ರಾಜ್ಯದಲ್ಲಿ ಆರ್ಎಸ್ಎಸ್ ಸೇರಿದಂತೆ ಯಾವುದೇ ಖಾಸಗಿ ಸಂಸ್ಥೆಗಳು ಅನುಮತಿ ಪಡೆಯದೆ ಸಾರ್ವಜನಿಕ ಸ್ಥಳಗಳಲ್ಲಿ ಕಾರ್ಯಕ್ರಮಗಳನ್ನು ನಡೆಸುವಂತಿಲ್ಲ ಎಂದು ಸರ್ಕಾರವು ನಿಯಮ ರೂಪಿಸಿ, ಜಾರಿಗೊಳಿಸಿದೆ. ನೋಂದಣಿಯೇ ಆಗದೆ ದೇಶದಲ್ಲಿ ಸಕ್ರಿಯವಾಗಿರುವ ಆರ್ಎಸ್ಎಸ್ನ ಚಟುವಟಿಕೆಗಳ ವಿಚಾರವಾಗಿ ಕರ್ನಾಟಕದಲ್ಲಿ ಆಡಳಿತಾರೂಢ ಕಾಂಗ್ರೆಸ್ ಮತ್ತು ವಿಪಕ್ಷ ಬಿಜೆಪಿ ನಡುವೆ ವಾಗ್ವಾದ ನಡೆಯುತ್ತಿದೆ. ಆರ್ಎಸ್ಎಸ್ ವಿರುದ್ಧ ವಾಗ್ದಾಳಿ ನಡೆಸಿರುವ ಕಾಂಗ್ರೆಸ್ ನಾಯಕ ಬಿ.ಕೆ ಹರಿಪ್ರಸಾದ್, “ಆರ್ಎಸ್ಎಸ್ ನೋಂದಣಿಯಾಗಿಲ್ಲ. ಇದು ದೊಣ್ಣೆ ಹಿಡಿದು ಜನರನ್ನು ಹೆದರಿಸುವ ಭೂಗತ ಸಂಘಟನೆ ಅಲ್ಲವೇ?” ಎಂದು ಆರ್ಎಸ್ಎಸ್ನ ಮುಖಂಡ ಬಿ.ಎಲ್ ಸಂತೋಷ್ ಅವರನ್ನು ಪ್ರಶ್ನಿಸಿದ್ದಾರೆ.
ಆರ್ಎಸ್ಎಸ್ ನೋಂದಣಿಯಾಗದ ಕುರಿತು ಟ್ವೀಟ್ ಮಾಡಿರುವ ಹರಿಪ್ರಸಾದ್, “ಆರ್ಎಸ್ಎಸ್ ಕೈಯಲ್ಲಿ ದೊಣ್ಣೆ ಹಿಡಿದು ಜನರಲ್ಲಿ ಭಯ ಹುಟ್ಟಿಸಬಹುದೇ ಹೊರತು ಭರವಸೆ ಮೂಡಿಸಲು ಸಾಧ್ಯವಿಲ್ಲ ಬಿ.ಎಲ್ ಸಂತೋಷ್ ಅವರೇ. ದೇಶದ ಜನರಲ್ಲಿ ಆತ್ಮವಿಸ್ವಾಸ, ಧೈರ್ಯ, ಭರವಸೆ ಮೂಡಿಸಿರುವುದು ಬಾಬಾ ಸಾಹೇಬರು ನೀಡಿರುವ ಸಂವಿಧಾನದಿಂದ ಮಾತ್ರ” ಎಂದಿದ್ದಾರೆ.
“ಪಥ ಸಂಚಲನ ಸಾಗುವ ದ್ವೇಷದ ಬೀದಿಯಲ್ಲಿ ಪ್ರೀತಿ ಹುಟ್ಟವುದಾದರೂ ಹೇಗೆ? ದೊಣ್ಣೆ, ಲಾಟಿ, ಬೂಟಿನ ಪಥಸಂಚಲನದಿಂದ ಸಮಾಜದಲ್ಲಿ ಭಯ, ದ್ವೇಷದ ವಾತಾವರಣ ಸೃಷ್ಟಿಸಲಾಗುತ್ತಿದೆ. ಪಥಸಂಚಲನದ ಉದ್ದೇಶವೇ ಭಯದ ವಾತಾವರಣದ ನಿರ್ಮಾಣ ಎನ್ನುವುದು ಸ್ಪಷ್ಟ” ಎಂದು ಹೇಳಿದ್ದಾರೆ.
