ಮಧ್ಯಪ್ರದೇಶದಲ್ಲಿ ಅತೀ ಹೆಚ್ಚು ಅವಧಿಗೆ ಬಿಜೆಪಿಯಿಂದ ಮುಖ್ಯಮಂತ್ರಿಯಾಗಿ ಆಡಳಿತ ನಡೆಸುತ್ತಿರುವ ಹಾಲಿ ಮುಖ್ಯಮಂತ್ರಿ ಶಿವರಾಜ್ ಸಿಂಗ್ ಚೌಹಾಣ್ ಅವರನ್ನು ಈ ಬಾರಿಯ ಚುನಾವಣಾ ಪ್ರಚಾರದಿಂದ ಮೂಲೆಗುಂಪು ಮಾಡಲಾಗುತ್ತಿದೆ ಎಂಬ ಮಾತುಗಳು ಕೇಳಿಬರುತ್ತಿವೆ. ಅಲ್ಲದೆ ಈ ಬಾರಿಯ ಚುನಾವಣೆಯಲ್ಲಿ ಅವರಿಗೆ ಟಿಕೆಟ್ ನಿರಾಕರಿಸುವ ಸಾಧ್ಯತೆಯಿದೆ ಎಂದು ಹೇಳಲಾಗುತ್ತಿದೆ.
ಇದುವರೆಗೂ ವಿಧಾನಸಭೆ ಚುನಾವಣೆಗೆ ಬಿಜೆಪಿಯು ಎರಡು ಅಭ್ಯರ್ಥಿಗಳ ಪಟ್ಟಿಗಳನ್ನು ಹೊರತಂದಿದ್ದು, ಇದರಲ್ಲಿ ಮೂವರು ಕೇಂದ್ರ ಸಚಿವರಾದ ನರೇಂದ್ರ ತೋಮರ್, ಪ್ರಹ್ಲಾದ್ ಪಟೇಲ್ ಮತ್ತು ಫಗ್ಗನ್ ಸಿಂಗ್ ಕುಲಸ್ತೆ ಮತ್ತು ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಕೈಲಾಶ್ ವಿಜಯವರ್ಗಿಯಾ ಹೆಸರುಗಳ ಜೊತೆ ಹಾಲಿ ಸಂಸದರ ಹೆಸರುಗಳಿವೆ. ಎರಡೂ ಪಟ್ಟಿಯಲ್ಲೂ ಕೇಂದ್ರ ಸಚಿವರು ಹಾಗೂ ಸಂಸದರನ್ನು ಸೇರಿಸಿದ್ದರೂ ಹಾಲಿ ಮುಖ್ಯಮಂತ್ರಿ ಶಿವರಾಜ್ ಸಿಂಗ್ ಚೌಹಾಣ್ ಅವರಿಗೆ ಇನ್ನೂ ಟಿಕೆಟ್ ನೀಡಿಲ್ಲದಿರುವುದು ಹಲವು ಅನುಮಾನಗಳಿಗೆ ಕಾರಣವಾಗಿದೆ.
ಪಟ್ಟಿಗಳ ಬಿಡುಗಡೆಯ ಬಗ್ಗೆ ಪ್ರತಿಕ್ರಿಯೆ ನೀಡಿರುವ ವಿರೋಧ ಪಕ್ಷ ಕಾಂಗ್ರೆಸ್, ಆಡಳಿತ ಪಕ್ಷ ಬಿಜೆಪಿ ಈಗಾಗಲೇ ಸೋಲನ್ನು ಒಪ್ಪಿಕೊಂಡಿದೆ ಎಂದು ಲೇವಡಿ ಮಾಡಿದೆ.
ಇಲ್ಲಿಯವರೆಗೆ ಬಿಜೆಪಿ 79 ಅಭ್ಯರ್ಥಿಗಳನ್ನು ಹೆಸರಿಸಲಾಗಿದೆ. ಆದರೆ ಚುನಾವಣೆಗೆ ಇನ್ನೂ 151 ಸ್ಥಾನಗಳನ್ನು ಪ್ರಕಟಿಸಬೇಕಿದೆ. ಮುಖ್ಯಮಂತ್ರಿಯಾದವರಿಗೆ ಮೊದಲ ಪಟ್ಟಿಯಲ್ಲಿಯೇ ಸ್ಥಾನ ನೀಡಬೇಕಿತ್ತು. ಆದರೆ ಎರಡು ಪಟ್ಟಿ ಬಿಡುಗಡೆಯಾದರೂ ಸ್ಥಾನ ನೀಡದಿರುವುದು ಅವರನ್ನು ಮೂಲೆ ಗುಂಪು ಮಾಡುವುದಲ್ಲದೆ ಮತ್ತೇನಿಲ್ಲ ಎಂದು ವಿಪಕ್ಷ ನಾಯಕರು ಟೀಕಿಸಿದ್ದಾರೆ.
