‘ಕುಂಬಾರನಿಗೆ ವರುಷ ದೊಣ್ಣೆಗೆ ನಿಮಿಷ’ ಎಂಬಂತೆ “ಪ್ರಧಾನಿ ನರೇಂದ್ರ ಮೋದಿ ಸರ್ಕಾರವು 20 ವರ್ಷಗಳ ಮನರೇಗ ಯೋಜನೆಯನ್ನು ಒಂದೇ ದಿನದಲ್ಲಿ ನಾಶಪಡಿಸಿದೆ” ಎಂದು ಕಾಂಗ್ರೆಸ್ ನಾಯಕ, ಸಂಸದ ರಾಹುಲ್ ಗಾಂಧಿ ಶುಕ್ರವಾರ ಆರೋಪಿಸಿದ್ದಾರೆ. ಹಾಗೆಯೇ ಈ ವಿಬಿ-ಜಿ ರಾಮ್ ಜಿ ಯೋಜನೆ ಕಾಯ್ದೆಯು “ಗ್ರಾಮ ವಿರೋಧಿ” ಎಂದು ಕರೆದಿದ್ದಾರೆ.
2025ರಲ್ಲಿ ಡಿಸೆಂಬರ್ನಲ್ಲಿ ಕೇಂದ್ರ ಸರ್ಕಾರವು ಮಹಾತ್ಮ ಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತರಿ ಕಾಯ್ದೆ (MGNREGA) ಬದಲಿಗೆ ‘ವಿಬಿ-ಜಿ ರಾಮ್ ಜಿ’ (VB-G RAM G) ಎಂಬ ಹೊಸ ಮಸೂದೆಯನ್ನು ಜಾರಿಗೆ ತಂದಿದೆ. ಮರುನಾಮಕರಣ ಮಾಡಿರುವುದನ್ನು ವಿರೋಧ ಪಕ್ಷಗಳು ತೀವ್ರವಾಗಿ ಖಂಡಿಸಿವೆ. ಇದು ರಾಷ್ಟ್ರಪಿತನಿಗೆ ಮಾಡಿದ ಅವಮಾನ ಎಂದು ಪ್ರತಿಪಕ್ಷಗಳು ಆರೋಪಿಸಿವೆ. ಹೆಸರು ಮಾತ್ರವಲ್ಲ ಸಂಪೂರ್ಣ ಕಾಯ್ದೆಯನ್ನೇ ಬದಲಾಯಿಸಿರುವುದು ಕಾರ್ಮಿಕ ವಿರೋಧಿ ಎಂದು ವಿಪಕ್ಷಗಳು ಆರೋಪಿಸಿವೆ.
ಇದನ್ನು ಓದಿದ್ದೀರಾ? ಮೊನ್ನೆ ಮೊನ್ನೆ 16 ಲಕ್ಷ ಮನರೇಗ ಫಲಾನುಭವಿಗಳ ಹೆಸರು ಕೈಬಿಟ್ಟಿದ್ದ ಕೇಂದ್ರ ಸರ್ಕಾರ
ಈ ಬಗ್ಗೆ ಎಕ್ಸ್ನಲ್ಲಿ ಪೋಸ್ಟ್ ಮಾಡಿರುವ ಲೋಕಸಭೆಯ ವಿಪಕ್ಷ ನಾಯಕ ರಾಹುಲ್ ಗಾಂಧಿ, “ನಿನ್ನೆ ರಾತ್ರಿ, ಮೋದಿ ಸರ್ಕಾರವು ಇಪ್ಪತ್ತು ವರ್ಷಗಳ MGNREGAವನ್ನು ಒಂದೇ ದಿನದಲ್ಲಿ ಕೆಡವಿದೆ. ವಿಬಿ-ಜಿ ರಾಮ್ ಜಿ ಎಂಬುದು ಮನರೇಗದ ‘ಪುನರುಜ್ಜೀವನವಲ್ಲ. ಇದು ಹಕ್ಕು, ಖಾತರಿಯನ್ನು ನಾಶಪಡಿಸುವುದು. ಹಾಗೆಯೇ ಯೋಜನೆಯನ್ನು ದೆಹಲಿಯಿಂದ ನಿಯಂತ್ರಿಸಲ್ಪಡುವ ಪಡಿತರ ಯೋಜನೆಯಂತೆ ಮಾಡಲಾಗಿದೆ. ಇದು ರಾಜ್ಯ ವಿರೋಧಿ ಮತ್ತು ಗ್ರಾಮ ವಿರೋಧಿಯಾಗಿದೆ” ಎಂದು ದೂರಿದ್ದಾರೆ.
