ಸಮೀಕ್ಷೆಯಲ್ಲಿ ಭಾಗವಹಿಸಲು ಹಿಂದೇಟು ಹಾಕಿದ ಇನ್ಫೋಸಿಸ್ ಸಂಸ್ಥಾಪಕ ಎನ್.ಆರ್. ನಾರಾಯಣ ಮೂರ್ತಿ ಮತ್ತು ಅವರ ಪತ್ನಿ ಸುಧಾ ಮೂರ್ತಿ ಅವರನ್ನು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಟೀಕಿಸಿದ್ದಾರೆ. “ಇನ್ಫೋಸಿಸ್ನವರು ಬೃಹಸ್ಪತಿಗಳಾ” ಎಂದು ಸಿಎಂ ಪ್ರಶ್ನಿಸಿದ್ದಾರೆ. ಹಾಗೆಯೇ, “ಇದು ಬರೀ ಹಿಂದುಳಿದ ವರ್ಗಗಳ ಸಮೀಕ್ಷೆಯಲ್ಲ ಬದಲಾಗಿ ಎಲ್ಲಾ ವರ್ಗಗಳ ಸಮೀಕ್ಷೆ” ಎಂದು ಸ್ಪಷ್ಟಪಡಿಸಿದ್ದಾರೆ.
ಮೈಸೂರಿನ ಮಂಡಕಳ್ಳಿ ವಿಮಾನ ನಿಲ್ದಾಣದಲ್ಲಿ ಮಾಧ್ಯಮ ಪ್ರತಿನಿಧಿಗಳಿಗೆ ಪ್ರತಿಕ್ರಿಯಿಸಿದ ಮುಖ್ಯಮಂತ್ರಿ, “ಸಮೀಕ್ಷೆಯಲ್ಲಿ ಭಾಗಿಯಾಗುವುದು ಬಿಡುವುದು ಅವರಿಗೆ ಬಿಟ್ಟದ್ದು. ಆದರೆ ಇದು ಬರೀ ಹಿಂದುಳಿದ ವರ್ಗಗಳ ಸಮೀಕ್ಷೆಯಲ್ಲ. ಅವರಿಗೆ ಅರ್ಥವಾಗದಿದ್ದರೆ, ನಾನು ಏನು ಮಾಡಬಹುದು? ಅವರು ಇನ್ಫೋಸಿಸ್ ಆಗಿರುವುದರಿಂದ, ಅವರು ಎಲ್ಲವನ್ನೂ ತಿಳಿದಿದ್ದಾರೆ ಎಂದು ಅರ್ಥವೇ” ಎಂದು ಪ್ರಶ್ನಿಸಿದರು.
ಇದನ್ನು ಓದಿದ್ದೀರಾ? ನಾವು ಹಿಂದುಳಿದವರಲ್ಲ; ಜಾತಿವಾರು ಸಮೀಕ್ಷೆಯಲ್ಲಿ ಭಾಗವಹಿಸಲು ನಾರಾಯಣ ಮೂರ್ತಿ-ಸುಧಾ ಮೂರ್ತಿ ನಿರಾಕರಣೆ
“ನಾವು ಹಲವು ಬಾರಿ ಸ್ಪಷ್ಟಪಡಿಸಿದ್ದೇವೆ. ಆದರೂ ಸುಧಾ ಮತ್ತು ನಾರಾಯಣ ಮೂರ್ತಿ ಇದನ್ನು ಹಿಂದುಳಿದ ವರ್ಗಗಳ ಸಮೀಕ್ಷೆ ಎಂದು ಭಾವಿಸಿದ್ದಾರೆ. ಅದು ತಪ್ಪು. ಕೇಂದ್ರ ಸರ್ಕಾರವೂ ಸಮೀಕ್ಷೆ ನಡೆಸುತ್ತಿದೆ. ಅವರಿಗೆ ತಪ್ಪು ಮಾಹಿತಿಯಿದೆ” ಎಂದರು.
ಸಮೀಕ್ಷೆ ನಡೆಸುವ ತಂಡ ಮನೆಗೆ ಭೇಟಿ ನೀಡಿದಾಗ ಮೂರ್ತಿ ದಂಪತಿ, “ನಮ್ಮ ಮನೆಯಲ್ಲಿ ಸಮೀಕ್ಷೆ ನಡೆಸುವುದು ನಮಗೆ ಇಷ್ಟವಿಲ್ಲ. ನಾವು ಯಾವುದೇ ಹಿಂದುಳಿದ ಸಮುದಾಯಕ್ಕೆ ಸೇರಿದವರಲ್ಲ. ಆದ್ದರಿಂದ ಇಂತಹ ಸಮೀಕ್ಷೆಯಲ್ಲಿ ಭಾಗವಹಿಸಲ್ಲ” ಎಂದು ಹೇಳಿದ್ದಾರೆ. ಹಾಗೆಯೇ ಸಮೀಕ್ಷೆಯ ನಮೂನೆಯಲ್ಲಿ ಈ ಬಗ್ಗೆ ಕಾರಣ ಬರೆದು ಸಹಿ ಮಾಡಿದ್ದಾರೆ. ದಂಪತಿ ನೀಡಿದ ಈ ಸ್ವಯಂ ದೃಢೀಕರಣ ಪತ್ರವು ಸಾಮಾಜಿಕ ಜಾಲತಾಣದಲ್ಲಿ ಭಾರಿ ವೈರಲ್ ಆಗಿದ್ದು, ಪರ-ವಿರೋಧ ಚರ್ಚೆ ನಡೆದಿದೆ.
ಇನ್ನು ಮೂರ್ತಿ ದಂಪತಿ ನಿರ್ಧಾರಕ್ಕೆ ಪ್ರತಿಕ್ರಿಯಿಸಿರುವ ಉಪಮುಖ್ಯಮಂತ್ರಿ ಡಿ ಕೆ ಶಿವಕುಮಾರ್, “ನಾವು ಯಾರನ್ನೂ ಸಮೀಕ್ಷೆಯಲ್ಲಿ ಭಾಗವಹಿಸಲು ಒತ್ತಾಯಿಸುವುದಿಲ್ಲ. ಇದು ಅವರವರ ಇಚ್ಛೆ” ಎಂದು ಹೇಳಿದ್ದಾರೆ.





