ಮೋದಿ ಪರ್ವದಲ್ಲಿ ಮೇಯುವವರಿಗೆ ಮಣೆ: ಅಪ್ಪಿತಪ್ಪಿ ಸಿಕ್ಕಿಬಿದ್ದ ಸಿಜಾರಿಯಾ  

Date:

ಸಂಘಪರಿವಾರ ಮತ್ತು ಬಿಜೆಪಿಯ ಜೊತೆ ಗುರುತಿಸಿಕೊಂಡವರು ಪ್ರತಿಷ್ಠಿತ ಸಂಸ್ಥೆಗಳ ಹುದ್ದೆಗಳಲ್ಲಿ ವಿರಾಜಮಾನರಾಗಿ, ಶೈಕ್ಷಣಿಕ ಮತ್ತು ಸಾಂಸ್ಕೃತಿಕ ಜಗತ್ತನ್ನು ಯಾವ ರೀತಿ ಕುಲಗೆಡಿಸುತ್ತಾರೆ ಎನ್ನುವುದಕ್ಕೆ ಸಿಜಾರಿಯಾ ಕೇಸ್ ಒಂದು ಉತ್ತಮ ಉದಾಹರಣೆ.

ಆಂಧ್ರಪ್ರದೇಶದ ಗುಂಟೂರಿನಲ್ಲಿರುವ ಕೋನೇರು ಲಕ್ಷ್ಮಯ್ಯ ಎಜುಕೇಷನ್‌ ಫೌಂಡೇಷನ್‌ಗೆ (ಕೆಎಲ್‌ಇಎಫ್‌) ‘ಎ++ ಗ್ರೇಡ್‌’ ಅಗತ್ಯವಿತ್ತು. ಅದಕ್ಕಾಗಿ ಅವರು ರಾಷ್ಟ್ರೀಯ ಮೌಲ್ಯಾಂಕನ ಮತ್ತು ಮಾನ್ಯತಾ ಪರಿಷತ್(ನ್ಯಾಕ್‌)ಗೆ ಅರ್ಜಿ ಹಾಕಿಕೊಂಡಿದ್ದರು.

ಸುಮ್ಮನೆ ಅರ್ಜಿ ಹಾಕಿಕೊಂಡರೆ ನ್ಯಾಕ್ ಗ್ರೇಡ್ ಸಿಗುತ್ತದೆಯೇ? ಅದಕ್ಕಾಗಿ ಅವರು ಸುಲಭದ ಮಾರ್ಗ ಹುಡುಕಿಕೊಂಡಿದ್ದರು. ಜವಾಹರಲಾಲ್‌ ನೆಹರೂ ವಿಶ್ವವಿದ್ಯಾಲಯದ ಪ್ರಾಧ್ಯಾಪಕ ರಾಜೀವ್ ಸಿಜಾರಿಯಾ ಅವರನ್ನು ಭೇಟಿ ಮಾಡಿ, ಅವರ ಮೂಲಕ 1.8 ಕೋಟಿಗೆ ಡೀಲ್ ಕುದುರಿಸಿದ್ದರು. ಅಷ್ಟು ಕೊಡಲು ಕಷ್ಟ ಎಂದಾಗ 1.3 ಕೋಟಿಗೆ ಇಳಿದರು. ಕೊನೆಗೆ 28 ಲಕ್ಷಕ್ಕೆ ಒಪ್ಪಿಕೊಂಡಿದ್ದರು. ಮುಂಗಡವಾಗಿ 10 ಲಕ್ಷವನ್ನು ಪಡೆದಿದ್ದರು.

ಈಗ ಲಂಚ ಪಡೆದ ಆರೋಪದ ಮೇರೆಗೆ ಸಿಬಿಐ ಸಿಜಾರಿಯಾ ಸೇರಿದಂತೆ 10 ಮಂದಿಯನ್ನು ಬಂಧಿಸಿದೆ. ಆ ತಕ್ಷಣವೇ ಜವಾಹರಲಾಲ್‌ ನೆಹರೂ ವಿಶ್ವವಿದ್ಯಾಲಯದ ಪ್ರಾಧ್ಯಾಪಕ ರಾಜೀವ್‌ ಸಿಜಾರಿಯಾ ಅವರನ್ನು ಅಮಾನತುಗೊಳಿಸಿ ವಿ.ವಿಯ ಕುಲಪತಿ ಶಾಂತಿಶ್ರೀ ಪಂಡಿತ್‌ ಆದೇಶ ಹೊರಡಿಸಿದ್ದಾರೆ.

