ರಷ್ಯಾದಿಂದ ಕಚ್ಚಾ ತೈಲ ಅತಿ ಕಡಿಮೆ ಬೆಲೆಗೆ ದೊರೆತರೂ ಅದು ಭಾರತದ ಪ್ರಜೆಗಳಿಗೆ ದಕ್ಕುತ್ತಿಲ್ಲ. ಅವರ ವಾಹನಗಳಿಗೆ ತುಂಬಿಸುವ ಪೆಟ್ರೋಲ್, ಡೀಸೆಲ್ ಬೆಲೆ ಕಡಿಮೆಯಾಗಿಲ್ಲ. ಬದಲಿಗೆ ಅಂಬಾನಿಯ ರಫ್ತು ವ್ಯವಹಾರ ಬೆಟ್ಟದಷ್ಟಾಗಿದೆ. ಟ್ರಂಪ್ ಮಾತಿಗೆ ಮೋದಿ ನಿರುತ್ತರರಾಗಿದ್ದಾರೆ...
‘ರಷ್ಯಾದಿಂದ ಇನ್ನುಮುಂದೆ ಕಚ್ಚಾ ತೈಲ ಖರೀದಿಸುವುದಿಲ್ಲ ಎಂದು ನನ್ನ ಸ್ನೇಹಿತ, ಭಾರತದ ಪ್ರಧಾನಿ ನರೇಂದ್ರ ಮೋದಿ ಅವರು ಭರವಸೆ ನೀಡಿದ್ದಾರೆ’ ಎಂದು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಹೇಳಿದ್ದಾರೆ.
ಮುಂದುವರೆದು ಟ್ರಂಪ್, ‘ಭಾರತ ಖರೀದಿಸುತ್ತಿರುವ ಕಚ್ಚಾ ತೈಲದ ವಹಿವಾಟು ಹೆಚ್ಚಾಗಿದ್ದು, ಆ ಹಣವನ್ನು ರಷ್ಯಾ, ಉಕ್ರೇನ್ ಮೇಲಿನ ಯುದ್ಧಕ್ಕೆ ಬಳಸುತ್ತಿದೆ. ಇಲ್ಲಿಯವರೆಗೆ 15 ಲಕ್ಷಕ್ಕೂ ಅಧಿಕ ಮಂದಿ ಪ್ರಾಣ ಕಳೆದುಕೊಂಡಿದ್ದಾರೆ. ಭಾರತ ಕಚ್ಚಾ ತೈಲ ಖರೀದಿ ನಿಲ್ಲಿಸುವ ಮೂಲಕ ಉಕ್ರೇನ್ ಜನರ ಪ್ರಾಣ ಉಳಿಸಿದಂತಾಗುತ್ತದೆ’ ಎಂದು ಶಾಂತಿಧೂತನ ಪೋಸು ಕೊಟ್ಟಿದ್ದಾರೆ.
ಅಮೆರಿಕ ಅಧ್ಯಕ್ಷ ಟ್ರಂಪ್ ಮಾತಿಗೆ ಭಾರತ ಸರ್ಕಾರದ ಕಡೆಯಿಂದ ಪ್ರಧಾನಿ ಮೋದಿಯವರು, ಮಾತುಕತೆ ನಡೆದಿದೆ ಅಥವಾ ನಡೆದಿಲ್ಲ; ಒಪ್ಪಿಗೆ ಕೊಟ್ಟಿದ್ದೇನೆ ಅಥವಾ ಕೊಟ್ಟಿಲ್ಲ ಎಂದು ಹೇಳಿಲ್ಲ. ಮೌನಕ್ಕೆ ಶರಣಾಗಿದ್ದಾರೆ. ಮೋದಿಯವರ ಮೌನ ಟ್ರಂಪ್ಗೆ, ಸಮ್ಮತಿಯ ಲಕ್ಷಣ ಎನಿಸಿದ್ದರೆ ಆಶ್ಚರ್ಯವಿಲ್ಲ.
