ಇತ್ತೀಚೆಗೆ 2025ನೇ ಡಿಸೆಂಬರ್ 26ರಿಂದ 28ರವರೆಗೆ ನವದೆಹಲಿಯಲ್ಲಿ ನಡೆದ ಐದನೇ ರಾಷ್ಟ್ರೀಯ ಮುಖ್ಯ ಕಾರ್ಯದರ್ಶಿಗಳ ಸಮ್ಮೇಳನದಲ್ಲಿ ಕರ್ನಾಟಕ ರಾಜ್ಯದ ಮುಖ್ಯ ಕಾರ್ಯದರ್ಶಿಯವರು ಭಾಗಿಯಾಗಿದ್ದು, ಈ ಸಮ್ಮೇಳನದಲ್ಲಿ ಭಾಗಿಯಾದ ಏಕೈಕ ಮಹಿಳಾ ಮುಖ್ಯ ಕಾರ್ಯದರ್ಶಿ ಎನಿಸಿಕೊಂಡಿದ್ದಾರೆ.
ಮೂರು ದಿನಗಳ ಕಾಲ ನಡೆದ ಈ ಸಮ್ಮೇಳನದಲ್ಲಿ ದೇಶದ ವಿವಿಧ ರಾಜ್ಯಗಳು ಹಾಗೂ ಕೇಂದ್ರಾಡಳಿತ ಪ್ರದೇಶಗಳ ಮುಖ್ಯ ಕಾರ್ಯದರ್ಶಿಗಳು ಭಾಗವಹಿಸಿದ್ದರು. ಈ ಸಮ್ಮೇಳನವು ರಾಷ್ಟ್ರೀಯ ಅಭಿವೃದ್ಧಿ ಆದ್ಯತೆಗಳ ಕುರಿತು ರಚನಾತ್ಮಕ ಮತ್ತು ನಿರಂತರ ಸಂವಾದದ ಮೂಲಕ ಕೇಂದ್ರ–ರಾಜ್ಯ ಪಾಲುದಾರಿಕೆಯನ್ನು ಬಲಪಡಿಸುವ ಗುರಿಯನ್ನು ಹೊಂದಿತ್ತು.
ಇದನ್ನು ಓದಿದ್ದೀರಾ? ನಮ್ಮ ಸಂವಿಧಾನ ನೀಡಿರುವ ಮತದಾನದ ಅಧಿಕಾರವನ್ನು ಮಹಿಳೆಯರು ಚಲಾಯಿಸಬೇಕು: ಶಾಲಿನಿ ರಜನೀಶ್
ಸಹಕಾರಿ ಒಕ್ಕೂಟ ಪರಿಕಲ್ಪನೆಯ ಭಾಗವಾಗಿ, ಈ ಸಮ್ಮೇಳನವು ಕೇಂದ್ರ ಮತ್ತು ರಾಜ್ಯಗಳು ಸಹಕರಿಸುವ ಮಹತ್ವದ ವೇದಿಕೆಯಾಗಿದ್ದು, ದೇಶದ ಮಾನವ ಸಂಪನ್ಮೂಲ ಸಾಮರ್ಥ್ಯವನ್ನು ಹೆಚ್ಚಿಸಲು ಹಾಗೂ ಸಮಗ್ರ ಭವಿಷ್ಯಕ್ಕಾಗಿ ಸುಸ್ಥಿರ ಬೆಳವಣಿಗೆಯ ವೇಗವನ್ನು ಹೆಚ್ಚಿಸಲು ಏಕೀಕೃತ ಮಾರ್ಗಸೂಚಿಗಳನ್ನು ರೂಪಿಸುವಲ್ಲಿ ನಿರ್ಣಾಯಕ ಪಾತ್ರ ವಹಿಸಿದೆ.
ಈ ಸಮ್ಮೇಳನವು ‘ವಿಕಸಿತ ಭಾರತಕ್ಕಾಗಿ ಮಾನವ ಬಂಡವಾಳ’ ಎಂಬ ವಿಷಯದ ಮೇಲೆ ಕೇಂದ್ರೀಕೃತವಾಗಿದ್ದು, ರಾಜ್ಯಗಳು ಹಾಗೂ ಕೇಂದ್ರಾಡಳಿತ ಪ್ರದೇಶಗಳು ಅನುಸರಿಸಬೇಕಾದ ಅತ್ಯುತ್ತಮ ವಿಧಾನಗಳು ಮತ್ತು ತಂತ್ರಗಳನ್ನು ಪ್ರಸ್ತಾಪಿಸಿದೆ.

