ಲೋಕಸಭಾ ಚುನಾವಣೆ ಸಮೀಪಿಸುತ್ತಿದ್ದಂತೆಯೇ ರಾಜಕೀಯ ಪಕ್ಷಗಳು ತಮ್ಮ ಅಭ್ಯರ್ಥಿಗಳ ಆಯ್ಕೆ ವಿಚಾರ, ಪಕ್ಷ ಗೆಲ್ಲಿಸುವ ವಿಚಾರ ಸೇರಿದಂತೆ ನಾನಾ ಯೋಜನೆಗಳನ್ನು ಹಾಕಿಕೊಳ್ಳುತ್ತಿದ್ದಾರೆ. ಈ ನಡುವೆ ಸದಾ ವಿವಾದಾತ್ಮಕ ಹೇಳಿಕೆ ನೀಡಿ ಸುದ್ದಿಯಲ್ಲಿರುವ ಬಿಜೆಪಿ ಸಂಸದ ಅನಂತಕುಮಾರ್ ಹೆಗಡೆ ಪ್ರತಿನಿಧಿಸುವ ಉತ್ತರ ಕನ್ನಡ ಜಿಲ್ಲೆಯ ಬಿಜೆಪಿಯೊಳಗೆ ಬಿರುಕು ಮೂಡಿರುವುದು ಇತ್ತೀಚೆಗೆ ನಡೆದ ಜಿಲ್ಲಾಮಟ್ಟದ ಸಭೆಯ ಬಳಿಕ ಬೆಳಕಿಗೆ ಬಂದಿದೆ.
ಆರೋಗ್ಯದ ಕಾರಣ ನೀಡಿ ನಾಲ್ಕು ವರ್ಷ ಜನರ ಕೈಗೆ ಸಿಗದಿದ್ದ ಬಿಜೆಪಿ ಸಂಸದ ಅನಂತ್ ಕುಮಾರ್ ಹೆಗಡೆ ಲೋಕಸಭೆ ಚುನಾವಣೆ ಸಮೀಪಿಸುತ್ತಿದ್ದಂತೆ ಉತ್ತರ ಕನ್ನಡ ಕ್ಷೇತ್ರದಲ್ಲಿ ಸಕ್ರಿಯವಾಗತೊಡಗಿದ್ದಾರೆ. ಬಿಜೆಪಿ ಕಾರ್ಯಕರ್ತರ ಸಭೆಯಲ್ಲಿ ಕಾಂಗ್ರೆಸ್ ಹಾಗೂ ಸಿಎಂ ಸಿದ್ದರಾಮಯ್ಯ, ಮುಸ್ಲಿಮರ ವಿರುದ್ಧ ವಿವಾದಾತ್ಮಕ ಹೇಳಿಕೆ ನೀಡುವ ಮೂಲಕ ತಾನಿನ್ನೂ ಕಣದಲ್ಲಿದ್ದೇನೆ ಎಂಬ ಸಂದೇಶ ರವಾನಿಸತೊಡಗಿದ್ದರು. ಆದರೆ, ಸಂಸದರ ಇಂತಹ ನಡವಳಿಕೆಗೆ ಸ್ವಪಕ್ಷದಲ್ಲೇ ಮನ್ನಣೆ ಸಿಗುತ್ತಿಲ್ಲ ಎಂಬ ಅಂಶ ಜಿಲ್ಲೆಯ ಪ್ರಧಾನ ಕಾರ್ಯದರ್ಶಿ ನೇಮಕ ಮಾಡುವ ಸಭೆಯಿಂದಾಗಿ ಹೊರಬಿದ್ದಿದೆ.
ಜಿಲ್ಲೆಯ ಪ್ರಧಾನ ಕಾರ್ಯದರ್ಶಿ ನೇಮಕ ಮಾಡುವ ಸಭೆ ಜನವರಿ 23 ರಂದು ನಡೆದಿದ್ದು, ಈ ಸಭೆಯಲ್ಲಿ ಸಂಸದ ಅನಂತಕುಮಾರ್ ಹೆಗಡೆ ಮತ್ತು ಉತ್ತರ ಕನ್ನಡ ಬಿಜೆಪಿ ಜಿಲ್ಲಾದ್ಯಕ್ಷ ಎನ್ಎಸ್ ಹೆಗಡೆ ನಡುವೆ ಭಾರೀ ವಾಗ್ವಾದ ನಡೆದಿರುವುದು ಈಗ ಬಹಿರಂಗಗೊಂಡಿದೆ.