“ಮನರೇಗ ಗ್ರಾಮೀಣ ಕಾರ್ಮಿಕರಿಗೆ ಕೂಲಿಗಾಗಿ ಬೇಡಿಕೆ ಮುಂದಿಡುವ ಶಕ್ತಿಯನ್ನು ನೀಡಿತ್ತು. ಶೋಷಣೆ ಮತ್ತು ವಲಸೆಯ ಸಂಕಷ್ಟ ಕಡಿಮೆಯಾಯಿತು, ವೇತನ ಹೆಚ್ಚಾಯಿತು. ಉದ್ಯೋಗ ಸ್ಥಿತಿ ಸುಧಾರಿಸಿತು. ಅದೇ ಸಮಯದಲ್ಲಿ ಗ್ರಾಮೀಣ ಮೂಲಸೌಕರ್ಯವನ್ನು ನಿರ್ಮಿಸಲಾಗುತ್ತಿತ್ತು ಮತ್ತು ಪುನರುಜ್ಜೀವನಗೊಳಿಸಲಾಗುತ್ತಿತ್ತು. ಆದರೆ ಇವೆಲ್ಲವನ್ನೂ ಸರ್ಕಾರ ನಿಲ್ಲಿಸಲು ಬಯಸುತ್ತಿದೆ” ಎಂದು ರಾಹುಲ್ ಗಾಂಧಿ ಆರೋಪಿಸಿದ್ದಾರೆ.
“ಉದ್ಯೋಗವನ್ನು ಮಿತಿಗೊಳಿಸುವ ಮೂಲಕ ಮತ್ತು ಉದ್ಯೋಗ ನಿರಾಕರಿಸುವ ಸ್ಥಿತಿ ಉಂಟು ಮಾಡುವ ಮೂಲಕ, ವಿಬಿ-ಜಿ ರಾಮ್ ಜಿ ಗ್ರಾಮೀಣ ಬಡವರು ಹೊಂದಿದ್ದ ಒಂದು ಸಾಧನವನ್ನು ದುರ್ಬಲಗೊಳಿಸುತ್ತದೆ. ಕೋವಿಡ್ ಸಮಯದಲ್ಲಿ ಮನರೇಗ ಎಂದರೆ ಏನು ಎಂದು ನಾವು ನೋಡಿದ್ದೇವೆ. ಈ ಆರ್ಥಿಕತೆಯ ದಾರಿ ಮುಚ್ಚಿದಾಗ ಜೀವನೋಪಾಯ ಕುಸಿದು, ಕೋಟ್ಯಂತರ ಜನರು ಹಸಿವು ಮತ್ತು ಸಾಲಕ್ಕೆ ಸಿಲುಕದಂತೆ ಮನರೇಗ ತಡೆಯಿತು” ಎಂದು ಹೇಳಿದ್ದಾರೆ.
“ಮನರೇಗ ಮಹಿಳೆಯರಿಗೆ ಹೆಚ್ಚು ಸಹಾಯ ಮಾಡಿತು. ಮಹಿಳೆಯರು ಹೆಚ್ಚು ಮನರೇಗಕ್ಕೆ ಕೊಡುಗೆ ನೀಡಿದ್ದಾರೆ. ನೀವು ಉದ್ಯೋಗ ಕಾರ್ಯಕ್ರಮವನ್ನು ಪಡಿತರ ಕಾರ್ಯಕ್ರಮದಂತೆ ಮಾಡುವಾಗ, ಈ ಉದ್ಯೋಗದಿಂದ ಮೊದಲು ಹೊರದೂಡಲ್ಪಡುವವರು ಮಹಿಳೆಯರು, ದಲಿತರು, ಆದಿವಾಸಿಗಳು, ಭೂಹೀನ ಕಾರ್ಮಿಕರು ಮತ್ತು ಬಡ ಒಬಿಸಿ ಸಮುದಾಯಗಳು” ಎಂದು ರಾಹುಲ್ ಆತಂಕ ವ್ಯಕ್ತಪಡಿಸಿದ್ದಾರೆ.
