ಈ ಹಿಂದೆ ಕೇಂದ್ರದ ನೀತಿಗಳನ್ನು ಶ್ಲಾಘಿಸಿದವರು ಸೋನಮ್. ಸರ್ಕಾರದ 'ಮಿಷನ್ ಲೈಫ್' ನಂತಹ ಅಭಿಯಾನವನ್ನು ಹಾಡಿಹೊಗಳಿದವರು. ಆದರೆ ಲಡಾಖಿಗರ ಬೇಡಿಕೆಗಳನ್ನು ಮುಂದಿಟ್ಟು ಕೇಂದ್ರ ಸರ್ಕಾರದ ಧೋರಣೆಗಳನ್ನು ಪ್ರಶ್ನಿಸುತ್ತಿದ್ದಂತೆ ಕೇಂದ್ರದ ಪಾಲಿಗೆ ಸೋನಮ್ ವಿರೋಧಿಯಾದರು!
ಬಾಲಿವುಡ್ನ ಖ್ಯಾತ ಸಿನಿಮಾ ‘ಥ್ರೀ ಇಡಿಯಟ್ಸ್’ನ ಸ್ಪೂರ್ತಿ, ಇಂಜಿನಿಯರ್, ಶೈಕ್ಷಣಿಕ ಸುಧಾರಕ, ಪರಿಸರವಾದಿ, ಲಡಾಖ್ ಹೋರಾಟಗಾರ ಸೋನಮ್ ವಾಂಗ್ಚುಕ್ ರಾಷ್ಟ್ರೀಯ ಭದ್ರತಾ ಕಾಯ್ದೆ (NSA) ಅಡಿಯಲ್ಲಿ ಬಂಧನಕ್ಕೆ ಒಳಗಾಗಿ, ಜೋಧಪುರ ಜೈಲು ಸೇರಿ ನೂರು ದಿನಗಳಾಗಿವೆ. ಲಡಾಖ್ಗೆ ರಾಜ್ಯ ಸ್ಥಾನಮಾನ ನೀಡಬೇಕು, ಆರನೇ ಪರಿಚ್ಛೇದಕ್ಕೆ ಸೇರ್ಪಡೆ ಮಾಡಬೇಕು- ಹೀಗೆ ಲಡಾಖಿಗರ ನಾಲ್ಕು ಪ್ರಮುಖ ಬೇಡಿಕೆಗಳಿಗೆ ಧ್ವನಿ ಜೋಡಿಸಿದವರು ಸೋನಮ್. ಅಷ್ಟು ಮಾತ್ರವಲ್ಲದೆ ದೇಶಕ್ಕೆ ಅಗಾಧ ಕೊಡುಗೆ ನೀಡಿದವರು ಸೋನಮ್. ಆದರೆ ಇದೀಗ ಲಡಾಖ್ ಜನರಿಗಾಗಿ ಧ್ವನಿಯೆತ್ತಿ ಕೇಂದ್ರಕ್ಕೆ ಶತ್ರುವಾದರೆ?
