ದೆಹಲಿ ಚಲೋ ಕಾರ್ಯಕ್ರಮದಡಿ ದಾದ್ರಿ ಎನ್ಟಿಪಿಸಿ ವಿರುದ್ಧ ಪ್ರತಿಭಟನಾನಿರತ ರೈತರು ಸಂಸತ್ತಿಗೆ ಮುತ್ತಿಗೆ ಹಾಕಲು ಹೊರಟಿದ್ದು, ರಾಷ್ಟ್ರ ರಾಜಧಾನಿಯ ಗಡಿಭಾಗ ಮತ್ತೆ ಹೋರಾಟದ ಕಣವಾಗಿದೆ.
ರೈತರ ದೆಹಲಿ ಚಲೋ ಕಾರಣದಿಂದ ರಾಷ್ಟ್ರ ರಾಜಧಾನಿಯ ಗಡಿಭಾಗಗಳಲ್ಲಿ ಬೃಹತ್ ಸಂಚಾರದಟ್ಟಣೆ ಉಂಟಾಗಿದೆ. ಸಂಸತ್ತಿಗೆ ಮುತ್ತಿಗೆ ಹಾಕಲು ದೆಹಲಿಗೆ ಹೊರಟ ರೈತರನ್ನು ಉತ್ತರಪ್ರದೇಶ- ದೆಹಲಿ ಗಡಿಭಾಗದಲ್ಲೇ ತಡೆಯಲು ಸರ್ಕಾರ ಬಿಗಿಭದ್ರತೆ ನಿಯೋಜಿಸಿದೆ.
ರೈತ ನಾಯಕ ರಾಕೇಶ್ ಟಿಕಾಯತ್ ಅವರು ಗ್ರೇಟರ್ ನೋಯ್ಡಾದಲ್ಲಿ ಪ್ರತಿಭಟನಾ ನಿರತ ರೈತರ ಜೊತೆಗೂಡಿದ್ದಾರೆ. ಅವರ ನೇತೃತ್ವದಲ್ಲಿ ಭಾರತೀಯ ಕಿಸಾನ್ ಸಂಘಟನೆ (ಬಿಕೆಯು) ಗ್ರೇಟರ್ ನೋಯ್ಡಾದಲ್ಲಿ ಸ್ಥಳೀಯ ಪ್ರಾಧಿಕಾರದ ಹೊರಗೆ ಪ್ರತಿಭಟಿಸುತ್ತಿದೆ.
#WATCH | Security stepped up at the Delhi-Noida, Chilla border, in view of the farmers’ protest march. pic.twitter.com/RWQrFwQFZs
— ANI (@ANI) February 8, 2024
ದೆಹಲಿಯ ಕಡೆಗೆ ಹೊರಟಿದ್ದ ಉತ್ತರಪ್ರದೇಶದ ನೋಯ್ಡಾ ಮತ್ತು ಗ್ರೇಟರ್ ನೋಯ್ಡಾದ 160 ಗ್ರಾಮಗಳ ರೈತರನ್ನು ದೆಹಲಿ- ಉತ್ತರಪ್ರದೇಶ ಗಡಿಭಾಗದಲ್ಲಿ ತಡೆಯಲು ಸರ್ಕಾರ ಕ್ರಮಕೈಗೊಂಡಿದೆ. ರೈತರನ್ನು ರಾಷ್ಟ್ರ ರಾಜಧಾನಿ ಪ್ರವೇಶಿಸದಂತೆ ತಡೆಯಲು ರಾಷ್ಟ್ರೀಯ ರಾಜಧಾನಿ ಪ್ರದೇಶದಲ್ಲಿ ಜಲಫಿರಂಗಿಗಳು, ಬುಲ್ಡೋಜರ್ಗಳು, ಕ್ರೇನ್ಗಳು ಹಾಗೂ ಅನೇಕ ಮೀಸಲುಪಡೆ ಮತ್ತು ಪೊಲೀಸ್ ಸಿಬ್ಬಂದಿಗಳನ್ನು ಹಾಗೂ ಉಲ್ಲಂಘನೆ ಆದೇಶವನ್ನು ಧಿಕ್ಕರಿಸಿ ಮುಂದೆ ಸಾಗುವ ರೈತರನ್ನು ಬಂಧಿಸಿ ಕರೆದೊಯ್ಯಲು ಬಸ್ಗಳನ್ನೂ ಸ್ಥಳದಲ್ಲಿ ನಿಯೋಜಿಸಲಾಗಿದೆ ಎಂದು ವರದಿಯಾಗಿದೆ.
