ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರ ಆಪ್ತರಾಗಿರುವ ಶೋಭಾ ಕರದ್ಲಾಜೆ ಅವರು ಕೋಮುವಾದಿ ದ್ವೇಷ ಹರಡುವಲ್ಲಿ ಪ್ರಸಿದ್ಧಿ ಪಡೆದಿದ್ದಾರೆ. 1994ರಿಂದ ರಾಜಕಾರಣದಲ್ಲಿ ಸಕ್ರೀಯವಾಗಿರುವ ಕರಂದ್ಲಾಜೆ ಶಾಸಕಿ, ಸಂಸದೆ, ರಾಜ್ಯ ಸಚಿವೆ ಹಾಗೂ ಕೇಂದ್ರ ಸಚಿವೆಯೂ ಆಗಿದ್ದಾರೆ. ಆದರೆ, ಇಲ್ಲಿಯವರೆಗೂ ಅವರು ಜನರ ಪರವಾಗಿ ಕೆಲಸ ಮಾಡಿದ ಯಾವುದೇ ಉದಾಹರಣೆಗಳಿಲ್ಲ. ಕಳೆದ ಲೋಕಸಭಾ ಚುನಾವಣೆಯಲ್ಲಿ (2019) ಉಡುಪಿ-ಚಿಕ್ಕಮಗಳೂರು ಲೋಕಸಭಾ ಕ್ಷೇತ್ರದಿಂದ ಕಣಕ್ಕಿಳಿದು ಬಹುಮತದಿಂದ ಗೆದ್ದಿದ್ದ ಕರಂದ್ಲಾಜೆ ಈ ಬಾರಿ ಅಲ್ಲಿ ಕಣಕ್ಕಿಳಿದಿಲ್ಲ. ಸ್ವತಃ ಬಿಜೆಪಿ ಕಾರ್ಯಕರ್ತರೇ, ‘ಗೋ ಬ್ಯಾಕ್ ಶೋಭಕ್ಕ’ ಎಂಬ ಘೋಷಣೆ ಮೊಳಗಿಸಿ, ಕ್ಷೇತ್ರದಿಂದ ಹೊರಗಟ್ಟಿದ್ದು, ಅವರ ಇಷ್ಟು ವರ್ಷದ ಕೆಲಸಕ್ಕೆ ಸಾಕ್ಷಿ.
ಬಿಜೆಪಿ ನಾಯಕ ಬಿ.ಎಸ್.ಯಡಿಯೂರಪ್ಪ ಅವರ ಕೃಪಕಟಾಕ್ಷದಿಂದ ಶೋಭಕ್ಕನನ್ನು ಉಡುಪಿ-ಚಿಕ್ಕಮಗಳೂರು ಲೋಕಸಭಾ ಕ್ಷೇತ್ರದಿಂದ ಎತ್ತಂಗಡಿ ಮಾಡಿ ಬೆಂಗಳೂರು ಉತ್ತರದಲ್ಲಿ ಇಳಿಸಲಾಗಿದೆ. ಇಲ್ಲಿಯೂ ಕೂಡ ಬಿಜೆಪಿ ಕಾರ್ಯಕರ್ತರು ‘ಬೇರೆ ಊರಿನ ಕಸವನ್ನು ನಮ್ಮಲ್ಲಿ ತಂದು ಸುರಿಯಬೇಡಿ’ ಎಂದು ಕರಂದ್ಲಾಜೆ ವಿರುದ್ಧ ಪ್ರತಿಭಟನೆ ನಡೆಸಿದ್ದರು. ಆದರೂ, ಶೋಭಕ್ಕ ಬೆಂಗಳೂರು ಉತ್ತರದಲ್ಲಿ ತಮ್ಮ ರಾಜಕೀಯ ಭವಿಷ್ಯಕ್ಕೆ ಉತ್ತರ ಹುಡುಕುತ್ತಿದ್ದಾರೆ.
