ಬೆಂಗಳೂರು ಉತ್ತರ ಲೋಕಸಭಾ ಕ್ಷೇತ್ರದ ಮಹದೇವಪುರ ವಿಧಾನಸಭಾ ಕ್ಷೇತ್ರ ಸೇರಿದಂತೆ ದೇಶದ ವಿವಿಧೆಡೆ ಮತಗಳವು ನಡೆದಿದೆ ಎಂದು ಲೋಕಸಭೆ ವಿಪಕ್ಷ ನಾಯಕ ರಾಹುಲ್ ಗಾಂಧಿ ಅವರು ಮಾಡಿರುವ ಆರೋಪದ ತನಿಖೆ ನಡೆಯಬೇಕು ಎಂದು ಕೋರಿ ಸಲ್ಲಿಸಲಾಗಿದ್ದು ಸಾರ್ವಜನಿಕ ಹಿತಾಸಕ್ತಿ ಅರ್ಜಿಯನ್ನು (ಪಿಐಎಲ್) ಸುಪ್ರೀಂ ಕೋರ್ಟ್ ಸೋಮವಾರ ವಜಾಗೊಳಿಸಿದೆ.
ನ್ಯಾಯಮೂರ್ತಿಗಳಾದ ಸೂರ್ಯ ಕಾಂತ್ ಮತ್ತು ಜೊಯಮಲ್ಯ ಬಾಗ್ಚಿ ಅವರಿದ್ದ ಪೀಠವು ಪಿಐಎಲ್ ಅನ್ನು ತಿರಸ್ಕರಿಸಿದ್ದು, ಅರ್ಜಿದಾರರು ಬೇರೆ ಅರ್ಜಿ ಸಲ್ಲಿಸಬಹುದು. ಬೇರೆಡೆ ಪರಿಹಾರ ಹುಡುಕಬಹುದು. ಈ ವಿಚಾರದಲ್ಲಿ ಸಾರ್ವಜನಿಕ ಹಿತಾಸಕ್ತಿ ಅರ್ಜಿಯನ್ನು ಪರಿಗಣಿಸಲಾಗುವುದಿಲ್ಲ. ಇತರೆ ರೀತಿಯಲ್ಲಿ ಪರಿಹಾರವನ್ನು ಪಡೆಯಬಹುದು ಎಂದು ಕೋರ್ಟ್ ಹೇಳಿದೆ. ಈ ಸಂದರ್ಭದಲ್ಲೇ, “ಚುನಾವಣಾ ಆಯೋಗಕ್ಕೆ ಪತ್ರ ಬರೆದಿದ್ದರೂ ಅದನ್ನು ಪರಿಗಣಿಸಲಾಗಿಲ್ಲ” ಎಂದು ಅರ್ಜಿದಾರರು ತಿಳಿಸಿದ್ದಾರೆ.
ಇದನ್ನು ಓದಿದ್ದೀರಾ? ಕರ್ನಾಟಕದ ಆಳಂದದಲ್ಲಿ 6,000 ಮತಗಳ ‘ಡಿಲೀಟ್’ ಯತ್ನ: ಪುರಾವೆ ಸಹಿತ ವಿವರಿಸಿದ ರಾಹುಲ್ ಗಾಂಧಿ
ಇನ್ನು ಅರ್ಜಿಯಲ್ಲಿ ಮಹದೇವಪುರ ವಿಧಾನಸಭಾ ಕ್ಷೇತ್ರದ ಮತದಾರರ ಪಟ್ಟಿಯಲ್ಲಿ ಸಾವಿರಾರು ನಕಲಿ ಹೆಸರುಗಳಿವೆ. ಇದು ಒಬ್ಬ ವ್ಯಕ್ತಿಗೆ ಒಂದು ಮತದ ಅಧಿಕಾರ ಎಂಬುದಕ್ಕೆ ವಿರುದ್ಧವಾಗಿದೆ. ಕೆಲವರಲ್ಲಿ ಗುರುತಿನ ಚೀಟಿ ಇದ್ದರೂ ಹಲವೆಡೆ ಹೆಸರು ನೋಂದಾವಣಿಯಾಗಿದೆ. ಮಹದೇವಪುರ ಕ್ಷೇತ್ರದಲ್ಲಿಯೇ 40,000ಕ್ಕೂ ಅಧಿಕ ಅನಧಿಕೃತ ಮತದಾರರು, 10,000ಕ್ಕೂ ಅಧಿಕ ನಕಲಿ ದಾಖಲೆಗಳು ಕಂಡುಬಂದಿವೆ ಎಂದು ಅರ್ಜಿಯಲ್ಲಿ ಉಲ್ಲೇಖಿಸಲಾಗಿದೆ. ಹಾಗೆಯೇ, ಇದೇ ರೀತಿ ಮಹಾರಾಷ್ಟ್ರದಲ್ಲಿಯೂ ಚುನಾವಣೆ ವೇಳೆ ಅಕ್ರಮಗಳು ನಡೆದಿವೆ ಎಂಬ ಆರೋಪವನ್ನೂ ಅರ್ಜಿಯಲ್ಲಿ ಮಾಡಲಾಗಿದೆ.
ಮಹದೇವಪುರ ಸೇರಿದಂತೆ ದೇಶದ ಹಲವು ಭಾಗಗಳಲ್ಲಿ ನಡೆದಿರುವ ಮತಗಳ್ಳತನದ ಬಗ್ಗೆ ರಾಹುಲ್ ಗಾಂಧಿ ಅವರು ಪತ್ರಿಕಾಗೋಷ್ಠಿ ನಡೆಸಿ ಮಾಹಿತಿಯನ್ನು ನೀಡಿದ್ದಾರೆ. ಈ ಸಂಬಂಧ ಸಾಕಷ್ಟು ಪುರಾವೆಗಳನ್ನೂ ಬಹಿರಂಗಪಡಿಸಿದ್ದಾರೆ. ಕೆಲವು ಮಾಧ್ಯಮಗಳು ತನಿಖೆ ನಡೆಸಿ ವರದಿ ಮಾಡಿದ್ದು, ಈ ಆರೋಪಕ್ಕೆ ಪುಷ್ಠಿ ನೀಡಿದೆ. ಈ ಮತಗಳವಿನ ಬಗ್ಗೆ ಗಂಭೀರ ತನಿಖೆ ನಡೆಯಬೇಕು ಎಂಬ ಆಗ್ರಹ ಕೇಳಿಬಂದಿದೆ.