ಆದರೆ, ಭಾರತದ ವಿದೇಶಾಂಗ ಇಲಾಖೆ ವಕ್ತಾರ ರಣಧೀರ ಜೈಸ್ವಾಲ್, ‘ಭಾರತದ ಗ್ರಾಹಕರ ಹಿತಾಸಕ್ತಿ ಕಾಪಾಡುವುದೇ ನಮ್ಮ ಆದ್ಯತೆಯಾಗಿದೆ. ಅಮೆರಿಕ-ಭಾರತದ ನಡುವೆ ಯಾವುದೇ ದೂರವಾಣಿ ಸಂಭಾಷಣೆ ನಡೆದಿಲ್ಲ’ ಎಂದು ಸ್ಪಷ್ಟಪಡಿಸಿದ್ದಾರೆ.
ಏತನ್ಮಧ್ಯೆ, ಭಾರತದಲ್ಲಿನ ರಷ್ಯಾ ರಾಯಭಾರಿ ಡೆನಿಸ್ ಅಲಿಪೊವ್ ಅವರಿಗೆ ಟ್ರಂಪ್ ಹೇಳಿಕೆ ಬಗ್ಗೆ ಕೇಳಿದಾಗ, ‘ಇದು ಭಾರತ ಸರ್ಕಾರಕ್ಕೆ ಸಂಬಂಧಿಸಿದ ವಿಚಾರ. ಭಾರತವು ತನ್ನ ಹಿತಾಸಕ್ತಿ ಗಮನದಲ್ಲಿರಿಸಿಕೊಂಡು, ರಷ್ಯಾದ ಜೊತೆಗೆ ಇಂಧನ ಒಪ್ಪಂದ ಮಾಡಿಕೊಂಡಿದೆ’ ಎಂದಷ್ಟೇ ಹೇಳಿದ್ದಾರೆ.
ಇದನ್ನು ಓದಿದ್ದೀರಾ?: ಬೆಂಗಳೂರಿಗೂ ಸದ್ದಿಲ್ಲದೆ ಬಂತು ಡಿಜಿಟಲ್ ಅರೆಸ್ಟ್ ಕಂಪನಿ: ಭಯ ಬಿಡಿ ಜಾಗೃತೆ ವಹಿಸಿ
ಅಂದರೆ, ಭಾರತದ ಒಲವು-ನಿಲುವುಗಳ ಬಗ್ಗೆ ಮಾತನಾಡಬೇಕಾದವರು ಮೌನ ವಹಿಸಿದ್ದಾರೆ. ಭಾರತ ನಿರ್ವಹಿಸಬೇಕಾದ ಪಾತ್ರವನ್ನು ಬೇರೆಯವರು ದುರುಪಯೋಗಪಡಿಸಿಕೊಳ್ಳುತ್ತಿದ್ದಾರೆ. ಇದರಿಂದ ಒಂದಂತೂ ಸ್ಪಷ್ಟ: ಭಾರತದ ವಿದೇಶಾಂಗ ನೀತಿ ಹಳಿತಪ್ಪಿದೆ. ಏಕೆಂದರೆ, ವಿದೇಶಾಂಗ ನೀತಿ ಎನ್ನುವುದು ದೇಶದ ಹಿತಾಸಕ್ತಿಗಳ ಸಂರಕ್ಷಣೆಯಲ್ಲಿ ಮುಖ್ಯಪಾತ್ರ ವಹಿಸುತ್ತದೆ. ದೇಶವೊಂದರ ವಿದೇಶಾಂಗ ನೀತಿ ಏಕಕಾಲಕ್ಕೆ ಆ ದೇಶ ಹಾಗೂ ಅದು ವಿಶ್ವದ ವಿವಿಧ ದೇಶಗಳೊಂದಿಗೆ ಹೊಂದಿರುವ ಸಂಬಂಧವನ್ನು ವ್ಯಾಖ್ಯಾನಿಸುತ್ತದೆ.

