ಯುಜಿಸಿಯ ಹೊಸ ನಿಯಮದ ವಿರುದ್ಧ ಉತ್ತರ ಪ್ರದೇಶದಲ್ಲಿ ಪ್ರಬಲ ಜಾತಿಗಳು ಪ್ರತಿಭಟನೆಗೆ ಇಳಿದಿದೆ. ಕರ್ಣಿ ಸೇನಾ, ಸವರ್ಣ ಸೇನಾ ಮುಂತಾದ ಸಂಘಟನೆಗಳು ವ್ಯಾಪಕ ಪ್ರತಿಭಟನೆ ನಡೆಸುತ್ತಿದ್ದು, ಈ ಸವರ್ಣರ ಪರವಾದ ಹಲವಾರು ಬಿಜೆಪಿ ನಾಯಕರು ರಾಜೀನಾಮೆ ನೀಡುವ ಮೂಲಕ ಕೇಂದ್ರದ ನರೇಂದ್ರ ಮೋದಿ ಸರ್ಕಾರದ ವಿರುದ್ಧ ತಮ್ಮ ಪ್ರತಿಭಟನೆಯನ್ನು ವ್ಯಕ್ತಪಡಿಸಿದ್ದಾರೆ!
ಜೌನ್ಪುರ, ಡಿಯೋರಿಯಾ, ಮಿರ್ಜಾಪುರ ಮತ್ತು ಇತರ ಕೆಲವು ಜಿಲ್ಲೆಗಳಲ್ಲಿ ಈ ಸಂಘಟನೆಗಳು ಯುಜಿಸಿ ನಿಯಮಗಳ ವಿರುದ್ಧ ಘೋಷಣೆಗಳನ್ನು ಕೂಗುತ್ತಾ ಮೆರವಣಿಗೆಗಳನ್ನು ನಡೆಸಿದೆ. ನಿಯಮಗಳನ್ನು ರದ್ದುಗೊಳಿಸದಿದ್ದರೆ ಆಂದೋಲನವನ್ನು ತೀವ್ರಗೊಳಿಸಲಾಗುವುದು ಎಂದು ಎಚ್ಚರಿಸಿದೆ. ಈ ಹೊಸ ನಿಯಮ ವಿಭಜನೆಗೆ ಕಾರಣವಾಗುತ್ತದೆ ಎಂದು ಹೇಳಿಕೊಂಡಿದ್ದಾರೆ.
ಇದನ್ನು ಓದಿದ್ದೀರಾ? ಉನ್ನತ ಅಧ್ಯಯನ ಸಂಸ್ಥೆಗಳಲ್ಲಿ ಜಾತಿ ತಾರತಮ್ಯ ನಿಗ್ರಹಕ್ಕೆ ಯುಜಿಸಿ ತಂದ ಹೊಸ ನಿಯಮಗಳೇನು?
ಪ್ರತಿಭಟನೆಯಲ್ಲಿ ಭಾಗವಹಿಸಿದವರು ಸರ್ಕಾರವನ್ನು ‘ಸವರ್ಣ ವಿರೋಧಿ’ (ಮೇಲ್ಜಾತಿಯ ವಿರೋಧಿ) ಎಂದು ಕರೆದಿದೆ. ಹಾಗೆಯೇ 2027ರಲ್ಲಿ ರಾಜ್ಯದಲ್ಲಿ ನಡೆಯಲಿರುವ ಮುಂದಿನ ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿ ಭಾರಿ ಬೆಲೆ ತೆರಬೇಕಾಗುತ್ತದೆ ಎಂದು ಬೆದರಿಕೆಯನ್ನೂ ಹಾಕಿದೆ. ಸದಾ ಪ್ರಬಲರ ಪರವಾಗಿ ನಿಲ್ಲುತ್ತಾ ಬಂದಿರುವ ಬಿಜೆಪಿ ಪ್ರಬಲ ಮತ ಬ್ಯಾಂಕ್ ಭದ್ರವಾಗಿಸಿಕೊಂಡಿತ್ತು. ಇದೀಗ ಮತ ಬ್ಯಾಂಕ್ ಕಳೆದುಕೊಳ್ಳುವ ಇಕ್ಕಟ್ಟಿಗೆ ಸಿಲುಕಿದೆ.