ದಾದ್ರಿಯ ರಾಷ್ಟ್ರೀಯ ಉಷ್ಣವಿದ್ಯುತ್ ಸ್ಥಾವರಗಳ (ಎನ್ಟಿಪಿಸಿ) ಸ್ಥಾಪನೆಗಾಗಿ ಸ್ಥಳಾಂತರದ ವಿರುದ್ಧ ಪ್ರತಿಭಟನೆ, ಎನ್ಟಿಪಿಸಿಗೆ ಹಿಂದೆ ಭೂಮಿ ನೀಡಿದ ಎಲ್ಲಾ ರೈತರಿಗೆ ಏಕರೂಪದ ಪರಿಹಾರದ ಬೇಡಿಕೆ, ಆಸ್ಪತ್ರೆ ನಿರ್ಮಾಣ ಮೊದಲಾದ ಬೇಡಿಕೆಗಳನ್ನು ಇಟ್ಟು ರೈತರು ಪ್ರತಿಭಟನೆಗೆ ಮುಂದಾಗಿದ್ದಾರೆ. ಇದೀಗ ನೋಯ್ಡಾ-ಗ್ರೇಟರ್ ನೋಯ್ಡಾ ಎಕ್ಸ್ಪ್ರೆಸ್ ಹೆದ್ದಾರಿಯನ್ನು ತಡೆದು ರೈತರು ಪ್ರತಿಭಟಿಸುತ್ತಿದ್ದಾರೆ.
Watch | UP farmers marching towards Parliament stopped by police in #Noida (ANI)#FarmersProtest pic.twitter.com/e9CoDK8sAY
— The Times Of India (@timesofindia) February 8, 2024
ಎನ್ಟಿಪಿಸಿ ಮತ್ತು ನೋಯ್ಡಾ ಪ್ರಾಧಿಕಾರ ಪ್ರದೇಶಗಳಲ್ಲಿ ಕಳೆದ 60 ದಿನಗಳಿಂದ ರೈತರು ಪ್ರತಿಭಟನೆ ನಡೆಸುತ್ತಿದ್ದು, ಕಳೆದ ಎಂಟು ದಿನಗಳಿಂದ ಗ್ರೇಟರ್ ನೋಯ್ಡಾದಲ್ಲಿ ಪ್ರತಿಭಟಿಸುತ್ತಿದ್ದಾರೆ. 24 ಗ್ರಾಮಗಳ ರೈತರು ದಾದ್ರಿಯ ಎನ್ಟಿಪಿಸಿ ಶಾಖೆಯಿಂದ ತೊಂದರೆಯಾಗಿರುವುದಾಗಿ ಆರೋಪಿಸಿದ್ದಾರೆ.
ಇದನ್ನೂ ಓದಿ: ಶ್ವೇತಪತ್ರಕ್ಕೆ ಕಾಳಪತ್ರ | ಹತ್ತು ವರ್ಷದಲ್ಲಿ 411 ಶಾಸಕರ ಖರೀದಿ ಬಿಜೆಪಿಯ ಸಾಧನೆ: ಖರ್ಗೆ
2023 ಡಿಸೆಂಬರ 8ರಿಂದ ರೈತರು ನೋಯ್ಡಾ ಸೆಕ್ಟರ್ 24ನಲ್ಲಿರುವ ಎನ್ಟಿಪಿಸಿ ಕಚೇರಿ ಮುಂದೆ ಧರಣಿ ಕುಳಿತಿದ್ದರು. ಪೊಲೀಸರು ಪ್ರತಿಭಟನಾಕಾರರನ್ನು ತಡೆದು ಎನ್ಟಿಪಿಸಿ ಮುಖ್ಯ ಗೇಟ್ನಿಂದ ಕೆಲವು ದೂರದಲ್ಲಿ ಪ್ರತಿಭಟಿಸಲು ಅವಕಾಶ ಕೊಟ್ಟಿದ್ದರು.
