ಮುಖ್ಯಮಂತ್ರಿ ಸಿದ್ದರಾಮಯ್ಯ ಪುತ್ರ ಯತೀಂದ್ರ ಸಿದ್ದರಾಮಯ್ಯ ಅವರು ಸಚಿವ ಸತೀಶ್ ಜಾರಕಿಹೊಳಿ ಕುರಿತು ಆಡಿದ ಆ ಒಂದು ಮಾತು ಇದೀಗ ರಾಜ್ಯ ರಾಜಕಾರಣದಲ್ಲಿ ಭಾರೀ ಚರ್ಚೆಗೆ ಗ್ರಾಸವಾಗಿದೆ. ಇದರೊಂದಿಗೆ ಮುಖ್ಯಮಂತ್ರಿ ಹುದ್ದೆ ಬದಲಾವಣೆ ಚರ್ಚೆ ಮತ್ತು ಸಚಿವ ಸಂಪುಟ ಪುನಾರಚನೆ ವಿಚಾರವೂ ಮುನ್ನೆಲೆಗೆ ಬಂದಿದೆ.
ಚಿಕ್ಕೋಡಿಯಲ್ಲಿ ನಡೆದ ಕನಕದಾಸ ಪ್ರತಿಮೆ ಅನಾವರಣ ಮಾತನಾಡಿದ ಯತೀಂದ್ರ ಸಿದ್ದರಾಮಯ್ಯ ಅವರು, “ಸಿಎಂ ಸಿದ್ದರಾಮಯ್ಯ ಅವರು ರಾಜಕೀಯ ಸಂಧ್ಯಾಕಾಲದಲ್ಲಿ ಇದ್ದಾರೆ. ಇಂತಹ ಸಮಯದಲ್ಲಿ ಪ್ರಗತಿಪರ ಚಿಂತನೆ ಹೊಂದಿರುವ, ಸೈದ್ಧಾಂತಿಕವಾಗಿ ಮಾರ್ಗದರ್ಶನ ನೀಡುವ ನಾಯಕನ ಅಗತ್ಯವಿದೆ. ಸತೀಶ್ ಜಾರಕಿಹೊಳಿ ಈ ಜವಾಬ್ದಾರಿ ಹೊರಲು ಸಮರ್ಥರು. ಕಾಂಗ್ರೆಸ್ ಪಕ್ಷದ ಸಿದ್ಧಾಂತದಲ್ಲಿ ನಂಬಿಕೆ ಇರುವ ನಾಯಕರಿಗೆ ಹಾಗೂ ಯುವಕರಿಗೆ ಅವರು ಮಾದರಿ” ಎಂದು ಹೇಳಿದ್ದರು.
ಮುಂದುವರಿದು “ಸಿದ್ಧಾಂತಬದ್ಧವಾದ ರಾಜಕಾರಣಿಗಳು ಇರುವುದು ವಿರಳ. ಆದರೆ, ಜಾರಕಿಹೊಳಿಯವರು ಬದ್ಧತೆಯಿಂದ ಕೆಲಸ ಮಾಡುತ್ತಿದ್ದಾರೆ. ಅವರು ಆ ಕೆಲಸವನ್ನು ಹೀಗೆ ಮುಂದುವರಿಸಬೇಕು” ಎಂದು ಯತೀಂದ್ರ ಹೇಳಿಕೆ ನೀಡಿದ್ದರು.
ಯತೀಂದ್ರ ಅವರ ಈ ಮೇಲಿನ ಹೇಳಿಕೆ ಈಗ ನಾನಾ ವ್ಯಾಖ್ಯಾನಗಳಿಗೆ ಒಳಗಾಗುತ್ತಿದೆ. “ಸಿಎಂ ಸಿದ್ದರಾಮಯ್ಯನವರ ಉತ್ತರಾಧಿಕಾರಿ ಸಚಿವ ಸತೀಶ್ ಜಾರಕಿಹೊಳಿ ಎಂದು ಯತೀಂದ್ರ ಸಿದ್ದರಾಮಯ್ಯ ಹೇಳಿದ್ದಾರೆ ಎಂದು ಮಾಧ್ಯಮಗಳು ವಿಶ್ಲೇಷಣೆ ಮಾಡುತ್ತಿವೆ. ‘ಕೈ’ ಪಾಳಯದೊಳಗೂ ಪರ ವಿರೋಧ ಚರ್ಚೆಗಳಾಗುತ್ತಿವೆ. ಕೆಲವು ನಾಯಕರು ಯತೀಂದ್ರ ಹೇಳಿಕೆಯನ್ನು ಬೆಂಬಲಿಸಿದ್ದರೆ, ಇನ್ನು ಕೆಲವರು ಅವರ ವಿರುದ್ಧ ಕಿಡಿ ಕಾರಿದ್ದಾರೆ.