370ನೇ ವಿಧಿ ರದ್ದಾದ ಬಳಿಕ ಲಡಾಖ್ನಲ್ಲಿ ರಾಜ್ಯ ಸ್ಥಾನಮಾನ ಮತ್ತು ಗಣಿಗಾರಿಕೆ ಲಾಬಿಯಿಂದ ರಕ್ಷಣೆಯ ಕೂಗು ಕೇಳಿಬಂದಿದೆ. ಈ ಹೋರಾಟಕ್ಕೆ 2023ರ ಜನವರಿಯಿಂದ ಕೈಜೋಡಿಸಿದವರು ಸೋನಮ್ ವಾಂಗ್ಚುಕ್. 2025ರ ಆಗಸ್ಟ್ನಿಂದ ಲೇಹ್ ಅಪೆಕ್ಸ್ ಬಾಡಿ(ಎಲ್ಎಬಿ) ಭಾಗವಾಗಿರುವ ಸೋನಮ್ ಸೆಪ್ಟೆಂಬರ್ 10ರಂದು ಐದನೇ ಬಾರಿಗೆ ಉಪವಾಸ ನಡೆಸಿದ್ದಾರೆ. ಸೆಪ್ಟೆಂಬರ್ 26ರಂದು ಸೋನಮ್ ಉಪವಾಸ ಕುಳಿತ ಲೇಹ್ನ ಶಹೀದ್ ಪಾರ್ಕ್ನ ಹೊರಭಾಗದಲ್ಲಿ ಹಿಂಸಾಚಾರ ನಡೆದು, ನಾಲ್ವರು ಗುಂಡೇಟಿಗೆ ಬಲಿಯಾಗಿದ್ದಾರೆ, 90 ಮಂದಿ ಗಾಯಗೊಂಡಿದ್ದಾರೆ. ಇವಿಷ್ಟು ನಡೆಯುತ್ತಿದ್ದಂತೆ ಕೇಂದ್ರ ಸರ್ಕಾರದ ಕಣ್ಣು ಬಿದ್ದಿದ್ದು ಸೋನಮ್ ವಾಂಗ್ಚುಕ್ ಅವರ ಮೇಲೆ.
ಇದನ್ನು ಓದಿದ್ದೀರಾ? ಲಡಾಖ್ ಗ್ರೌಂಡ್ ರಿಪೋರ್ಟ್ ಸರಣಿ-4 | ಲಡಾಖಿನ ವಿದ್ಯಾರ್ಥಿಗಳ ಅಳಲು ಕೇಳುವವರಾರು?
ಈ ಹಿಂದೆ ಕೇಂದ್ರದ ನೀತಿಗಳನ್ನು ಶ್ಲಾಘಿಸಿದವರು ಸೋನಮ್. ಕೇಂದ್ರ ಸರ್ಕಾರವು ಲಡಾಖ್ನಲ್ಲಿ ಐದು ಹೊಸ ಜಿಲ್ಲೆಗಳನ್ನು ಘೋಷಿಸಿದಾಗ ವಾಂಗ್ಚುಕ್ ಪ್ರಧಾನಿ ನರೇಂದ್ರ ಮೋದಿ ಮತ್ತು ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರನ್ನು ಶ್ಲಾಘಿಸಿದ್ದರು. ಸರ್ಕಾರದ ‘ಮಿಷನ್ ಲೈಫ್’ (Mission LiFE) ನಂತಹ ಅಭಿಯಾನವನ್ನು ಹಾಡಿ ಹೊಗಳಿದವರು. ಆದರೆ ಲಡಾಖಿಗರ ಬೇಡಿಕೆಗಳನ್ನು ಮುಂದಿಟ್ಟು ಕೇಂದ್ರ ಸರ್ಕಾರದ ಧೋರಣೆಗಳನ್ನು ಪ್ರಶ್ನಿಸುತ್ತಿದ್ದಂತೆ ಕೇಂದ್ರದ ಪಾಲಿಗೆ ಸೋನಮ್ ವಿರೋಧಿಯಾದರು!
