ಪ್ರಸಿದ್ಧ ಶಬರಿಮಲೆ ಅಯ್ಯಪ್ಪ ದೇವಸ್ಥಾನದ ಗರ್ಭಗುಡಿ ಹೊರಗಣ 4.45 ಕೆಜಿ ಚಿನ್ನ ನಾಪತ್ತೆ ಪ್ರಕರಣವು ತೀವ್ರ ವಿವಾದಕ್ಕೆ ಎಡೆ ಮಾಡಿಕೊಟ್ಟಿದೆ. ವಿಧಾನಸಭೆಯಲ್ಲಿ ಗದ್ದಲ ಎಬ್ಬಿಸಿ ಮಾರ್ಷಲ್ಗಳ ಮೇಲೆ ದಾಳಿ ನಡೆಸಿದ ಆರೋಪದಲ್ಲಿ ಮೂವರು ಕಾಂಗ್ರೆಸ್ ಶಾಸಕರನ್ನು ಕಲಾಪದಿಂದ ಅಮಾನತುಗೊಳಿಸಲಾಗಿದೆ.
ಶಬರಿಮಲೆ ಅಯ್ಯಪ್ಪ ದೇವಸ್ಥಾನದಲ್ಲಿ ಚಿನ್ನ ನಾಪತ್ತೆ ಪ್ರಕರಣವು ಕೇರಳದಲ್ಲಿ ತೀವ್ರ ರಾಜಕೀಯ ಕೋಲಾಹಲ ಸೃಷ್ಟಿಸಿದೆ. ವಿಧಾನಸಭೆಯಲ್ಲಿ ತೀವ್ರ ಗದ್ದಲಕ್ಕೆ ಎಡೆಮಾಡಿಕೊಟ್ಟಿದೆ. ಗುರುವಾರ(ಅಕ್ಟೋಬರ್ 9) ಪ್ರತಿಭಟನೆ ತೀವ್ರಗೊಂಡಿದ್ದು, ಮಾರ್ಷಲ್ಗಳ ಮೇಲೆ ಹಲ್ಲೆ ನಡೆದಿದೆ. ಈ ಬೆನ್ನಲ್ಲೇ ಮೂವರು ಕಾಂಗ್ರೆಸ್ ಶಾಸಕರುಗಳನ್ನು ವಿಧಾನಸಭೆಯಿಂದ ಅಮಾನತುಗೊಳಿಸಲಾಗಿದೆ.
ಇದನ್ನು ಓದಿದ್ದೀರಾ? ಶಬರಿಮಲೆ ಚಿನ್ನ ನಾಪತ್ತೆ ಪ್ರಕರಣ: ದೇವಸ್ವಂ ಅಧಿಕಾರಿ ಅಮಾನತು
ಶಬರಿಮಲೆ ಚಿನ್ನ ನಾಪತ್ತೆ ಪ್ರಕರಣದಲ್ಲಿ ಕೇರಳ ದೇವಸ್ವಂ ಸಚಿವ ವಿ ಎನ್ ವಾಸವನ್ ಅವರು ರಾಜೀನಾಮೆ ನೀಡಬೇಕು ಎಂದು ಒತ್ತಾಯಿಸಿ ಅಕ್ಟೋಬರ್ 6ರಿಂದ ವಿಧಾನಸಭೆಯಲ್ಲಿ ವಿಪಕ್ಷಗಳು ಪ್ರತಿಭಟನೆ ನಡೆಸುತ್ತಿದೆ. ಇಂದೂ ಪ್ರತಿಭಟನೆ ಮುಂದುವರೆದಿದ್ದು, ಹಲವು ಗಂಟೆಗಳ ಕಾಲ ಕಲಾಪ ರದ್ದಾಗಿದೆ.
ಪ್ರತಿಭಟನೆ ವೇಳೆ ಘರ್ಷಣೆಯಾಗಿದ್ದು, ಮಾರ್ಷಲ್ಗಳ ಮೇಲೆ ಹಲ್ಲೆ ನಡೆಸಲಾಗಿದೆ. ಸದ್ಯ ಸ್ಪೀಕರ್ ಎ.ಎನ್. ಶಮ್ಸೀರ್ ಅವರು ಕಾಂಗ್ರೆಸ್ನ ಮೂವರು ಶಾಸಕರುಗಳಾದ ರೋಜಿ ಎಂ. ಜಾನ್, ಎಂ. ವಿನ್ಸೆಂಟ್, ಸನೀಷ್ ಕುಮಾರ್ ಜೋಸೆಫ್ ಅವರನ್ನು ಕಲಾಪದ ಇನ್ನುಳಿದ ಅವಧಿಗಳಿಗೆ ಅಮಾನತುಗೊಳಿಸಿದ್ದಾರೆ. ಕೇರಳ ವಿಧಾನಸಭೆ ಕಲಾಪವು ನಾಳೆ(ಅಕ್ಟೋಬರ್ 10)ರಂದು ಕೊನೆಯಾಗಲಿದೆ.