ಯಾರು ಏನಂದ್ರು?
ಯತೀಂದ್ರ ಹೇಳಿಕೆಗೆ ಪ್ರತಿಕ್ರಿಯಿಸಿರುವ ಸಚಿವ ಸತೀಶ್ ಜಾರಕಿಹೊಳಿ, “ನಾನು ಸಿದ್ದರಾಮಯ್ಯನವರ ಉತ್ತರಾಧಿಕಾರಿ ಎಂದು ಹೇಳಲ್ಲ. ಅದನ್ನು ಜನರು ಮತ್ತು ಪಕ್ಷ ಹೇಳಬೇಕು. ಯತೀಂದ್ರ ಸಿದ್ದರಾಮಯ್ಯ ಅವರು ತಮ್ಮ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. ಕಾಂಗ್ರೆಸ್ನಲ್ಲಿ ಅರಸು, ನಂತರ ಬಂಗಾರಪ್ಪ ಬಳಿಕ ಸಿದ್ದರಾಮಯ್ಯ ಇದ್ದಾರೆ. ಅವರ ಬಳಿಕ ಯಾರೆಂದು ಮುಂದೆ ಉತ್ತರ ಸಿಗುತ್ತದೆ. ಆದರೆ 2028ಕ್ಕೆ ಕ್ಲೈಮ್ ಮಾಡೋದ್ರಲ್ಲಿ ನಾನೂ ಇದೀನಿ” ಎನ್ನುವ ಮೂಲಕ ಕುತೂಹಲ ಸೃಷ್ಟಿಸಿದ್ದಾರೆ.
ಗೃಹ ಸಚಿವ ಡಾ ಜಿ ಪರಮೇಶ್ವರ್ ಈ ಬಗ್ಗೆ ಮಾತನಾಡಿ, “ಸಿದ್ದರಾಮಯ್ಯರು ಅಹಿಂದ ಪ್ರಾರಂಭಿಸಿದಾಗ ಸತೀಶ್ ಜಾರಕಿಹೊಳಿಯವರು ಪ್ರಮುಖ ಪಾತ್ರ ವಹಿಸಿದ್ದರು. ಆ ಹಿನ್ನೆಲೆಯಲ್ಲಿ ಯತೀಂದ್ರ ಸಿದ್ದರಾಮಯ್ಯ ಅವರು ಅವರ ಹೆಸರು ಹೇಳಿದರೆ ತಪ್ಪೇನಿದೆ?” ಎಂದಿದ್ದಾರೆ.
ಹಾಗೆಯೇ ಅಬಕಾರಿ ಸಚಿವ ಆರ್ ಬಿ ತಿಮ್ಮಾಪುರ, “ಯತೀಂದ್ರ ಹೇಳಿರುವ ನಾಯಕತ್ವ ಸತೀಶ್ ಜಾರಕಿಹೊಳಿ ಅವರಲ್ಲಿದೆ. ಒಂದಲ್ಲ ಒಂದು ದಿನ ಅವರು ಸಿಎಂ ಆಗುತ್ತಾರೆ. ಎಲ್ಲರನ್ನೂ ಜೊತೆಗೆ ತೆಗೆದುಕೊಂಡು, ಸಿಎಂ ಸಿದ್ದರಾಮಯ್ಯನವರ ದಾರಿಯಲ್ಲೇ ಸತೀಶ್ ಸಾಗುತ್ತಿದ್ದಾರೆ” ಎಂದು ತಿಳಿಸಿದ್ದಾರೆ.
