ಮುಂದಿನ ವರ್ಷವೇ ಪಶ್ಚಿಮ ಬಂಗಾಳದಲ್ಲಿ ವಿಧಾನಸಭೆ ಚುನಾವಣೆ ನಡೆಯಲಿದೆ. ಈ ನಡುವೆ ತೃಣಮೂಲ ಕಾಂಗ್ರೆಸ್(ಟಿಎಂಸಿ) ಶಾಸಕ ಹುಮಾಯೂನ್ ಕಬೀರ್ ತಮ್ಮದೇ ಆದ ಪಕ್ಷವನ್ನು ಕಟ್ಟಿಕೊಂಡಿದ್ದಾರೆ. ಮುರ್ಷಿದಾಬಾದ್ ಜಿಲ್ಲೆಯಲ್ಲಿ ‘ಬಾಬರಿ ಮಸೀದಿ ಶೈಲಿಯ’ ಮಸೀದಿ ನಿರ್ಮಾಣ ಕಾರ್ಯ ಆರಂಭಿಸಿದ್ದ ಕಬೀರ್ ಇದೀಗ ಜನತಾ ಉನ್ನಾಯನ್ ಪಕ್ಷವನ್ನು ಪ್ರಾರಂಭಿಸಿದ್ದಾರೆ. ಜೆಯುಪಿ ಭಾವುಟ ಶೀಘ್ರದಲ್ಲೇ “ಬಂಗಾಳದಾದ್ಯಂತ ಹಾರುತ್ತದೆ” ಎಂದೂ ಹೇಳಿಕೊಂಡಿದ್ದಾರೆ.
ಜೆಯುಪಿಯ ಚಿಹ್ನೆ ಮೇಜು ಮತ್ತು ಅವಳಿ ಗುಲಾಬಿಗಳು ಆಗಿರಲಿವೆ ಎಂದೂ ಹೇಳಿದ್ದಾರೆ. ಇನ್ನು 2026ರ ಚುನಾವಣೆಗೆ ಅಸಾದುದ್ದೀನ್ ಓವೈಸಿ ಜತೆ ಕಬೀರ್ ಮೈತ್ರಿ ಮಾಡಿಕೊಳ್ಳುವ ನಿರೀಕ್ಷೆಯಿದೆ. ಮಾಧ್ಯಮವೊಂದಕ್ಕೆ ಪ್ರತಿಕ್ರಿಯಿಸುತ್ತಾ ಶೀಘ್ರದಲ್ಲೇ ಆರು ಅಭ್ಯರ್ಥಿಗಳನ್ನು ಘೋಷಿಸುವುದಾಗಿಯೂ ಹೇಳಿಕೊಂಡಿದ್ದಾರೆ. ಜೆಯುಪಿ ಒಟ್ಟು 135 (ರಾಜ್ಯದ 249) ಸ್ಥಾನಗಳಲ್ಲಿ ಸ್ಪರ್ಧಿಸಲಿದೆ. ಮುಸ್ಲಿಮರು ಸೇರಿದಂತೆ ಜನ ಸಾಮಾನ್ಯರಿಗಾಗಿ ಕೆಲಸ ಮಾಡುತ್ತೇವೆ ಎಂದಿದ್ದಾರೆ.
ಇದನ್ನು ಓದಿದ್ದೀರಾ? ಪಶ್ಚಿಮ ಬಂಗಾಳ | ಕೋಮು ವಿಭಜನೆ; ಚುನಾವಣೆಗೂ ಮುನ್ನ ಹಿಂದೂ-ಮುಸ್ಲಿಂ ಮತಾಂಧ ರಾಜಕಾರಣ!
ಈ ಸಂದರ್ಭದಲ್ಲೇ ಆರ್ಎಸ್ಎಸ್ ಮುಖ್ಯಸ್ಥ ಮೋಹನ್ ಭಾಗವತ್ ಅವರ “ರಾಜಕೀಯ ಪಿತೂರಿ” ಎಂಬ ಹೇಳಿಕೆಗೂ ಕಬೀರ್ ವ್ಯಂಗ್ಯವಾಡಿದ್ದಾರೆ. “ಮೋಹನ್ ಭಾಗವತ್ ನನ್ನ ಬಗ್ಗೆ ಮಾತನಾಡಿದ್ದಾರೆಂದು ನನಗೆ ಹೆಮ್ಮೆ ಅನಿಸುತ್ತದೆ. ಭಾಗವತ್ ಅವರು ಮಂದಿರವನ್ನು (ರಾಮ ಮಂದಿರ) ನಿರ್ಮಿಸಿದರೆ ಅದು ಸಾಂವಿಧಾನಿಕವಾಗಿದೆ. ನಾನು ಬಾಬರಿ ಮಸೀದಿ ನಿರ್ಮಿಸಿದರೆ ಅದು ಸಾಂವಿಧಾನಿಕವಲ್ಲವೇ” ಎಂದು ಪ್ರಶ್ನಿಸಿದರು.