ಶೋಭಕ್ಕನ ಆರಂಭಿಕ ಜೀವನ
ಶೋಭ ಕರಂದ್ಲಾಜೆ ಅವರು ಚಿಕ್ಕ ವಯಸ್ಸಿನಲ್ಲಿಯೇ ಆರ್ಎಸ್ಎಸ್ ಜೊತೆ ಸಂಬಂಧ ಹೊಂದಿದ್ದವರು. ಆರ್ಎಸ್ಎಸ್ನ ಪೂರ್ಣಾವಧಿಯ ಮಹಿಳಾ ಕಾರ್ಯಕರ್ತರಲ್ಲಿ ಒಬ್ಬರಾಗಿದ್ದರು. ಬಳಿಕ, ಬಿಜೆಪಿಯಲ್ಲಿ ರಾಜಕೀಯ ಆರಂಭಿಸಿದರು.
ದಕ್ಷಿಣ ಕನ್ನಡ ಜಿಲ್ಲೆ ಪುತ್ತೂರು ತಾಲೂಕಿನ ಚಾರ್ವಾಕ ಎಂಬ ಪುಟ್ಟ ಗ್ರಾಮದಲ್ಲಿ 1966ರ ಅಕ್ಟೋಬರ್ 23ರಂದು ಜನಿಸಿದ ಶೋಭಕ್ಕ ಕೋಮುವಾದಿ ಭಾಷಣ, ದ್ವೇಷ ಭಾಷಣಗಳಿಂದ ಖ್ಯಾತಿ ಪಡೆದಿದ್ದಾರೆ. ಅಲ್ಲದೇ, ಅವರ ಕಟ್ಟಾ ಹಿಂದುತ್ವದ ವಿಚಾರ, ಹೇಳಿಕೆಗಳನ್ನು ನೀಡಿ ಹಲವು ಬಾರಿ ವಿವಾದಕ್ಕೂ ಈಡಾಗಿದ್ದಾರೆ.
ಮಂಗಳೂರು ವಿಶ್ವವಿದ್ಯಾಲಯದಿಂದ ಮಾಸ್ಟರ್ ಆಫ್ ಸೋಶಿಯಲ್ ವರ್ಕ್ಸ್ (ಎಂಎಸ್ಡಬ್ಲ್ಯೂ) ವಿಷಯದಲ್ಲಿ ಸ್ನಾತಕೋತ್ತರ ಪದವಿ, ಮೈಸೂರು ವಿಶ್ವವಿದ್ಯಾಲಯದಿಂದ ಸಮಾಜಶಾಸ್ತ್ರದಲ್ಲಿ ಸ್ನಾತಕೋತ್ತರ ಪದವಿ ಪಡೆದಿದ್ದಾರೆ.
ರಾಜಕೀಯ ಜೀವನ
ಶೋಭಾ ಕರಂದ್ಲಾಜೆ ಅವರು ಬಿಜೆಪಿ ಸಾಮಾನ್ಯ ಕಾರ್ಯಕರ್ತೆಯಾಗಿ ತಮ್ಮ ರಾಜಕೀಯ ಜೀವನ ಆರಂಭಿಸಿದರು. 1994ರಲ್ಲಿ ಬಂಟ್ವಾಳ ವಿಧಾನಸಭೆಗೆ ಸ್ಪರ್ಧಿಸಿದ್ದ ಶಕುಂತಲಾ ಶೆಟ್ಟಿಯವರ ಒಡನಾಟದಿಂದ ಶೋಭಾ ಕರಂದ್ಲಾಜೆ ರಾಜಕೀಯ ಪ್ರವೇಶ ಮಾಡಿದ್ದರು. 1997ರಲ್ಲಿ ಉಡುಪಿ ಜಿಲ್ಲೆ ಬಿಜೆಪಿ ಮಹಿಳಾ ಮೋರ್ಚಾ ಅಧ್ಯಕ್ಷರಾಗಿ ಆಯ್ಕೆಯಾಗಿದ್ದರು.
1997ರಲ್ಲಿ ಬೆಂಗಳೂರಿಗೆ ಬಂದ ಶೋಭ, 1999ರಲ್ಲಿ ಬಿ.ಎಸ್.ಯಡಿಯೂರಪ್ಪನವರ ಸಂಕಲ್ಪ ರಥಯಾತ್ರೆಯಲ್ಲಿ ಭಾಗಿಯಾಗಿದ್ದರು. ನಂತರ ಹಲವು ಹೋರಾಟ, ಪಾದಯಾತ್ರೆಗಳಲ್ಲಿ ಭಾಗಿಯಾಗುವ ಮೂಲಕ ರಾಜಕೀಯ ಅನುಭವ ಪಡೆದರು.
