ಸಂಸತ್ತಿನಲ್ಲಿ ಜಿ ರಾಮ್ ಜಿ ಮಸೂದೆ ಮಂಡಿಸುವ ತಿಂಗಳ ಮುನ್ನ ಮಹಾತ್ಮಾ ಗಾಂಧೀ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತರಿ (ಮನರೇಗ) ಯೋಜನೆಯಿಂದ 16 ಲಕ್ಷ ಫಲಾನುಭವಿಗಳ ಹೆಸರನ್ನು ಕೈ ಬಿಟ್ಟಿರುವ ಸಂಗತಿ ಇದೀಗ ಬೆಳಕಿಗೆ ಬಂದಿದೆ.
ಗುರುವಾರ ಲೋಕಸಭೆಯಲ್ಲಿ ಒದಗಿಸಲಾದ ಲಿಖಿತ ಉತ್ತರದಲ್ಲಿ, ಗ್ರಾಮೀಣಾಭಿವೃದ್ಧಿ ರಾಜ್ಯ ಸಚಿವ ಕಮಲೇಶ್ ಪಾಸ್ವಾನ್ ಅವರು ಸಮಾಜವಾದಿ ಪಾರ್ಟಿಯ ಲಾಲ್ ಜಿ ವರ್ಮ ಮತ್ತು ಆನಂದ್ ಬಹಾದೂರಿಯಾ ಅವರಿಗೆ ಈ ಸಂಗತಿಯನ್ನು ತಿಳಿಸಿದ್ದಾರೆ.
ಇದನ್ನು ಓದಿದ್ದೀರಾ? ಮನರೇಗ ರದ್ದು ‘ಐತಿಹಾಸಿಕ ತಪ್ಪು’ – ಅಂತಾರಾಷ್ಟ್ರೀಯ ತಜ್ಞರ ಎಚ್ಚರಿಕೆ
ಕಳೆದ ಅಕ್ಟೋಬರ್ 10- ನವೆಂಬರ್ 14ರ ನಡುವಣ 36 ದಿನಗಳ ಮನರೇಗ ದತ್ತಾಂಶಕ್ಕೆ ಸಂಬಂಧಿಸಿದ ಸಂಗತಿಯಿದು. ಹೀಗೆ ಹೆಸರುಗಳನ್ನು ಕೈಬಿಟ್ಟಿರುವುದು ಕಾಲ ಕಾಲಕ್ಕೆ ಜರುಗುವ ಮಾಮೂಲು ವಿದ್ಯಮಾನ. ನಕಲಿ ಜಾಬ್ ಕಾರ್ಡ್ ಗಳು, ಕೂಲಿಕಾರರ ಕಾಯಂ ವಲಸೆ, ಪಂಚಾಯಿತಿಗಳ ಮರು ವರ್ಗೀಕರಣ ಹಾಗೂ ಸಾವುಗಳ ಹಿನ್ನೆಲೆಯಲ್ಲಿ ಪರಿಷ್ಕರಣೆ ನಡೆಯುತ್ತಿರುತ್ತದೆ ಎಂದು ಸಚಿವರು ವಿವರಿಸಿದ್ದಾರೆ.
ಆದರೆ ಇದೇ ವರ್ಷಾರಂಭದಲ್ಲಿ ಶುರುವಾದ ಆಧಾರ್ ಆಧರಿತ ಕೆವೈಸಿ ತಾಳೆ ಪ್ರಕ್ರಿಯೆಯೇ ಲಕ್ಷಗಟ್ಟಲೆ ಹೆಸರುಗಳನ್ನು ಕೈಬಿಟ್ಟಿರುವ ಹಿಂದಿನ ಅಸಲು ಕಾರಣ. ಕೆವೈಸಿ ಸಂಖ್ಯೆ ಹೊಂದಿಸುವ ಪ್ರಕ್ರಿಯೆಯ ಅವಧಿಯಲ್ಲಿ 27 ಲಕ್ಷ ಹೆಸರುಗಳನ್ನು ಕೈಬಿಡಲಾಗಿದೆ ಎಂಬುದು ಪ್ರತಿಪಕ್ಷಗಳ ಗಂಭೀರ ಆಪಾದನೆ.
ಮನರೇಗ ಯೋಜನೆಯ ಶೇ.56ಕ್ಕಿಂತ ಹೆಚ್ಚು ಕಾರ್ಮಿಕರು ಇ-ಕೆವೈಸಿ ಅಗತ್ಯಗಳನ್ನು ಪೂರೈಸಿದ್ದಾರೆ. ಶೇ.99.7ರಷ್ಟು ಸಕ್ರಿಯ ದಾಖಲೆಗಳಿಗೆ ಆಧಾರ್ ಸಂಪರ್ಕ ಕಲ್ಪಿಸಲಾಗಿದೆ. ಸಾಚಾ ಕಾರ್ಮಿಕರನ್ನು ಗುರುತಿಸಲು ಕೈವೈಸಿ ಪ್ರಕ್ರಿಯೆ ಸಹಾಯಕವಾಗಿದೆ ಎಂಬುದು ಸಚಿವರ ಹೇಳಿಕೆ.
2019-20ರಿಂದ ಹತ್ತಾರು ಲಕ್ಷ ಕಾರ್ಮಿಕರ ಹೆಸರುಗಳನ್ನು ಕಾಲ ಕಾಲಕ್ಕೆ ಕೈಬಿಡುತ್ತ, ಸೇರಿಸುತ್ತ ಬರಲಾಗಿದೆ. 2024-25ರ ಒಂದೇ ಆರ್ಥಿಕ ವರ್ಷದಲ್ಲಿ 38.50 ಲಕ್ಷ ಕಾರ್ಮಿಕರ ಜಾಬ್ ಕಾರ್ಡ್ಗಳನ್ನು ರದ್ದು ಮಾಡಲಾಗಿತ್ತು.





