- ಪತ್ರಕ್ಕೆ ಕೆ ಎಚ್ ಮುನಿಯಪ್ಪ, ಆರ್ ಬಿ ತಿಮ್ಮಾಪುರ, ಮಹದೇವಪ್ಪ, ಡಾ.ಜಿ.ಪರಮೇಶ್ವರ್ ಸಹಿ
- ‘ನಾಮನಿರ್ದೇಶನ ಮಾಡುವಾಗ ನಮ್ಮ ಅಭಿಪ್ರಾಯವನ್ನು ಕೇಳಿಲ್ಲ’ ಎಂದು ಉಲ್ಲೇಖಿಸಿದ ಸಚಿವರು
ಮೂರು ವಿಧಾನ ಪರಿಷತ್ ಸ್ಥಾನಗಳ ಪೈಕಿ ಮಾಜಿ ಐಎಎಸ್ ಅಧಿಕಾರಿ ಸುಧಾಮ್ ದಾಸ್ ಅವರ ಹೆಸರನ್ನು ಕೂಡ ಅಂತಿಮಗೊಳಿಸಿ ರಾಜ್ಯಪಾಲರಿಗೆ ಕಳುಹಿಸಲು ಶಿಫಾರಸು ಮಾಡಲಾಗಿದೆ ಎಂಬ ಸುದ್ದಿಯ ನಡುವೆಯೇ, ಇದಕ್ಕೆ ವಿರೋಧ ವ್ಯಕ್ತಪಡಿಸಿ ನಾಲ್ವರು ಸಚಿವರು ಕಾಂಗ್ರೆಸ್ ಹೈಕಮಾಂಡ್ಗೆ ಪತ್ರ ಬರೆದಿದ್ದಾರೆ.
ಸುಧಾಮ್ ದಾಸ್ ದಲಿತ ಸಮುದಾಯಕ್ಕೆ ಸೇರಿದವರಾಗಿದ್ದು, ಪತ್ರ ಬರೆದ ನಾಲ್ವರು ಸಚಿವರು ಕೂಡ ದಲಿತ ಸಮುದಾಯದ ಸಚಿವರು ಎಂಬುದು ವಿಶೇಷ.
ವಿಧಾನ ಪರಿಷತ್ಗೆ ನಾಮನಿರ್ದೇಶನಕ್ಕೆ ಹಿರಿಯ ನಟಿ ಉಮಾಶ್ರೀ, ಸುಧಾಮ್ ದಾಸ್, ಎಂಆರ್ ಸೀತಾರಾಮ್ ಮೂವರು ಹೆಸರನ್ನ ವಿಧಾನಪರಿಷತ್ ಗೆ ನಾಮನಿರ್ದೇಶನ ಮಾಡಲು ಶಿಫಾರಸು ಮಾಡಲಾಗಿದೆ.

ಸುಧಾಮ್ ದಾಸ್ ನಾಮ ನಿರ್ದೇಶನಕ್ಕೆ ವಿರೋಧ ವ್ಯಕ್ತಪಡಿಸಿರುವ ಸಚಿವರಾದ ಹೆಚ್.ಸಿ ಮಹದೇವಪ್ಪ, ಡಾ.ಜಿ.ಪರಮೇಶ್ವರ್, ಕೆ.ಎಚ್ ಮುನಿಯಪ್ಪ ಮತ್ತು ಆರ್.ಬಿ ತಿಮ್ಮಾಪುರ ಅವರು ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಹಾಗೂ ರಾಹುಲ್ ಗಾಂಧಿಗೆ ಪತ್ರ ಬರೆದಿದ್ದಾರೆ. ಈ ಪತ್ರ ಈಗ ಸೋಷಿಯಲ್ ಮೀಡಿಯಾಗಳಲ್ಲಿ ಹರಿದಾಡಿದೆ.
