ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ದೀರ್ಘಾವಧಿ ಸಿಎಂ ಆಗಿರುವುದನ್ನು ಸಂಭ್ರಮಿಸುತ್ತಿರುವ ಸಿದ್ದರಾಮಯ್ಯ ಅಭಿಮಾನಿ ಬಳಗವು ಜನವರಿ 6ರಂದು ನಾಟಿ ಕೋಳಿ ಔತಣಕೂಟವನ್ನು ಏರ್ಪಡಿಸಲಿದೆ. ಅಹಿಂದ ವರ್ಗದ ಯುವ ಸಮೂಹ ಈ ಔತಣಕೂಟವನ್ನು ಆಯೋಜಿಸುತ್ತಿದೆ.
ಜತೆಜತೆಗೆ ಆಹಾರ ಪದ್ದತಿಯು ಮೇಲೆ ಮನುವಾದಿಗಳ ಪ್ರಹಾರದ ವಿರುದ್ಧ ನಮ್ಮ ಆಹಾರ ನಮ್ಮ ಹಕ್ಕು ಎಂದು ಘೋಷಣೆಯನ್ನು ಅಹಿಂದ ವರ್ಗದ ಯುವ ಸಮೂಹ ಕೂಗಿದೆ.
ಇದನ್ನು ಓದಿದ್ದೀರಾ? ʻಅಧಿಕಾರ ಹಂಚಿಕೆʼ ಎಂಬ ʻನಾಟಕ-ಕರ್ನಾಟಕʼಕ್ಕೆ ಡಾ ಯತೀಂದ್ರ ತೆರೆ ಎಳೆದರೇ?
ದೇವರಾಜ್ ಅರಸು ಅವರು 1972–1977 ಮತ್ತು 1978–1980 ನಡುವೆ ಒಟ್ಟು ಸುಮಾರು 7 ವರ್ಷ 4 ತಿಂಗಳು ಮುಖ್ಯಮಂತ್ರಿಯಾಗಿದ್ದರು. ಸಿದ್ದರಾಮಯ್ಯ ಅವರು 2013–2018 ಐದು ವರ್ಷಗಳ ಕಾಲ, 2023ರಿಂದ ಪ್ರಸ್ತುತ 7 ವರ್ಷಕ್ಕಿಂತ ಹೆಚ್ಚು ಕಾಲ ಸಿಎಂ ಆಗಿದ್ದಾರೆ. 2025ರ ಮಧ್ಯಭಾಗಕ್ಕೆ ದೇವರಾಜ್ ಅರಸು ಅವರ ಅವಧಿಯನ್ನು ಮೀರಿಸಿದ್ದಾರೆ.
ಈ ನಿಟ್ಟಿನಲ್ಲಿ ಅಹಿಂದ ವರ್ಗದ ಯುವ ಸಮೂಹವು ನಾಟಿ ಕೋಳಿ ಔತಣಕೂಟವನ್ನು ಬೆಂಗಳೂರಿನ ತುಮಕೂರು ರಸ್ತೆಯ ಭವಾನಿ ನಗರದಲ್ಲಿ ಆಯೋಜಿಸಿದೆ.

ಈ ಬಗ್ಗೆ ಮಾತನಾಡಿರುವ ಅಂಹಿದ ಯುವ ನಾಯಕರು, “ಸಿದ್ದರಾಮಯ್ಯ ಅವರನ್ನು ವಿರೋಧಿಸುವುದಕ್ಕಾಗಿ ಅಹಿಂದ, ಹಿಂದುಳಿದ ವರ್ಗಗಳ ಆಹಾರ ಪದ್ಧತಿಯ ಮೇಲೆ ದಾಳಿ ನಡೆಸಲಾಗುತ್ತದೆ. ಸಿದ್ದರಾಮಯ್ಯ ಅವರು ಮೀನು, ಚಿಕನ್ ತಿಂದು ದೇವಸ್ಥಾನ ಹೋದರು. ಹನುಮ ಜಯಂತಿ ಕೋಳಿ ತಿಂದರು ಎಂಬ ಆರೋಪಗಳನ್ನು ಮಾಡಲಾಗುತ್ತಿದೆ. ಇದು ಸಿದ್ದರಾಮಯ್ಯ ಅವರ ಮೇಲೆ ಅಲ್ಲ, ಅಹಿಂದ ವರ್ಗದ ಆಹಾರ ಪದ್ಧತಿಯ ಮೇಲೆ ನಡೆಸುತ್ತಿರುವ ದಾಳಿಯಾಗಿದೆ” ಎಂದು ಹೇಳಿದ್ದಾರೆ.
“ನಮ್ಮ ಆಹಾರ ಪದ್ಧತಿಯನ್ನು ನೇರವಾಗಿ ವಿರೋಧಿಸಲಾಗದೆ, ಪರೋಕ್ಷವಾಗಿ ವಿರೋಧಿಸುತ್ತಿದ್ದಾರೆ. ನಮ್ಮ ಆಹಾರ ಪದ್ಧತಿಯ ವಿರುದ್ಧವಾಗಿ ನಡೆಸುತ್ತಿರುವ ಹೋರಾಟದ ವಿರುದ್ಧವಾಗಿ ನಾವು ಸಾರ್ವಜನಿಕವಾಗಿ ನಾಟಿ ಕೋಳಿ ಔತಣಕೂಟವನ್ನು ಮಾಡುತ್ತಿದ್ದೇವೆ. ಪ್ರತಿರೋಧವೊಡ್ಡುವುದಕ್ಕಾಗಿ ಈ ಸಮ್ಮೇಳನವನ್ನು ಮಾಡುತ್ತಿದ್ದೇವೆ. ಶೀಘ್ರವೇ ಮೆನು ಮಾಹಿತಿ ನೀಡಲಾಗುವುದು” ಎಂದು ತಿಳಿಸಿದ್ದಾರೆ.