ಇನ್ನಷ್ಟು ವಿಶೇಷ ಲೇಖನಗಳಿಗಾಗಿ, ಇಲ್ಲಿ ಕ್ಲಿಕ್ ಮಾಡಿ

ಹಾಸನ ಮಣ್ಣಿನ ಹೆಣ್ಣು ದನಿಗಳು | ಮಾಧ್ಯಮ ಕ್ಷೇತ್ರದಲ್ಲಿ...

ಹಾಸನ ಜಿಲ್ಲೆಯ ಹೆಣ್ಣುಮಕ್ಕಳು ವಿವಿಧ ಕ್ಷೇತ್ರಗಳಲ್ಲಿ ತೊಡಗಿಸಿಕೊಂಡು ಸದ್ದಿಲ್ಲದೆ ಕೆಲಸ ಮಾಡುತ್ತಾ, ತಮ್ಮ ಛಾಪು ಮೂಡಿಸುತ್ತ, ಕೊಡುಗೆ ನೀಡುತ್ತಾ, ಸಾಧಿಸುತ್ತಾ ಹೋಗಿದ್ದಾರೆ. ಇದು, ಅವರ ಕುರಿತು ವಿವಿಧ ಲೇಖಕ/ಲೇಖಕಿಯರಿಂದ ಒಂದು ಪುಟ್ಟ ದಾಖಲೀಕರಣ… ಸೃಜನಶೀಲತೆ,...

ಬೀದರ್ | ನಮ್ಮೂರಾಗ ಕುಡಿಲಾಕ್ ನೀರಿಲ್ಲ, ಎಲ್ರೂ ವರ್ಷಕ್ಕೆ...

ಸರ್ಕಾರಿ ನಲ್ಲಿಗಳಲ್ಲಿ ಹನಿ ನೀರಿಲ್ಲ, ಮನೆ-ಮನೆಯಲ್ಲಿ ಜೋತಾಡುತ್ತಿವೆ ಖರೀದಿ ನೀರಿನ ಪೈಪ್‌ಗಳು! ಹೋಕ್ರಾಣಾ ಗ್ರಾಮದಲ್ಲಿ ಜನರ ನೀರಿನ ದಾಹವನ್ನೇ ಬಂಡವಾಳ ಮಾಡಿಕೊಂಡು ಖಾಸಗಿ ಬೋರ್‌ವೆಲ್‌ಗಳು ದರ್ಬಾರ್‌ ನಡೆಸುತ್ತೆವೆಯೇ? ಖುದ್ದು ಗ್ರಾಮಸ್ಥರ ಜೊತೆಗೆ ನಿಂತು...

ತಮಿಳುನಾಡು ಚುನಾವಣೆ | ಪ್ರಾದೇಶಿಕ ಸಿದ್ಧಾಂತವನ್ನು ಮೀರಿ ಬೆಳೆಯುತ್ತಾ...

ತಮಿಳುನಾಡಿನ ಪಾರಂಪರಿಕ ಮಧುರೈನ ಸುಬ್ರಮಣ್ಯಸ್ವಾಮಿ ದೇವಸ್ಥಾನ, ಅರಿಯಲೂರ್ ಜಿಲ್ಲೆಯ ಗಂಗೈಕೊಂಡ ಚೋಳಪುರಂ ಬೃಹದೀಶ್ವರ ದೇವಸ್ಥಾನ, ಮತ್ತು ತಿರುಚಿರಾಪಳ್ಳಿಯ ಶ್ರೀ ರಂಗನಾಥಸ್ವಾಮಿ ದೇವಸ್ಥಾನಗಳಿಗೆ ಭೇಟಿ ನೀಡಿದರೂ, ತಮಿಳುನಾಡಿನ ಚೋಳ ಸಾಮ್ರಾಜ್ಯದ ಸಂಪ್ರದಾಯದ ಹಿನ್ನೆಲೆಯಿರುವ ಸೆಂಗೋಲ್...