ಸಮ್ಮೇಳನದಲ್ಲಿ ಆರಂಭಿಕ ಬಾಲ್ಯ ಶಿಕ್ಷಣ, ಶಾಲಾ ಶಿಕ್ಷಣ, ಕೌಶಲ್ಯ ಅಭಿವೃದ್ಧಿ, ಉನ್ನತ ಶಿಕ್ಷಣ, ಕ್ರೀಡೆ ಹಾಗೂ ಪಠ್ಯೇತರ ಚಟುವಟಿಕೆಗಳು ಸೇರಿದಂತೆ ಐದು ಪ್ರಮುಖ ಕ್ಷೇತ್ರಗಳ ವಿಷಯಗಳ ಮೇಲೆ ವಿವರವಾದ ಚರ್ಚೆಗೆ ವಿಶೇಷ ಒತ್ತು ನೀಡಲಾಯಿತು. ಅಲ್ಲದೆ ‘ಆಡಳಿತದಲ್ಲಿ ತಂತ್ರಜ್ಞಾನ – ಅವಕಾಶಗಳು, ಅಪಾಯಗಳು ಮತ್ತು ತಗ್ಗಿಸುವಿಕೆ’, ಸ್ಮಾರ್ಟ್ ಪೂರೈಕೆ ಸರಪಳಿಗಳು, ‘ಒಂದು ರಾಜ್ಯ – ಒಂದು ವಿಶ್ವದರ್ಜೆಯ ಪ್ರವಾಸಿ ತಾಣ’, ಆತ್ಮನಿರ್ಭರ ಭಾರತ ಹಾಗೂ ಸ್ವದೇಶಿ ಚಿಂತನೆಗಳು ಸೇರಿದಂತೆ ಆರು ಮಹತ್ವದ ವಿಷಯಗಳನ್ನೂ ಕೇಂದ್ರೀಕರಿಸಲಾಗಿತ್ತು.
ಶಾಲಿನಿ ರಜನೀಶ್ ಯಾರು?
ಡಾ. ಶಾಲಿನಿ ರಜನೀಶ್ ಅವರು ಕರ್ನಾಟಕ ಸರ್ಕಾರದ ಪ್ರಸ್ತುತ ಮುಖ್ಯ ಕಾರ್ಯದರ್ಶಿಯಾಗಿ ಸೇವೆ ಸಲ್ಲಿಸುತ್ತಿದ್ದು 2024ರ ಜುಲೈನಲ್ಲಿ ನೇಮಕಗೊಂಡಿದ್ದಾರೆ. 1989ರ ಬ್ಯಾಚ್ನ ಐಎಎಸ್ (IAS) ಅಧಿಕಾರಿಯಾಗಿದ್ದು, ತಮ್ಮ ಪತಿ ರಜನೀಶ್ ಗೋಯಲ್ ಅವರ ನಿವೃತ್ತಿಯ ನಂತರ ಪತಿಯ ಸ್ಥಾನಕ್ಕೆಯೇ ನೇಮಕಗೊಂಡಿದ್ದಾರೆ. ಈ ಮೂಲಕ ಕರ್ನಾಟಕದ ಇತಿಹಾಸದಲ್ಲಿ ಪತಿಯ ನಂತರ ಪತ್ನಿ ಮುಖ್ಯ ಕಾರ್ಯದರ್ಶಿ ಹುದ್ದೆ ಅಲಂಕರಿಸಿದ ಮೂರನೇ ಜೋಡಿ ಎಂಬ ಹೆಗ್ಗಳಿಕೆಗೆ ಇವರು ಪಾತ್ರರಾಗಿದ್ದಾರೆ.
ಮನಃಶಾಸ್ತ್ರದಲ್ಲಿ ಚಿನ್ನದ ಪದಕ ವಿಜೇತರಾಗಿರುವ ಶಾಲಿನಿ ರಜನೀಶ್ ಅವರು, ಗ್ರಾಮೀಣಾಭಿವೃದ್ಧಿಯಲ್ಲಿ ಪಿಎಚ್.ಡಿ ಮತ್ತು ಆಸ್ಟ್ರೇಲಿಯಾದಲ್ಲಿ ಎಂಬಿಎ ಪದವಿ ಪಡೆದಿದ್ದಾರೆ. ರಾಜ್ಯ ಸರ್ಕಾರದ ಮಹತ್ವಾಕಾಂಕ್ಷೆಯ ‘ಸಕಾಲ’ ಯೋಜನೆಯನ್ನು ಜಾರಿಗೆ ತರುವಲ್ಲಿ ಶಾಲಿನಿ ಪ್ರಮುಖ ಪಾತ್ರ ವಹಿಸಿದ್ದರು. ಅಲ್ಲದೆ, ಮಹಿಳಾ ಮತ್ತು ಮಕ್ಕಳ ಕಲ್ಯಾಣ, ಶಿಕ್ಷಣ ಮತ್ತು ಆರೋಗ್ಯ ಸೇರಿದಂತೆ ವಿವಿಧ ಇಲಾಖೆಗಳಲ್ಲಿ ಪ್ರಮುಖ ಹುದ್ದೆಗಳನ್ನು ನಿರ್ವಹಿಸಿದ್ದಾರೆ.





