ಕೇಂದ್ರ ಸರ್ಕಾರದ ಆರ್ಥಿಕ ಸಮೀಕ್ಷೆ ಬಿಡುಗಡೆ ಮತ್ತು ಕೇಂದ್ರ ಬಜೆಟ್ ಮಂಡನೆಗೂ ಮುನ್ನ , ಕಾಂಗ್ರೆಸ್ ‘ಆರ್ಥಿಕತೆಯ ನೈಜ ಸ್ಥಿತಿ-2026’ ವರದಿಯನ್ನು ಬಿಡುಗಡೆ ಮಾಡಿದೆ. ದೇಶದಲ್ಲಿ ಅಸಮಾನತೆ ಹೆಚ್ಚುತ್ತಿದೆ. ಕಲ್ಯಾಣ ಯೋಜನೆಗಳ ಹಿಮ್ಮೆಟ್ಟಲಾಗುತ್ತಿದೆ ಎಂದು ಹೇಳಿದೆ.
ಸಂಸತ್ ಅಧಿವೇಶನದ ಆರಂಭಕ್ಕೂ ಹಿಂದಿನ ದಿನ (ಮಂಗಳವಾರ) ಕಾಂಗ್ರೆಸ್ನ ಸಂಶೋಧನಾ ವಿಭಾದ ಅಧ್ಯಕ್ಷ ರಾಜೀವ್ ಗೌಡ ಮತ್ತು ಪಕ್ಷದ ಮುಖಂಡ ಅಮಿತಾಭ್ ದುಬೆ ಅವರು ದೆಹಲಿಯಲ್ಲಿ ಪತ್ರಿಕಾಗೋಷ್ಠಿ ನಡೆಸಿ, ವರದಿ ಬಿಡುಗಡೆ ಮಾಡಿದ್ದಾರೆ. “ಕೇಂದ್ರ ಸರ್ಕಾರವು ಆರ್ಥಿಕ ಸಮೀಕ್ಷೆ ಮತ್ತು ಕೇಂದ್ರ ಬಜೆಟ್ ಮೂಲಕ ತಾವು ಅದ್ಭುತ ಸಾಧನೆ ಮಾಡಿರುವುದಾಗಿ ಹೇಳಿಕೊಳ್ಳಲು ಮುಂದಾಗಿದೆ. ಅದಕ್ಕೂ ಮುನ್ನ, ಜನರ ಮುಂದೆ ಸತ್ಯಗಳನ್ನು ಬಯಲು ಮಾಡುವುದು ಮುಖ್ಯ” ಎಂದು ಹೇಳಿದ್ದಾರೆ.
“ಮೋದಿ ಸರ್ಕಾರವು ದೇಶದ ಆರ್ಥಿಕ ಪರಿಸ್ಥಿತಿಯ ಅತ್ಯುತ್ತಮವಾಗಿದೆ ಎಂಬ ಚಿತ್ರಣ ನೀಡಲು ದತ್ತಾಂಶಗಳನ್ನು ತಿರುಚುತ್ತಿದೆ. ಆದರೆ, ದೇಶದಲ್ಲಿ ಆರ್ಥಿಕ ಅಸಮಾನತೆ ಹೆಚ್ಚುತ್ತಿದೆ. ಕಲ್ಯಾಣ ಕಾರ್ಯಕ್ರಮಗಳು ಕ್ಷೀಣಿಸುತ್ತಿವೆ. ಭಾರತದ ಆರ್ಥಿಕ ಬೆಳವಣಿಗೆಯು ಪ್ರಶ್ನಾರ್ಹವಾಗಿದೆ” ಎಂದು ರಾಜೀವ್ ಗೌಡ ಹೇಳಿದ್ದಾರೆ.
‘‘ಅಂತಾರಾಷ್ಟ್ರೀಯ ಹಣಕಾಸು ನಿಧಿ (ಐಎಂಎಫ್) ಭಾರತದ ಅಂಕಿಅಂಶಗಳಿಗೆ ‘ಸಿ ದರ್ಜೆ’ ನೀಡಿದೆ. ಭಾರತದ ಜಿಡಿಪಿ 2025-26ನೇ ಸಾಲಿನ ಮೊದಲಾರ್ಧದದಲ್ಲಿ 8.4% ಬೆಳವಣಿಗೆಯನ್ನು ಕಂಡಿತ್ತು ಎಂದು ಕೇಂದ್ರ ಸರ್ಕಾರ ಹೇಳಿಕೊಂಡಿದೆ. ಆದರೆ, ಎಂಟು ಕೋಟಿ ಕೈಗಾರಿಕೆಗಳ ಸೂಚ್ಯಂಕವು ಜಿಡಿಪಿ ಬೆಳವಣಿಗೆ ಕೇವಲ 2.9% ಮಾತ್ರವೆಂದು ತೋರಿಸಿವೆ. ಪ್ರಸ್ತುತ ಭಾರತದ ರೂಪಾಯಿಯು ಏಷ್ಯಾದ ಅತ್ಯಂತ ಕಳಪೆ ನಿರ್ವಹಣೆಯ ಕರೆನ್ಸಿಯಾಗಿ ಗುರುತಿಸಿಕೊಂಡಿದೆ” ಎಂದು ವಿವರಿಸಿದ್ದಾರೆ.