ಕರಂದ್ಲಾಜೆ 2000ರಲ್ಲಿ ಬಿಜೆಪಿಯ ಕರ್ನಾಟಕ ಘಟಕದ ಕಾರ್ಯದರ್ಶಿಯಾಗಿ ಆಯ್ಕೆಯಾದರು. ನಂತರ, 2004ರಲ್ಲಿ ಮೊದಲ ಬಾರಿಗೆ ಕರ್ನಾಟಕ ವಿಧಾನ ಪರಿಷತ್ತಿ ಸದಸ್ಯೆಯಾಗಿ ಆಯ್ಕೆಯಾಗಿದ್ದರು. ನಾಲ್ಕು ವರ್ಷಗಳ ನಂತರ, ಪಕ್ಷವು ಅವರಿಗೆ ವಿಧಾನಸಭಾ ಚುನಾವಣೆಯಲ್ಲಿ ಸ್ಪರ್ಧಿಸಲು ಟಿಕೆಟ್ ನೀಡಿತು. 2008ರಲ್ಲಿ ನಡೆದ ವಿಧಾನಸಭೆ ಚುನಾವಣೆಯಲ್ಲಿ ಮೊದಲ ಬಾರಿಗೆ ಬೆಂಗಳೂರಿನ ಯಶವಂತಪುರ ಕ್ಷೇತ್ರದ ಶಾಸಕಿಯಾಗಿ ಆಯ್ಕೆಯಾಗಿದ್ದರು.
ಬಳಿಕ, ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಸಚಿವರಾಗಿ ಕಾರ್ಯನಿರ್ವಹಿಸಿದ್ದರು. ಮೈಸೂರು ಜಿಲ್ಲಾ ಉಸ್ತುವಾರಿ ಸಚಿವರಾಗಿಯೂ ಕೆಲಸ ನಿರ್ವಹಿಸಿದ ಅನುಭವ ಅವರಿಗಿದೆ. 2009ರಲ್ಲಿ ರಾಜಕೀಯ ಭಿನ್ನಾಭಿಪ್ರಯಾಗಳಿಂದ ತಮ್ಮ ಸ್ಥಾನಗಳಿಗೆ ರಾಜೀನಾಮೆ ನೀಡಿದ್ದರು. 2010ರಲ್ಲಿ ಕರ್ನಾಟಕ ಸರ್ಕಾರದಲ್ಲಿ ಇಂಧನ ಸಚಿವೆಯಾಗಿ ಮರು ಆಯ್ಕೆಯೂ ಆದರು.
ಕೆಜೆಪಿ ಸೇರ್ಪಡೆ
ಬೆಂಬಲಿಗರಿಂದ ‘ಶೋಭಕ್ಕ’ ಎಂದು ಕರೆಯಲ್ಪಟ್ಟ ಕರಂದ್ಲಾಜೆ, ಜಗದೀಶ್ ಶೆಟ್ಟರ್ ನೇತೃತ್ವದ ಸಂಪುಟದಲ್ಲಿ 2010ರಲ್ಲಿ ಇಂಧನ ಸಚಿವರಾಗಿದ್ದರು. ಬಳಿಕ, ಆಹಾರ ಮತ್ತು ನಾಗರಿಕ ಸರಬರಾಜು ಖಾತೆ ನೀಡಲಾಯಿತು. ಕುತೂಹಲದ ಸಂಗತಿಯೆಂದರೆ, ಆಗ ಅವರು ರಾಜ್ಯ ಸಚಿವ ಸಂಪುಟದಲ್ಲಿ ಏಕೈಕ ಮಹಿಳಾ ಸಚಿವರಾಗಿದ್ದರು.