ಈ ಸುದ್ದಿ ಓದಿದ್ದೀರಾ? ಕೆನಡಾ | ಸಿಖ್ ಸಮುದಾಯದಿಂದ ಭಾರತದ ವಿರುದ್ಧ ಪ್ರತಿಭಟನೆ; ಮೋದಿ ಭಾವಚಿತ್ರ ತುಳಿದು ಆಕ್ರೋಶ
ಮಧ್ಯಪ್ರದೇಶದ ಮಾಜಿ ಸಿಎಂ ಕಮಲ್ನಾಥ್, “ಚೌಹಾಣ್ ಅವರನ್ನು ಎರಡೂ ಪಟ್ಟಿಯಲ್ಲಿ ಹೆಸರಿಸಲು ವಿಫಲವಾದರೆ ಕೋಟ್ಯಂತರ ಕಾರ್ಯಕರ್ತರ ಪಕ್ಷವೆಂದು ಹೇಳಿಕೊಳ್ಳುವ ಬಿಜೆಪಿಯ ಆಂತರಿಕ ಸೋಲಿನ ಖಚಿತ ಮುದ್ರೆಯಾಗಿದೆ. ಬಿಜೆಪಿ ವಿಶ್ವಾಸ ಕೊರತೆಯ ಬಿಕ್ಕಟ್ಟನ್ನು ಎದುರಿಸುತ್ತಿದೆ. ಈ ಬಾರಿ ತನ್ನ ಅತಿ ದೊಡ್ಡ ಭದ್ರಕೋಟೆಯಲ್ಲಿ ಅತಿ ದೊಡ್ಡ ಸೋಲನ್ನು ಕಾಣಲಿದೆ. ಕಾಂಗ್ರೆಸ್ ದುಪ್ಪಟ್ಟು ಸ್ಥಾನಗಳನ್ನು ಗೆಲ್ಲಲಿದೆ. ಬಿಜೆಪಿಯ ‘ಡಬಲ್ ಇಂಜಿನ್’ ಸರ್ಕಾರ ಸೋಲಿನತ್ತ ಸಾಗುತ್ತಿದೆ” ಎಂದು ಟ್ವಿಟರ್ನಲ್ಲಿ ಪೋಸ್ಟ್ ಮಾಡಿದ್ದಾರೆ.
ಮತ್ತೊಬ್ಬ ಕಾಂಗ್ರೆಸ್ ನಾಯಕ ರಣದೀಪ್ ಸುರ್ಜೇವಾಲಾ, “ಬಿಜೆಪಿ ಈಗ ಪ್ರತಿಪಕ್ಷಗಳಿಗೆ ಹೆದರುತ್ತಿದೆ. ಸೋಲಿನ ಭಯ ಎಲ್ಲೆಡೆ ಆವರಿಸಿದೆ” ಎಂದು ಹೇಳಿದ್ದಾರೆ.
ಕೈ ನಾಯಕರ ಆರೋಪಕ್ಕೆ ತಿರುಗೇಟು ನೀಡಿರುವ ಮುಖ್ಯಮಂತ್ರಿ ಶಿವರಾಜ್ ಸಿಂಗ್ ಚೌಹಾಣ್, “ಕಾಂಗ್ರೆಸ್ ಸರ್ಕಾರದ ಕೃಪೆಯಿಂದ ಹಿಂದುಳಿದ ರಾಜ್ಯವಾಗಿದ್ದ ಮಧ್ಯಪ್ರದೇಶವನ್ನು ಅಭಿವೃದ್ಧಿ ಪಥದತ್ತ ಸಾಗಿಸಿದ್ದು ಬಿಜೆಪಿ ಸರ್ಕಾರ” ಎಂದಿದ್ದಾರೆ.
2018 ರ ಮಧ್ಯಪ್ರದೇಶ ಚುನಾವಣೆಯಲ್ಲಿ ಕಾಂಗ್ರೆಸ್ 114 ಸ್ಥಾನ, ಬಿಜೆಪಿ 109 ಸ್ಥಾನದೊಂದಿಗೆ ಅತಂತ್ರ ವಿಧಾನಸಭೆ ಸೃಷ್ಟಿಯಾಗಿತ್ತು. ಆದಾಗ್ಯೂ ಕಾಂಗ್ರೆಸ್ ಸರ್ಕಾರ ರಚಿಸಿ ಕಮಲ್ನಾಥ್ ಮುಖ್ಯಮಂತ್ರಿಯಾದರು. ಆದರೆ ಕೆಲವು ತಿಂಗಳ ನಂತರ ಜ್ಯೋತಿರಾಧಿಥ್ಯ ಸಿಂಧಿಯಾ ಮತ್ತು ಕೆಲವು ಬಂಡಾಯ ಶಾಸಕರು ಬಿಜೆಪಿಗೆ ಸೇರಿದ ಕಾರಣ ಕಾಂಗ್ರೆಸ್ ಸರ್ಕಾರ ಪತನವಾಗಿ ಕಮಲ್ ನಾಥ್ ರಾಜೀನಾಮೆ ನೀಡಬೇಕಾಯಿತು. ಶಿವರಾಜ್ ಸಿಂಗ್ ಚೌಹಾಣ್ ಪುನಃ ಮುಖ್ಯಮಂತ್ರಿಯಾಗಿದ್ದರು.





