ಐ–ಪ್ಯಾಕ್ (I-PAC) ಕಚೇರಿಯ ಮೇಲೆ ಜಾರಿ ನಿರ್ದೇಶನಾಲಯ (ED) ದಾಳಿ ನಡೆಸಿದ 24 ತಾಸಿನೊಳಗೆ ‘ಜೋತಾಯ್ ಕರೋ ಹಮಲಾ, ಅಬಾರ್ ಜಿತ್ಬೆ ಬಾಂಗ್ಲಾ’ ಎಂಬ ಹೆಸರಿನ ಹಾಡೊಂದು ಪಶ್ಚಿಮ ಬಂಗಾಳದಲ್ಲಿ ಬಿಡುಗಡೆಯಾಯಿತು. ಈ ಹಾಡು ಯೂಟ್ಯೂಬ್ನಲ್ಲಿ ಒಂದು ದಿನದಲ್ಲೇ ಒಂದು ಕೋಟಿ ದಾಟಿತ್ತು.
‘ಮನಬಂದಷ್ಟು ದಾಳಿ ನಡೆಸಿ, ಗೆದ್ದೇ ಗೆಲ್ಲಲಿದೆ ಬಂಗಾಳ’ ಎಂಬ ಅರ್ಥದ ಈ ಹಾಡು, ಬಂಗಾಳಿ ಅಸ್ಮಿತೆ ಮತ್ತು ಬಂಗಾಳಿಗಳ ವಿರುದ್ಧ ನಡೆಸಿರುವ ಎಸ್ಐಆರ್ ಮತ್ತಿತರೆ ದಾಳಿಗಳ ಕುರಿತದ್ದಾಗಿದೆ. ಬಂಗಾಳದ ಬಹುತ್ವವನ್ನು ಉಳಿಸುವ ಅಗತ್ಯವನ್ನು ಎತ್ತಿ ಹೇಳಿದೆ. ಬಂಗಾಳಿ ಭಾಷೆಯನ್ನು ಆಡುವ ವಲಸೆಗಾರರ ಬವಣೆಗಳನ್ನು ಬಣ್ಣಿಸಿದೆ.
ಇದನ್ನು ಓದಿದ್ದೀರಾ? ಇಡಿ vs ದೀದಿ | ಮಮತಾ ವಿರುದ್ಧ ಸುಪ್ರೀಂ ಮೊರೆ ಹೋದ ಇಡಿ; 17 ಆರೋಪಗಳಡಿ CBI ತನಿಖೆಗೆ ಮನವಿ
‘ಜನಗಣದ ಗರ್ಜನೆ, ಬಂಗಾಳದ ಬಿಜೆಪಿಯ ವಿಸರ್ಜನೆ’ (ಜೋನಗಣೇರ್ ಗೋರ್ಜನ್, ಬಾಂಗ್ಲೇ ಬಿಜೆಪಿರ್ ಬಿಸೊರ್ಜೋನ್) ಎಂಬುದು ತೃಣಮೂಲ ಪಾರ್ಟಿಯ 2024ರ ಲೋಕಸಭಾ ಚುನಾವಣೆಯ ವಿಷಯವಸ್ತು ಆಗಿತ್ತು.
ಮಮತಾ ಬ್ಯಾನರ್ಜಿಯವರ ತೃಣಮೂಲ ಕಾಂಗ್ರೆಸ್ಗೆಂದು ಬಿಡುಗಡೆ ಮಾಡಿದ ಪ್ರಚಾರ ಗೀತೆಯಿದು. ಹಾಡು ಅದಾಗಲೇ ಸಿದ್ಧವಾಗಿತ್ತು. ಆದರೆ ದಾಳಿಯ ನಂತರ ಈ ಹಾಡನ್ನು ಬಿಡುಗಡೆ ಮಾಡಿದ್ದು ಐ-ಪ್ಯಾಕ್ ರಾಜಕೀಯ ಸಲಹಾ ಸಂಸ್ಥೆ.
ದಾಳಿಯು ತೃಣಮೂಲ ಕಾಂಗ್ರೆಸ್ನ ವಿಧಾನಸಭಾ ಚುನಾವಣಾ ಪ್ರಚಾರವನ್ನು ಅಡ್ಡಿಪಡಿಸುವ ಉದ್ದೇಶದಿಂದ ನಡೆದಿದ್ದರೆ ಅಂತಹ ಪ್ರಯತ್ನ ಸಂಪೂರ್ಣ ವಿಫಲವಾಗಿದೆ ಎಂದಿವೆ ಬಂಗಾಳಿ ಪತ್ರಿಕೆಗಳು.