ಸೆಪ್ಟೆಂಬರ್ 26ರಂದು ಲಡಾಖ್ನಲ್ಲಿ ನಡೆದ ಹಿಂಸಾಚಾರಕ್ಕೆ ಸೋನಮ್ ವಾಂಗ್ಚುಕ್ ಅವರೇ ಕಾರಣ, ಅವರ ಪ್ರಚೋದನಕಾರಿ ಭಾಷಣಗಳೇ ಕಾರಣ ಎಂದು ಹೇಳಿದ ಕೇಂದ್ರ ಸರ್ಕಾರ, ಮತ್ತೆ ರಾಷ್ಟ್ರೀಯ ಭದ್ರತಾ ಕಾಯ್ದೆ (NSA) ದುರುಪಯೋಗಕ್ಕೆ ಅಣಿಯಾಯಿತು, ಅದರ ಫಲವಾಗಿ ಈಗ ಸೋನಮ್ ಜೈಲಿನಲ್ಲಿದ್ದಾರೆ. ತನ್ನ ಪತಿಯನ್ನು ಎನ್ಎಸ್ಎ ಅಡಿಯಲ್ಲಿ ಬಂಧಿಸಿರುವುದನ್ನು ಪ್ರಶ್ನಿಸಿ ಪತ್ನಿ ಗೀತಾಂಜಲಿ ಆಂಗ್ಮೊ ಸಲ್ಲಿಸಿರುವ ಅರ್ಜಿಯ ವಿಚಾರಣೆಯನ್ನು ಕೊನೆಯದಾಗಿ ಡಿಸೆಂಬರ್ 8ರಂದು ಸುಪ್ರೀಂ ಕೋರ್ಟ್ ನಡೆಸಿದೆ. ಬಳಿಕ ಡಿಸೆಂಬರ್ 15ರಂದು ನಡೆಯಬೇಕಾದ ವಿಚಾರಣೆ ಸಮಯದ ಕೊರತೆಯಿಂದಾಗಿ ಇದೀಗ ಜನವರಿ 7ಕ್ಕೆ ನಿಗದಿಯಾಗಿದೆ.
ಇನ್ನೊಂದೆಡೆ ಸೋನಮ್ ಸೇರಿದಂತೆ ಬಂಧಿತರನ್ನು ಬಿಡುಗಡೆ ಮಾಡುವಂತೆ ಲಡಾಖ್ ಸಂಘಟನೆಗಳು ಕೇಂದ್ರ ಸರ್ಕಾರಕ್ಕೆ ನಿರಂತರವಾಗಿ ಮನವಿ ಮಾಡುತ್ತಿದೆ. ಈ ಬಗ್ಗೆ ಈದಿನ ಡಾಟ್ ಕಾಮ್ಗೆ ಪ್ರತಿಕ್ರಿಯಿಸಿರುವ ಲಡಾಖ್ ಹೋರಾಟಗಾರ, ಕೆಡಿಎ ಸದಸ್ಯ ಸಜ್ಜಾದ್ ಕಾರ್ಗಿಲಿ, “ನೂರು ದಿನಗಳಿಂದ ಸೋನಮ್ ವಾಂಗ್ಚುಕ್ ಮತ್ತು ಇನ್ನಿಬ್ಬರು ನಾಯಕರುಗಳು ಜೈಲಿನಲ್ಲಿದ್ದಾರೆ. ಸೋನಮ್ ಅವರನ್ನು ಎನ್ಎಸ್ಎ ಅಡಿಯಲ್ಲಿ ಜೋಧಪುರ ಜೈಲಿಗೆ ಕಳುಹಿಸಲಾಗಿದೆ. ನಾವು ಜೋಧಪುರ ಜೈಲಿನಲ್ಲಿ ಸೋನಮ್ ಅವರನ್ನು ಭೇಟಿಯಾಗುವ ಚಿಂತನೆ ನಡೆಸುತ್ತಿದ್ದೇವೆ. ಭೇಟಿಗೆ ಅವಕಾಶ ನೀಡಬೇಕೆಂದು ಸರ್ಕಾರಕ್ಕೆ ಮನವಿ ಮಾಡಿದ್ದೇವೆ” ಎಂದು ಹೇಳಿದರು.

