ಮುಂಬೈನಲ್ಲಿ ಮತ್ತೆ ರೆಸಾರ್ಟ್ ರಾಜಕೀಯ ಮುನ್ನೆಲೆಗೆ ಬಂದಿದೆ. ಬೃಹನ್ಮುಂಬೈ ಮಹಾನಗರ ಪಾಲಿಕೆ (ಬಿಎಂಸಿ) ಚುನಾವಣೆಯಲ್ಲಿ ಬಿಜೆಪಿ-ಶಿವಸೇನೆ (ಶಿಂಧೆ)ಯ ಮಹಾಯುತಿ ಮೈತ್ರಿಕೂಟವು ಬಹುಮತದ ಗಡಿದಾಟಿದೆ. 25 ವರ್ಷಗಳ ನಂತರ ಠಾಕ್ರೆ ಕುಟುಂಬದಿಂದ ಮುಂಬೈ ಅಧಿಕಾರವನ್ನು ಕಸಿದುಕೊಂಡಿದೆ. ಆದಾಗ್ಯೂ, ಯಾವುದೇ ಪಕ್ಷವು ಏಕಾಂಗಿಯಾಗಿ ಕನಿಷ್ಠ ಬಹುಮತ ಪಡೆಯದಿಲ್ಲ. ಹೀಗಾಗಿ, ಮಹಾಯುತಿಯಲ್ಲಿ ಮೇಯರ್ ಹುದ್ದೆಗಾಗಿ ತಿಕ್ಕಾಟ ನಡೆಯುವ ಸಾಧ್ಯತೆಗಳಿವೆ. ಬಿಜೆಪಿ ಅತಿ ದೊಡ್ಡ ಪಕ್ಷವಾಗಿ ಹೊರಹೊಮ್ಮಿದ್ದರೂ, ಉಪಮುಖ್ಯಮಂತ್ರಿ ಏಕನಾಥ್ ಶಿಂಧೆ ಅವರ ಶಿವಸೇನೆ ಕಿಂಗ್ ಮೇಕರ್ ಆಗಿದೆ. ತನ್ನ ಎಲ್ಲ ಚುನಾಯಿತ ಪಾಲಿಕೆ ಸದಸ್ಯರನ್ನು ರೆಸಾರ್ಟ್ಗೆ ಸ್ಥಳಾಂತರಿಸಿದೆ. ಮೇಯರ್ ಹುದ್ದೆಗಾಗಿ ಬಿಜೆಪಿ ಎದುರು ಬೇಡಿಕೆ ಇಡುವ ಸಾಧ್ಯತೆಗಳಿವೆ.
227 ವಾರ್ಡ್ಗಳನ್ನು ಹೊಂದಿರುವ ಬಿಎಂಸಿಯಲ್ಲಿ ಬಿಜೆಪಿ 89 ಮತ್ತು ಶಿಂಧೆ ಶಿವಸೇನೆ 29 ಸ್ಥಾನಗಳು ಒಟ್ಟು 118 ಸ್ಥಾನಗಳನ್ನು ಗಳಿಸಿದೆ. ಬಿಎಂಸಿಯಲ್ಲಿ ಬಿಜೆಪಿ ಆಡಳಿತ ರಚಿಸಲು ಶಿಂಧೆ ಶಿವಸೇನೆಯನ್ನು ಭದ್ರವಾಗಿ ಹಿಡಿದಿಟ್ಟುಕೊಳ್ಳಲೇಬೇಕು. ಶಿಂಧೆ ಶಿವಸೇನೆಯು ಮೇಯರ್ ಹುದ್ದೆಗಾಗಿ ಬಿಜೆಪಿ ಜೊತೆ ಹಗ್ಗಜಗ್ಗಾಟ ಆರಂಭಿಸಿದರೆ, ಇತ್ತ ವಿಪಕ್ಷಗಳು ಒಗ್ಗೂಡಿ, ಆಡಳಿತ ರಚನೆಗೆ ಮುಂದಾಬಹುದಾದ ಸನ್ನಿವೇಶವೂ ಉಂಟಾಗುತ್ತದೆ.
ವಿಪಕ್ಷಗಳಲ್ಲಿ ಹೆಚ್ಚಿನವು ಪ್ರತ್ಯೇಕವಾಗಿಯೇ ಚುನಾವಣೆಯಲ್ಲಿ ಸ್ಪರ್ಧಿಸಿದ್ದವು. ವಿಪಕ್ಷಗಳ ಮೈತ್ರಿಯಲ್ಲಿ ಸ್ಪರ್ಧಿಸಿದ್ದ ಶಿವಸೇನಾ (ಯುಬಿಟಿ) 65, ಎಂಎನ್ಎಸ್ 6, ಎನ್ಸಿಪಿ (ಶರದ್) 1 ಸ್ಥಾನಗಳಲ್ಲಿ ಗೆಲುವು ಸಾಧಿಸಿದ್ದರೆ, ಸ್ವತಂತ್ರವಾಗಿ ಸ್ಪರ್ಧಿಸಿದ್ದ ಕಾಂಗ್ರೆಸ್ 24, ಎಐಎಂಐಎಂ 8, ಎಸ್ಪಿ 2 ವಾರ್ಡ್ಗಳಲ್ಲಿ ಗೆಲುವು ಸಾಧಿಸಿವೆ. ಈ ಎಲ್ಲ ಪಕ್ಷಗಳ ಒಟ್ಟು ಮೊತ್ತವು 106 ಆಗಲಿದೆ.