ED ತಂಡಗಳು ಕೋಲ್ಕತ್ತಾದ ಸಾಲ್ಟ್ ಲೇಕ್ ಸೆಕ್ಟರ್–Vಯಲ್ಲಿರುವ ಐ–ಪ್ಯಾಕ್ ಕಚೇರಿಯ ಜೊತೆಗೆ ಕಂಪನಿಯ ನಿರ್ದೇಶಕರಲ್ಲೊಬ್ಬರಾದ ಪ್ರತೀಕ್ ಜೈನ್ ಅವರ ಲೌಡನ್ ಸ್ಟ್ರೀಟ್ ನಿವಾಸದ ಮೇಲೆ ದಾಳಿ ನಡೆಸಿ ಸುಮಾರು ಒಂದು ವಾರ ಕಳೆದರೂ, ಸಂಸ್ಥೆಯಲ್ಲಿ ಎಲ್ಲವೂ ಎಂದಿನಂತೆಯೇ ನಡೆಯುತ್ತಿದೆ. ಮಮತಾ ಅವರ ರಾಜಕೀಯ ಅಸ್ತ್ರಗಳಲ್ಲಿ ಅತ್ಯಂತ ಬಲಶಾಲಿ ಎನಿಸಿರುವ ಈ ಸಂಸ್ಥೆ ತನ್ನ ಕೆಲಸವನ್ನು ಎಂದಿನಂತೆ ಮುಂದುವರಿಸಿದೆ.
ಸುಮಾರು ಹತ್ತು ವರ್ಷಗಳ ಹಿಂದೆ, ಜನವರಿಯ ಒಂದು ಸಂಜೆ ತೃಣಮೂಲ ಭವನದಲ್ಲಿ ಮಮತಾ ಬ್ಯಾನರ್ಜಿ ಮತ್ತು ಐ–ಪ್ಯಾಕ್ ಸಂಸ್ಥಾಪಕ ಪ್ರಶಾಂತ್ ಕಿಶೋರ್ ಅವರ ಮೊದಲ ಭೇಟಿ ನಡೆಯಿತು. ಆದರೆ ಬಂಗಾಳದ ಆಡಳಿತ ಪಕ್ಷ ಮತ್ತು ದೇಶದ ಅತಿದೊಡ್ಡದೆನಿಸಿದ ಐ-ಪ್ಯಾಕ್ ಸಲಹಾ ಸಂಸ್ಥೆ ಒಂದಾದದ್ದು ಮೂರು ವರ್ಷಗಳ ನಂತರ. ಇ.ಡಿ. ದಾಳಿಯು ಐ-ಪ್ಯಾಕ್ ಮತ್ತು ಅವರ ನಡುವಿನ ಸಂಬಂಧವನ್ನು ದುರ್ಬಲಗೊಳಿಸುವ ಬದಲು ಇನ್ನಷ್ಟು ಬಲಪಡಿಸಿದೆ.
ಇದನ್ನು ಓದಿದ್ದೀರಾ? ಬಂಗಾಳ ಚುನಾವಣೆ | ಅಧಿಕಾರಕ್ಕಾಗಿ ಬಿಜೆಪಿ ತಂತ್ರ – ಮಮತಾ ಪ್ರತಿತಂತ್ರ
ED ತಂಡವು ಐ–ಪ್ಯಾಕ್ ಕಚೇರಿ ಇರುವ ಕಟ್ಟಡದ 11ನೇ ಮಹಡಿಯಲ್ಲಿ ದಾಳಿ ನಡೆಸಿತ್ತು. ಆ ಕಚೇರಿಯಲ್ಲಿ ವರ್ಷಪೂರ್ತಿ 100–120 ಉದ್ಯೋಗಿಗಳು ಕೆಲಸ ಮಾಡುತ್ತಾರೆ. ಸುದ್ದಿಗಳ ಮೇಲ್ವಿಚಾರಣೆ, ಕ್ಷೇತ್ರಮಟ್ಟದ ಕಾರ್ಯಕರ್ತರಿಂದ ಮಾಹಿತಿ ಸಂಗ್ರಹಣೆ ಹಾಗೂ ಪ್ರತಿ ಶಾಸಕರು ಮತ್ತು ಸಚಿವರೊಂದಿಗೆ ಕೆಲಸ ಮಾಡುವ ತಂಡಗಳಿಂದ ಮಾಹಿತಿ ಸಂಗ್ರಹಣೆ ಇವರ ಕೆಲಸ.