ಇಲ್ಲಿ ಆ ಸಂಬಂಧ, ಸ್ನೇಹದ ನೆಪದಲ್ಲಿ ದುರುಪಯೋಗವಾಗುತ್ತಿದೆ. ಅಮೆರಿಕ ಅಧ್ಯಕ್ಷ ಟ್ರಂಪ್, ತಮ್ಮ ವ್ಯಾಪ್ತಿ ಮೀರಿ ಮಾತನಾಡುತ್ತಿದ್ದಾರೆ. ಅದನ್ನು ಅಲ್ಲಗಳೆಯುವಲ್ಲಿ ಭಾರತದ ಪ್ರಧಾನಿ ಮೋದಿಯವರು ಮುಂದಾಗದಿರುವುದು ಹಲವು ಅನುಮಾನಗಳಿಗೆ ಆಸ್ಪದವೀಯುತ್ತಿದೆ. ಅದು ದೇಶದ ವಿದೇಶಾಂಗ ನೀತಿಗೆ ಧಕ್ಕೆ ತರುತ್ತಿದೆ.
ಟ್ರಂಪ್ ಪ್ರಸ್ತಾಪಿಸಿರುವ, ರಷ್ಯಾದಿಂದ ಕಚ್ಚಾ ತೈಲ ಆಮದು ಮಾಡಿಕೊಳ್ಳುತ್ತಿರುವ ವಿಚಾರವನ್ನು ಗಮನಿಸುವುದಾದರೆ, ಭಾರತ ಮತ್ತು ರಷ್ಯಾ ದೇಶಗಳ ನಡುವಿನ ಕಚ್ಚಾ ತೈಲ ಒಪ್ಪಂದದಲ್ಲಿ, ಅತಿ ಹೆಚ್ಚು ಲಾಭ ಪಡೆಯುತ್ತಿರುವುದು ಭಾರತ ಸರ್ಕಾರವಲ್ಲ; ಭಾರತದ ಪ್ರಜೆಗಳೂ ಅಲ್ಲ; ಕಾರ್ಪೊರೇಟ್ ಕುಳ ರಿಲಯನ್ಸ್ ಅಂಬಾನಿ.
ರಷ್ಯಾದಿಂದ ಕಚ್ಚಾ ತೈಲ ಆಮದು ಮಾಡಿಕೊಳ್ಳಲು, ಆ ಸರ್ಕಾರದೊಂದಿಗೆ ಮಾತುಕತೆ, ಒಪ್ಪಂದ ಮಾಡಿಕೊಳ್ಳುವವರು ಭಾರತದ ಪ್ರಧಾನಿ ಮೋದಿಯವರು. ಆದರೆ, ರಷ್ಯಾದಿಂದ ಬರುತ್ತಿರುವ ಕಚ್ಚಾ ತೈಲದಲ್ಲಿ ಭಾರತ ಸರ್ಕಾರದ ಸ್ವಾಮ್ಯದ ರಿಫೈನರಿಗಳಾದ ಇಂಡಿಯನ್ ಆಯಿಲ್ ಕಾರ್ಪೊರೇಷನ್(IOCL), ಭಾರತ್ ಪೆಟ್ರೋಲಿಯಂ ಕಾರ್ಪೊರೇಷನ್ ಲಿಮಿಟೆಡ್(BPCL) ಮತ್ತು ಹಿಂದೂಸ್ತಾನ್ ಪೆಟ್ರೋಲಿಯಂ ಕಾರ್ಪೊರೇಷನ್ ಲಿಮಿಟೆಡ್(HPCL)ಗಳ ಪಾಲು ಕೇವಲ ಶೇ. 15ರಿಂದ 20ರಷ್ಟು ಮಾತ್ರ. ಉಳಿದ ಪಾಲಿನಲ್ಲಿ ರಿಲಯನ್ಸ್ ಕಂಪನಿಯದು ಶೇ. 35ರಿಂದ 40ರಷ್ಟಾದರೆ, ಶೇ. 40ರಿಂದ 45ರಷ್ಟು ಖಾಸಗಿ/ಇತರ ರಿಫೈನರಿಗಳಿಗೆ (ನಯಾರಾ, ಎಂಆರ್ಪಿಎಲ್, ಚನ್ನೈ ಪೆಟ್ರೋಕೆಮ್) ಸೇರುತ್ತದೆ.