ಇದನ್ನು ಓದಿದ್ದೀರಾ? ಪಶ್ಚಿಮ ಬಂಗಾಳ | ಕೋಮು ವಿಭಜನೆ; ಚುನಾವಣೆಗೂ ಮುನ್ನ ಹಿಂದೂ-ಮುಸ್ಲಿಂ ಮತಾಂಧ ರಾಜಕಾರಣ!
ಟಿಎಂಸಿಯಿಂದ ಅಮಾನತುಗೊಂಡಿರುವ ಶಾಸಕ ಹುಮಾಯೂನ್ ಕಬೀರ್ ನೇತೃತ್ವದಲ್ಲಿ ಪಶ್ಚಿಮ ಬಂಗಾಳದ ರೆಜಿನಗರದಲ್ಲಿ ಬಾಬರಿ ಮಸೀದಿ ಶೈಲಿಯ ಹೊಸ ಮಸೀದಿಯ ನಿರ್ಮಾಣಕ್ಕೆ ಅಡಿಗಲ್ಲು ಹಾಕಲಾಗಿದೆ. 2024ರ ಡಿಸೆಂಬರ್ 12ರಂದು ಕಬೀರ್ ಮಾಡಿದ ಘೋಷಣೆಯಂತೆಯೇ 2025ರ ಡಿಸೆಂಬರ್ 6ರಂದು ಬಾಬರಿ ಮಸೀದಿ ಧ್ವಂಸದ ದಿನದಂದೇ ಶಂಕುಸ್ಥಾಪನೆ ನೆರವೇರಿಸಲಾಗಿದೆ. ಅಯೋಧ್ಯೆಯಲ್ಲಿದ್ದ ಮೂಲ ಬಾಬರಿ ಮಸೀದಿಯ ವಿನ್ಯಾಸವನ್ನೇ ಹೋಲುವಂತೆ ಈ ಮಸೀದಿಯನ್ನು ನಿರ್ಮಿಸಲಾಗುತ್ತಿದೆ. ಪದೇ ಪದೇ ಬಾಬರಿ ಮಸೀದಿ ನಿರ್ಮಾಣದ ಹೇಳಿಕೆ ನೀಡಿ ವಿವಾದ ಸೃಷ್ಟಿಸಿದ ಕಾರಣಕ್ಕೆ ಕಬೀರ್ ಅನ್ನು ಟಿಎಂಸಿ ಉಚ್ಚಾಟಿಸಿದ್ದು, ಹೊಸ ಪಕ್ಷ ಕಟ್ಟುವುದಾಗಿ ಘೋಷಿಸಿದ್ದರು. ಇದೀಗ ಪಕ್ಷ ಸ್ಥಾಪಿಸಿದ್ದಾರೆ.
ಇವೆಲ್ಲವೂ ಚುನಾವಣೆ ಸಮೀಪಿಸುತ್ತಿರುವಾಗ ನಡೆಯುತ್ತಿರುವುದು ಜನರನ್ನು ಧರ್ಮದ ಆಧಾರದಲ್ಲಿ ವಿಭಜಿಸಿ ರಾಜಕೀಯ ಲಾಭ ಪಡೆಯುವ ಅಪಾಯ ಹೆಚ್ಚಾಗುತ್ತಿದೆ. ಇನ್ನೊಂದೆಡೆ ಮುಸ್ಲಿಮರು ಟಿಎಂಸಿ ಮತಬ್ಯಾಂಕ್ ಆಗಿರುವಾಗ ಕಬೀರ್ ಬಾಬರಿ ಹೆಸರಲ್ಲಿ ಮತಗಳನ್ನು ಸೆಳೆಯುವ ಸಾಧ್ಯತೆಯೂ ಇದೆ. ಇವೆಲ್ಲವುದರ ಲಾಭವನ್ನು ಬಿಜೆಪಿ ಪಡೆಯಬಹುದು ಎಂಬುದು ತಜ್ಞರ ಅಭಿಪ್ರಾಯ.





