ಮಂಗಳೂರಿನ ಸೇಂಟ್ ಜೆರೋಸಾ ಶಾಲೆಯಲ್ಲಿ ಶಿಕ್ಷಕಿ ಪಾಠ ಮಾಡಿದ್ದ ವಿಚಾರದಲ್ಲಿ ಜನರನ್ನು ಗುಂಪುಗೂಡಿಸಿ, ಪ್ರಚೋದಿಸಿ, ಶಾಲೆಯ ಎದುರು ಪ್ರತಿಭಟನೆ ನಡೆಸಿದ್ದ ಬಿಜೆಪಿ ಶಾಸಕ ವೇದವ್ಯಾಸ್ ಕಾಮತ್ ಮತ್ತು ವೈ ಭರತ್ ಶೆಟ್ಟಿ ವಿರುದ್ಧ ಪ್ರಕರಣ ದಾಖಲಾಗಿದೆ. ಆರೋಪಿ ಶಾಸಕರನ್ನು ಮಂಗಳೂರು ದಕ್ಷಿಣ ಪೊಲೀಸರು ಬಂಧಿಸುವ ಸಾಧ್ಯತೆಗಳಿದ್ದು, ಇಬ್ಬರೂ ನಿರೀಕ್ಷಣಾ ಜಾಮೀನಿಗಾಗಿ ಜನಪ್ರತಿನಿಧಿಗಳ ವಿಶೇಷ ನ್ಯಾಯಾಲಯಕ್ಕೆ ಅರ್ಜಿ ಸಲ್ಲಿಸಿದ್ದಾರೆ. ನ್ಯಾಯಾಲಯವು ಮಧ್ಯಂತರ ಜಾಮೀನು ನೀಡಿದೆ.
ಫೆಬ್ರವರಿ 14 ರಂದು ಶಾಲೆ ಮುಖ್ಯಸ್ಥ ಅನಿಲ್ ಜೆರಾಲ್ಡ್ ಲೋಬೋ ಅವರು ನೀಡಿದ ದೂರಿನ ಆಧಾರದ ಮೇಲೆ ಪೊಲೀಸರು ಮಂಗಳೂರು ದಕ್ಷಿಣ ಶಾಸಕ ವೇದವ್ಯಾಸ್ ಕಾಮತ್, ಮಂಗಳೂರು ಉತ್ತರ ಶಾಸಕ ಡಾ. ವೈ ಭರತ್ ಶೆಟ್ಟಿ, ವಿಎಚ್ಪಿ ಮುಖಂಡ ಶರಣ್ ಕುಮಾರ್ ಅಲಿಯಾಸ್ ಶರಣ್ ಪಂಪ್ವೆಲ್ ಮತ್ತು ಮಂಗಳೂರು ಪಾಲಿಕೆಯ ಇಬ್ಬರು ಬಿಜೆಪಿ ಸದಸ್ಯರಾದ ಸಂದೀಪ್ ಮತ್ತು ಭರತ್ ಕುಮಾರ್ ವಿರುದ್ಧ ಪ್ರಕರಣ ದಾಖಲಿಸಿಕೊಂಡಿದ್ದಾರೆ.
ಸೇಂಟ್ ಜೆರೋಸಾ ಹೈಸ್ಕೂಲ್ ಬಳಿ ಜನರನ್ನು ಪ್ರಚೋದಿಸಿ ಗುಂಪುಗೂಡಿಸಿದ ಆರೋಪದ ಮೇಲೆ ಈ ಐವರ ವಿರುದ್ಧ ಪೊಲೀಸರು ಎಫ್ಐಆರ್ ದಾಖಲಿಸಿದ್ದಾರೆ.
ವಿಶೇಷ ನ್ಯಾಯಾಲಯದಲ್ಲಿ ಆರೋಪಿಗಳ ಪರ ವಾದ ಮಂಡಿಸಿದ ಹಿರಿಯ ವಕೀಲರು, “ಶಾಸಕರು ಜನರನ್ನು ಹಿಂಸಾಚಾರಕ್ಕೆ ಪ್ರೇರೇಪಿಸುತ್ತಿದ್ದಾರೆ ಎಂಬ ಆರೋಪಗಳು ಇಡೀ ದೂರಿನಲ್ಲಿ ಇಲ್ಲ. ಅಂತಹ ಯಾವುದೇ ಘಟನೆ ನಡೆದಿಲ್ಲ. ಶಾಲೆಯ ಶಿಕ್ಷಕಿ ಪ್ರಭಾ ಅವರ ಕೃತ್ಯಗಳನ್ನು ಮುಚ್ಚಿಹಾಕಲು, ಘಟನೆ ನಡೆದ ಎರಡು ದಿನಗಳ ನಂತರ ದೂರು ದಾಖಲಿಸಲಾಗಿದೆ” ಎಂದು ವಾದಿಸಿದ್ದಾರೆ.
ಸರ್ಕಾರದ ಪರವಾಗಿ ವಾದಿಸಿದ ಪಬ್ಲಿಕ್ ಪ್ರಾಸಿಕ್ಯೂಟರ್, “ಮಂಗಳೂರು ಪೊಲೀಸರಿಂದ ಸೂಚನೆಗಳನ್ನು ಪಡೆಯಲು ಸಮಯ ಬೇಕಾಗುತ್ತದೆ” ಎಂದು ಹೇಳಿದ್ದಾರೆ. ಮಧ್ಯಂತರ ಜಾಮೀನು ಮಂಜೂರು ಮಾಡಲು ಮೌಖಿಕವಾಗಿ ಆಕ್ಷೇಪ ಸಲ್ಲಿಸಿದ್ದಾರೆ.
ವಾದಗಳನ್ನು ಆಲಿಸಿದ ನ್ಯಾಯಾಧೀಶ ಸಂತೋಷ ಗಜಾನನ ಭಟ್ ಅವರು, “ಮಧ್ಯಂತರ ಜಾಮೀನು ನೀಡಲು ಅರ್ಜಿದಾರರು ಕಾರಣವನ್ನು ನೀಡಿದ್ದಾರೆ. ಅರ್ಜಿ ಇತ್ಯರ್ಥವಾಗುವವರೆಗೆ ಮಧ್ಯಂತರ ಜಾಮೀನು ಜಾರಿಯಲ್ಲಿರುತ್ತದೆ” ಎಂದು ಎಂದು ಹೇಳಿದ್ದು, ಮಧ್ಯಂತರ ಜಾಮೀನು ನೀಡಿದೆ.
ಅರ್ಜಿದಾರರು (ಆರೋಪಿ ಶಾಸಕರು) ಪ್ರಾಸಿಕ್ಯೂಷನ್ ಸಾಕ್ಷಿಗಳನ್ನು ಹಾಳು ಮಾಡಬಾರದು ಅಥವಾ ಬೆದರಿಕೆ ಹಾಕಬಾರದು ಮತ್ತು ಇದೇ ರೀತಿಯ ಅಪರಾಧಗಳಲ್ಲಿ ಪಾಲ್ಗೊಳ್ಳಬಾರದು” ಎಂದು ನ್ಯಾಯಾಲಯವು ತಾಕೀತು ಮಾಡಿದೆ. ನಿರೀಕ್ಷಣಾ ಜಾಮೀನು ಅರ್ಜಿಯ ವಿಚಾರಣೆಯನ್ನು ಫೆ.20ಕ್ಕೆ ಮುಂದೂಡಿದೆ.




