ಮಹಾರಾಷ್ಟ್ರದಲ್ಲಿ ಹಲವು ವರ್ಷಗಳ ಹಿಂದೆ ನಡೆದ ವಿವಿಧ ಬಾಂಬ್ ಸ್ಫೋಟ ಪ್ರಕರಣಗಳಲ್ಲಿ ಆರ್ಎಸ್ಎಸ್ ಕೈವಾಡವಿದೆ ಎಂದು ಸಂಘಟನೆಯ ಮಾಜಿ ಪೂರ್ಣಾವಧಿ ಪ್ರಚಾರಕ ಯಶವಂತ ಶಿಂದೆ ಮತ್ತೆ ಆರೋಪಿಸಿದ್ದಾರೆ. ದಿ ವೈರ್ ಸಂದರ್ಶನದಲ್ಲಿ ತಮ್ಮ ಆರೋಪವನ್ನು ಪುನರುಚ್ಚರಿಸಿರುವ ಶಿಂದೆ ಅವರು, “2003-2008ರ ನಡುವೆ ಜಲ್ನಾ, ಪೂರ್ನಾ, ಪರ್ಬಾನಿ ನಡುವೆ ನಡೆದ ಹಲವು ಬಾಂಬ್ ಸ್ಫೋಟ ಪ್ರಕರಣಗಳಲ್ಲಿ ಆರ್ಎಸ್ಎಸ್ ಕೈವಾಡವಿದೆ” ಎಂದಿದ್ದಾರೆ.
“ಹಿರಿಯ ಆರ್ಎಸ್ಎಸ್ ನಾಯಕ ಇಂದ್ರೇಶ್ ಕುಮಾರ್ ಮತ್ತು ವಿಎಚ್ಪಿ ನಾಯಕ ಮಿಲಿಂದ್ ಪರಾಂಡೆ ಈ ಸ್ಫೋಟಗಳ ಮಾಸ್ಟರ್ ಮೈಡ್ಗಳಾಗಿದ್ದಾರೆ. ಬಿಜೆಪಿ, ಆರ್ಎಸ್ಎಸ್, ವಿಶ್ವ ಹಿಂದೂ ಪರಿಷದ್ ಮತ್ತು ಬಜರಂಗದಳಕ್ಕೆ ಸೇರಿದವರು ಈ ಸಂಚು ರೂಪಿಸಿದ್ದರು” ಎಂದು ಆರೋಪಿಸಿದ್ದಾರೆ.
ಇದನ್ನು ಓದಿದ್ದೀರಾ? ಮುಂಬೈ ಸರಣಿ ಬಾಂಬ್ ಸ್ಫೋಟದ ಅಪರಾಧಿ ಶ್ಯಾಮ್ ಕಿಶೋರ್ ʼಬೆಂಗಳೂರು ಕಂಬಳʼದ ಅತಿಥಿ!
“ಈ ಬಗ್ಗೆ 2000ರಲ್ಲಿ ನನ್ನ ಬಳಿ ಮೊದಲ ಬಾರಿಗೆ ಚರ್ಚಿಸಲಾಗಿತ್ತು. ಬಳಿಕ ನಾಂದೇಡ್ನ ಗುಂಪೊಂದು ಈ ಸಂಚನ್ನು ಕಾರ್ಯರೂಪಕ್ಕೆ ತಂದಿದೆ. ಇತರೆಡೆಯೂ ಈ ಗುಂಪೇ ಕೃತ್ಯ ಎಸಗಿದೆ. ಔರಂಗಾಬಾದ್ನ ಮಸೀದಿಯಲ್ಲಿಯೂ ವಿಧ್ವಂಸಕ್ಕೆ ಕೃತ್ಯಕ್ಕೆ ಸಂಚು ಮಾಡಲಾಗಿತ್ತು. 2004ರ ಲೋಕಸಭೆ ಚುನಾವಣೆಗೂ ಮುನ್ನ ಕೋಮು ಧ್ರುವೀಕರಣ ಮಾಡುವುದೇ ಈ ಎಲ್ಲ ಕೃತ್ಯಗಳ ಉದ್ದೇಶವಾಗಿತ್ತು” ಎಂದು ಮಾಜಿ ಆರ್ಎಸ್ಎಸ್ ಕಾರ್ಯಕರ್ತ ಹೇಳಿಕೊಂಡಿದ್ದಾರೆ.
ಶಿಂದೆ 1994ರಲ್ಲಿ ಆರ್ಎಸ್ಎಸ್ ಸೇರ್ಪಡೆಯಾಗಿದ್ದು, 1999ರಲ್ಲಿ ಬಜರಂಗದಳದ ನಾಯಕರಾಗಿದ್ದರು. 1995ರಲ್ಲಿ ಜಮ್ಮು ಕಾಶ್ಮೀರದ ಅಂದಿನ ಮುಖ್ಯಮಂತ್ರಿ ಫಾರೂಕ್ ಅಬ್ದುಲ್ಲಾ ಮೇಲೆ ಹಲ್ಲೆ ನಡೆಸಿದ ಕಾರಣಕ್ಕೆ ಬಂಧನಕ್ಕೆ ಒಳಗಾಗಿದ್ದರು. ಅದಾದ ಬಳಿಕ ಆರ್ಎಸ್ಎಸ್ನಿಂದ ದೂರ ಸರಿದರು. ಈ ಹಿಂದೆಯೂ ಹಲವು ಬಾರಿ ಶಿಂದೆ ಬಾಂಬ್ ಸ್ಫೋಟದ ಹಿಂದೆ ಆರ್ಎಸ್ಎಸ್ ಕೈವಾಡದ ಆರೋಪವನ್ನು ಮಾಡಿದ್ದಾರೆ. ಹಾಗೆಯೇ ಈವರೆಗೂ ತನಗೆ ಯಾವುದೇ ಭದ್ರತೆ ನೀಡಿಲ್ಲ ಎಂದಿದ್ದರು.
2006ರ ನಾಂದೇಡ್ ಸ್ಫೋಟ ಪ್ರಕರಣಕ್ಕೆ ಸಂಬಂಧಿಸಿದ್ದಂತೆ ನ್ಯಾಯಾಲಯಕ್ಕೆ ಸಿಬಿಐ ಸಲ್ಲಿಸಿದ ಅಫಿಡವಿಟ್ನಲ್ಲಿ 2003 ಹಾಗೂ 2004ರ ನಡುವೆ ಜಲ್ನಾ, ಪೂರ್ನಾ ಹಾಗೂ ಪರ್ಬಾನಿಗಳಲ್ಲಿ ನಡೆದ ಬಾಂಬ್ ಸ್ಫೋಟಗಳಲ್ಲಿ ಆರ್ಎಸ್ಎಸ್ ನಾಯಕರ ಕೈವಾಡವಿದೆ ಎಂದು ದೂರಿದ್ದರು. ಈ ಸಂಬಂಧ ತನ್ನನ್ನು ಸಾಕ್ಷಿಯಾಗಿ ಪರಿಗಣಿಸುವಂತೆ ಕೋರಿ ಅರ್ಜಿ ಸಲ್ಲಿಸಿದ್ದರು. ಆದರೆ ಸಿಬಿಐ ನ್ಯಾಯಾಲಯ ಅರ್ಜಿ ತಿರಸ್ಕರಿಸಿತ್ತು.