ಸೋಮವಾರ, ತೃಣಮೂಲ ಕಾಂಗ್ರೆಸ್ನ ಪ್ರಧಾನ ಕಾರ್ಯದರ್ಶಿ ಹಾಗೂ ಬಂಗಾಳಕ್ಕೆ ಐ–ಪ್ಯಾಕ್ ಅನ್ನು ಕರೆತಂದ ಪ್ರಮುಖ ನಾಯಕ ಅಭಿಷೇಕ್ ಬ್ಯಾನರ್ಜಿ, ಪಕ್ಷದ “ಡಿಜಿಟಲ್ ಯೋಧರು”ಗಳೊಂದಿಗೆ ಸಮಾವೇಶ ನಡೆಸಿ ಮಾತನಾಡಿದರು. ಈ ಸಭೆಗೆ ಐ–ಪ್ಯಾಕ್ ನ ಎಲ್ಲ ಉದ್ಯೋಗಿಗಳು ಮತ್ತು ಸ್ವಯಂಸೇವಕರು ಹಾಜರಾಗಿದ್ದರು.
12,000ಕ್ಕೂ ಹೆಚ್ಚು ಡಿಜಿಟಲ್ ಯೋಧರಿಗೆ ತೃಣಮೂಲ ಕಾಂಗ್ರೆಸ್ನ ಐಟಿ ಸೆಲ್ ತರಬೇತಿ ನೀಡಿದೆ. “ಉನ್ನಯನೇರ್ ಪಂಚಾಲಿ” (ಮಮತಾ ಬ್ಯಾನರ್ಜಿ ಸರ್ಕಾರದ 14 ವರ್ಷಗಳ ಅಭಿವೃದ್ಧಿ ವರದಿ, ಇದನ್ನು ಬಂಗಾಳಿ ಮನೆಗಳ ಪೂಜೆಯ ಶೈಲಿಯ ಮಂತ್ರೋಚ್ಚಾರಣೆಯಂತೆ ಹಾಡಲಾಗಿದೆ) ಮುಂತಾದ ಯೋಜನೆಗಳನ್ನು ಪ್ರಚಾರ ಮಾಡಲಿದ್ದಾರೆ ಮತ್ತು ವಿಧಾನಸಭಾ ಕ್ಷೇತ್ರದ ಕಾರ್ಯಕರ್ತರೊಂದಿಗೆ ಸಂಯೋಜನೆ ಮಾಡಲಿದ್ದಾರೆ.
“ಆರೋಗ್ಯ, ಶಿಕ್ಷಣ, ಸಾಮಾಜಿಕ ಭದ್ರತೆ, ಉದ್ಯೋಗ ಸೃಷ್ಟಿ ಮತ್ತು ಗ್ರಾಮೀಣ ಮೂಲಸೌಕರ್ಯಕ್ಕೆ ಸಂಬಂಧಿಸಿದ ಎಲ್ಲ ಯೋಜನೆಗಳನ್ನು ನಿಗದಿತ ಅವಧಿಯಲ್ಲಿ ಪೂರ್ಣಗೊಳಿಸುವಂತೆ ಎಲ್ಲ ಶಾಸಕರು ಮತ್ತು ಸಚಿವರಿಗೆ ಸೂಚಿಸಲಾಗಿದೆ. ಎಲ್ಲವೂ ಸುಸೂತ್ರವಾಗಿ ನಡೆಯುತ್ತಿದೆ,” ಎಂದು ಮತ್ತೊಬ್ಬ ಸಚಿವರು ಹೇಳಿದರು.
ಮುಂದಿನ ವಿಧಾನಸಭಾ ಚುನಾವಣೆಗೆ ಸಂಬಂಧಿಸಿದ ಸಂಭವನೀಯ ಅಭ್ಯರ್ಥಿಗಳ ಡೇಟಾ, ಪಕ್ಷದ ಚುನಾವಣಾ ತಂತ್ರ ಮತ್ತು ಪ್ರಚಾರದ ನೀಲನಕ್ಷೆಯನ್ನು ಕೇಂದ್ರದ ತನಿಖಾ ಸಂಸ್ಥೆ ಕದ್ದಿದೆ ಎಂದು ಮಮತಾ ಬ್ಯಾನರ್ಜಿ ಆರೋಪಿಸಿದ್ದಾರೆ.
ಈ ನಡುವೆ, ಪಶ್ಚಿಮ ಬಂಗಾಳ ಮುಖ್ಯಮಂತ್ರಿ, ರಾಜ್ಯ ಪೊಲೀಸ್ ಮಹಾನಿರ್ದೇಶಕ ರಾಜೀವ್ ಕುಮಾರ್ ಹಾಗೂ ಕೋಲ್ಕತ್ತಾ ಪೊಲೀಸ್ ಆಯುಕ್ತ ಮನೋಜ್ ವರ್ಮಾ ವಿರುದ್ಧ ಎಫ್ಐಆರ್ ದಾಖಲಿಸಲು ಸುಪ್ರೀಂ ಕೋರ್ಟ್ ನಿರ್ದೇಶನ ಕೋರಿ ED ಅರ್ಜಿ ಸಲ್ಲಿಸಿದೆ.