“ಸಿಎಂ ಆಗುವ ಎಲ್ಲ ಅರ್ಹತೆ ಸತೀಶ್ ಜಾರಕಿಹೊಳಿ ಅವರಿಗಿದೆ. ಆದರೆ, ನಮ್ಮಲ್ಲಿ ಈಗ ಸಿಎಂ ಕುರ್ಚಿ ಖಾಲಿ ಇಲ್ಲ. ಯತೀಂದ್ರ ಅವರು ಯಾವ ಅರ್ಥದಲ್ಲಿ ಹೇಳಿದ್ದಾರೆ ಅನ್ನೋದನ್ನು ಗಮನಿಸಬೇಕು. ಸಿದ್ದರಾಮಯ್ಯಗೆ ಕೊನೆ ಚುನಾವಣೆ ಆಗಿರಬಹುದು. ಮುಂದೆಯೂ ಅವರ ನಾಯಕತ್ವ ಅಗತ್ಯವಿದೆ. ಸಿದ್ದರಾಮಯ್ಯ ಅವರನ್ನು ಬಿಟ್ಟು ಚುನಾವಣೆ ಮಾಡೋಕೆ ಆಗಲ್ಲ” ಎಂದು ಸಚಿವ ಎಂ.ಬಿ.ಪಾಟೀಲ್ ಹೇಳಿದ್ದಾರೆ.
“ತುಮಕೂರಿಗೆ ಯತೀಂದ್ರ ಹೋಗಿದ್ದಿದ್ರೆ ಅಲ್ಲಿ ಪರಮೇಶ್ವರ್ ಬಗ್ಗೆ ಹೇಳ್ತಿದ್ರು, ವಿಜಯಪುರಕ್ಕೆ ಹೋಗಿದ್ದಿದ್ದರೆ ನನ್ನ ಬಗ್ಗೆಯೂ ಹೇಳುತ್ತಿದ್ದರು. ಇದಕ್ಕೆಲ್ಲಾ ಸುಣ್ಣ ಬಣ್ಣ ಹಚ್ಚೋದು ಬೇಡ. ಸತೀಶ್ ಜಾರಕಿಹೊಳಿ ಪ್ರಮುಖ ನಾಯಕರು. ಡಿಕೆಶಿ, ಎಂ.ಬಿ.ಪಾಟೀಲ್, ಸತೀಶ್ ಅಂತಿಮ ಅಲ್ಲ. ಹೈಕಮಾಂಡ್ ತೀರ್ಮಾನವೇ ಅಂತಿಮ” ಎಂದು ಪಾಟೀಲ್ ಅಭಿಪ್ರಾಯಪಟ್ಟಿದ್ದಾರೆ.
“ಸಿಎಂ ಕುರ್ಚಿಗೆ ಸಾಕಷ್ಟು ಜನ ಅರ್ಹರಿದ್ದಾರೆ. ಡಿ.ಕೆ.ಶಿವಕುಮಾರ್, ಜಿ.ಪರಮೇಶ್ವರ್, ರಾಮಲಿಂಗಾರೆಡ್ಡಿ, ಕೃಷ್ಣ ಬೈರೇಗೌಡ, ಸತೀಶ್ ಜಾರಕಿಹೊಳಿ ಸೇರಿ ಹಲವರು ಸಮರ್ಥರಿದ್ದಾರೆ. ಆದರೆ ಹೈಕಮಾಂಡ್ ತೀರ್ಮಾನ ಮಾಡಬೇಕು. ಸಂಪುಟ ಪುನಾರಚನೆ ಬಗ್ಗೆ ನಮ್ಮ ಹೈಕಮಾಂಡ್ ತೀರ್ಮಾನ ಮಾಡಬೇಕು. ಇಲ್ಲೇ ಸದಾಶಿವನಗರದಲ್ಲೇ ಹೈಕಮಾಂಡ್ ಇದೆ. ಖಾತೆ ಹಂಚಿಕೆ ಸಿಎಂ ಪರಮಾಧಿಕಾರ. ನಾವು ಇಂತಹ ಖಾತೆ ಬೇಕು ಅಂತಾ ಕೇಳೋಕೆ ಆಗುತ್ತಾ? ನಾವು ನಮ್ಮ ಆಸೆ ವ್ಯಕ್ತಪಡಿಸಬಹುದು” ಎಂದಿದ್ದಾರೆ.