ಏನಿದು ಶಬರಿಮಲೆ ಚಿನ್ನ ನಾಪತ್ತೆ ಪ್ರಕರಣ?
ಪ್ರಸಿದ್ಧ ಶಬರಿಮಲೆ ಅಯ್ಯಪ್ಪ ದೇವಸ್ಥಾನದ ಗರ್ಭಗುಡಿಯ ಸಮೀಪ ಇರುವ ಮೂರ್ತಿಗಳ ಚಿನ್ನ ಲೇಪಿತ ತಾಮ್ರದ ಕವಚಗಳಿಂದ ಸುಮಾರು 4.45 ಕೆಜಿಯಷ್ಟು ಚಿನ್ನ ನಾಪತ್ತೆಯಾಗಿದೆ. ತೂಕದಲ್ಲಿ ವ್ಯತ್ಯಾಸ ಕಂಡುಬಂದಾಗ ಚಿನ್ನ ನಾಪತ್ತೆಯಾಗಿರುವುದು ಬೆಳಕಿಗೆ ಬಂದಿದೆ. ಸದ್ಯ ಈ ಪ್ರಕರಣವು ರಾಜಕೀಯವಾಗಿ ತೀವ್ರ ಚರ್ಚೆಗೆ ಗ್ರಾಸವಾಗಿದೆ. ಚಿನ್ನ ನಾಪತ್ತೆಯ ಹಿಂದೆ ಕೇರಳ ಸರ್ಕಾರ ಮತ್ತು ದೇವಸ್ವಂ ಮಂಡಳಿ ಅಧಿಕಾರಿಗಳ ಕೈವಾಡವಿದೆ ಎಂದು ವಿರೋಧ ಪಕ್ಷಗಳು ಆರೋಪಿಸುತ್ತಿದೆ.
ಸದ್ಯ ಈ ಪ್ರಕರಣದ ತನಿಖೆಗಾಗಿ ವಿಶೇಷ ತನಿಖಾ ತಂಡ(ಎಸ್ಐಟಿ) ರಚನೆಗೆ ಕೇರಳ ಹೈಕೋರ್ಟ್ ಆದೇಶಿಸಿದೆ. ಈಗಾಗಲೇ ಅಕ್ರಮದಲ್ಲಿ ಭಾಗಿಯಾದ ಆರೋಪದಲ್ಲಿ ತಿರುವಾಂಕೂರು ದೇವಸ್ವಂ ಮಂಡಳಿಯ (TDB) ದೇವಸ್ವಂ ಉಪ ಆಯುಕ್ತರಾಗಿದ್ದ ಬಿ. ಮುರಾರಿ ಬಾಬು ಅವರನ್ನು ಸೇವೆಯಿಂದ ಅಮಾನತುಗೊಳಿಸಲಾಗಿದೆ. ಈ ಪ್ರಕರಣ ನಡೆದ ಸಂದರ್ಭದಲ್ಲಿ ಬಾಬು ಅವರು ಆಡಳಿತ ಅಧಿಕಾರಿಯಾಗಿ ಸೇವೆ ಸಲ್ಲಿಸುತ್ತಿದ್ದರು. ಬಾಬು ಸಲ್ಲಿಸಿದ ವರದಿಯಲ್ಲಿ ವಿಗ್ರಹಗಳ ಚಿನ್ನ ಲೇಪಿತ ತಾಮ್ರವನ್ನು ಬರೀ ತಾಮ್ರವೆಂದು ಉಲ್ಲೇಖಿಸಲಾಗಿದೆ. ಇದರಲ್ಲಿ ಅಧಿಕಾರಿಯ ಗಂಭೀರ ಲೋಪವಿದೆ ಎಂದು ಇತ್ತೀಚೆಗೆ ನಡೆದ ದೇವಸ್ವಂ ಮಂಡಳಿಯ ಸಭೆಯಲ್ಲಿ ನಿರ್ಧರಿಸಿದ್ದು ಬಳಿಕ ಬಾಬು ಅವರನ್ನು ಅಮಾನತುಗೊಳಿಸಲಾಗಿದೆ.
ಆದರೆ ಬಾಬು ಮಾತ್ರ ಈ ಆರೋಪಗಳನ್ನು ಅಲ್ಲಗಳೆದಿದ್ದಾರೆ. “ಗರ್ಭಗುಡಿಯ ಬಾಗಿಲಿನ ಎರಡೂ ಬದಿಯಲ್ಲಿರುವ ಮೂರ್ತಿಗಳಿಗೆ ತೆಳುವಾದ ಚಿನ್ನದ ಲೇಪನವನ್ನು ಮಾತ್ರ ಹಾಕಲಾಗಿತ್ತು. 1998ರಲ್ಲಿ ಕೈಗಾರಿಕೋದ್ಯಮಿ ವಿಜಯ್ ಮಲ್ಯ ಅವರ ಪ್ರಾಯೋಜಕತ್ವದಲ್ಲಿ ಗರ್ಭಗುಡಿಗೆ ಚಿನ್ನ ಲೇಪಿಸಲಾಗಿತ್ತು. ಅದು ಸವೆದುಹೋಗಿ ಬರೀ ತಾಮ್ರದ ತಟ್ಟೆ ಮಾತ್ರ ಉಳಿದಿತ್ತು. ಮೂಲ ಲೋಹ ತಾಮ್ರವಾಗಿರುವ ಕಾರಣದಿಂದಾಗಿ ವರದಿಯಲ್ಲಿ ತಾಮ್ರವೆಂದೇ ಉಲ್ಲೇಖಿಸಲಾಗಿದೆ” ಎಂದು ಬಾಬು ಮಾಧ್ಯಮಗಳಿಗೆ ಮಾಹಿತಿ ನೀಡಿದ್ದಾರೆ.