“ನಾವು ಕೇಂದ್ರದೊಂದಿಗೆ ಈ ಬಗ್ಗೆ ಮಾತುಕತೆ ನಡೆಸುತ್ತಿದ್ದೇವೆ. ಕೇಂದ್ರ ತಿಳಿಸಿದಂತೆ ನಾವು ಮತ್ತೊಮ್ಮೆ ನಮ್ಮ ಬೇಡಿಕೆಗಳ ಕರಡನ್ನು ಸಿದ್ಧಪಡಿಸಿ ಸಲ್ಲಿಸಿದ್ದೇವೆ. ಆದರೆ ಕೇಂದ್ರ ಸರ್ಕಾರ ನಮ್ಮನ್ನು ಮತ್ತೊಂದು ಸಭೆಗೆ ಈವರೆಗೂ ಆಹ್ವಾನಿಸಿಲ್ಲ. ಲಡಾಖಿಗಳಿಗೆ ದ್ರೋಹವಾಗಿದೆ. ಲಡಾಖ್ ಜನರ ಧ್ವನಿಗೆ ಕೇಂದ್ರ ಸರ್ಕಾರ ಕಿವಿಗೊಡುತ್ತಿಲ್ಲ. ನಮ್ಮನ್ನು ಮೂಲೆಗುಂಪು ಮಾಡಲಾಗುತ್ತಿದೆ. ಇದನ್ನು ನಾವು ಒಪ್ಪಿಕೊಳ್ಳಲು ಸಾಧ್ಯವಿಲ್ಲ” ಎಂದು ಅಸಮಾಧಾನ ವ್ಯಕ್ತಪಡಿಸಿದರು.
ಅಷ್ಟಕ್ಕೂ ಕೇಂದ್ರ ಸರ್ಕಾರ ತಮ್ಮ ಮೇಲೆ ದೇಶದ್ರೋಹ ಪ್ರಕರಣ ದಾಖಲಿಸಲು ಸಜ್ಜಾಗುತ್ತಿದೆ ಎಂದು ಸೋನಮ್ ವಾಂಗ್ಚುಕ್ ಅವರು ತಾವು ಎನ್ಎಸ್ಎ ಅಡಿ ಬಂಧನಕ್ಕೆ ಒಳಗಾಗುವ ಮೊದಲೇ ಹೇಳಿದ್ದರು. ಲಡಾಖ್ ಜನರ ದೀರ್ಘ ಕಾಲದ ಸಂಘರ್ಷವನ್ನು ಸ್ಥಳೀಯರ ಜೊತೆ ಬೆರೆತು ಅರ್ಥೈಸಿಕೊಳ್ಳಲು ಹೋಗಿದ್ದ ಈದಿನ ಸಂಸ್ಥೆಯ ಪ್ರತಿನಿಧಿ ನಾನು ಸೇರಿ 14 ಜನರ ನಿಯೋಗದೊಂದಿಗೆ ಮಾತನಾಡುತ್ತಾ ಸೋನಮ್ ತಮ್ಮ ಬಂಧನದ ಸುಳಿವನ್ನು ನೀಡಿದ್ದರು. “ನನ್ನ ನಿವಾಸ, ಸಂಸ್ಥೆಗಳ ಮೇಲೆ ಇಡಿ, ಸಿಬಿಐ ದಾಳಿ ನಡೆಸಲಾಗುತ್ತಿದೆ. ನಮ್ಮ ಧ್ವನಿಯನ್ನು ಹತ್ತಿಕ್ಕಿ, ಬೆದರಿಸುವ ಪ್ರಯತ್ನ ಇದಾಗಿದೆ. ಲಡಾಖ್ ವಿಚಾರದಲ್ಲಿ ಕೇಂದ್ರ ಸರ್ಕಾರದ ವಿರುದ್ಧ ಅಪಪ್ರಚಾರ ಮಾಡುತ್ತಿದ್ದಾರೆ ಎಂದು ದೇಶದ್ರೋಹ ದೂರು ದಾಖಲಿಸಲು ಕೇಂದ್ರ ಮುಂದಾಗಿದೆ” ಎಂದು ಸೋನಮ್ ನಮ್ಮೊಂದಿಗೆ ಮಾತನಾಡುತ್ತಾ ಹೇಳಿದ್ದರು.