ಏನಿದು ನ್ಯಾಕ್

ರಾಷ್ಟ್ರೀಯ ಮೌಲ್ಯಮಾಪನ ಮತ್ತು ಮಾನ್ಯತಾ ಮಂಡಳಿ (ನ್ಯಾಕ್- NAAC) ಭಾರತದ ಸರಕಾರಿ ಮಂಡಳಿ ಆಗಿದ್ದು, ದೇಶದೊಳಗಿನ ಕಾಲೇಜು, ವಿಶ್ವವಿದ್ಯಾಲಯಗಳ ಶೈಕ್ಷಣಿಕ ವ್ಯವಸ್ಥೆಯ ಮೌಲ್ಯಮಾಪನವನ್ನು ನಡೆಸುತ್ತದೆ. ಗುಣಮಟ್ಟಕ್ಕೆ ಅನುಗುಣವಾಗಿ ಶ್ರೇಯಾಂಕವನ್ನು ನೀಡುತ್ತದೆ. ಈ ಸಂಸ್ಥೆ ವಿಶ್ವವಿದ್ಯಾಲಯ ಧನಸಹಾಯ ಆಯೋಗದ ಅಡಿಯಲ್ಲಿ ಬರುತ್ತದೆ. ಮೂಲಭೂತವಾಗಿ ಯಾವುದೇ ಶೈಕ್ಷಣಿಕ ಸಂಸ್ಥೆಯ ಗುಣಮಟ್ಟವನ್ನು ಅಳೆಯಲು, ಅರ್ಥಮಾಡಿಕೊಳ್ಳಲು ಈ ಶ್ರೇಯಾಂಕದ ಅಗತ್ಯವಿದೆ.

ಶೈಕ್ಷಣಿಕ ಸಂಸ್ಥೆಯ ಕಾರ್ಯನಿರ್ವಹಣಾ ವಿಧಾನಗಳು, ಆಯ್ಕೆ, ಪಠ್ಯಕ್ರಮ, ಬೋಧನೆ, ಕಲಿಕೆ, ಮೌಲ್ಯಮಾಪನ, ವಿದ್ಯಾರ್ಥಿಗಳ ಫಲಿತಾಂಶಗಳು, ಸಿಬ್ಬಂದಿ, ಸಂಶೋಧನಾ ಪ್ರಕಟಣೆಗಳು, ಮೂಲಸೌಕರ್ಯ ಪರಿಸ್ಥಿತಿಗಳು, ಸಂಪನ್ಮೂಲ, ಸಂಘಟನೆ, ಆಡಳಿತ, ಹಣಕಾಸು, ವಿದ್ಯಾರ್ಥಿ ಸೇವೆಗಳನ್ನು ಮಾನದಂಡವಾಗಿ ಪರಿಗಣಿಸಲಾಗುತ್ತದೆ. ಅವುಗಳ ಆಧಾರದ ಮೇಲೆ ಮೌಲ್ಯಮಾಪನ ಮಾಡಿ ಶ್ರೇಯಾಂಕ ನೀಡಲಾಗುತ್ತದೆ.

ಇದನ್ನು ಓದಿದ್ದೀರಾ?: ಗುಜರಾತ್‌ ನರಮೇಧದ ಹಿಂದಿದ್ದವರು ಮೋದಿಯೇ ಎಂದು ನಿರಂತರ ಸಮರ ಸಾರಿದ್ದರು ಝಕಿಯಾ ಜಾಫ್ರಿ