ಕೈಯಲ್ಲಿ ದೊಣ್ಣೆ ಹಿಡಿದು ಜನರಲ್ಲಿ ಭಯ ಹುಟ್ಟಿಸಬಹುದೇ ಹೊರತು ಭರವಸೆ ಮೂಡಿಸಲು ಸಾಧ್ಯವಿಲ್ಲ @blsanthosh ಅವರೇ, ದೇಶದ ಜನರಲ್ಲಿ ಆತ್ಮವಿಸ್ವಾಸ, ಧೈರ್ಯ, ಭರವಸೆ ಮೂಡಿಸಿರುವುದು ಬಾಬಾ ಸಾಹೇಬರು ನೀಡಿರುವ ಸಂವಿಧಾನದಿಂದ ಮಾತ್ರ.
— Hariprasad.B.K. (@HariprasadBK2) October 19, 2025
ಪಥ ಸಂಚಲನ ಸಾಗುವ ದ್ವೇಷದ ಬೀದಿಯಲ್ಲಿ ಪ್ರೀತಿ ಹುಟ್ಟವುದಾದರೂ ಹೇಗೆ? ದೊಣ್ಣೆ, ಲಾಟಿ, ಬೂಟಿನ ಪಥಸಂಚಲನದಿಂದ…
“ಆರ್ಎಸ್ಎಸ್ ‘ಪೇಯ್ಡ್’ ಸಂಘಟನೆಯಲ್ಲ ಎಂದಾದರೇ ದೇಶ-ವಿದೇಶಿ ಮೂಲದಿಂದಲೂ ಹರಿದು ಬರುತ್ತಿರುವ ಹಣಕ್ಕೆ ಹೊಣೆ ಯಾರು? ಸಮಾಜ ಸೇವೆ ಮಾಡಲು ಆರ್.ಎಸ್.ಎಸ್ ಸರ್ಕಾರಿ ಸಂಸ್ಥೆಯೂ ಅಲ್ಲ, ಸರ್ಕಾರೇತರ ಸಂಸ್ಥೆಯೂ ಅಲ್ಲ, ಕನಿಷ್ಟ ನೊಂದಾವಣಿಯೂ ಆಗಿಲ್ಲ. ಹಾಗಾದರೆ ಇದೊಂದು ಭೂಗತ ಸಂಘಟನೆ ಅಲ್ಲವೇ? ವಿದೇಶದಿಂದ ಆರ್ಎಸ್ಎಸ್ ಗೆ ಮಾತ್ರ ಹಣ ಬರಲಿ ಎಂಬ ಕಾರಣಕ್ಕಾಗಿಯೇ ಅಲ್ಲವೇ ಎನ್.ಜಿ.ಓ ಗಳಿಗೆ ವಿದೇಶಿ ಫಂಡ್ ಬರುವುದನ್ನು ನಿಲ್ಲಿಸಿರುವುದು” ಎಂದಿದ್ದಾರೆ.
“ನೂರು ವರ್ಷದ ಇತಿಹಾಸದಲ್ಲಿ ದೊಣ್ಣೆ ಹಿಡಿದು ಸಾಗಿರುವ ಪಥಸಂಚಲನದಿಂದ ಸಮಾಜಕ್ಕೆ ಆಗಿರುವ ಲಾಭವೇನು? ಹಾದಿ ಬೀದಿಯಲ್ಲಿ ದೊಣ್ಣೆ ಹಿಡಿದು ಶಾಂತಿ-ಸುವ್ಯವಸ್ಥೆಯನ್ನು ಹಾಳು ಮಾಡಿದ್ದೇ ಸಾಧನೆಯೇ? ದೊಣ್ಣೆ ಜನರ ಕೈಗೆ ಸಿಕ್ಕಿ ಬಡಿಸಿಕೊಳ್ಳಬೇಡಿ, ಬೇಗ ಎಚ್ಚೆತ್ತುಕೊಳ್ಳದಿದ್ದರೇ ಸಂಘಕ್ಕೆ ಉಳಿಗಾಲವಿಲ್ಲ” ಎಂದು ಎಚ್ಚರಿಕೆ ನೀಡಿದ್ದಾರೆ.