ಇದನ್ನು ಓದಿದ್ದೀರಾ? ಸೋನಮ್ ವಾಂಗ್ಚುಕ್ ಬಂಧನ: ಕೇಂದ್ರ ಸರ್ಕಾರ NSA ದುರ್ಬಳಕೆ ಮಾಡಿಕೊಳ್ಳುತ್ತಿದೆಯೇ?
ಜತೆಗೆ ಸೋನಮ್ ಮತ್ತು ಡಾ. ಗೀತಾಂಜಲಿ ಸ್ಥಾಪಿಸಿದ HIAL ವಿಶ್ವವಿದ್ಯಾಲಯಕ್ಕೆ ನೀಡಿದ್ದ ಜಾಗದ ಗುತ್ತಿಗೆಯನ್ನು ರದ್ದು ಮಾಡಿರುವ ಬಗ್ಗೆಯೂ, ವಿದೇಶಿ ವಹಿವಾಟು ನಡೆಸಿದ ಆರೋಪದ ಬಗ್ಗೆಯೂ ಸೋನಮ್ ಸ್ಪಷ್ಟನೆ ನೀಡಿದ್ದರು. “ಹೌದು ನಮ್ಮ ಸಂಸ್ಥೆಯು ವಿದೇಶಿ ಹಣವನ್ನು ಪಡೆದಿದೆ. ನಮ್ಮ ವಿದ್ಯಾರ್ಥಿಗಳು ಹಲವು ಸಂಶೋಧನೆಗಳನ್ನು ಮಾಡುತ್ತಾರೆ. ಈ ಸಂಶೋಧನೆಯನ್ನು ವಿದೇಶದ ಒಂದು ಸಂಸ್ಥೆಗೆ ಮಾರಾಟ ಮಾಡಿ ಅದಕ್ಕೆ ಪ್ರತಿಯಾಗಿ ಆದಾಯವನ್ನು ಪಡೆಯಲಾಗಿದೆ. ಇದು ದೇಶಕ್ಕೆ ಹೆಮ್ಮೆಯ ವಿಚಾರವಾಗಬೇಕು. ಆದರೆ ಹೋರಾಟವನ್ನು ಹತ್ತಿಕ್ಕುವ ನಿಟ್ಟಿನಲ್ಲಿ ಕೇಂದ್ರ ಸರ್ಕಾರ ನಿರಂತರವಾಗಿ ಒಂದಲ್ಲ ಒಂದು ರೀತಿಯ ದಾಳಿ ನಡೆಸುತ್ತಿದೆ” ಎಂದಿದ್ದರು.
ಸೋನಮ್ ಅವರು ತಮ್ಮ ಬಂಧನದ ಭೀತಿ ವ್ಯಕ್ತಪಡಿಸಿದ ಕೆಲವೇ ದಿನಗಳಲ್ಲಿ ಲಡಾಖ್ನಲ್ಲಿ ಹಿಂಸಾಚಾರ ನಡೆಯಿತು, ರಾಷ್ಟ್ರೀಯ ಭದ್ರತಾ ಕಾಯ್ದೆಯಡಿಯಲ್ಲಿ ಸೋನಮ್ ಬಂಧನವನ್ನೂ ಮಾಡಿಯಾಯಿತು. ಇದೀಗ ಸೋನಮ್ ಪತ್ನಿ ನಿರಂತರವಾಗಿ ಕೋರ್ಟ್ಗೆ ಅಲೆದಾಡುವಂತಾಗಿದೆ. ಇನ್ನೊಂದೆಡೆ ಸೋನಮ್ ಅನುಪಸ್ಥಿತಿಯಲ್ಲಿಯೇ ಕಾರ್ಗಿಲ್ ಡೆಮಾಕ್ರೆಟಿಕ್ ಅಲೆಯನ್ಸ್(ಕೆಡಿಎ) ಮತ್ತು ಲೇಹ್ ಅಪೆಕ್ಸ್ ಬಾಡಿ(ಎಲ್ಎಬಿ) ಹೋರಾಟವನ್ನು ಮುಂದುವರೆಸಿದೆ.