ಅದರಲ್ಲೂ ಸರ್ಕಾರಿ ಸ್ವಾಮ್ಯದ IOCL, BPCL, HPCL(ಅಮೃತಸರ, ಕೊಚ್ಚಿ, ಮಂಗಳೂರು)ಗಳ ರಿಫೈನರಿಗಳು ಮಧ್ಯಪ್ರಾಚ್ಯ/ಯುಎಸ್ ತೈಲಕ್ಕೆ ಹೆಚ್ಚು ಅನುಕೂಲಕರ ಸಂಸ್ಕರಣ ಘಟಕಗಳಾಗಿದ್ದು, ರಷ್ಯಾ ಕಚ್ಚಾ ತೈಲ ಸಂಸ್ಕರಣೆಗೆ ಒದಗಿ ಬರುವುದಿಲ್ಲ. ಆದರೆ, ಭಾರತದ ಅತಿದೊಡ್ಡ ರಿಫೈನರಿ ಎಂದು ಹೆಸರಾಗಿರುವ ರಿಲಯನ್ಸ್ ಒಡೆತನದ ಜಾಮನಗರ್ ರಿಫೈನರಿ ರಷ್ಯಾದ ತೈಲಕ್ಕೆ ಅತ್ಯಂತ ಅನುಕೂಲಕರವಾಗಿದ್ದು, ಪ್ರತಿದಿನ 5 ಲಕ್ಷದಿಂದ 7 ಲಕ್ಷ ಬ್ಯಾರೆಲ್ವರೆಗೆ ಖರೀದಿಸುತ್ತಿದೆ. ರಷ್ಯಾದಿಂದ ಬರುವ ಕಚ್ಚಾ ತೈಲದ ಬಹುಭಾಗ ಖಾಸಗಿ ಒಡೆತನದ ಕಂಪನಿಗಳ ಪಾಲಾಗುತ್ತಿದೆ. ಅದನ್ನು ಪೆಟ್ರೋಲ್, ಡೀಸೆಲ್ ಮತ್ತು ವಾಯುಯಾನ ಟರ್ಬೈನ್ ಇಂಧನವಾಗಿ ಸಂಸ್ಕರಿಸಲಾಗುತ್ತಿದೆ.
ಇದನ್ನು ಓದಿದ್ದೀರಾ?: ಕ್ಯಾನ್ಸರ್ ಆಸ್ಪತ್ರೆಯ ಬೆಡ್ ಮೇಲಿಂದ ಕಾಕಡ ಮಲ್ಲಿಗೆ ಬೆಳೆಯುವ ಕನಸು ಕಂಡ ʼನೀರ್ ಸಾಬ್ʼ
2022ರಲ್ಲಿ, ರಿಲಯನ್ಸ್ ಶೇ. 8 ಮತ್ತು ನಯಾರಾ ಶೇ. 7ರಷ್ಟು ಸಣ್ಣ ಶೇರುಗಳನ್ನು ಹೊಂದಿದ್ದವು. ಆಗ ಈ ಕಂಪನಿಗಳ ಖರೀದಿ ಕೇವಲ ಶೇ. 27ರಷ್ಟಿತ್ತು. 2025ರಲ್ಲಿ, ಕೇವಲ ಮೂರು ವರ್ಷಗಳ ಅಂತರದಲ್ಲಿ, ಅವುಗಳ ಕಚ್ಚಾ ತೈಲ ಖರೀದಿ ಶೇ. 