ಇದನ್ನು ಓದಿದ್ದೀರಾ? ಮನರೇಗ ರದ್ದು ‘ಐತಿಹಾಸಿಕ ತಪ್ಪು’ – ಅಂತಾರಾಷ್ಟ್ರೀಯ ತಜ್ಞರ ಎಚ್ಚರಿಕೆ
“ಎಲ್ಲಕ್ಕಿಂತ ಹೆಚ್ಚಾಗಿ, ಈ ಕಾನೂನನ್ನು ಸರಿಯಾದ ಪರಿಶೀಲನೆಯಿಲ್ಲದೆ ಸಂಸತ್ತಿನ ‘ಬುಲ್ಡೋಜರ್’ ಮೂಲಕ ತಳ್ಳಿಹಾಕಲಾಗಿದೆ. ಮಸೂದೆಯನ್ನು ಸ್ಥಾಯಿ ಸಮಿತಿಗೆ ಕಳುಹಿಸಬೇಕೆಂಬ ವಿರೋಧ ಪಕ್ಷದ ಬೇಡಿಕೆಯನ್ನು ತಿರಸ್ಕರಿಸಲಾಗಿದೆ. ಕೋಟ್ಯಂತರ ಕಾರ್ಮಿಕರ ಮೇಲೆ ಪರಿಣಾಮ ಬೀರುವ ಕಾನೂನನ್ನು ಗಂಭೀರ ಸಮಿತಿಯ ಪರಿಶೀಲನೆ, ತಜ್ಞರ ಸಮಾಲೋಚನೆ ಮತ್ತು ಸಾರ್ವಜನಿಕ ವಿಚಾರಣೆಗಳಿಲ್ಲದೆ ಎಂದಿಗೂ ಜಾರಿಗೆ ಮಾಡಬಾರದು” ಎಂದು ಅಭಿಪ್ರಾಯಿಸಿದ್ದಾರೆ.
“ಕಾರ್ಮಿಕರನ್ನು ದುರ್ಬಲಗೊಳಿಸುವುದು, ಗ್ರಾಮೀಣ ಭಾರತದ, ವಿಶೇಷವಾಗಿ ದಲಿತರು, ಒಬಿಸಿಗಳು ಮತ್ತು ಆದಿವಾಸಿಗಳ ಹತೋಟಿಯನ್ನು ದುರ್ಬಲಗೊಳಿಸುವುದು, ಅಧಿಕಾರವನ್ನು ಕೇಂದ್ರೀಕರಿಸುವುದು ಮತ್ತು ನಂತರ ‘ಸುಧಾರಣೆ’ ನೆಪದಲ್ಲಿ ಶೋಷಣೆ ಮಾಡುವುದು ಪ್ರಧಾನಿ ಮೋದಿಯವರ ಗುರಿಗಳು ಎಂಬುದು ಸ್ಪಷ್ಟವಾಗಿವೆ” ಎಂದಿದ್ದಾರೆ.
“ಮನರೇಗ ವಿಶ್ವದ ಅತ್ಯಂತ ಯಶಸ್ವಿ ಬಡತನ ನಿರ್ಮೂಲನೆ ಮತ್ತು ಸಬಲೀಕರಣ ಕಾರ್ಯಕ್ರಮಗಳಲ್ಲಿ ಒಂದಾಗಿದೆ. ಈ ಸರ್ಕಾರವು ಗ್ರಾಮೀಣ ಬಡವರ ಕೊನೆಯ ರಕ್ಷಣಾ ಮಾರ್ಗವನ್ನು ನಾಶಮಾಡಲು ನಾವು ಬಿಡುವುದಿಲ್ಲ. ನಾವು ಕಾರ್ಮಿಕರು, ಪಂಚಾಯತ್ಗಳು ಮತ್ತು ರಾಜ್ಯಗಳೊಂದಿಗೆ ನಿಲ್ಲುತ್ತೇವೆ. ಈ ಕಾನೂನನ್ನು ಹಿಂತೆಗೆದುಕೊಳ್ಳಬೇಕೆಂದು ಒತ್ತಾಯಿಸಿ ಹೋರಾಡುತ್ತೇವೆ” ಎಂದು ರಾಹುಲ್ ಗಾಂಧಿ ತಿಳಿಸಿದ್ದಾರೆ.





