1989ರಲ್ಲಿ ಸಮಸ್ತ ಸೈದ್ಧಾಂತಿಕ ಭಿನ್ನಾಭಿಪ್ರಾಯಗಳಿಂದಾಗಿ ಎರಡು ಬಣಗಳಾಗಿ ವಿಂಗಡನೆಯಾಗಿದೆ. ಎರಡೂ ಬಣಗಳು ಮಸೀದಿಗಳು, ಮದರಸಾಗಳು ಮತ್ತು ಕಾಲೇಜುಗಳ ಮೇಲೆ ನಿಯಂತ್ರಣಗಳನ್ನು ಹೊಂದಿದೆ. ಮಸೀದಿಗಳನ್ನು ನಿರ್ವಹಿಸುತ್ತಿದೆ. ಈ ಬಣಗಳ ಧಾರ್ಮಿಕ ನಾಯಕರುಗಳ ಬೆಂಬಲಿಸುವ ಪಕ್ಷಕ್ಕೆ ಮತ ಚಲಾಯಿಸುವ ನಿರ್ಧಾರ ಮಾಡುವವರು ಅಧಿಕ.
ಕೇರಳ ರಾಜ್ಯ ರಚನೆಯಾಗಿದ್ದು 1956ರಲ್ಲಿ. ಅಂದಿನಿಂದ ಈವರೆಗೆ ಕೇರಳವನ್ನು ಆಳಿದ್ದು ಯುಡಿಎಫ್ ಮತ್ತು ಎಲ್ಡಿಎ. ಬಹುತೇಕವಾಗಿ ಎರಡೂ ಮೈತ್ರಿಕೂಟಗಳು ಒಂದೊಂದೇ ಅವಧಿಗೆ ಕೇರಳದ ಅಧಿಕಾರ ಚುಕ್ಕಾಣಿಯನ್ನು ಹಿಡಿದುಕೊಂಡಿದೆ. ಇಷ್ಟು ವರ್ಷಗಳಾಗದರೂ ಕೇರಳದ ಚುನಾವಣೆಯಲ್ಲಿ ಧಾರ್ಮಿಕ ಸಂಘಟನೆಗಳ ಪ್ರಭಾವವೂ ಅಧಿಕವಾಗಿಯೇ ಉಳಿದಿದೆ. ಈ ಬಾರಿ ಬಿಜೆಪಿ ಕ್ರೈಸ್ತರ ಮತ ಸೆಳೆಯುವ ಯತ್ನ ಮಾಡುತ್ತಿದೆ ಮತ್ತು ಯುಡಿಎಫ್ ಕೈ ಜಾರಿ ಕ್ರೈಸ್ತ ಮತಗಳು ಎಲ್ಡಿಎಫ್ನತ್ತ ವಾಲುತ್ತಿದೆ. ಆದ್ದರಿಂದ ಕ್ರೈಸ್ತರ ಮತಗಳು ನಿರ್ಣಾಯಕ. ಕ್ರೈಸ್ತರು ಮಾತ್ರವಲ್ಲ ಕೇರಳದಲ್ಲಿ ಮುಸ್ಲಿಮರ ಮತಗಳೂ ಅಧಿಕಾರಕ್ಕೆ ಯಾರು ಏರಬೇಕು ಎಂಬುದನ್ನು ನಿರ್ಣಯಿಸುವಲ್ಲಿ ಪ್ರಮುಖ ಪಾತ್ರ ವಹಿಸುತ್ತದೆ.
