ದಾವಣಗೆರೆಯಲ್ಲಿ ಕಾಂಗ್ರೆಸ್ ಎಂದರೆ ಶಾಮನೂರು ಶಿವಶಂಕರಪ್ಪ ಎಂಬಂತಿದ್ದ ದಾವಣಗೆರೆ ದಕ್ಷಿಣ ಕ್ಷೇತ್ರದ ಶಾಸಕರು, ರಾಜ್ಯ ವಿಧಾನಸಭೆಯ ಅತ್ಯಂತ ಹಿರಿಯ ಕಾಂಗ್ರೆಸ್ ಶಾಸಕರು, ಮಾಜಿ ಸಚಿವ, ಅಖಿಲ ಭಾರತ ವೀರಶೈವ ಮಹಾಸಭೆಯ ರಾಷ್ಟ್ರಾಧ್ಯಕ್ಷ ಶಾಮನೂರು ಶಿವಶಂಕರಪ್ಪ ನಿಧನರಾಗಿದ್ದಾರೆ. ಪ್ರಸ್ತುತ ವಿಧಾನಸಭೆಯಲ್ಲಿ 95 ವರ್ಷದ ಹಿರಿಯ ಶಾಸಕರಾಗಿದ್ದರು.
ವಯೋಸಹಜ ಅನಾರೋಗ್ಯದಿಂದ ಬಳಲುತ್ತಿದ್ದ ಅವರು ಕಳೆದ ಮೂರು ತಿಂಗಳಿನಿಂದ ಬೆಂಗಳೂರಿನಲ್ಲಿ ಕುಟುಂಬದ ಸಂಬಂಧಿಕರ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು. ದಾವಣಗೆರೆ ಸೇರಿದಂತೆ ರಾಜ್ಯದಲ್ಲಿ ಬಾಪೂಜಿ ಶಿಕ್ಷಣ ಸಂಸ್ಥೆಗಳ ಸ್ಥಾಪಕರಾದ ಅವರು ಹಲವು ಶಿಕ್ಷಣ ಕೇಂದ್ರಗಳನ್ನು ಸ್ಥಾಪಿಸಿ, ಸಕ್ಕರೆ ಹಾಗೂ ಡಿಸ್ಟಿಲರಿ ಕೈಗಾರಿಕೆಗಳನ್ನು ನಡೆಸುತ್ತಿದ್ದ ರಾಜ್ಯ ಕಂಡ ಹಿರಿಯ ಶಾಸಕ ಮತ್ತು ರಾಜಕಾರಣಿ.

1970ರಲ್ಲಿ ಅವಿಭಜಿತ ಚಿತ್ರದುರ್ಗ ಜಿಲ್ಲೆಯಲ್ಲಿ ದಾವಣಗೆರೆ ನಗರಸಭೆ ಸದಸ್ಯರಾಗಿ ರಾಜಕೀಯ ಜೀವನ ಆರಂಭಿಸಿದ ಶಾಮನೂರು ಶಿವಶಂಕರಪ್ಪ ರಾಜಕಾರಣದಲ್ಲಿ ನೇರ ಮಾತಿನ ರಾಜಕಾರಣಕ್ಕೆ ಹೆಸರಾಗಿದ್ದು, ವೀರಶೈವ ಲಿಂಗಾಯತ ಸಮುದಾಯದಲ್ಲಿ ತಮ್ಮದೇ ಪ್ರಭಾವ ವಲಯವನ್ನು ಇಟ್ಟುಕೊಂಡಿದ್ದರು. 94ರ ಇಳಿವಯಸ್ಸಿನಲ್ಲಿ ಕೂಡ ಕ್ಷೇತ್ರದಲ್ಲಿ ಸಂಚರಿಸುತ್ತಿದ್ದ ಶಾಮನೂರು ಶಿವಶಂಕರಪ್ಪ ಸಕ್ರಿಯ ರಾಜಕಾರಣಕ್ಕೆ ಹೆಸರಾಗಿದ್ದರು.
1994 ರಲ್ಲಿ ಮೊದಲ ಬಾರಿಗೆ ಶಾಸಕರಾದ ನಂತರ ದಾವಣಗೆರೆ ಜಿಲ್ಲೆಯಲ್ಲಿ ಕಾಂಗ್ರೆಸ್ ಗೆ ಭದ್ರ ಬುನಾದಿ ಹಾಕಿಕೊಟ್ಟಿದ್ದರು. ದಾವಣಗೆರೆಯಲ್ಲಿ ಕಾಂಗ್ರೆಸ್ ಎಂದರೆ ಶಾಮನೂರು ಎನ್ನುವ ಮಟ್ಟಿಗೆ ರಾಜಕಾರಣದಲ್ಲಿ ಪ್ರಭಾವಿಯಾಗಿದ್ದರು. 2023ರಲ್ಲಿ ದಾವಣಗೆರೆ ದಕ್ಷಿಣ ಕ್ಷೇತ್ರದ ಹಾಲಿ ಶಾಸಕರಾಗಿ 27ಸಾವಿರ ಮತಗಳ ಅಂತರದಲ್ಲಿ ಜಯ ಗಳಿಸಿದ್ದರು. ಆರು ಬಾರಿ ಶಾಸಕರಾಗಿ 1997 ರಲ್ಲಿ ಒಂದು ಬಾರಿ ಸಂಸದರಾಗಿ ಸೇವೆ ಸಲ್ಲಿಸಿದ್ದಾರೆ.
ಈ ಸುದ್ದಿ ಓದಿದ್ದೀರಾ? ದಾವಣಗೆರೆ | ಭಾರಿ ಸ್ಪೋಟ ಹಿನ್ನೆಲೆ ಭೂಮಿ ಕಂಪಿಸಿದ ಅನುಭವ: ಭಯದಿಂದ ಬೀದಿಯಲ್ಲಿ ನಿಂತ ಜನ
ರಾಜ್ಯ ಕೆಪಿಸಿಸಿ ಖಜಾಂಚಿಯಾಗಿ ಸುದೀರ್ಘ ಸಮಯದ ಸೇವೆ ಸಲ್ಲಿಸಿದ್ದಾರೆ. ರಾಷ್ಟ್ರ ಮಟ್ಟದಲ್ಲಿ ಕೂಡ ಪ್ರಭಾವ ಹೊಂದಿದ್ದ ಅವರು ರಾಜಕಾರಣದಲ್ಲಿ ಎಂದೂ ಕೂಡ ಬ್ಲಾಕ್ ಮೇಲ್ ರಾಜಕಾರಣ ಮಾಡಲಿಲ್ಲ ಎನ್ನುವುದು ಅವರ ಹೆಗ್ಗಳಿಕೆ. 2017ರಲ್ಲಿ ವಯಸ್ಸಿನ ಕಾರಣದಿಂದ ಸಿದ್ದರಾಮಯ್ಯನವರ ಸಂಪುಟದಿಂದ ಕೈಬಿಟ್ಟಾಗ “ಸರ್ಕಾರಿ ಕಾರಿನಲ್ಲಿ ವಿಧಾನಸೌಧಕ್ಕೆ ಬಂದಿದ್ದೆ, ಹೋಗುವಾಗ ಹೆಲಿಕಾಪ್ಟರ್ ನಲ್ಲಿ ಮನೆಗೆ ಹೋಗುತ್ತೇನೆ” ಎಂದು ನೇರಮಾತಿಗೆ ಚರ್ಚೆಯಾಗಿದ್ದರು.





