ಪಶ್ಚಿಮ ಬಂಗಾಳದ ಪುರುಲಿಯಾ ಜಿಲ್ಲೆಯ ರಾಣಿಬಂಧ್ ವಿಧಾನಸಭಾ ಪ್ರದೇಶದಲ್ಲಿ ಮತ್ತೋರ್ವ ಬೂತ್ ಮಟ್ಟದ ಅಧಿಕಾರಿ- ಬಿಎಲ್ಒ ಭಾನುವಾರ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ವೃತ್ತಿಯಲ್ಲಿ ಮುಖ್ಯೋಪಾಧ್ಯಾಯರಾಗಿದ್ದ ಬಿಎಲ್ಒಗೆ ಮತದಾರರ ಪಟ್ಟಿ ವಿಶೇಷ ತೀವ್ರ ಪರಿಷ್ಕರಣೆ (ಎಸ್ಐಆರ್) ಪ್ರಕ್ರಿಯೆಯಿಂದ ಒತ್ತಡ ಉಂಟಾಗಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ಕುಟುಂಬ ಆರೋಪಿಸಿದೆ.
ಪೊಲೀಸರು ರಾಣಿಬಂಧ್ ಪ್ರದೇಶದ ರಾಜ್ಯ ಸರ್ಕಾರಿ ಪ್ರಾಯೋಜಿತ ರಾಜಕತಾ ಮಜೆರ್ಪರಾ ಪ್ರಾಥಮಿಕ ಶಾಲೆಯ ಮುಖ್ಯೋಪಾಧ್ಯಾಯರಾಗಿದ್ದ ಬಿಎಲ್ಒ ಹರಧನ್ ಮಂಡಲ್ ಅವರು ಬರೆದಿದ್ದ ಡೆತ್ ನೋಟ್ ಅನ್ನು ವಶಪಡಿಸಿಕೊಂಡಿದ್ದಾರೆ. ಪೊಲೀಸರು ವಶಪಡಿಸಿಕೊಂಡ ಬಂಗಾಳಿಯಲ್ಲಿ ಬರೆಯಲಾದ ಡೆತ್ ನೋಟ್ನಲ್ಲಿ “ನನಗೆ ಕೆಲಸದ ಒತ್ತಡವನ್ನು ಸಹಿಸಲಾಗುತ್ತಿಲ್ಲ. ವಿದಾಯ” ಎಂದು ಬರೆಯಲಾಗಿದೆ.
ಇದನ್ನು ಓದಿದ್ದೀರಾ? ಬಿಜೆಪಿ-ಆರ್ಎಸ್ಎಸ್ನ ‘ಲೆಕ್ಕಾಚಾರದ ರಾಜಕೀಯ ಯೋಜನೆ’ಯೇ ಎಸ್ಐಆರ್: ಸಿಪಿಎಂ ಆರೋಪ
ಸದ್ಯ ಭಾನುವಾರ ಮೃತಪಟ್ಟ ಬಿಎಲ್ಒ ಮೃತದೇಹವನ್ನು ಮರಣೋತ್ತರ ಪರೀಕ್ಷೆಗಾಗಿ ಸರ್ಕಾರಿ ಸ್ವಾಮ್ಯದ ಬಂಕುರಾ ಸಮ್ಮಿಲಾನಿ ವೈದ್ಯಕೀಯ ಕಾಲೇಜು ಆಸ್ಪತ್ರೆಯ ಶವಾಗಾರಕ್ಕೆ ಕಳುಹಿಸಲಾಗಿದೆ. ಪೊಲೀಸರು ಘಟನೆಯ ತನಿಖೆ ನಡೆಸುತ್ತಿದ್ದಾರೆ. ಶಾಲೆಯಲ್ಲೇ ಬಿಎಲ್ಒ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಚುನಾವಣಾ ಆಯೋಗವು ಹರಧನ್ ಮಂಡಲ್ ಅವರನ್ನು ರಾಣಿಬಂಧ್ ವಿಧಾನಸಭೆಯ ವ್ಯಾಪ್ತಿಯ 206ನೇ ಮತಗಟ್ಟೆಯ ಬಿಎಲ್ಒ ಆಗಿ ನೇಮಿಸಿತ್ತು.