ಸಾಮಾನ್ಯವಾಗಿ ಯಾವುದೇ ಶೈಕ್ಷಣಿಕ ಸಂಸ್ಥೆಯೂ ಈ ಎಲ್ಲ ಅಂಶಗಳನ್ನು ಅಳವಡಿಸಿಕೊಂಡಿರುವುದಿಲ್ಲ. ಹಾಗಾಗಿ ನ್ಯಾಕ್ ಮಾನ್ಯತೆ ದೊರಕುವುದಿಲ್ಲ. ಸಹಜವಾಗಿಯೇ ಆಡಳಿತ ಮಂಡಳಿ, ವಾಮಮಾರ್ಗ ಹಿಡಿಯುತ್ತದೆ. ಆ ಮಾರ್ಗದಲ್ಲಿ ಮಾನ್ಯತೆ ಗಿಟ್ಟಿಸಿಕೊಂಡವರು ಶಿಕ್ಷಣವನ್ನು ಮಾರುಕಟ್ಟೆಯಲ್ಲಿಟ್ಟು ವ್ಯಾಪಾರ ಮಾಡುತ್ತಾರೆ. ಹಣವಂತರು ಖರೀದಿಸುತ್ತಾರೆ, ಬಹುಸಂಖ್ಯಾತ ಬಡವರು ಕೊರಗಿಕೊಂಡೇ ಕರಗಿಹೋಗುತ್ತಾರೆ. ಶೈಕ್ಷಣಿಕ ವ್ಯವಸ್ಥೆಯನ್ನು ಕುಲಗೆಡಿಸಿರುವವರು ಯಾರು ಎನ್ನುವುದು ನಿಮಗೆ ಅರ್ಥವಾಗಿರಬಹುದು. ಅಂತಹ ‘ಕಿಡಿಗೇಡಿ’ಗಳು ಈಗ ಸಿಬಿಐ ಬಲೆಗೆ ಬಿದ್ದಿದ್ದಾರೆ. ಲಂಚ ಪಡೆದ ಆರೋಪದ ಮೇರೆಗೆ ಸಿಬಿಐ ಸಿಜಾರಿಯಾ ಸೇರಿದಂತೆ ಹತ್ತು ಮಂದಿಯನ್ನು ಬಂಧಿಸಿದೆ.

ಯಾರು ಈ ಸಿಜಾರಿಯಾ?

ಉತ್ತರ ಪ್ರದೇಶದ ಮೀರತ್ ಮೂಲದ ರಾಜೀವ್ ಸಿಜಾರಿಯಾ ನಾಲ್ಕಾರು ಡಿಗ್ರಿ ಪಡೆದಿರುವ, ಹತ್ತಾರು ಸಂಸ್ಥೆಗಳಲ್ಲಿ ಸೇವೆ ಸಲ್ಲಿಸಿರುವ, ಪ್ರಶಸ್ತಿ ಪುರಸ್ಕಾರಗಳನ್ನು ಪಡೆದಿರುವ ವಿದ್ವಾಂಸ. ಪೇಪರ್ ಪ್ರಸಂಟೇಷನ್‌ನಲ್ಲಿ ಪಳಗಿರುವ, ಪೇಟೆಂಟ್ ಕೂಡ ಪಡೆದಿರುವ ಶೈಕ್ಷಣಿಕ ಅರ್ಹತೆ, ಯೋಗ್ಯತೆ ಇರುವ ವ್ಯಕ್ತಿ. 2009ರಿಂದ 2011ರವರೆಗೆ ಗ್ರೇಟರ್ ನೋಯ್ಡಾದಲ್ಲಿ, 2012ರಿಂದ 2016ರವರೆಗೆ ಘಾಜಿಯಾಬಾದ್‌ನಲ್ಲಿ, 2016ರಿಂದ 2020ರವರೆಗೆ ಮೀರತ್‌ನಲ್ಲಿ ಅಧ್ಯಾಪನ ವೃತ್ತಿಯಲ್ಲಿ ಸೇವೆ ಸಲ್ಲಿಸಿದವರು.  

2016ರವರೆಗೆ ಇವರು ಯಾರು ಎನ್ನುವುದು ಯಾರಿಗೂ ತಿಳಿದಿರಲಿಲ್ಲ. ಅದಕ್ಕೂ ಮುಂಚೆ ಇದೇ ಸಿಜಾರಿಯಾ ಶೈಕ್ಷಣಿಕ ವಲಯದಲ್ಲಿ ಸೇವೆ ಸಲ್ಲಿಸುತ್ತಿದ್ದರೂ, ಉತ್ತರ ಪ್ರದೇಶದ ಮೀರತ್‌ನ ಅಖಿಲ ಭಾರತ ವಿದ್ಯಾರ್ಥಿ ಪರಿಷತ್ ಅಧ್ಯಕ್ಷರಾಗಿದ್ದರು. ಎಬಿವಿಪಿಯ ನಾಯಕ ಸುನಿಲ್ ಅಂಬೇಕರ್ ಆಪ್ತ ಸ್ನೇಹಿತರು. ಎಬಿವಿಪಿಯ ಮುಖವಾಣಿ ರಾಷ್ಟ್ರೀಯ ಚಾತ್ರಶಕ್ತಿಗೆ ನಿಯಮಿತವಾಗಿ ‘ವಿದ್ವತ್ಪೂರ್ಣ’ ಲೇಖನಗಳನ್ನು ಬರೆದು ‘ದೇಶಪ್ರೇಮಿ’ಯಾಗಿದ್ದರು.