ಭಾರತೀಯ ಕಿಸಾನ್ ಪರಿಷತ್ ನಾಯಕ ಸುಖಬೀರ್ ಖಾಲಿಫಾ ಈ ಪ್ರತಿಭಟನೆಯ ನೇತೃತ್ವವಹಿಸಿದ್ದಾರೆ. ”ದಾದ್ರಿಯ ಎನ್ಟಿಪಿಸಿ ಕಚೇರಿ ಮುಂದೆ ಎರಡು ತಿಂಗಳ ಕಾಲ ರೈತರು ಪ್ರತಿಭಟಿಸಿ ದೀರ್ಘ ಚಳವಳಿ ನಡೆಸಿದ್ದರು. ಈ ಸಮಯದಲ್ಲಿ ಆಡಳಿತದ ಜೊತೆಗೆ ತಮ್ಮ ಬೇಡಿಕೆ ಈಡೇರಿಸಲು ರೈತರು ಅನೇಕ ಸುತ್ತಿನ ಮಾತುಕತೆ ನಡೆಸಿದ್ದರು. ಆಡಳಿತ ರೈತರ ಬೇಡಿಕೆಗಳನ್ನು ಈಡೇರಿಸುವ ಬರವಸೆ ನೀಡಿದ್ದರೂ, ಇನ್ನೂ ಕ್ರಮ ಕೈಗೊಂಡಿಲ್ಲ. ಹೀಗಾಗಿ ರೈತರು ನಿರ್ಣಾಯಕ ಹೋರಾಟಕ್ಕೆ ಮುಂದಾಗಿದ್ದಾರೆ” ಎಂದು ಅವರು ಮಾಧ್ಯಮಗಳಿಗೆ ತಿಳಿಸಿದ್ದಾರೆ.
ಬೇಡಿಕೆ ಈಡೇರಿಕೆ ಅಸಾಧ್ಯ ಎಂದಿದ್ದ ಎನ್ಟಿಪಿಸಿ
ಡಿಸೆಂಬರ್ನಲ್ಲಿ ರೈತರ ಪ್ರತಿಭಟನೆ ಬಗ್ಗೆ ಸ್ಪಷ್ಟನೆ ನೀಡಿದ್ದ ಎನ್ಟಿಪಿಸಿ, “ರಾಷ್ಟ್ರೀಯ ರಾಜಧಾನಿ ಪ್ರದೇಶದ ವಿದ್ಯುತ್ ಅಗತ್ಯವನ್ನು ಪೂರೈಸಲು ರಾಷ್ಟ್ರೀಯ ಹಿತಾಸಕ್ತಿಯಿಂದ ರಾಷ್ಟ್ರೀಯ ರಾಜಧಾನಿ ವಿದ್ಯುತ್ ಸ್ಥಾವರ (ಎನ್ಸಿಪಿಎಸ್) ಮೊದಲ ಹಂತವನ್ನು ದಾದ್ರಿ ಪ್ರದೇಶದಲ್ಲಿ 1986ರಿಂದ ಸ್ಥಾಪಿಸಲಾಗುತ್ತಿದೆ. 1995ರಲ್ಲಿ ಭೂ ಸ್ವಾಧೀನ ಮತ್ತು ಪರಿಹಾರವನ್ನು ಆಗಿನ ಭೂ ಸ್ವಾಧೀನ ಕಾಯ್ದೆಯಡಿ ಮತ್ತು ಜಿಲ್ಲಾಡಳಿತದ ಸೂಚನೆಗಳಿಗೆ ಅನುಸಾರವಾಗಿ ಮಾಡಲಾಗಿದೆ” ಎಂದು ತಿಳಿಸಿತ್ತು.
ಇದೀಗ ಅನೇಕ ವರ್ಷಗಳ ನಂತರ ಈ ವಿಚಾರದಲ್ಲಿ ರೈತರು ಮತ್ತೆ ಪ್ರತಿಭಟಿಸುತ್ತಿದ್ದಾರೆ. ಕಾಲಕಾಲಕ್ಕೆ ಪ್ರತಿಭಟನಾಕಾರರ ಜೊತೆಗಿನ ವಿವಿಧ ಮಾತುಕತೆಗಳಲ್ಲಿ ಎನ್ಎಸ್ಪಿಸಿ ಸಮಾನ ಪರಿಹಾರ ಮತ್ತು ಉದ್ಯೋಗದ ಭರವಸೆ ಈಗ ಸಾಧ್ಯವಿಲ್ಲ ಎನ್ನುವುದನ್ನು ತಿಳಿಸಿದೆ ಎಂದು ಎನ್ಟಪಿಸಿ ಹೇಳಿರುವುದಾಗಿ ಮಾಧ್ಯಮಗಳು ವರದಿ ಮಾಡಿವೆ.