ಇನ್ನು ನಿಯಮವನ್ನು ವಿರೋಧಿಸಿ ರಾಜ್ಯದ ವಿವಿಧ ಭಾಗಗಳಲ್ಲಿ ಕನಿಷ್ಠ 10ಕ್ಕೂ ಅಧಿಕ ಬಿಜೆಪಿ ನಾಯಕರು ರಾಜೀನಾಮೆ ನೀಡಿದ್ದಾರೆ. ಆ ಪೈಕಿ ಪಿಲಿಭಿತ್ ಜಿಲ್ಲೆಯ ಚಾಪ್ರೋವಾದ ಬಿಜೆಪಿ ಬೂತ್ ಮಟ್ಟದ ಅಧ್ಯಕ್ಷ ಕೃಷ್ಣ ಕುಮಾರ್ ತಿವಾರಿ ಮತ್ತು ಬಿಜೆಪಿ ಕಿಸಾನ್ ಮೋರ್ಚಾ ಉಪಾಧ್ಯಕ್ಷ ಶ್ಯಾಮ್ ಸುಂದರ್ ತ್ರಿಪಾಠಿ ಸೇರಿದ್ದಾರೆ.
ಅಲಿಗಢ ಜಿಲ್ಲೆಯ ಇಗ್ಲಾಸ್ ವಿಧಾನಸಭಾ ಕ್ಷೇತ್ರದ ಬಿಜೆಪಿ ನಾಯಕ ಮತ್ತು ಸಾಮಾಜಿಕ ಮಾಧ್ಯಮ ಉಸ್ತುವಾರಿ ಕಪಿಲ್ ಪಂಡಿತ್ ಕೂಡ ಪಕ್ಷಕ್ಕೆ ರಾಜೀನಾಮೆ ನೀಡಿದ್ದಾರೆ ಕೂಡಾ ರಾಜೀನಾಮೆ ನೀಡಿದ್ದಾರೆ ಎಂದು ವರದಿಯಾಗಿದೆ.
ಇದನ್ನು ಓದಿದ್ದೀರಾ? ಯುಜಿಸಿ ನಿಯಮಗಳ ವಿರುದ್ಧ ದಕ್ಷಿಣದ 4 ರಾಜ್ಯಗಳ ಜಂಟಿ ನಿರ್ಣಯ; ಕರಡು ಹಿಂಪಡೆಯಲು ಒತ್ತಾಯ
ಇನ್ನು ರಾಷ್ಟ್ರಪತಿ ದ್ರೌಪದಿ ಮುರ್ಮು ಮತ್ತು ಪ್ರಧಾನಿ ನರೇಂದ್ರ ಮೋದಿ ಅವರಿಗೆ ಅಖಿಲ ಭಾರತ ಹಿಂದೂ ಸೇನಾ ರಾಷ್ಟ್ರೀಯ ಅಧ್ಯಕ್ಷ ದೀಪಕ್ ಶರ್ಮಾ ಪತ್ರ ಬರೆದಿದ್ದು, ಈ ನಿಯಮವು ಸಮಾನತೆಯ ಹಕ್ಕಿನ ಉಲ್ಲಂಘನೆಯಾಗಿದೆ ಎಂದು ಹೇಳಿದ್ದಾರೆ. ಹಾಗೆಯೇ ನಿಯಮವನ್ನು ಹಿಂಪಡೆಯುವಂತೆ ಒತ್ತಾಯಿಸಿದ್ದಾರೆ.
ಯುಜಿಸಿ ನಿಯಮ ಏನು ಹೇಳುತ್ತೆ, ಪ್ರಬಲ ಜಾತಿಗಳ ವಿರೋಧವೇಕೆ?