“2002ರಲ್ಲಿ ರಾಜ್ಯದಲ್ಲಿ ನಡೆದ ಕೊನೆಯ SIR ಪ್ರಕ್ರಿಯೆಯ ಎಣಿಕೆ ನಮೂನೆಗಳೊಂದಿಗೆ ಯಾವುದೇ ಸಂಬಂಧವಿಲ್ಲದ ಕಾರಣ, ಇಂದು ವಿಚಾರಣೆಗೆ ಹಾಜರಾಗಲು ರಾಷ್ಟ್ರೀಯ ಚುನಾವಣಾ ಸಂಸ್ಥೆಯಿಂದ ಬೂತ್ನ ಹಲವಾರು ಮತದಾರರಿಗೆ ಸಮನ್ಸ್ ನೀಡಲಾಗಿದೆ. ಆದ್ದರಿಂದಾಗಿ ಬೆಳಿಗ್ಗೆ 10 ಗಂಟೆ ಸುಮಾರಿಗೆ ಮನೆಯಿಂದ ಹೊರಟ ಹರಧನ್ ಅವರು, ಹಿಂತಿರುಗಲಿಲ್ಲ” ಎಂದು ಕುಟುಂಬಸ್ಥರು ಹೇಳಿದ್ದಾರೆ.
ನವೆಂಬರ್ 4ರಂದು ಪಶ್ಚಿಮ ಬಂಗಾಳದಲ್ಲಿ ಎಸ್ಐಆರ್ ಪ್ರಕ್ರಿಯೆ ಆರಂಭವಾಗಿದ್ದು, ಈವರೆಗೆ ಕೆಲಸದ ಹೊರೆ ಮತ್ತು ಒತ್ತಡದಿಂದಾಗಿ ಆರು ಬಿಎಲ್ಒಗಳು ಸಾವನ್ನಪ್ಪಿದ್ದಾರೆ. ದೇಶಾದ್ಯಂತ ಕನಿಷ್ಠ 33 ಬೂತ್ ಮಟ್ಟದ ಅಧಿಕಾರಿಗಳು (BLO) ಮೃತಪಟ್ಟಿದ್ದಾರೆ. ಈ ಪೈಕಿ ಕನಿಷ್ಠ 9 ಮಂದಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ.
ಉತ್ತರ ಪ್ರದೇಶ, ಪಶ್ಚಿಮ ಬಂಗಾಳ, ಮಧ್ಯಪ್ರದೇಶ, ಗುಜರಾತ್, ರಾಜಸ್ಥಾನ ಮತ್ತು ಕೇರಳ ರಾಜ್ಯಗಳಲ್ಲಿ ಇಂತಹ ಸಾವುಗಳು ವರದಿಯಾಗಿವೆ. ಪಶ್ಚಿಮ ಬಂಗಾಳವೊಂದರಲ್ಲೇ ಎಸ್ಐಆರ್ ಪ್ರಕ್ರಿಯೆಗೆ ಸಂಬಂಧಿಸಿದಂತೆ 40 ಸಾವುಗಳು ಸಂಭವಿಸಿವೆ ಎಂದು ಅಲ್ಲಿನ ಆಡಳಿತ ಪಕ್ಷ ಟಿಎಂಸಿ ಪ್ರತಿಪಾದಿಸಿದೆ.
ನೆನಪಿಡಿ: ಸಮಸ್ಯೆಗಳಿಗೆ ಆತ್ಮಹತ್ಯೆ ಪರಿಹಾರವಲ್ಲ… ಆತ್ಮಹತ್ಯೆಗಳ ಕುರಿತು ಚರ್ಚಿಸುವುದು ಕೂಡ ಕೆಲವರಿಗೆ ಪ್ರಚೋದನೆ ನೀಡಬಹುದು. ಸಮಸ್ಯೆಗಳ ಬಗ್ಗೆ ಆಪ್ತರೊಂದಿಗೆ ಹಂಚಿಕೊಳ್ಳುವುದರಿಂದ, ಸಮಾಲೋಚನೆ ನಡೆಸುವುದರಿಂದ ಆತ್ಮಸ್ಥೈರ್ಯ ಹೆಚ್ಚುತ್ತದೆ. ಆತ್ಮಹತ್ಯೆಗಳನ್ನು ತಡೆಯಬಹುದು. ತುರ್ತು ಪರಿಸ್ಥಿತಿಯಿದ್ದರೆ ಕರೆ ಮೂಲಕ ವೈದ್ಯರನ್ನು ಸಂಪರ್ಕಿಸಿ. ಬೆಂಗಳೂರು ಸಹಾಯವಾಣಿ 080-25497777, ನಿಮಾನ್ಸ್ ಸಹಾಯವಾಣಿ 080-46110007, ಆರೋಗ್ಯ ಸಹಾಯವಾಣಿ 104.