2011ರ ಜನಗಣತಿಯ ಪ್ರಕಾರ ಕೇರಳದ ಒಟ್ಟು ಜನಸಂಖ್ಯೆಯ ಶೇ.26.56ರಷ್ಟು ಮುಸ್ಲಿಮರು ಇದ್ದು, ಸರ್ಕಾರ ರಚಿಸಲು ಬಯಸುವ ಯಾವುದೇ ಮೈತ್ರಿಕೂಟಕ್ಕೂ ಈ ಮತಗಳು ನಿರ್ಣಾಯಕ. ಸದ್ಯ ವಿಧಾನಸಭೆ ಚುನಾವಣೆ ಸಮೀಪಿಸುತ್ತಿರುವ ಕಾರಣ ಇದೀಗ ಆಡಳಿತಾರೂಢ ಸಿಪಿಐ(ಎಂ) ನೇತೃತ್ವದ ಎಲ್ಡಿಎಫ್ ಮತ್ತು ಕಾಂಗ್ರೆಸ್ ನೇತೃತ್ವದ ಯುಡಿಎಫ್ ಪ್ರಭಾವಿ ಮುಸ್ಲಿಂ ನಾಯಕರ ಬೆಂಬಲಗಿಟ್ಟಿಸಿಕೊಳ್ಳುವ ಯತ್ನದಲ್ಲಿದ್ದಾರೆ. ಚುನಾವಣೆ ಗೆಲ್ಲಲು ಈ ಬೆಂಬಲ ಅತ್ಯಗತ್ಯವೂ ಹೌದು. ಈ ಕಣ್ಣೋಟವನ್ನು ಇಟ್ಟುಕೊಂಡೇ ಕೇರಳ ಸರ್ಕಾರ ವಕ್ಫ್ ಮಂಡಳಿಯನ್ನು ಇತ್ತೀಚೆಗೆ ಪುನರ್ರಚಿಸಲು ಮುಂದಾಗಿದ್ದು ಎಂಬುದು ಸ್ಪಷ್ಟ.
ಇದನ್ನು ಓದಿದ್ದೀರಾ? ಕೇರಳ ಚುನಾವಣೆ | ಮುಸ್ಲಿಂ ಮತದಾರರನ್ನು ಪ್ರಭಾವಿಸುವುದೇ ಮುಸ್ಲಿಯಾರ್-ಮೋದಿ ಭೇಟಿ?
ಕೇರಳದ ಮುಸ್ಲಿಂ ಸಮುದಾಯದ ಅತ್ಯಂತ ಪ್ರಭಾವಶಾಲಿ ಮತ್ತು ಅತಿದೊಡ್ಡ ಸುನ್ನಿ ವಿದ್ವಾಂಸರ ಸಂಸ್ಥೆಯಾದ ಸಮಸ್ತ ಕೇರಳ ಜಮೀಯತುಲ್ ಉಲಮಾದ ಮುಶಾವರ (ಸುಪ್ರೀಂ ಕೌನ್ಸಿಲ್) ಸದಸ್ಯ ಉಮ್ಮರ್ ಫೈಜಿ ಮುಕ್ಕಮ್ ಅವರನ್ನು ವಕ್ಫ್ ಮಂಡಳಿಗೆ ನಾಮನಿರ್ದೇಶನ ಮಾಡಿರುವುದು ಈ ರಾಜಕೀಯ ಆಯಾಮದಲ್ಲೇ ನೋಡಲಾಗಿತ್ತು. ಅಷ್ಟು ಮಾತ್ರವಲ್ಲದೆ ಇಂಡಿಯನ್ ಯೂನಿಯನ್ ಮುಸ್ಲಿಂ ಲೀಗ್ (ಐಯುಎಂಎಲ್) ಬಗ್ಗೆ ಅವರ ಬಹಿರಂಗ ಟೀಕೆ ಮತ್ತು ಎಡರಂಗದೊಂದಿಗಿನ ಅವರ ನಿಕಟ ಸಂಪರ್ಕ ವಿಚಾರದಲ್ಲಿ ವಕ್ಫ್ ಮಂಡಳಿಗೆ ಅವರ ಸೇರ್ಪಡೆ ಚರ್ಚೆಗೆ ಕಾರಣವಾಯಿತು.
ಸರ್ಕಾರವು ಅಂತಿಮವಾಗಿ ಕೇರಳ ಲೋಕಸೇವಾ ಆಯೋಗದ (PSC) ಮಾಜಿ ಅಧ್ಯಕ್ಷ ಎಂ.ಕೆ. ಸಕೀರ್ ಅವರನ್ನು ಅಧ್ಯಕ್ಷರನ್ನಾಗಿ ಮಾಡಲಾಯಿತು. ಹಾಗೆಯೇ ರಾಜ್ಯಸಭಾ ಸಂಸದ ಎಎ ರಹೀಮ್, ಕುಟ್ಟಿಯಾಡಿ ಶಾಸಕ ಕೆಪಿ ಕುಂಹಮ್ಮದ್ ಕುಟ್ಟಿ, ಇಸ್ಲಾಮಿಕ್ ವಿದ್ವಾಂಸ ಪಿಯು ಅಲಿ, ಕಾಸರಗೋಡು ಜಿಲ್ಲಾ ಪಂಚಾಯತ್ ಸದಸ್ಯೆ ಸರೀನಾ ಸಲಾಂ, ಕೊಡುಂಗಲ್ಲೂರು ಪುರಸಭೆ ಉಪಾಧ್ಯಕ್ಷೆ ಸುಮಿತಾ ನಿಸಾಫ್, ಉದ್ಯಮಿ ಸಿಕೆ ಉಸ್ಮಾನ್ ಹಾಜಿ ಮತ್ತು ಕಾನೂನು ಇಲಾಖೆಯ ಹೆಚ್ಚುವರಿ ಕಾರ್ಯದರ್ಶಿ ವಿಎಂ ರಹಾನಾ ಅವರನ್ನು ವಕ್ಫ್ ಮಂಡಳಿಯಲ್ಲಿ ಸದಸ್ಯರನ್ನಾಗಿ ಸೇರಿಸಿಕೊಳ್ಳಲಾಯಿತು.