ಜಾತಿ ತಾರತಮ್ಯಕ್ಕೆ ಒಳಗಾಗಿ ದಲಿತ ವಿದ್ಯಾರ್ಥಿಗಳು ರೋಹಿತ್ ವೇಮುಲಾ ಮತ್ತು ಪಾಯಲ್ ತಡ್ವಿ ಆತ್ಮಹತ್ಯೆ ಮಾಡಿಕೊಂಡಿದ್ದರು. ಅದಾದ ಬಳಿಕ 2012ರ ಯುಜಿಸಿ ನಿಯಮಗಳ ಅನುಷ್ಠಾನವನ್ನು ಪ್ರಶ್ನಿಸಿ ರೋಹಿತ್ ವೇಮುಲಾ ಮತ್ತು ಪಾಯಲ್ ತಡ್ವಿ ಅವರ ತಾಯಂದಿರು ಸುಪ್ರೀಂ ಕೋರ್ಟ್ನಲ್ಲಿ ಅರ್ಜಿ ಸಲ್ಲಿಸಿದ್ದರು. ಈ ಅರ್ಜಿಯನ್ನು ಆಲಿಸಿದ್ದ ಸುಪ್ರೀಂ ಕೋರ್ಟ್ ಹೊಸ ನಿಯಮಗಳನ್ನು ಜಾರಿಗೊಳಿಸುವಂತೆ ಯುಜಿಸಿಗೆ ಹೇಳಿತ್ತು. ಸುಪ್ರೀಂ ಸೂಚನೆಯಂತೆ ಕಳೆದ ವರ್ಷ ಫೆಬ್ರವರಿಯಲ್ಲಿ ಈ ನಿಯಮಗಳ ಕರಡನ್ನು ಬಿಡುಗಡೆ ಮಾಡಲಾಗಿತ್ತು.
ಆದರೆ ‘ತಾರತಮ್ಯ’ದ ವ್ಯಾಖ್ಯಾನ ಸೇರಿದಂತೆ ಕರಡಿನ ವಿಭಾಗಗಳ ಬಗ್ಗೆ ವಿದ್ಯಾರ್ಥಿಗಳು ಮತ್ತು ಗುಂಪುಗಳು ಆಕ್ಷೇಪಣೆಗಳನ್ನು ಎತ್ತಿದ್ದವು. ಅಖಿಲ ಭಾರತ ಒಬಿಸಿ ವಿದ್ಯಾರ್ಥಿ ಸಂಘವು ಕರಡಿನಲ್ಲಿ ಸಮಾನತಾ ಸಮಿತಿಗಳಲ್ಲಿ ಮತ್ತು ‘ಜಾತಿ ತಾರತಮ್ಯ’ದ ವ್ಯಾಖ್ಯಾನದಲ್ಲಿ ಒಬಿಸಿಗಳನ್ನು ಹೊರಗಿಡಬಾರದು ಎಂದು ಹೇಳಿತ್ತು. ಭಾಷೆ ಮತ್ತು ಜನಾಂಗೀಯತೆಯ ಆಧಾರದ ಮೇಲೆ ತಾರತಮ್ಯವನ್ನೂ ಸೇರಿಸಬೇಕು ಎಂಬ ಆಗ್ರಹಗಳು ಕೇಳಿಬಂದಿದ್ದವು. ಇದೀಗ ಕೆಲವು ತಿದ್ದುಪಡಿಗಳನ್ನು ಮಾಡಿ ಅಧಿಕೃತವಾಗಿ ನಿಯಮವನ್ನು ಜಾರಿಗೊಳಿಸಿದೆ. ಆದರೆ ಈ ತಾರತಮ್ಯದ ಪಟ್ಟಿಯಲ್ಲಿ ಎಸ್ಸಿ, ಎಸ್ಟಿ, ಒಬಿಸಿ ಮಾತ್ರವಲ್ಲದೆ ಪ್ರಬಲ ಜಾತಿಗಳನ್ನೂ ಸೇರಿಸಬೇಕು ಎಂಬುದು ಪ್ರಬಲ ಜಾತಿಗಳ ಆಗ್ರಹವಾಗಿದೆ.





