ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಅವರಿಗೆ ಅಬಕಾರಿ ನೀತಿ ಪ್ರಕರಣದಲ್ಲಿ ನೀಡಲಾದ ಮಧ್ಯಂತರ ಜಾಮೀನು ಅವಧಿಯು ಅಂತ್ಯವಾಗಲಿದ್ದು ಕೇಜ್ರಿವಾಲ್ ಜೂನ್ 2ರಂದು ಶರಣಾಗಬೇಕಾಗಿದೆ. ಈ ನಡುವೆ ತಮ್ಮ ದೇಶ ಉಳಿಸಲು 100 ಬಾರಿ ಜೈಲಿಗೆ ಹೋಗಲು ಸಿದ್ಧ, ಇದು ಹೆಮ್ಮೆಯ ಸಂಗತಿ ಎಂದು ಕೇಜ್ರಿವಾಲ್ ಹೇಳಿದ್ದಾರೆ.
ಪಿಟಿಐ ಜೊತೆ ಮಾತನಾಡಿದ ಕೇಜ್ರಿವಾಲ್ ತನ್ನನ್ನು ಸ್ವಾತಂತ್ರ್ಯ ಹೋರಾಟಗಾರ ಭಗತ್ ಸಿಂಗ್ಗೆ ಹೋಲಿಸಿಕೊಂಡಿದ್ದು, “ನಾನು ಭಗತ್ ಸಿಂಗ್ ಅವರ ಅನುಯಾಯಿ. ದೇಶವನ್ನು ಉಳಿಸಲು ನಾನು 100 ಬಾರಿ ಜೈಲಿಗೆ ಹೋಗಬೇಕಾದರೂ ನಾನು ಹೋಗುತ್ತೇನೆ” ಎಂದು ತಿಳಿಸಿದ್ದಾರೆ.
ಇದನ್ನು ಓದಿದ್ದೀರಾ? ಕಾಂಗ್ರೆಸ್ನೊಂದಿಗಿನ ವಿವಾಹ ಶಾಶ್ವತವಲ್ಲ: ಅರವಿಂದ್ ಕೇಜ್ರಿವಾಲ್
“ಜೂನ್ 4ರಂದು ಸಾರ್ವತ್ರಿಕ ಚುನಾವಣಾ ಫಲಿತಾಂಶಗಳು ಪ್ರಕಟವಾದ ನಂತರ ಬಿಜೆಪಿ 200ಕ್ಕಿಂತ ಕಡಿಮೆ ಸ್ಥಾನಗಳನ್ನು ಪಡೆಯುತ್ತದೆ. ಇಂಡಿಯಾ ಒಕ್ಕೂಟ 300 ಸ್ಥಾನಗಳ ಗಡಿ ದಾಟಲಿದೆ” ಎಂದು ಭರವಸೆ ವ್ಯಕ್ತಪಡಿಸಿದರು.
“ಅವರು (ಬಿಜೆಪಿ) ಕೇಜ್ರಿವಾಲ್ ಭ್ರಷ್ಟಾಚಾರದಲ್ಲಿ ತೊಡಗಿದ್ದಾರೆ ಎಂದು ಹೇಳುತ್ತಾರೆ. ಆದರೆ ಅವರ ಬಳಿ ಒಂದು ಪುರಾವೆಯೂ ಇಲ್ಲ. ಕೇಜ್ರಿವಾಲ್ ಭ್ರಷ್ಟರಾಗಿದ್ದರೆ, ಈ ಜಗತ್ತಿನಲ್ಲಿ ಯಾರೂ ಪ್ರಾಮಾಣಿಕರಲ್ಲ ಎಂದು ಜನರು ಹೇಳುತ್ತಾರೆ. 100 ಕೋಟಿ ರೂ ಭ್ರಷ್ಟಾಚಾರ ಎಂದು ಹೇಳುತ್ತಾರೆ. ಅವರು 500 ಸ್ಥಳಗಳಲ್ಲಿ ದಾಳಿ ನಡೆಸಿದರು, ಅವರಿಗೆ ಒಂದು ಪೈಸೆಯೂ ಸಿಗಲಿಲ್ಲ. 100 ಕೋಟಿ ರೂ ಗಾಳಿಯಲ್ಲಿ ಮಾಯವಾಯಿತಾ” ಎಂದು ಪ್ರಶ್ನಿಸಿದ್ದಾರೆ.
ಇದನ್ನು ಓದಿದ್ದೀರಾ? ಸ್ವಾತಿ ಮಲಿವಾಲ್ ಪ್ರಕರಣ: ಅಕ್ರಮ ಬಂಧನಕ್ಕೆ ಪರಿಹಾರ ಕೋರಿ ಕೇಜ್ರಿವಾಲ್ ಆಪ್ತ ಸಹಾಯಕ ಹೈಕೋರ್ಟ್ ಮೊರೆ
“ಕೇಜ್ರಿವಾಲ್ ಅನುಭವಿ ಕಳ್ಳನಾಗಿರುವುದರಿಂದ ನಮ್ಮ ಬಳಿ ಯಾವುದೇ ಪುರಾವೆಗಳಿಲ್ಲ ಎಂದು ಪ್ರಧಾನಿ ಸಂದರ್ಶನವೊಂದರಲ್ಲಿ ಹೇಳಿದ್ದಾರೆ. ಪ್ರಧಾನಿಯವರು ಇಡೀ ರಾಷ್ಟ್ರದ ಮುಂದೆ ತಮ್ಮ ಬಳಿ ಯಾವುದೇ ಪುರಾವೆ ಇಲ್ಲ ಎಂದು ಒಪ್ಪಿಕೊಂಡರೆ, ಇಡೀ ಪ್ರಕರಣವು ನಕಲಿ ಎಂದು ಅರ್ಥ. ಪುರಾವೆಯಿಲ್ಲದಿದ್ದರೂ ಯಾಕೆ ಬಂಧಿಸಲಾಗಿದೆ” ಎಂದು ಪ್ರಶ್ನಿಸಿದರು. ಹಾಗೆಯೇ ನಾನು ಮಾಡುವ ಕೆಲಸವನ್ನು ಮೋದಿ ಅವರಿಗೆ ಮಾಡಲು ಸಾಧ್ಯವಾಗದ ಕಾರಣ ಈಗ ನನ್ನನ್ನು ಬಂಧಿಸಲಾಗುತ್ತಿದೆ ಎಂದರು.