ಈ ಲೇಖನ ಓದಿದ್ದೀರಾ?: ಮಮ್ಮುಟ್ಟಿಗೆ ಪದ್ಮ ಭೂಷಣ ಪ್ರಶಸ್ತಿ: ಪ್ರತಿಭೆಗಾಗಿಯೇ, ಇಲ್ಲ ಕೇರಳ ಚುನಾವಣೆಗಾಗಿಯೇ?
“2017-18ಕ್ಕೆ ಹೋಲಿಸಿದರೆ 2023-24ರ ವೇಳೆಗೆ ಉತ್ಪಾದನಾ ವಲಯದಲ್ಲಿ ಕಾರ್ಮಿಕರ ಸಂಖ್ಯೆ 12.1%ನಿಂದ 11.4%ಗೆ ಕುಸಿದಿದೆ. ಜನರು ಉದ್ಯೋಗವಿಲ್ಲದೆ, ಕೃಷಿಯನ್ನು ಅವಲಂಬಿಸುತ್ತಿದ್ದಾರೆ. ಆದರೆ, ಕೃಷಿಗೂ ಸರ್ಕಾರದಿಂದ ಪ್ರೋತ್ಸಾಹವಿಲ್ಲ. ಕಡಿಮೆ ವೇತನ, ಅಲ್ಪಾವಧಿಯ ಉದ್ಯೋಗಿಗಳ ಸಂಖ್ಯೆಯಲ್ಲಿ ಮಾತ್ರವೇ ಹೆಚ್ಚಳವಾಗಿದೆ. ಆದರೆ, ಅವರೆಲ್ಲರೂ ಅಭದ್ರತೆಯಿಂದ ಬಳಲುತ್ತಿದ್ದಾರೆ” ಎಂದು ಹೇಳಿದ್ದಾರೆ.
“ದೇಶದ ಒಟ್ಟು ಸಂಪತ್ತಿನಲ್ಲಿ 65%ರಷ್ಟನ್ನು 10% ಜನರು ತಮ್ಮ ಹಿಡಿತದಲ್ಲಿ ಇಟ್ಟುಕೊಂಡಿದ್ದಾರೆ. ಕೇವಲ 15% ಆದಾಯ ಮಾತ್ರವೇ ಇಡೀ ದೇಶದ ಹಿಂದುಳಿದವರ ಬಳಿ ಇದೆ. ಪ್ರತಿ ಐವರು ಭಾರತೀಯರ ಪೈಕಿ ನಾಲ್ಕು ಮಂದಿ 200 ರೂ.ಗಿಂತಲೂ ಕಡಿಮೆ ದೈನಂದಿನ ಆದಾಯ ಹೊಂದಿದ್ದಾರೆ” ಎಂದು ವಿವರಿಸಿದ್ದಾರೆ.
“ಜನರು ಕಾರ್ಪೊರೇಟ್ಗಳಿಗಿಂತ ಹೆಚ್ಚು ನೇರ ತೆರಿಗೆ ಪಾವತಿಸುತ್ತಾರೆ. 2014ರ ಆರ್ಥಿಕ ವರ್ಷದಲ್ಲಿ 38.1% ಇದ್ದ ಜನಸಾಮಾನ್ಯರ ನೇಪ ತೆರಿಗೆ, 2024ರ ವೇಳೆಗೆ 53.4%ಗೆ ಏರಿಕೆಯಾಗಿದೆ. ಕೆಲವರಿಗೆ ಮಾತ್ರ ಪ್ರಯೋಜನವಾಗುವ ಬೆಳವಣಿಗೆ ಅಭಿವೃದ್ಧಿಯಲ್ಲ. ಇದು ಎಚ್ಚರಿಕೆಯ ಸಂಕೇತ. ಹೆಚ್ಚುತ್ತಿರುವ ಅಸಮಾನತೆ ಮತ್ತು ಕುಗ್ಗುತ್ತಿರುವ ಕಲ್ಯಾಣ ಕಾರ್ಯಕ್ರಮಗಳು ಬೃಹತ್ ಆರ್ಥಿಕ ದುರುಪಯೋಗದ ಸ್ಪಷ್ಟ ಗುರುತುಗಳಾಗಿವೆ” ಎಂದು ಹೇಳಿದ್ದಾರೆ.