ಅಷ್ಟೇ ಅಲ್ಲ, ಸಾಮಾಜಿಕ ಜಾಲತಾಣಗಳಲ್ಲಿ ಆರ್‍ಎಸ್ಎಸ್ ಮತ್ತು ಬಿಜೆಪಿಯನ್ನು ಹಾಡಿ ಹೊಗಳುವ ಬರಹಗಳನ್ನು ಬರೆಯುವ ಮೂಲಕ ಸಂಘ ಪರಿವಾರದ ಸರ್ಕಲ್‌ಗಳಲ್ಲಿ ಗುರುತಿಸಿಕೊಂಡರು. ‘ಸಂಘಜೀವಿ’ಯಾದರು. ಬಿಜೆಪಿ ನಾಯಕರ ಕಣ್ಣಿಗೆ ಬಿದ್ದು ಆಪ್ತಕೂಟಗಳಲ್ಲಿ ಕಾಣಿಸಿಕೊಂಡರು. 2014ರಲ್ಲಿ ನರೇಂದ್ರ ಮೋದಿಯವರು ಪ್ರಧಾನಮಂತ್ರಿಯಾಗುತ್ತಿದ್ದಂತೆ, ರಾಜೀವ್ ಸಿಜಾರಿಯಾರವರ ಅದೃಷ್ಟ ಖುಲಾಯಿಸಿತು. ಭವಿಷ್ಯವೇ ಬದಲಾಗಿಹೋಯಿತು.

ಮೊದಲಿಗೆ ದೆಹಲಿಯ ಪ್ರತಿಷ್ಠಿತ ಜೆಎನ್‌ಯುನ ‘ಅಟಲ್ ಬಿಹಾರಿ ವಾಜಪೇಯಿ ಮ್ಯಾನೇಜ್ಮೆಂಟ್ ಮತ್ತು ಉದ್ಯಮಶೀಲತೆ’ಯ ಡೀನ್ ಪಟ್ಟಕ್ಕೆ ಏರುತ್ತಾರೆ. ನಂತರ ಜವಾಹರಲಾಲ್‌ ನೆಹರೂ ವಿಶ್ವವಿದ್ಯಾಲಯದ (ಜೆಎನ್‌ಯು) ಪ್ರಾಧ್ಯಾಪಕರಾಗುತ್ತಾರೆ. ಅಲ್ಲಿದ್ದುಕೊಂಡೇ, ತಮಗಿರುವ ‘ಸಂಘಜೀವಿ’ಯ ಸಂಪರ್ಕ ಬಳಸಿ, ಎಐಸಿಟಿಇನ ಜಿಮಾಟ್ ಸಲಹಾ ಸಮಿತಿಯ ಸದಸ್ಯರಾಗುತ್ತಾರೆ. ನ್ಯಾಕ್ ಪರಿಶೀಲನಾ ಸಮಿತಿಯ ಸಂಯೋಜಕ ಸದಸ್ಯರಾಗುತ್ತಾರೆ.

ಆರ್‍ಎಸ್ಎಸ್ ಮತ್ತು ಬಿಜೆಪಿಯ ಭಾಗವಾದರೆ, ಮೋದಿಯನ್ನು ಮತ್ತು ಸರ್ಕಾರವನ್ನು ಪ್ರತಿಷ್ಠಿತ ವೇದಿಕೆಗಳಲ್ಲಿ ಯದ್ವಾ ತದ್ವಾ ಹಾಡಿ ಹೊಗಳಿ ಭಾಷಣ-ಬರೆಹ ಮಾಡಿದರೆ, ಅರ್ಹತೆ ಮತ್ತು ಯೋಗ್ಯತೆಗಳಿಲ್ಲದಿದ್ದರೂ ನಿಮಗೆ ಪ್ರತಿಷ್ಠಿತ ಹುದ್ದೆಗಳಲ್ಲಿ ಕೂರುವ ‘ಅದೃಷ್ಟ’ ಒಲಿದು ಬರುತ್ತದೆ. ಅದಕ್ಕೆ ಉತ್ತಮ ಉದಾಹರಣೆಯಾಗಿ ರಾಜೀವ್ ಸಿಜಾರಿಯಾರನ್ನು ನೋಡಬಹುದು.