‘ಸುಧಾಮ್ ದಾಸ್ ಜಾರಿ ನಿರ್ದೇಶನಾಲಯದಲ್ಲಿ ಐಎಎಸ್ ಅಧಿಕಾರಿಯಾಗಿದ್ದರು. ಕೆಲ ವರ್ಷಗಳ ಹಿಂದೆ ಏಕಾಏಕಿ ಹುದ್ದೆಗೆ ರಾಜೀನಾಮೆ ನೀಡಿದ್ದರು. ಬಳಿಕ ಕಾಂಗ್ರೆಸ್ ಪಕ್ಷ ಸೇರ್ಪಡೆಯಾಗಿದ್ದರು. ಕಳೆದ ಮಾರ್ಚ್ ತಿಂಗಳಲ್ಲಿ ಕಾಂಗ್ರೆಸ್ ಪಕ್ಷಕ್ಕೆ ಸೇರಿರುವ ಸುಧಾಮ್ ದಾಸ್ ಅವರ ಹೆಸರನ್ನು ಪರಿಷತ್ ಗೆ ಅಂತಿಮಗೊಳಿಸಲಾಗಿದೆ. ವಿಧಾನ ಪರಿಷತ್ಗೆ ಸುಧಾಮ್ ದಾಸ್ ನಾಮನಿರ್ದೇಶನ ಮಾಡುವಾಗ ನಮ್ಮ ಅಭಿಪ್ರಾಯವನ್ನ ಕೇಳಿಲ್ಲ. ನಾಮನಿರ್ದೇಶನವನ್ನ ನಾವು ವಿರೋಧಿಸುತ್ತೇವೆ ಎಂದು ನಾಲ್ವರು ಸಚಿವರು ಪತ್ರದಲ್ಲಿ ಉಲ್ಲೇಖಿಸಿದ್ದಾರೆ.

ಕಳೆದ ಮಾರ್ಚ್ನಲ್ಲಿ ಕಾಂಗ್ರೆಸ್ ಪಕ್ಷಕ್ಕೆ ಸೇರಿದ್ದ ಸುಧಾಮ್ ದಾಸ್
‘ಹೆಚ್ ಪಿ ಸುಧಾಮ್ ದಾಸ್ ವಿಧಾನಸಭಾ ಚುನಾವಣೆಯ ವೇಳೆ ಪಕ್ಷಕ್ಕೆ ದೊಡ್ಡ ಮಟ್ಟದ ಕೆಲಸ ಏನೂ ಮಾಡಿಲ್ಲ. ಅವರಿಗಿಂತ ಹೆಚ್ಚು ಪಕ್ಷಕ್ಕೆ ದುಡಿದವರು ಹಲವರಿದ್ದಾರೆ. ಅಂತವರಿಗೆ ಮೊದಲು ಅವಕಾಶ ನೀಡಬೇಕು. ಸುಧಾಮ್ ದಾಸ್ ಆಯ್ಕೆಯನ್ನು ನಾವು ತೀವ್ರವಾಗಿ ಖಂಡಿಸುತ್ತೇವೆ’ ಎಂದು ಸಚಿವರು ಪತ್ರದಲ್ಲಿ ಉಲ್ಲೇಖಿಸಿದ್ದಾರೆ.
ಪತ್ರ ಬರೆದಿರುವ ವಿಚಾರಕ್ಕೆ ಸಂಬಂಧಿಸಿದಂತೆ ಪ್ರತಿಕ್ರಿಯಿಸಿರುವ ಅಬಕಾರಿ ಸಚಿವ ಆರ್ ಬಿ ತಿಮ್ಮಾಪುರ, ‘ಇದು ಪಕ್ಷದ ಆಂತರಿಕ ವಿಚಾರ. ಬೇಕು, ಬೇಡ, ಸಮುದಾಯ, ಪ್ರಾಂತ್ಯ ಅದೆಲ್ಲವೂ ಚರ್ಚೆಯಾಗುತ್ತದೆ. ನಾನು ಅದನ್ನು ಮಾಧ್ಯಮದ ಮುಂದೆ ಹೇಳೋದಿಲ್ಲ. ನನ್ನ ಅಭಿಪ್ರಾಯವನ್ನು ಹೈಕಮಾಂಡ್ಗೆ ಹೇಳುತ್ತೇನೆ. ಪಕ್ಷದ ಹಿರಿಯ ನಾಯಕರ ಜೊತೆ ಮಾತನಾಡುತ್ತೇನೆ’ ಎಂದರು.