ಕೇಂದ್ರ ತಿದ್ದುಪಡಿ ಮಾಡಿರುವ ವಕ್ಫ್ ಕಾಯ್ದೆಯಡಿಯಲ್ಲಿ ಮುಸ್ಲಿಮೇತರರಿಗೆ ಮೀಸಲಾಗಿರುವ ಎರಡು ಸ್ಥಾನಗಳನ್ನು ಕೇರಳದಲ್ಲಿ ಹಾಗೆಯೇ ಖಾಲಿ ಬಿಡಲಾಗಿದೆ. ಈ ನೇಮಕಾತಿಗಳನ್ನು ನಂತರ ಮಾಡಲಾಗುವುದು ಎಂದು ರಾಜ್ಯ ಹೇಳಿದೆ. ಕೇರಳದಲ್ಲಿ ವಕ್ಫ್ ಮಂಡಳಿ ಮುಗಿದು ಒಂದು ವರ್ಷಕ್ಕೂ ಅಧಿಕ ಸಮಯದ ಬಳಿಕ ಬೋರ್ಡ್ ಅನ್ನು ಪುನರ್ರಚಿಸಲಾಗಿರುವುದು ರಾಜಕೀಯವಾಗಿ ಚರ್ಚೆಗೂ ಗ್ರಾಸವಾಯಿತು. ಎಡರಂಗವು ಸಮಸ್ತವನ್ನು ಇನ್ನಷ್ಟೂ ಸೆಳೆಯುವ ಯತ್ನವೆಂದು ಪರಿಗಣಿಸಲಾಗಿದೆ. ಅಷ್ಟಕ್ಕೂ ಸಮಸ್ತವನ್ನು ಓಲೈಸುವ ಪ್ರಯತ್ನವನ್ನು ಮಾಡುತ್ತಿರುವುದಾದರೂ ಯಾಕೆ?

ಕೇರಳದಲ್ಲಿ ಸಮಸ್ತ ಯಾಕೆ ಮುಖ್ಯ?
ನಾವು ಕೇರಳದಲ್ಲಿ ಸಮಸ್ತದ ರಾಜಕೀಯ ಪರಿಣಾಮಗಳನ್ನು ಅರ್ಥಮಾಡಿಕೊಳ್ಳಬೇಕಾದರೆ, ಮುಸ್ಲಿಮರ ಮತಗಳ ಮೇಲೆ ಸಮಸ್ತ ಬೀರುವ ಪ್ರಭಾವದ ಬಗ್ಗೆ ಅರ್ಥಮಾಡಿಕೊಳ್ಳುವುದು ಮುಖ್ಯ.