ಈತ ನ್ಯಾಕ್ ಪರಿಶೀಲನಾ ಸಮಿತಿಯ ಸಂಯೋಜಕ ಸದಸ್ಯರಾಗಿರುವುದರಿಂದ, ಆಂಧ್ರಪ್ರದೇಶದ ಗುಂಟೂರಿನಲ್ಲಿರುವ ಕೋನೇರು ಲಕ್ಷ್ಮಯ್ಯ ಎಜುಕೇಷನ್‌ ಫೌಂಡೇಷನ್‌ಗೆ ನ್ಯಾಕ್‌ ‘ಎ++ ಗ್ರೇಡ್’ ಕೊಡಿಸಲು ವ್ಯವಹಾರ ಕುದುರಿಸಿದ್ದಾರೆ. ಮೊದಲಿಗೆ ಕೇಳಿರುವ ಮೊತ್ತ 1.8 ಕೋಟಿ. ಆ ನಂತರ 1.3 ಕೋಟಿ. ಆನಂತರ 28 ಲಕ್ಷ. ಮುಂಗಡವಾಗಿ 10 ಲಕ್ಷ ಪಡೆದಿದ್ದಾರೆ.

ಈತ ಮತ್ತು ಸಮಿತಿಯ ಹತ್ತು ಸದಸ್ಯರು ಈಗ ಸಿಬಿಐ ಬಲೆಗೆ ಬಿದ್ದಿದ್ದಾರೆ. ಬಂಧನಕ್ಕೊಳಗಾಗಿದ್ದಾರೆ. ಇಡಿ, ಐಟಿ, ಸಿಬಿಐಗಳು ಕೇಂದ್ರ ಸರ್ಕಾರದ ಅಧೀನದ ಸಂಸ್ಥೆಗಳು. ಮೋದಿ ಮತ್ತವರ ಆಪ್ತರಿಗೆ ಬೇಕಾದಂತೆ ಬಳಸಲ್ಪಡುವ ಅಸ್ತ್ರಗಳು. ಅಂದಮೇಲೆ ‘ಸಂಘಜೀವಿ’ ರಾಜೀವ್ ಸಿಜಾರಿಯಾ ಅವರ ಕೇಸ್ ಕೂಡ, ಕಾಲಾನಂತರ ಕಡತಗಳಲ್ಲಿ ಕಳೆದುಹೋಗಬಹುದು. ಪ್ರಯಾಗ್ ರಾಜ್ ಸಂಗಮದಲ್ಲಿ ಮಿಂದು ಪರಿಶುದ್ಧರಾಗಿ ಮೇಲೆದ್ದು ಬರಬಹುದು.

ಇದನ್ನು ಓದಿದ್ದೀರಾ?: ಭಾರತಕ್ಕೆ ಮುಳುವಾದ ಟ್ರಂಪ್ ನೀತಿಗಳು; ದೇಶದ ಆರ್ಥಿಕತೆಯ ಗತಿ ಏನು?

ಪ್ರಶ್ನೆ ಅದಲ್ಲ. ಸಂಘಪರಿವಾರ ಮತ್ತು ಬಿಜೆಪಿಯ ಜೊತೆ ಗುರುತಿಸಿಕೊಂಡವರು ಪ್ರತಿಷ್ಠಿತ ಸಂಸ್ಥೆಗಳ ಹುದ್ದೆಗಳಲ್ಲಿ ವಿರಾಜಮಾನರಾಗಿ, ಶೈಕ್ಷಣಿಕ ಮತ್ತು ಸಾಂಸ್ಕೃತಿಕ ಜಗತ್ತನ್ನು ಯಾವ ರೀತಿ ಕುಲಗೆಡಿಸುತ್ತಾರೆ ಎನ್ನುವುದಕ್ಕೆ ಇದೊಂದು ಉತ್ತಮ ನಿದರ್ಶನ. ನಮ್ಮ ರಾಜ್ಯದಲ್ಲಿಯೂ, ಬಿಜೆಪಿ ಸರ್ಕಾರವಿದ್ದಾಗ, ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಬೊಂಬೆಯಂತಾಗಿದ್ದಾಗ, ಸಂಘಿಜೀವಿಗಳು ಆಡಿದ ಆಟಗಳನ್ನು, ಕೆಡಿಸಿದ ಪಠ್ಯಗಳನ್ನು ಕಂಡಿದ್ದವರಿಗೆ ಇದು ತಕ್ಷಣ ಅರ್ಥವಾಗುತ್ತದೆ.