ಒಟ್ಟು 106 ಸ್ಥಾನಗಳನ್ನು ಗೆದ್ದಿರುವ ವಿಪಕ್ಷಗಳು ಬಿಎಂಸಿಯನ್ನು ತಮ್ಮ ತೆಕ್ಕೆಗೆ ತೆಗೆದುಕೊಳ್ಳಲು ಕೇವಲ 8 ಚುನಾಯಿತ ಸದಸ್ಯರ ಬೆಂಬಲ ಬೇಕಾಗುತ್ತದೆ. ಹೀಗಾಗಿ, ವಿಪಕ್ಷಗಳು ಕುದುರೆ ವ್ಯಾಪಾರದ ಮೂಲಕ ಶಿಂಧೆ ಶಿವಸೇನೆಯ ಚುನಾಯಿತರ ಖರೀದಿಗೆ ಮುಂದಾಗಬಹುದು ಎಂಬ ಚರ್ಚೆಗಳೂ ಇವೆ.
ಈ ಲೇಖನ ಓದಿದ್ದೀರಾ?: ಟ್ರಂಪ್ ವಿರುದ್ಧ ಇನ್ನಾದರೂ ಎದೆ ಸೆಟೆಸುವರೇ ಮೋದಿ?
ಶಿಂಧೆ ಶಿವಸೇನೆಯು ಮೇಯರ್ ಹುದ್ದೆಯ ವಿಚಾರದಲ್ಲಿ ರಾಜಿ ಮಾಡಿಕೊಳ್ಳಬಾರದು ಎಂಬ ಒತ್ತಡ ಹೆಚ್ಚಾಗಿದೆ. ಕಿಂಗ್ಮೇಕರ್ ಸ್ಥಾನದಲ್ಲಿರುವ ಶಿಂಧೆ ಪಾಳಯವು, ಶಿವಸೇನೆಯ ಕಾರ್ಪೊರೇಟರ್ ಒಬ್ಬರಿಗೆ ಮೇಯರ್ ಹುದ್ದೆ ಸಿಗಬೇಕೆಂದು ಬಯಸುತ್ತಿದೆ. ಬಿಜೆಪಿಯೊಂದಿಗೆ ಚೌಕಾಶಿ ಮಾಡಿ, ಮೇಯರ್ ಹುದ್ದೆ ಪಡೆಯಬೇಕೆಂಬ ಧಾವಂತದಲ್ಲಿದೆ ಎಂದು ಹೇಳಲಾಗುತ್ತಿದೆ.
ಶಿವಸೇನೆಯ ಕಾರ್ಪೊರೇಟರ್ಗಳ ಗುಂಪೊಂದು ಸಾಂಪ್ರದಾಯಿಕವಾಗಿ ಈ ಹುದ್ದೆ ತಮ್ಮ ಬಳಿಯೇ ಇರಬೇಕೆಂದು ಬಯಸುತ್ತಿದೆ. ಇದು, ಉಪಮುಖ್ಯಮಂತ್ರಿ ಏಕನಾಥ್ ಶಿಂಧೆ ಮೇಲೆ ಹೆಚ್ಚು ಒತ್ತಡ ತಂದಿದೆ ಎಂದು ಹೇಳಲಾಗುತ್ತಿದೆ.
ಶಿಂಧೆ ಪಕ್ಷದ ಕಾರ್ಪೊರೇಟರ್ಗಳು ಮೇಯರ್ ಹುದ್ದೆಯನ್ನು ಬಿಜೆಪಿಗೆ ಬಿಟ್ಟುಕೊಡಲು ಮುಂದಾಗದಿದ್ದರೆ, ಅವರಿಗೆ ಮೇಯರ್ ಹುದ್ದೆಯ ಆಮಿಷವೊಡ್ಡಿ ತಮ್ಮತ್ತ ಸೆಳೆದುಕೊಳ್ಳಬಹುದು ಅಥವಾ ಕುದುರೆ ವ್ಯಾಪಾರದ ಮೂಲಕ ಅಗತ್ಯವಿರುವ 8 ಮಂದಿ ಶಿಂಧೆ ಪಾಳಯದ ಕಾರ್ಪೊರೇಟರ್ಗಳನ್ನು ಖರೀದಿ ಮಾಡಬಹುದು ಎಂಬ ಭೀತಿಯೂ ಶಿಂಧೆ ಶಿವಸೇನೆಯಲ್ಲಿದೆ.
ಶಿಂಧೆ ಪಕ್ಷದ 8 ಮಂದಿಯನ್ನು ಸೆಳೆಯುವಲ್ಲಿ ವಿಪಕ್ಷಗಳ ಠಾಕ್ರೆ ಸಹೋದರರು (ಉದ್ದವ್ ಮತ್ತು ರಾಜ್) ಯಶಸ್ವಿಯಾದರೆ, ಬಿಎಂಸಿಯಲ್ಇ ಬಿಜೆಪಿಯನ್ನು ಅಧಿಕಾರದಿಂದ ದೂರವಿಡುವುದೂ ಸಾಧ್ಯವಾಗುತ್ತದೆ.