72 ರಷ್ಟಾಗಿದೆ. ಅದರಲ್ಲೂ ರಷ್ಯಾ-ಉಕ್ರೇನ್ ಯುದ್ಧ ಆರಂಭವಾದ ನಂತರ, ಕಚ್ಚಾ ತೈಲ ಬೆಲೆ ಇನ್ನಷ್ಟು ಇಳಿಕೆಯಾದ ನಂತರ, ಭಾರತದ ಆಮದು ಪ್ರಮಾಣವೂ ಹೆಚ್ಚಾಗಿದೆ. ಸರ್ಕಾರಿ ಸಂಸ್ಕರಣಾಗಾರರು ಪ್ರಾಥಮಿಕವಾಗಿ ದೇಸಿ ಮಾರುಕಟ್ಟೆಗೆ ಸರಬರಾಜು ಮಾಡಿದರೆ; ರಿಲಯನ್ಸ್ ಮತ್ತು ನಯಾರಾದಂತಹ ಖಾಸಗಿ ಸಂಸ್ಕರಣಾಗಾರರು ಯುರೋಪ್, ಯುಎಇ, ಸಿಂಗಾಪುರ ಮತ್ತು ಇತರ ದೇಶಗಳಿಗೆ ರಫ್ತು ಮಾಡುತ್ತಿದ್ದಾರೆ. ತಮ್ಮ ವ್ಯಾಪಾರ-ವಹಿವಾಟು ಮತ್ತು ಲಾಭದ ಪ್ರಮಾಣವನ್ನು ವೃದ್ಧಿಸಿಕೊಳ್ಳುತ್ತಿದ್ದಾರೆ.
ಅಂತಾರಾಷ್ಟ್ರೀಯ ಮಾಧ್ಯಮಗಳಲ್ಲಿ ಉಲ್ಲೇಖಿಸಲಾದ ಅಂಕಿ-ಅಂಶಗಳ ಪ್ರಕಾರ, ಭಾರತದ ಸಂಸ್ಕರಣಾಗಾರಗಳು ರಿಯಾಯಿತಿ ದರದಲ್ಲಿ ರಷ್ಯಾದ ಕಚ್ಚಾ ತೈಲವನ್ನು ಆಮದು ಮಾಡಿಕೊಳ್ಳುವುದರಿಂದ 16 ಬಿಲಿಯನ್ ಡಾಲರ್ ಹೆಚ್ಚುವರಿ ಲಾಭವನ್ನು ಗಳಿಸಿವೆ. ಬ್ಲೂಮ್ಬರ್ಗ್ ಮತ್ತು ಕೆಪ್ಲರ್ ಅಂಕಿ-ಅಂಶಗಳ ಪ್ರಕಾರ, 2024-25ನೇ ಹಣಕಾಸು ವರ್ಷದಲ್ಲಿ, ರಿಲಯನ್ಸ್ ಮತ್ತು ನಯಾರಾ ಸಂಸ್ಕರಣಾಗಾರಗಳು ಒಟ್ಟಾಗಿ ಪೆಟ್ರೋಲಿಯಂ ಉತ್ಪನ್ನಗಳ ರಫ್ತಿನಲ್ಲಿ 60 ಶತಕೋಟಿ ಡಾಲರ್ ವಹಿವಾಟು ನಡೆಸಿವೆ. ಸುಮಾರು 50 ಸಾವಿರ ಕೋಟಿಗೂ ಹೆಚ್ಚು ಲಾಭವನ್ನು ರಿಲಯನ್ಸ್ ಕಂಪನಿಯೊಂದೇ ಗಳಿಸಿದೆ.