1920ರ ದಶಕದಲ್ಲಿ ಸಮಸ್ತ ಸ್ಥಾಪನೆಯಾಗಿದ್ದು, ಕೇರಳದ ಅತ್ಯಂತ ಶಕ್ತಿಶಾಲಿ ಸುನ್ನಿ ಧಾರ್ಮಿಕ ಸಂಘಟನೆ ಎನಿಸಿಕೊಂಡಿದೆ. ರಾಜ್ಯಾದ್ಯಂತ ಧಾರ್ಮಿಕ ಶಿಕ್ಷಣ, ಮಸೀದಿ ಆಡಳಿತ ಮತ್ತು ಮುಸ್ಲಿಂ ದತ್ತಿ ಸಂಸ್ಥೆಗಳನ್ನು ನೋಡಿಕೊಳ್ಳುವುದೇ ಸಮಸ್ತ. ಈ ಸಂಘಟನೆಯು ಅಂದಾಜು 10,000 ರಿಂದ 11,000 ಮದರಸಾಗಳನ್ನು ನಿಯಂತ್ರಿಸುತ್ತಿದೆ ಮತ್ತು ಮಾರ್ಗದರ್ಶನ ನೀಡುತ್ತಿದೆ. ದಕ್ಷಿಣ ಭಾರತದ ಅತಿದೊಡ್ಡ ಧಾರ್ಮಿಕ ಶಿಕ್ಷಣ ವ್ಯವಸ್ಥೆಯನ್ನು ನಿರ್ವಹಿಸುವ ಸಂಸ್ಥೆ ಇದಾಗಿದೆ. ಆದ್ದರಿಂದಾಗಿ ಮುಸ್ಲಿಂ ಸಮುದಾಯದ ಮೇಲೆ ಅಧಿಕ ಪ್ರಭಾವ ಬೀರುತ್ತದೆ. ಸಮುದಾಯದ ಅದರಲ್ಲೂ ವಿಶೇಷವಾಗಿ ಮಲಬಾರ್ ಮತ್ತು ಕರಾವಳಿಯ ಜನರ ಚುನಾವಣಾ ನಿರ್ಧಾರಗಳ ಮೇಲೆ ಸಮಸ್ತ ಪರಿಣಾಮ ಹೆಚ್ಚು.
ಇದನ್ನು ಓದಿದ್ದೀರಾ? ಕೇರಳ ಚುನಾವಣೆ | ಕ್ರೈಸ್ತ ಸಮುದಾಯದ ಮತಗಳು ‘ಗೇಮ್ ಚೇಂಜರ್’ ಆಗಬಹುದೇ?
ಆದರೆ 1989ರಲ್ಲಿ ಸಮಸ್ತ ಸೈದ್ಧಾಂತಿಕ ಭಿನ್ನಾಭಿಪ್ರಾಯಗಳಿಂದಾಗಿ ಎರಡು ಬಣಗಳಾಗಿ ವಿಂಗಡನೆಯಾಗಿದೆ. ಎರಡೂ ಬಣಗಳು ಮಸೀದಿಗಳು, ಮದರಸಾಗಳು ಮತ್ತು ಕಾಲೇಜುಗಳ ಮೇಲೆ ನಿಯಂತ್ರಣಗಳನ್ನು ಹೊಂದಿದೆ. ಅಧಿಕಾರ ಮತ್ತು ಆಸ್ತಿಯ ವಿಚಾರದಲ್ಲಿ ಆಗಾಗೇ ವಿವಾದಗಳು ನಡೆಯುತ್ತಲೇ ಇದೆ.
- ಇ.ಕೆ. ಬಣ: ಇ.ಕೆ. ಅಬೂಬಕರ್ ಮುಸ್ಲಿಯಾರ್ ಅವರ ಹೆಸರನ್ನು ಈ ಬಣಕ್ಕೆ ಇಡಲಾಗಿದೆ. ಇದನ್ನು ಸಾಮಾನ್ಯವಾಗಿ ಪ್ರಬಲ ವಿಭಾಗವೆಂದು ಪರಿಗಣಿಸಲಾಗುತ್ತದೆ. ಇ.ಕೆ. ಬಣ ಯುಡಿಎಫ್ಗೆ ಮೈತ್ರಿಕೂಟವಾಗಿರುವ ಇಂಡಿಯನ್ ಯೂನಿಯನ್ ಮುಸ್ಲಿಂ ಲೀಗ್ನೊಂದಿಗೆ(IUML) ನಿಕಟ ಸಂಬಂಧ ಹೊಂದಿರುವ ಕಾರಣ ಈ ಬಣದ ಬಹುಪಾಲು ಬೆಂಬಲ ಯುಡಿಎಫ್ಗೆ ಇರುತ್ತದೆ.
- ಎ.ಪಿ. ಬಣ: ಕಾಂತಪುರಂ ಎ.ಪಿ. ಅಬೂಬಕರ್ ಮುಸ್ಲಿಯಾರ್ ನೇತೃತ್ವದ ಬಣ ಇದಾಗಿದೆ. ಎ.ಪಿ. ಬಣವು ಹೆಚ್ಚಾಗಿ ಸ್ವತಂತ್ರ ನಿಲುವನ್ನು ಹೊಂದಿರುತ್ತದೆ. ಆದರೆ ಹಲವು ಸಂದರ್ಭಗಳಲ್ಲಿ ಎಲ್ಡಿಎಫ್ ಅಥವಾ ಸಿಪಿಐ(ಎಂ)ಗೆ ಬೆಂಬಲ ನೀಡುತ್ತಾ ಬಂದಿದೆ. ಇತ್ತೀಚಿನ ವರ್ಷಗಳಲ್ಲಿ ಈ ಬಣವು ಎಲ್ಡಿಎಫ್ಗೆ ಹೆಚ್ಚು ಹತ್ತಿರವಾಗುತ್ತಿದೆ.
