“ರಾಮ ಮಂದಿರ ನಿರ್ಮಾಣಕ್ಕೆ ನಾನೂ ಕೂಡ ದೇಣಿಗೆ ಕೊಟ್ಟಿದ್ದೇನೆ. ರಾಮ ಮಂದಿರಕ್ಕೆ ನಾನೂ ಕೂಡ ಒಂದು ದಿನ ಹೋಗುತ್ತೇನೆ. ರಾಮ ಮಂದಿರ ಅವರದ್ದೂ ಅಲ್ಲ, ನಮ್ಮದೂ ಅಲ್ಲ. ದೇಶದ 140 ಕೋಟಿ ಜನರಿಗೆ ಸೇರಿದ್ದು” ಎಂದು ರಾಜ್ಯ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ಹೇಳಿದ್ದಾರೆ.
ಉಡುಪಿಯಲ್ಲಿ ಇಂದು ಮಾಧ್ಯಮದವರೊಂದಿಗೆ ಮಾತನಾಡುತ್ತಿದ್ದ ವೇಳೆ ಮಾಧ್ಯಮದವರು ರಾಮಮಂದಿರ ವಿಚಾರವಾಗಿ ನಡೆಯುತ್ತಿರುವ ಬೆಳವಣಿಗೆ ಬಗ್ಗೆ ಕೇಳಿದ ಪ್ರಶ್ನೆಗೆ ಈ ರೀತಿ ಉತ್ತರಿಸಿದರು.
“ರಾಮ- ಕೃಷ್ಣ ಪರಮೇಶ್ವರನ ಮೇಲೆ ನನಗೆ ವೈಯಕ್ತಿಕವಾಗಿ ಬಹಳ ಭಕ್ತಿ ಇದೆ. ನಾನು ನಮ್ಮ ಸಂಸ್ಕೃತಿಯನ್ನು ಆಚರಿಸುತ್ತೇನೆ. ರಾಮಮಂದಿರ ವಿಚಾರದಲ್ಲಿ ಪಕ್ಷದ ನಡೆಯ ಬಗ್ಗೆ ನಾನು ಮಾತನಾಡುವುದಿಲ್ಲ. ನಾನು ಪಕ್ಷದ ಅಧ್ಯಕ್ಷೆ ಅಲ್ಲ ಅಥವಾ ದೊಡ್ಡ ಸ್ಥಾನದಲ್ಲೂ ಇಲ್ಲ. ನಾನು ದೈವೀಭಕ್ತಳು ಎಂದು ಪದೇ ಪದೇ ಹೇಳುತ್ತೇನೆ” ಎಂದರು.
ಸಿಎಂ ವಿರುದ್ಧ ಸಂಸದ ಅನಂತಕುಮಾರ್ ಹೆಗಡೆ ಹೇಳಿಕೆ ಕುರಿತು ಪ್ರತಿಕ್ರಿಯಿಸಿದ ಸಚಿವೆ, ”ಅನಂತಕುಮಾರ್ ಚುನಾವಣೆ ಬಂದಾಗಷ್ಟೇ ಮುಖ ತೋರಿಸುತ್ತಾರೆ. ಅವರು ಹಿಂದಿನಿಂದಲೂ ಇದನ್ನೇ ಮಾಡಿಕೊಂಡು ಬರುತ್ತಿದ್ದಾರೆ. ರಾಜಕೀಯ ಬೇಳೆ ಬೇಯಿಸಿಕೊಳ್ಳಲು ಹೀಗೆ ಮಾತನಾಡಿದ್ದನ್ನು ಯಾರು ಸಹಿಸಲು ಹಾಗೂ ಕ್ಷಮಿಸಲು ಸಾಧ್ಯವಿಲ್ಲ. ಬಾಲಿಶತನದ ಹೇಳಿಕೆ” ಎಂದು ಅವರು ಟೀಕಿಸಿದರು.
“130 ಸೀಟು ಗೆದ್ದ ಮೇಲೆ ಐದು ಗ್ಯಾರಂಟಿ ಅನುಷ್ಠಾನವಾಗಿದೆ. ನಮ್ಮ ನಮ್ಮ ಜವಾಬ್ದಾರಿ ನಮ್ಮೆಲ್ಲರ ಮೇಲಿದೆ. ಮತದಾರರು ಅತ್ಯಂತ ಹೆಚ್ಚು ಸೀಟುಗಳನ್ನು ಗೆಲ್ಲಿಸಿ ಕೊಡುತ್ತಾರೆ ಎಂಬ ನಂಬಿಕೆ ಇದೆ” ಎಂದರು.
“ಬರ, ನೆರೆ, ಜಿಎಸ್ ಟಿ ವಿಚಾರದಲ್ಲಿ ರಾಜ್ಯದ ಜನತೆಯ ಸಹಾಯಕ್ಕೆ ಯಾವ ಸಂಸದರು ಬರುತ್ತಿಲ್ಲ. ಈ ಬಾರಿ ಗಣರಾಜ್ಯೋತ್ಸವದಲ್ಲಿ ಕರ್ನಾಟಕದ ಟ್ಯಾಬ್ಲೊ ಕೂಡ ಇಲ್ಲ. ರಾಜ್ಯದ ಜನ ಮುಂದೆ ಏನು ಮಾಡಬೇಕು ಎಂದು ಈಗಾಗಲೇ ನಿರ್ಧಾರ ಮಾಡಿದ್ದಾರೆ” ಎಂದು ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ತಿಳಿಸಿದರು.