ಅಂದರೆ, ರಷ್ಯಾದಿಂದ ಕಚ್ಚಾ ತೈಲ ಅತಿ ಕಡಿಮೆ ಬೆಲೆಗೆ ದೊರೆತರೂ ಅದು ಭಾರತದ ಪ್ರಜೆಗಳಿಗೆ ದಕ್ಕುತ್ತಿಲ್ಲ. ಅವರ ವಾಹನಗಳಿಗೆ ತುಂಬಿಸುವ ಪೆಟ್ರೋಲ್, ಡೀಸೆಲ್ ಬೆಲೆ ಕಡಿಮೆಯಾಗಿಲ್ಲ. ಬದಲಿಗೆ ಅಂಬಾನಿಯ ರಫ್ತು ವ್ಯವಹಾರ ಬೆಟ್ಟದಷ್ಟಾಗಿದೆ. ಅವರ ತಿಜೋರಿ ತುಂಬುತ್ತಿದೆ.
ಮತ್ತೊಂದು ಮಗ್ಗುಲಲ್ಲಿ ಉಕ್ರೇನ್ ಯುದ್ಧ ನಿಲ್ಲಿಸಿ ಅಂತಾರಾಷ್ಟ್ರೀಯ ಮಟ್ಟದಲ್ಲಿ ಶಾಂತಿಧೂತ ಎನಿಸಿಕೊಳ್ಳುವ ಟ್ರಂಪ್ ಹಪಾಹಪಿ. ಅಂಬಾನಿಗಳಿಂದ ಕೋಟ್ಯಂತರ ರೂಪಾಯಿಗಳ ದೇಣಿಗೆ ಸ್ವೀಕರಿಸಿ ಚುನಾವಣೆಗಳನ್ನು ಗೆದ್ದು ಅಧಿಕಾರದಲ್ಲಿ ಮುಂದುವರೆಯುವ ಮೋದಿ ಬಯಕೆ. ಮೋದಿಯ ನೆರವಿನಿಂದ ಅಂತಾರಾಷ್ಟ್ರೀಯ ಮಟ್ಟದಲ್ಲಿ ವ್ಯವಹಾರ ಕುದುರಿಸುತ್ತಿರುವ, ಹಣ ಗಳಿಸುತ್ತಿರುವ ಅಂಬಾನಿ. ಈ ಮೂವರ ಸ್ವಾರ್ಥಕ್ಕೆ ದೇಶದ ಹಿತಾಸಕ್ತಿ ಬಲಿಯಾಗಿದೆ.
ವಸ್ತುಸ್ಥಿತಿ ಹೀಗಿರುವಾಗ, ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ರಷ್ಯಾದಿಂದ ಕಚ್ಚಾ ತೈಲ ಆಮದು ನಿಲ್ಲಿಸಿ ಎಂದರೆ, ನಿಲ್ಲಿಸಲಾಗುತ್ತದೆಯೇ? ಖಾಸಗಿ ಕಂಪನಿಗಳಿಗೆ ಹರಿದುಹೋಗುತ್ತಿರುವ ಕೋಟ್ಯಂತರ ರೂಪಾಯಿ ನಿಂತರೆ, ಮೋದಿ ಮಿತ್ರ ಅಂಬಾನಿ ಸುಮ್ಮನಿರುತ್ತಾರೆಯೇ?
ಹೀಗಾಗಿ 56 ಇಂಚಿನ ಎದೆಯುಳ್ಳ ಪ್ರಧಾನಿ ನರೇಂದ್ರ ಮೋದಿಯವರು, ತಮ್ಮ ಆಪ್ತ ಸ್ನೇಹಿತ ಟ್ರಂಪ್ ಆಡುವ ಮಾತುಗಳಿಗೆ ನಿರುತ್ತರರಾಗಿದ್ದಾರೆ. ಅಂತಾರಾಷ್ಟ್ರೀಯ ಮಟ್ಟದಲ್ಲಿ ದೇಶದ ವಿದೇಶಾಂಗ ನೀತಿಗೆ ಧಕ್ಕೆ ತರುತ್ತಿದ್ದಾರೆ.

ಲೇಖಕ, ಪತ್ರಕರ್ತ