ಇದಲ್ಲದೆ, ಪಕ್ಷದ ಒಳಗಿನ ಆಂತರಿಕ ಭಿನ್ನಾಭಿಪ್ರಾಯದಿಂದ ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರು 2012ರಲ್ಲಿ ಬಿಜೆಪಿ ತೊರೆದು ಕೆಜೆಪಿ (ಕರ್ನಾಟಕ ಜನತಾ ಪಕ್ಷ) ಕಟ್ಟಿದ್ದರು. ಯಡಿಯೂರಪ್ಪ ಜೊತೆ ಕೆಜೆಪಿ ಸೇರಿದ ಶೋಭ, ತಮ್ಮ ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡಿ, ಬಿಜೆಪಿಯಿಂದ ಹೊರಬಂದು ಕೆಜೆಪಿ ಸೇರಿದ್ದರು. 2013ರಲ್ಲಿ ಕೆಜೆಪಿಯಿಂದ ಸ್ಪರ್ಧಿಸಿ ಬಿಜೆಪಿಯ ಸುರೇಶ್ ಕುಮಾರ್ ವಿರುದ್ಧ ಸೋಲುಂಡಿದ್ದರು. ಚುನಾವಣೆಯ ನಂತರ 2013ರಲ್ಲಿ ಬಿಜೆಪಿ ಜೊತೆ ಬಿಜೆಪಿ ವಿಲೀನವಾದ ಬಳಿಕ, ಕರಂದ್ಲಾಜೆ ಕೂಡ ಬಿಜೆಪಿ ಸೇರಿದರು.
2014ರ ಲೋಕಸಭೆ ಚುನಾವಣೆಯಲ್ಲಿ ಬಿಜೆಪಿಯಿಂದ ಉಡುಪಿ-ಚಿಕ್ಕಮಗಳೂರು ಕ್ಷೇತ್ರದಿಂದ ಸ್ಪರ್ಧಿಸಿ ಗರಿಷ್ಠ ಮತಗಳ ಅಂತರದಿಂದ ಗೆಲುವು ಕಂಡಿದ್ದರು. 2019ರ ಸಾರ್ವತ್ರಿಕ ಚುನಾವಣೆಯಲ್ಲಿಯೂ ಅವರು ಉಡುಪಿ ಚಿಕ್ಕಮಗಳೂರಿನಿಂದ ಸ್ಪರ್ಧಿಸಿ ಸತತ ಎರಡನೇ ಬಾರಿಗೆ ಗೆಲುವು ಕಂಡರು. 2019ರಲ್ಲಿ ಗೆದ್ದ ಬಳಿಕ, ಕೇಂದ್ರ ಸರ್ಕಾರದಲ್ಲಿ ಇಂಧನ ಸ್ಥಾಯಿ ಸಮಿತಿಯ ಸದಸ್ಯರಾಗಿ, ನಂತರ ಮಹಿಳಾ ಸಬಲೀಕರಣ ಸಮಿತಿ ಮತ್ತು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಸಚಿವಾಲಯದ ಸಲಹಾ ಸಮಿತಿಗೆ ಆಯ್ಕೆಯಾದರು. 2021ರಲ್ಲಿ ಕೇಂದ್ರ ಕೃಷಿ ಮತ್ತು ರೈತ ಕಲ್ಯಾಣ ಖಾತೆಯ ರಾಜ್ಯ ಸಚಿವೆಯಾಗಿ ಆಯ್ಕೆಯಾದರು. ಕರ್ನಾಟಕದಲ್ಲಿ ಬಿಜೆಪಿಯ ರಾಜ್ಯ ಉಪಾಧ್ಯಕ್ಷೆಯೂ ಆಗಿದ್ದಾರೆ.
ಈ ಸುದ್ದಿ ಓದಿದ್ದೀರಾ? ತುಂಬಾ ಕೆಲಸ ಮಾಡಿದ್ದೇನೆ, ಯಾವುದೂ ನೆನಪಿಲ್ಲ ಎಂದ ಬಿಜೆಪಿ ಅಭ್ಯರ್ಥಿ ಹೇಮಾ ಮಾಲಿನಿ!
