜವಾಬ್ದಾರಿಯನ್ನು ಪೂರೈಸಲು ವಿಫಲವಾದ ಕಾರಣದಿಂದಾಗಿ ತಾಯಂದಿರು ತಮ್ಮ ಮಗುವನ್ನು ಕಳೆದುಕೊಳ್ಳಬೇಕಾಗಿದೆ” ಎಂದು ಹೇಳಿದ್ದಾರೆ.
इंदौर में मध्य प्रदेश के सबसे बड़े सरकारी अस्पताल में दो नवजात शिशुओं की चूहों के काटने से मौत – यह कोई दुर्घटना नहीं, यह सीधी-सीधी हत्या है। यह घटना इतनी भयावह, अमानवीय और असंवेदनशील है कि इसे सुनकर भी रूह कांप जाए।
— Rahul Gandhi (@RahulGandhi) September 4, 2025
एक मां की गोद से उसका बच्चा छिन गया, सिर्फ इसलिए क्योंकि सरकार… pic.twitter.com/4u1IBzobay
“ಆಡಳಿತವು ಯಾವಾಗಲೂ ಹೇಳುವಂತೆ ತನಿಖೆ ನಡೆಯಲಿದೆ ಎಂದು ಹೇಳಿದೆ. ಆದರೆ ನವಜಾತ ಶಿಶುಗಳ ಸುರಕ್ಷತೆಯನ್ನು ನೀವು ಖಚಿತಪಡಿಸಿಕೊಳ್ಳಲು ಸಾಧ್ಯವಾಗದಿದ್ದಾಗ, ಸರ್ಕಾರವನ್ನು ನಡೆಸಲು ನಿಮಗೆ ಯಾವ ಹಕ್ಕಿದೆ ಎಂಬ ಪ್ರಶ್ನೆ ಹುಟ್ಟುತ್ತದೆ. ಪ್ರಧಾನಿ ಮೋದಿ ಮತ್ತು ಮಧ್ಯಪ್ರದೇಶದ ಮುಖ್ಯಮಂತ್ರಿ ನಾಚಿಕೆಯಿಂದ ತಲೆ ತಗ್ಗಿಸಬೇಕು” ಎಂದು ಕಾಂಗ್ರೆಸ್ ನಾಯಕ ರಾಹುಲ್ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಹಾಗೆಯೇ, “ಆರೋಗ್ಯ ಕ್ಷೇತ್ರದಲ್ಲಿನ ಖಾಸಗೀಕರಣದಿಂದಾಗಿ, ಉತ್ತಮ ಚಿಕಿತ್ಸೆ ಶ್ರೀಮಂತರಿಗೆ ಮಾತ್ರ ಸಿಗುತ್ತಿದೆ. ಬಡವರಿಗೆ ಬಿಟ್ಟ ಸರ್ಕಾರಿ ಆಸ್ಪತ್ರೆಗಳು ಸುರಕ್ಷಿತವಾಗಿಲ್ಲ. ಸಾವಿನ ಗುಹೆಗಳಾಗಿವೆ” ಎಂದು ಟೀಕಿಸಿದ್ದಾರೆ.