ಮುಂದಿನ ರಾಜಕೀಯ ಉತ್ತರಾಧಿಕಾರಿ ಸತೀಶ್ ಜಾರಕಿಹೊಳಿ ಎಂಬ ವಿಚಾರ ಚರ್ಚೆಯಾಗುತ್ತಿದ್ದಂತೆ ಯತೀಂದ್ರ ಸಿದ್ದರಾಮಯ್ಯ ಸ್ಪಷ್ಟನೆ ನೀಡಿದ್ದಾರೆ. “2028ರ ಚುನಾವಣೆ ಗಮನದಲ್ಲಿಟ್ಟುಕೊಂಡು ಹೇಳಿಕೆ ನೀಡಿದ್ದೇನೆ. ಆದರೆ ರಾಜಕೀಯ ಉತ್ತರಾಧಿಕಾರಿ ಬಗ್ಗೆ ನಾನು ಮಾತನಾಡಿಲ್ಲ. ಸಿದ್ದರಾಮಯ್ಯ ರೀತಿ ಸೈದ್ಧಾಂತಿಕವಾಗಿ ರಾಜಕಾರಣ ಮಾಡುವವರು ಮುನ್ನಡೆಸಲಿ ಅನ್ನೋ ಉದ್ದೇಶ ಇಟ್ಟುಕೊಂಡು ಮಾತನಾಡಿದ್ದೇನೆ” ಎಂದು ಸ್ಪಷ್ಟಪಡಿಸಿದ್ದಾರೆ.
ಪಥಸಂಚಲನ ಪಾಲಿಟಿಕ್ಸ್ | ಕಲಬುರಗಿಯಲ್ಲಿ ನಡೆಯುವುದೇ RSS-DSS ನೇರ ಹಣಾಹಣಿ?
ಡಿಸಿಎಂ ಡಿ ಕೆ ಶಿವಕುಮಾರ್ ಬಣದ ಶಾಸಕರು ಯತೀಂದ್ರ ಸಿದ್ದರಾಮಯ್ಯ ಹೇಳಿಕೆ ವಿರುದ್ಧ ಕಿಡಿ ಕಾರಿದ್ದಾರೆ. “ಯತೀಂದ್ರ ಹೇಳಿಕೆ ಒಂದು ರೀತಿ ಎಳಸು ಸ್ಟೇಟ್ಮೆಂಟ್” ಎಂದು ರಾಮನಗರದಲ್ಲಿ ಶಾಸಕ ಇಕ್ಬಾಲ್ ಹುಸೇನ್ ತಿರುಗೇಟು ನೀಡಿದ್ದಾರೆ.
“ಯತೀಂದ್ರ ಅವರು ಈ ರೀತಿಯ ಹೇಳಿಕೆಗಳನ್ನು ಕೊಡಬಾರದು. ದೊಡ್ಡ ಮನೆತನ, ದೊಡ್ಡ ಸ್ಥಾನದಲ್ಲಿ ಇರುವ ನೀವು ತಾವಾಗಿ ಕೆಳಗೆ ಬೀಳೋದು ನಮಗೆ ಇಷ್ಟವಿಲ್ಲ. ನೀವು ಗೌರವಯುತವಾಗಿ ಹೇಳಿಕೆಗಳನ್ನ ಕೊಡಬೇಕು. ನಿಮ್ಮ ಮಾತಿನಲ್ಲಿ ಶಕ್ತಿ ಇಲ್ಲ. ಈ ವಿಚಾರವಾಗಿ ಕೆಪಿಸಿಸಿಯಿಂದ ಯತೀಂದ್ರಗೆ ನೋಟಿಸ್ ನೀಡಬೇಕು. ನಾವು ಮಾಡಿದರೆ ಬಲಾತ್ಕಾರ, ಬೇರೆಯವರು ಮಾಡಿದರೆ ಚಮತ್ಕಾರ ಅನ್ನೋ ಪರಿಸ್ಥಿತಿ ಬೇಡ” ಎಂದು ಎಂದು ಅಸಮಾಧಾನ ವ್ಯಕ್ತಪಡಿಸಿದ್ದಾರೆ.





