ಮೂರು ವರ್ಷಗಳ ಹಿಂದೆ ವಂಚನೆ ಪ್ರಕರಣದಲ್ಲಿ ಸಿಬಿಐ ಕೋರ್ಟ್ ದೋಷಿ ಎಂದು ಘೋಷಿಸಿದ್ದ ಮಾಜಿ ಆರ್ಜೆಡಿ ನಾಯಕ ಅನಿಲ್ ಸಹಾನಿ ಅವರು ಬುಧವಾರ ಬಿಜೆಪಿಗೆ ಸೇರ್ಪಡೆಯಾಗಿದ್ದಾರೆ. ವಂಚನೆ ಪ್ರಕರಣದಲ್ಲಿ ಅನಿಲ್ ಸಹಾನಿ ಬಿಹಾರ ವಿಧಾನಸಭೆಯಿಂದ ಅನರ್ಹಗೊಂಡಿದ್ದರು.
ಬಿಹಾರ ವಿಧಾನಸಭೆ ಚುನಾವಣೆಯ ಬಿಜೆಪಿ ಉಸ್ತುವಾರಿಯಾಗಿರುವ ಕೇಂದ್ರ ಸಚಿವ ಧರ್ಮೇಂದ್ರ ಪ್ರಧಾನ್ ಮತ್ತು ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ವಿನೋದ್ ತಾವ್ಡೆ ಅವರ ಸಮ್ಮುಖದಲ್ಲಿ ಸಹಾನಿ ಬಿಜೆಪಿ ಸೇರ್ಪಡೆಗೊಂಡಿದ್ದಾರೆ.
ಇದನ್ನು ಓದಿದ್ದೀರಾ? ಎಎಪಿಯ ಏಕೈಕ ಸಂಸದ ಬಿಜೆಪಿ ಸೇರ್ಪಡೆ
2012ರಲ್ಲಿ ಆರ್ಜೆಡಿ ನಾಯಕ ರಾಜ್ಯಸಭಾ ಸಂಸದರಾಗಿದ್ದಾಗ, ಪ್ರಯಾಣ ಮಾಡದೆಯೇ ಪ್ರಯಾಣ ರಿಯಾಯಿತಿಯನ್ನು ಪಡೆಯಲು ನಕಲಿ ವಿಮಾನ ಟಿಕೆಟ್ಗಳನ್ನು ಸಲ್ಲಿಸಿದ್ದರು. ದೆಹಲಿಯ ಸಿಬಿಐ ಕೋರ್ಟ್ ಅವರನ್ನು ದೋಷಿ ಎಂದು ಘೋಷಿಸಿದ್ದರು.
ಸಹಾನಿ ಅವರನ್ನು ಬಿಜೆಪಿಗೆ ಸೇರಿಸುವ ಮೂಲಕ ಮುಜಾಫರ್ಪುರದಲ್ಲಿ ಗಣನೀಯ ಪ್ರಮಾಣದಲ್ಲಿರುವ ಅತ್ಯಂತ ಹಿಂದುಳಿದ ವರ್ಗವಾದ ‘ನಿಶಾದ್’ ಸಮುದಾಯವನ್ನು ತಲುಪುವ ಗುರಿಯನ್ನು ಬಿಜೆಪಿ ಹೊಂದಿದೆ. ಸಹಾನಿ ಅವರ ತವರು ಜಿಲ್ಲೆ ಮುಜಾಫರ್ಪುರ ಆಗಿದೆ.
ಸಹಾನಿ 2020ರ ವಿಧಾನಸಭೆ ಚುನಾವಣೆಯಲ್ಲಿ ಕುರ್ಹಾನಿಯಿಂದ ಬಿಜೆಪಿಯ ಕೇದಾರ್ ಗುಪ್ತಾ ಅವರನ್ನು 900ಕ್ಕಿಂತ ಕಡಿಮೆ ಮತಗಳ ಅಂತರದಿಂದ ಸೋಲಿಸಿ ಗೆದ್ದಿದ್ದರು. ಸಹಾನಿಯವರ ಅನರ್ಹತೆಯ ನಂತರ ನಡೆದ ಉಪಚುನಾವಣೆಯಲ್ಲಿ ಗುಪ್ತಾ ಗೆದ್ದು ಸಚಿವರಾದರು.