ಇದನ್ನು ಓದಿದ್ದೀರಾ? ಶಬರಿಮಲೆಗೆ ಮಹಿಳೆಯರ ಪ್ರವೇಶ: ಸುಪ್ರೀಂಗೆ ಹೊಸ ಪ್ರಮಾಣಪತ್ರ ಸಲ್ಲಿಸುವ ಅಗತ್ಯವಿಲ್ಲ: ಟಿಡಿಬಿ
ಸದ್ಯ ಈ ಪ್ರಕರಣವು ಕೇರಳದಲ್ಲಿ ರಾಜಕೀಯ ಕೋಲಾಹಲಕ್ಕೆ ಕಾರಣವಾಗಿದೆ. ಸರ್ಕಾರ ಮತ್ತು ದೇವಸ್ವಂ ಮಂಡಳಿ ಅಧಿಕಾರಿಗಳ ದೇವಸ್ಥಾನದಲ್ಲಿ ಚಿನ್ನ ಲೂಟಿ ಮಾಡಿದ್ದಾರೆ ಎಂದು ವಿರೋಧ ಪಕ್ಷಗಳು ಆರೋಪಿಸಿದೆ. ಹಾಗೆಯೇ ಸಚಿವರು ಮತ್ತು ಮಂಡಳಿ ಅಧ್ಯಕ್ಷರು ರಾಜೀನಾಮೆ ನೀಡಬೇಕು, ಪ್ರಕರಣದ ಸಿಬಿಐ ತನಿಖೆ ನಡೆಯಬೇಕು ಎಂದು ಒತ್ತಾಯಿಸಿವೆ.
ಈ ಹಿಂದೆ ತಿರುವನಂತಪುರದಲ್ಲಿರುವ ಪದ್ಮನಾಭಸ್ವಾಮಿ ದೇವಾಲಯದ ನೆಲಮಾಳಿಗೆಯಲ್ಲಿ ಅಪಾರ ಪ್ರಮಾಣದಲ್ಲಿ ಚಿನ್ನ, ಬೆಳ್ಳಿ, ವಜ್ರ ಮತ್ತು ಅಮೂಲ್ಯ ವಸ್ತುಗಳಿದ್ದ ಐದು ಖಜಾನೆಗಳು ಪತ್ತೆಯಾಗಿದ್ದವು. ಖಜಾನೆಯ ಮೌಲ್ಯ 1.5 ಲಕ್ಷ ಕೋಟಿ ರೂಪಾಯಿ ಎಂದು ಅಂದಾಜಿಸಲಾಗಿದೆ. ಈ ಪ್ರಕರಣವೂ ಕೇರಳದಲ್ಲಿ ರಾಜಕೀಯ ಚರ್ಚೆಗೆ ಗ್ರಾಸವಾಗಿತ್ತು. ಸದ್ಯ ಪ್ರಕರಣವು ಸುಪ್ರೀಂ ಕೋರ್ಟ್ ವಿಚಾರಣೆಗೆ ಒಳಪಡುತ್ತಿವೆ.
ಖಜಾನೆ ಪತ್ತೆಯಾದ ಬಳಿಕ ದೇವಾಲಯದ ಆಡಳಿತ, ಸಂಪತ್ತು ನಿರ್ವಹಣೆಯಲ್ಲಿ ರಾಜ್ಯ ಸರ್ಕಾರ ಮತ್ತು ಖಾಸಗಿ ವ್ಯಕ್ತಿಗಳ ಪಾತ್ರವಿದೆ ಎಂದು ಆರೋಪಿಸಲಾಗಿತ್ತು. ಇದಾದ ಬಳಿಕ ದೇವಾಲಯದ ನಿರ್ವಹಣೆಗಾಗಿ ತ್ರಿವಾಂಕೂರು ರಾಜಮನೆತನ ಮತ್ತು ದೇವಾಲಯದ ಬಗ್ಗೆ ತಿಳಿದಿರುವ ತಜ್ಞರುಗಳನ್ನು ಒಳಗೊಂಡ ಒಂದು ಸಮಿತಿಯನ್ನು ರಚಿಸಲಾಯಿತು.