ಸಮಸ್ತ ಕೇರಳ ಇಸ್ಲಾಂ ಮತ ವಿದ್ಯಾಭ್ಯಾಸ ಬೋರ್ಡ್ (SKIMVB) ಎಂಬುದು ಇ.ಕೆ. ಬಣದ ಪ್ರಮುಖ ಅಂಗಸಂಸ್ಥೆಯಾಗಿದ್ದು, ಸುಮಾರು 10,000ಕ್ಕೂ ಹೆಚ್ಚು ಮದರಸಾಗಳನ್ನು ನಿಯಂತ್ರಿಸುತ್ತದೆ. ಈ ಮದರಸಾಗಳಲ್ಲಿ ಸುಮಾರು 12 ಲಕ್ಷಕ್ಕೂ ಹೆಚ್ಚು ವಿದ್ಯಾರ್ಥಿಗಳು ಕಲಿಯುತ್ತಿದ್ದು, ಒಂದು ಲಕ್ಷಕ್ಕೂ ಹೆಚ್ಚು ಶಿಕ್ಷಕರು ಕಾರ್ಯನಿರ್ವಹಿಸುತ್ತಿದ್ದಾರೆ. ದಾರುಲ್ ಹುದಾ ಇಸ್ಲಾಮಿಕ್ ವಿಶ್ವವಿದ್ಯಾಲಯ (Chemmad) ಎಂಬುದು ಇ.ಕೆ. ಬಣದ ಪ್ರಮುಖ ಉನ್ನತ ಧಾರ್ಮಿಕ ಶಿಕ್ಷಣ ಕೇಂದ್ರವಾಗಿದ್ದು, ಇದರ ಅಡಿಯಲ್ಲಿ ಹಲವಾರು ಸಂಯೋಜಿತ ಅರೇಬಿಕ್ ಕಾಲೇಜುಗಳಿವೆ. ಇಷ್ಟು ಮಾತ್ರವಲ್ಲದೆ MEA ಇಂಜಿನಿಯರಿಂಗ್ ಕಾಲೇಜು, ಅಲ್ ಬಿರ್ರ್ ಸ್ಕೂಲ್ಸ್, ನೂರಾರು ಇಂಗ್ಲಿಷ್ ಮೀಡಿಯಂ ಶಾಲೆಗಳನ್ನು, ಮಹಿಳೆಯರಿಗಾಗಿ ವಿಶೇಷ ‘ಫದೀಲಾ’ ಕೋರ್ಸ್ಗಳನ್ನು ನೀಡುವ ಕಾಲೇಜುಗಳನ್ನು ನಿರ್ವಹಿಸುತ್ತಿದೆ.
ಇನ್ನೊಂದೆಡೆ ಎ.ಪಿ. ಬಣದ ಸಮಸ್ತ ಕೇರಳ ಸುನ್ನಿ ವಿದ್ಯಾಭ್ಯಾಸ ಬೋರ್ಡ್ ಸಾವಿರಾರು ಶಿಕ್ಷಣ ಸಂಸ್ಥೆಗಳನ್ನು ನಿಯಂತ್ರಿಸುತ್ತಿದೆ. ಜಾಮಿಯಾ ಮರ್ಕಝು ಸ್ಸಖಾಫತಿ ಸ್ಸುನ್ನಿಯ್ಯ (Jamia Markazu Saqafathi Sunniyya) ಈ ಬಣದ ಪ್ರಧಾನ ಶಿಕ್ಷಣ ಕೇಂದ್ರವಾಗಿದ್ದು, ಕೋಝಿಕ್ಕೋಡ್ನ ಕಾರಂತೂರಿನಲ್ಲಿದೆ. ಇದರಡಿಯಲ್ಲಿ ಧಾರ್ಮಿಕ ಮತ್ತು ಆಧುನಿಕ ಶಿಕ್ಷಣದ ಸಮನ್ವಯದೊಂದಿಗೆ ಹತ್ತಾರು ಕಾಲೇಜುಗಳು ಕಾರ್ಯಾಚರಿಸುತ್ತಿವೆ. ಈ ಮಂಡಳಿಯ ಅಡಿಯಲ್ಲಿ ಸುಮಾರು 10,000ಕ್ಕೂ ಹೆಚ್ಚು ಮದರಸಾಗಳು ನೋಂದಣಿಗೊಂಡಿವೆ. ಧಾರ್ಮಿಕ ಶಿಕ್ಷಣ ಮಾತ್ರವಲ್ಲದೆ, ಕಾನೂನು ಶಿಕ್ಷಣಕ್ಕಾಗಿ, ಯುನಾನಿ ವೈದ್ಯಕೀಯ ಶಿಕ್ಷಣಕ್ಕಾಗಿ ಪ್ರತ್ಯೇಕ ಕಾಲೇಜುಗಳಿವೆ. ಕಲೆ ಮತ್ತು ವಿಜ್ಞಾನ ಪದವಿ ಕಾಲೇಜುಗಳನ್ನೂ ಹೊಂದಿದೆ.