ಕರಂದ್ಲಾಜೆ ರಾಜಕೀಯ ಜೀವನದಲ್ಲಿ ಎದುರಿಸಿದ ವಿವಾದಗಳು
ಶೋಭಾ ಕರಂದ್ಲಾಜೆ ಅವರು ಆಗಾಗ ಕೋಮುದ್ವೇಷಿ ಭಾಷಣ ಮಾಡಿ ಟೀಕೆಗೆ ಗುರಿಯಾಗುತ್ತಾರೆ. ಕರಾವಳಿ ಪ್ರದೇಶದಲ್ಲಿ ಬಲಪಂಥೀಯರ ಕಾರ್ಯಕರ್ತರ ಮೇಲೆ ಉಂಟಾಗುವ ದಾಳಿಗಳ ವಿರುದ್ಧ ಶೋಭಾ ಪ್ರಚೋದನಾಕಾರಿ ಹೇಳಿಕೆ ನೀಡುವ ಮೂಲಕವೇ ಪಕ್ಷದೊಳಗೆ ಗುರುತಿಸಿಕೊಂಡಿದ್ದಾರೆ.
ಧಾರ್ಮಿಕ ದ್ವೇಷ ಪ್ರಚೋದನೆ ಆರೋಪದ ಮೇಲೆ ಕೇರಳ ಪೊಲೀಸರು 2020ರ ಜನವರಿಯಲ್ಲಿ ಶೋಭಾ ಕರಂದ್ಲಾಜೆ ವಿರುದ್ಧ ಎಫ್ಐಆರ್ ದಾಖಲಿಸಿದ್ದರು. 2019ರ ಪೌರತ್ವ (ತಿದ್ದುಪಡಿ) ಕಾಯ್ದೆಯನ್ನು ಬೆಂಬಲಿಸಿದ ಕಾರಣ ಮಲಪ್ಪುರಂ ಜಿಲ್ಲೆಯ ಹಲವಾರು ಹಿಂದೂ ಕುಟುಂಬಗಳಿಗೆ ನೀರು ನಿರಾಕರಿಸಲಾಗುತ್ತಿದೆ ಎಂದು ಅವರು ಬರೆದುಕೊಂಡಿರುವ ಟ್ವೀಟ್ ಆಧರಿಸಿ ಪ್ರಕರಣ ದಾಖಲಾಗಿತ್ತು.
2020ರ ಫೆಬ್ರವರಿಯಲ್ಲಿ ಮಂಗಳೂರಿನಲ್ಲಿ ನಡೆಯುತ್ತಿದ್ದ ಸಿಎಎ ವಿರುದ್ಧದ ಪ್ರತಿಭಟನಯಲ್ಲಿ ಕೇರಳಿಗರು ಹೆಚ್ಚಾಗಿ ಭಾಗಿಯಾಗುತ್ತಿದ್ದಾರೆ. ಕೇರಳದಿಂದ ಕರ್ನಾಟಕಕ್ಕೆ ಬರುವವರನ್ನು ಪರಿಶೀಲಿಸಲು ರಾಜ್ಯದ ಗಡಿಯಲ್ಲಿ ಪೊಲೀಶರನ್ನು ಹೆಚ್ಚಿಸಬೇಕು ಎಂದು ಬೇಡಿಕೆ ಇಟ್ಟು, ಕರಾವಳಿಗರ ಕೆಂಗಣ್ಣಿಗೆ ಗುರಿಯಾಗಿದ್ದರು.
ಬೆಂಗಳೂರಿನ ರಾಮೇಶ್ವರಂ ಕೆಫೆಯಲ್ಲಿ ನಡೆದ ಬಾಂಬ್ ಸ್ಫೋಟಕ್ಕೂ ತಮಿಳುನಾಡಿಗೂ ಸಂಬಂಧವಿದೆ ಎಂದು ಹೇಳಿದ್ದ ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆ ಹೊಸ ವಿವಾದ ಸೃಷ್ಟಿಸಿಕೊಂಡಿದ್ದರು. ಬಳಿಕ, ತಮಿಳರ ಕ್ಷಮೆ ಕೇಳಿದರು. ಅವರ ಹೇಳಿಕೆ ವಿರುದ್ಧ ಮದುರೈ ನಗರ ಪೊಲೀಸರು ಪ್ರಕರಣ ದಾಖಲಿಸಿದ್ದರು.




