ಪ್ರಧಾನಿ ನರೇಂದ್ರ ಮೋದಿ ಅವರು ಮಣಿಪುರಕ್ಕೆ ಭೇಟಿ ನೀಡುವ ಸಾಧ್ಯತೆಯಿದೆ ಎಂದು ವರದಿಯಾಗಿದೆ. ಈ ಬಗ್ಗೆ ಕಾಂಗ್ರೆಸ್ ಪ್ರತಿಕ್ರಿಯಿಸಿದ್ದು “ಇಂತಹ ಅವಸರದ ಪ್ರವಾಸ 29 ತಿಂಗಳುಗಳ ಕಾಲ ಅವರಿಗಾಗಿ ಕಾಯುತ್ತಿರುವ ರಾಜ್ಯದ ಜನರಿಗೆ ಮಾಡುವ ಅವಮಾನ” ಎಂದು ಹೇಳಿದೆ.
ಈ ಬಗ್ಗೆ ಎಕ್ಸ್ನಲ್ಲಿ ಪೋಸ್ಟ್ ಮಾಡಿರುವ ಕಾಂಗ್ರೆಸ್ ನಾಯಕ ಜೈರಾಮ್ ರಮೇಶ್, “ಸೆಪ್ಟೆಂಬರ್ 13ರಂದು ಪ್ರಧಾನಿ ಮಣಿಪುರಕ್ಕೆ ನೀಡುವ ಪ್ರಸ್ತಾವಿತ ಭೇಟಿಯನ್ನು ಅವರ ಚಿಯರ್ಲೀಡರ್ಗಳು ಶ್ಲಾಘಿಸುತ್ತಿದ್ದಾರೆ. ಆದರೆ ಅವರು ರಾಜ್ಯದಲ್ಲಿ ಕೇವಲ 3 ಗಂಟೆಗಳು, ಹೌದು ಕೇವಲ 3 ಗಂಟೆಗಳು ಕಳೆಯಲಿದ್ದಾರೆ ಎಂದು ತೋರುತ್ತದೆ. ಇಂತಹ ಅವಸರದ ಪ್ರವಾಸದಿಂದ ಅವರು ಏನು ಸಾಧಿಸಲು ಆಶಿಸುತ್ತಾರೆ” ಎಂದು ಪ್ರಶ್ನಿಸಿದ್ದಾರೆ.
ಇದನ್ನು ಓದಿದ್ದೀರಾ? ಪ್ರಧಾನಿ ನರೇಂದ್ರ ಮೋದಿ ನಿಂದನೆ ಆರೋಪ: ಕಾಂಗ್ರೆಸ್, ಬಿಜೆಪಿ ಕಾರ್ಯಕರ್ತರ ಘರ್ಷಣೆ
“ಇದು ವಾಸ್ತವವಾಗಿ 29 ದೀರ್ಘ ಮತ್ತು ನೋವಿನ ತಿಂಗಳುಗಳಿಂದ ಅವರಿಗಾಗಿ (ಪ್ರಧಾನಿ ಮೋದಿ) ಕಾಯುತ್ತಿದ್ದ ರಾಜ್ಯದ ಜನರಿಗೆ ಮಾಡುವ ಅವಮಾನ. ಸೆಪ್ಟೆಂಬರ್ 13 ಪ್ರಧಾನಿಯವರ ಭೇಟಿಯಲ್ಲ, ಏಕೆಂದರೆ ಅವರು ಮಣಿಪುರದ ಜನರ ಬಗ್ಗೆ ತಮ್ಮ ನಿರ್ದಯತೆ ಮತ್ತು ಸಂವೇದನಾಶೀಲತೆಯನ್ನು ಮತ್ತೊಮ್ಮೆ ಬಹಿರಂಗಪಡಿಸಿದ್ದಾರೆ” ಎಂದು ತಿಳಿಸಿದ್ದಾರೆ.
ಹಾಗೆಯೇ ಪ್ರಧಾನಿ ಮಣಿಪುರದಲ್ಲಿ ಸುಮಾರು ಮೂರು ಗಂಟೆಗಳ ಕಾಲ ಇರುತ್ತಾರೆ ಎಂದು ಹೇಳಲಾದ ಮಾಧ್ಯಮ ವರದಿಯನ್ನೂ ಜೈರಾಮ್ ರಮೇಶ್ ಹಂಚಿಕೊಂಡಿದ್ದಾರೆ.
The proposed visit of the Prime Minister to Manipur on Sept 13 is being hailed by his cheerleaders.
— Jairam Ramesh (@Jairam_Ramesh) September 7, 2025
But it appears that he will be spending just about 3 hours–yes just 3 hours–in the state. What does he hope to accomplish by such a rushed trip? This is actually an insult to… pic.twitter.com/Yvbd5MXH8q
2023ರ ಮೇ ತಿಂಗಳಿನಿಂದ ಮಣಿಪುರದಲ್ಲಿ ಮೈತೇಯಿ ಮತ್ತು ಕುಕಿ ಸಮುದಾಯದ ನಡುವೆ ಜನಾಂಗೀಯ ಹಿಂಸಾಚಾರ ನಡೆಯುತ್ತಿದ್ದು, ಈವರೆಗೆ 250ಕ್ಕೂ ಅಧಿಕ ಮಂದಿ ಸಾವನ್ನಪ್ಪಿದ್ದಾರೆ. ಈಗಾಗಲೇ ಮುಖ್ಯಮಂತ್ರಿ ಬಿರೇನ್ ಸಿಂಗ್ ರಾಜೀನಾಮೆ ನೀಡಿದ್ದು ಕೇಂದ್ರ ಸರ್ಕಾರ ಮಣಿಪುರದಲ್ಲಿ ರಾಷ್ಟ್ರಪತಿ ಆಡಳಿತ ಹೇರಿದೆ. ಹಾಗೆಯೇ 2027ರವರೆಗೆ ಅಧಿಕಾರಾವಧಿಯನ್ನು ಹೊಂದಿದ್ದ ರಾಜ್ಯ ವಿಧಾನಸಭೆಯನ್ನು ಅಮಾನತುಗೊಳಿಸಿದೆ.
ಆದರೆ ಮಣಿಪುರದಲ್ಲಿ ಇಷ್ಟೊಂದು ಬೆಳವಣಿಗೆಗಳು ನಡೆದಿದ್ದರೂ ಹಿಂಸಾಚಾರ ಆರಂಭವಾದ ಬಳಿಕ ಒಂದು ಬಾರಿಯೂ ಪ್ರಧಾನಿ ಮೋದಿ ಮಣಿಪುರಕ್ಕೆ ಭೇಟಿ ನೀಡಿಲ್ಲ. ಇದೀಗ ಸುಮಾರು ಎರಡು ವರ್ಷಗಳ ಬಳಿಕ ಸೆಪ್ಟೆಂಬರ್ 13ರಂದು ಪ್ರಧಾನಿ ಮಣಿಪುರಕ್ಕೆ ಭೇಟಿ ನೀಡುವ ಸಾಧ್ಯತೆಯಿದೆ ಎಂದು ವರದಿಯಾಗಿದೆ.