ಚುನಾವಣೆಯ ಮೇಲೆ ಏನು ಪ್ರಭಾವ?
ಕೇರಳದ ರಾಜಕೀಯ ಭೂಪಟದಲ್ಲಿ ‘ಸಮಸ್ತ ಕೇರಳ ಜಮೀಯತುಲ್ ಉಲಮಾ’ (ಸಮಸ್ತ) ಕೇವಲ ಒಂದು ಧಾರ್ಮಿಕ ಸಂಸ್ಥೆಯಾಗಿ ಉಳಿದಿಲ್ಲ. ಚುನಾವಣಾ ಫಲಿತಾಂಶಗಳನ್ನು ಅದಲುಬದಲು ಮಾಡುವಷ್ಟು ಬಲವನ್ನು ಹೊಂದಿದೆ. 1926ರಲ್ಲಿ ಸ್ಥಾಪನೆಯಾದ ಈ ಸಂಸ್ಥೆಯು ಕೇರಳದ ಮುಸ್ಲಿಂ ಸಮುದಾಯದ ಅತಿ ದೊಡ್ಡ ಮತ್ತು ಪ್ರಭಾವಶಾಲಿ ಸುನ್ನಿ ಪಂಗಡವನ್ನು ಒಳಗೊಂಡಿದೆ.
ಕೇರಳದ ಬಹುಪಾಲು ಸುನ್ನಿ ಮಸೀದಿಗಳು ಮತ್ತು ‘ಮಹಲ್ಲು’ (ಸ್ಥಳೀಯ ಸಮುದಾಯ ಕೇಂದ್ರಗಳು) ಸಮಸ್ತದ ಮಾರ್ಗದರ್ಶನದಲ್ಲೇ ನಡೆಯುತ್ತವೆ. ಆದ್ದರಿಂದ ಚುನಾವಣಾ ಸಮಯದಲ್ಲಿ ಧಾರ್ಮಿಕ ನಾಯಕರ ಒಂದು ಸಣ್ಣ ಸೂಚನೆ ಅಥವಾ ನಿಲುವು ನೇರವಾಗಿ ಸಾವಿರಾರು ಮತಗಳ ಮೇಲೆ ನೇರ ಪರಿಣಾಮ ಬೀರುತ್ತದೆ. ತಮ್ಮ ಧಾರ್ಮಿಕ ನಾಯಕರು ಬೆಂಬಲಿಸುವ ಪಕ್ಷಕ್ಕೆ ಮತ ಚಲಾಯಿಸುವ ನಿರ್ಧಾರ ಮಾಡುವವರು ಅಧಿಕ. ಆದ್ದರಿಂದ ಈಗಾಗಲೇ ಎರಡೂ ಬಣವನ್ನು ಓಲೈಸುವ ಯತ್ನವನ್ನು ರಾಜಕೀಯ ನಾಯಕರುಗಳು ಶುರು ಮಾಡಿದ್ದಾರೆ. ಮತಗಿಟ್ಟಿಸಿಕೊಳ್ಳುವ ಓಟದಲ್ಲಿದ್ದಾರೆ.

ಪತ್ರಕರ್ತೆ, 2019ರಿಂದ ಪತ್ರಿಕೋದ್ಯಮವೇ ಬದುಕು. ರಾಜಕೀಯ, ಬ್ಯುಜಿನೆಸ್ ಸುದ್ದಿಗಳಲ್ಲಿ ಆಸಕ್ತಿ.