ಈ ಸಂದರ್ಭದಲ್ಲಿ ಎನ್ಎಸ್ಎ ದುರುಪಯೋಗದ ಬಗ್ಗೆ ಹಲವು ಸಂಘಟನೆಗಳು, ನ್ಯಾಯಾಲಯಗಳೂ ಪದೇ ಪದೇ ಪ್ರಶ್ನೆ ಎತ್ತಿರುವುದನ್ನೂ ನಾವು ಮರೆಯುವಂತಿಲ್ಲ. 2020ರಲ್ಲಿ, ಮಕ್ಕಳ ತಜ್ಞ ಡಾ. ಕಫೀಲ್ ಖಾನ್ ಅವರನ್ನು ಪ್ರಚೋದನಕಾರಿ ಭಾಷಣದ ಆರೋಪದಲ್ಲಿ ಉತ್ತರ ಪ್ರದೇಶ ಯೋಗಿ ಆದಿತ್ಯನಾಥ್ ಸರ್ಕಾರ ಬಂಧಿಸಿದೆ. ಆದರೆ ಅಲಹಾಬಾದ್ ಹೈಕೋರ್ಟ್ ಈ ಬಂಧನಕ್ಕೆ ಕಾರಣವನ್ನು ಪ್ರಶ್ನಿಸಿ ಕಫೀಲ್ ಖಾನ್ ಬಿಡುಗಡೆಗೆ ಆದೇಶಿಸಿದೆ. ಅಷ್ಟು ಮಾತ್ರವಲ್ಲದೆ ಮಧ್ಯಪ್ರದೇಶದಲ್ಲಿ ಲವ್ ಜಿಹಾದ್ ಎಂಬ ಕಪೋಲಕಲ್ಪಿತ ಆರೋಪದ ಮೇಲೆ ಬಂಧಿಸುವಾಗಲೂ, ಕೋಮು ಹಿಂಸಾಚಾರದ ವೇಳೆ ಇದೇ ಕಾಯ್ದೆಯನ್ನ ದುರುಪಯೋಗ ಪಡಿಸಿಕೊಳ್ಳಲಾಗಿದೆ. ರಾಷ್ಟ್ರದ ಭದ್ರತೆಯ ದೃಷ್ಟಿಯಲ್ಲಿ ಸರ್ಕಾರಕ್ಕೆ ಈ ಕಾಯ್ದೆ ಸಾಕಷ್ಟು ಅಧಿಕಾರವನ್ನು ನೀಡುತ್ತದೆ. 12 ತಿಂಗಳುಗಳು ಅಂದರೆ ಒಂದು ವರ್ಷಗಳ ಕಾಲ ಬಂಧನದಲ್ಲಿಡಲು ಅವಕಾಶ ನೀಡುತ್ತದೆ. ಆದರೆ ಪ್ರಸ್ತುತ ಅಧಿಕಾರದ ದುರ್ಬಳಕೆ ಹೆಚ್ಚಾಗುತ್ತಿದೆ. ಸದ್ಯ ಸೋನಮ್ ಬಂಧನವನ್ನು ಪ್ರಶ್ನಿಸುವುದರ ಜತೆಗೆ ಈ ಕಾಯ್ದೆಯ ದುರುಪಯೋಗ ಮತ್ತು ಕಾಯ್ದೆಯಲ್ಲಿರುವ ಗಂಭೀರವಾದ ಮಿತಿಗಳ ಬಗ್ಗೆಯೂ ಧ್ವನಿ ಎತ್ತುವುದು ಅನಿವಾರ್ಯ.

ಪತ್ರಕರ್ತೆ, 2019ರಿಂದ ಪತ್ರಿಕೋದ್ಯಮವೇ ಬದುಕು. ರಾಜಕೀಯ, ಬ್ಯುಜಿನೆಸ್ ಸುದ್ದಿಗಳಲ್ಲಿ ಆಸಕ್ತಿ.