ಅಂದರೆ, ಸಂಘಪರಿವಾರ ಮತ್ತು ಬಿಜೆಪಿ ಧರ್ಮ, ರಾಷ್ಟ್ರೀಯತೆ, ದೇಶಪ್ರೇಮಗಳನ್ನು ಮುಂದೆ ಮಾಡುತ್ತಲೇ ಅಧಿಕಾರಕ್ಕೇರಿ ಏನು ಮಾಡುತ್ತದೆ ಹಾಗೂ ಅಚ್ಚೇ ದಿನ್, ಅಮೃತಕಾಲ್ ಎಂದು ಹೇಳುತ್ತಲೇ ಮೋದಿಯವರು ದೇಶವನ್ನು ಎಲ್ಲಿಗೆ ತಂದು ನಿಲ್ಲಿಸಿದ್ದಾರೆ ಎನ್ನುವುದಕ್ಕೆ ಇದೊಂದು ಉದಾಹರಣೆಯಷ್ಟೇ.

Basavaraju Megalkeri
+ posts

ಲೇಖಕ, ಪತ್ರಕರ್ತ

ಪೋಸ್ಟ್ ಹಂಚಿಕೊಳ್ಳಿ:

ಬಸವರಾಜು ಮೇಗಲಕೇರಿ
ಬಸವರಾಜು ಮೇಗಲಕೇರಿ
ಲೇಖಕ, ಪತ್ರಕರ್ತ

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಸ್ಥಳೀಯ ಸಂಸ್ಥೆಗಳ ಚುನಾವಣೆಯಲ್ಲಿ ಬ್ಯಾಲೆಟ್ ಪೇಪರ್ ಬಳಕೆ; ವಿಧಾನಸಭೆಯಲ್ಲಿ ಮಸೂದೆ ಅಂಗೀಕಾರ

ರಾಜ್ಯದ ಸ್ಥಳೀಯ ಸಂಸ್ಥೆಗಳ ಚುನಾವಣಾ ಪ್ರಕ್ರಿಯೆಯಲ್ಲಿ ಬದಲಾವಣೆ ತರಲು ರಾಜ್ಯ ಸರ್ಕಾರ...

ಪ್ರಧಾನಿ ಮೋದಿ ಅಮೆರಿಕಕ್ಕೆ 100% ಶರಣಾಗಿದ್ದಾರೆ: ರಾಹುಲ್ ಗಾಂಧಿ

ಪಶ್ಚಿಮ ಏಷ್ಯಾದಲ್ಲಿನ ಯುದ್ಧದ ಪರಿಸ್ಥಿತಿ ಮತ್ತು ದೇಶದ ಆರ್ಥಿಕ ನೀತಿಗಳ ಕುರಿತು...

‘ಟ್ರಂಪ್ ನಿಯಂತ್ರಣದಲ್ಲಿ ಮೋದಿ’: ಲೋಕಸಭೆಯ ಭಾಷಣದಲ್ಲಿ ಅಮೆರಿಕದ ಬಗ್ಗೆ ಮೌನಕ್ಕೆ ರಾಹುಲ್ ವಾಗ್ದಾಳಿ

ಮಧ್ಯಪ್ರಾಚ್ಯ ಬಿಕ್ಕಟ್ಟಿನ ಕುರಿತು ಭಾರತದ ನಿಲುವಿನ ಬಗ್ಗೆ ರಾಜಕೀಯ ವಾಗ್ದಾಳಿ ಸೋಮವಾರ...

ತಮಿಳುನಾಡು ಚುನಾವಣೆ | ಪ್ರಾದೇಶಿಕ ಸಿದ್ಧಾಂತವನ್ನು ಮೀರಿ ಬೆಳೆಯುತ್ತಾ ರಾಷ್ಟ್ರೀಯವಾದ?

ತಮಿಳುನಾಡಿನ ಪಾರಂಪರಿಕ ಮಧುರೈನ ಸುಬ್ರಮಣ್ಯಸ್ವಾಮಿ ದೇವಸ್ಥಾನ, ಅರಿಯಲೂರ್ ಜಿಲ್ಲೆಯ ಗಂಗೈಕೊಂಡ ಚೋಳಪುರಂ...