ಬಿಜೆಪಿ ಜಿಲ್ಲಾದ್ಯಕ್ಷ ಎನ್ಎಸ್ ಹೆಗಡೆ, ಮಾಜಿ ಸ್ಪೀಕರ್ ವಿಶ್ವೇಶ್ವರ ಹೆಗಡೆ ಕಾಗೇರಿ ಹಾಗೂ ಪ್ರಧಾನ ಕಾರ್ಯದರ್ಶಿಗಳ ಜೊತೆ ಗೌಪ್ಯ ಸಭೆ ನಡೆದಿತ್ತು. ಈ ಸಭೆಯಲ್ಲಿ ಅನಂತಕುಮಾರ್ ಹೆಗಡೆ ಸೂಚಿಸುವ ಹೆಸರಿಗೆ ಮಾಜಿ ಸ್ಪೀಕರ್ ಕಾಗೇರಿ ಒಲವು ವ್ಯಕ್ತಪಡಿಸದ ಹಿನ್ನೆಲೆ ರಾಜ್ಯ ಮಟ್ಟದ ನಾಯಕರಿಗೆ ಆಯ್ಕೆ ಜವಾಬ್ದಾರಿ ಕೊಡುವುದಕ್ಕೆ ತೀರ್ಮಾನಿಸಿ ಕಾಗೇರಿ ಅವರು ಸಭೆಯಿಂದ ಹೊರ ನಡೆದಿದ್ದಾರೆ.
ಕಾಗೇರಿ ಸಭೆಯಿಂದ ಹೊರ ನಡೆದ ಬಳಿಕ ಲಿಸ್ಟ್ ಫೈನಲ್ ಮಾಡಿ ಎಂದ ಅನಂತಕುಮಾರ್ ಹೆಗಡೆ ಸೂಚನೆಗೆ ಜಿಲ್ಲಾಧ್ಯಕ್ಷರು ಸೊಪ್ಪು ಹಾಕಿಲ್ಲ. ಅಲ್ಲದೇ, ಕಾಗೇರಿ ಅವರು ಇರುವಾಗಲೇ ಹೇಳಬೇಕಿತ್ತು. ಅವರು ಹೋದ ಮೇಲೆ ಹೀಗೆಲ್ಲ ಮಾಡಿದರೆ ನನಗೆ ಕೆಟ್ಟ ಹೆಸರು ಬರುತ್ತದೆ. ನಾನು ಲಿಸ್ಟ್ ಮಾಡಲ್ಲ ಎಂದು ನೇರವಾಗಿ ಮುಖಕ್ಕೆ ಬಡಿದ ಹಾಗೆ ಹೇಳಿರುವುದಾಗಿ ಪಕ್ಷದ ಕಾರ್ಯಕರ್ತರು ಮಾತನಾಡುತ್ತಿದ್ದಾರೆ.
ಇದನ್ನು ಓದಿದ್ದೀರಾ? ಬಿಟ್ ಕಾಯಿನ್ ಪ್ರಕರಣ: ಎಸ್ಐಟಿ ವಶಕ್ಕೆ ಇಬ್ಬರು ಪೊಲೀಸ್ ಅಧಿಕಾರಿಗಳು
ಜಿಲ್ಲಾಧ್ಯಕ್ಷರ ಹೇಳಿಕೆಯಿಂದ ಸಿಟ್ಟಿಗೆದ್ದ ಅನಂತಕುಮಾರ್ ಹೆಗಡೆ, ಇಂತಹ ಸಭೆಗೆಲ್ಲ ನನ್ನನ್ನು ಯಾಕೆ ಕರೆಯುತ್ತೀರಾ? ಎಲ್ಲ ಅರ್ಧಂಬರ್ಧ ಮಾಡುತ್ತೀರಾ ಎಂದು ಏರು ಧ್ವನಿಯಲ್ಲಿ ಹರಿಹಾಯ್ದು ಸಭೆಯಿಂದ ಹೊರ ನಡೆದಿರುವುದಾಗಿ ತಿಳಿದುಬಂದಿದೆ.
ಈ ಹಿಂದೆ ಪಕ್ಷದ ಕಾರ್ಯಕರ್ತರೇ, ಉತ್ತರ ಕನ್ನಡ ಸಂಸದ ಅನಂತಕುಮಾರ್ ಹೆಗಡೆ ವಿರುದ್ಧ ಕಿಡಿಕಾರಿ, ‘ಸಂಸದರು ಕೈಗೆ ಸಿಗುತ್ತಿಲ್ಲ, ಅವರ ಪಿಎ ಫೋನ್ ಕರೆ ಕೂಡ ಸ್ವೀಕರಿಸುತ್ತಿಲ್ಲ’ ಎಂದು ಆರೋಪಿಸಿದ್ದರು.





