ಉಚ್ಚಾಟಿತ ತೃಣಮೂಲ ಕಾಂಗ್ರೆಸ್(ಟಿಎಂಸಿ) ಶಾಸಕ ಹುಮಾಯೂನ್ ಕಬೀರ್ ಮುರ್ಷಿದಾಬಾದ್ನಲ್ಲಿ ‘ಬಾಬರಿ ಮಸೀದಿ ಮಾದರಿಯ’ ಮಸೀದಿಗೆ ಶಂಕುಸ್ಥಾಪನೆ ಮಾಡಲು ಮುಂದಾಗಿದ್ದು ಪಶ್ಚಿಮ ಬಂಗಾಳದಲ್ಲಿ ರಾಜಕೀಯವಾಗಿ ಉದ್ವಿಗ್ನ ಪರಿಸ್ಥಿತಿ ನಿರ್ಮಾಣವಾಗಿದೆ. ಬಾಬರಿ ಮಸೀದಿ ಧ್ವಂಸ ಮಾಡಲಾದ ದಿನದಂದೇ ಟಿಎಂಸಿ ಉಚ್ಚಾಟಿತ ಶಾಸಕ ಶಂಕುಸ್ಥಾಪನೆ ನಡೆಸುತ್ತಿರುವುದರಿಂದ ಪಶ್ಚಿಮ ಬಂಗಾಳದಲ್ಲಿ ಕಟ್ಟೆಚ್ಚರ ವಹಿಸಲಾಗಿದೆ.
ಕಬೀರ್ ಬಾಬರಿ ಮಸೀದಿ ನಿರ್ಮಿಸುವುದಾಗಿ ಪದೇ ಪದೇ ಹೇಳಿಕೆ ನೀಡುತ್ತಿದ್ದ ಕಾರಣದಿಂದಾಗಿ ಈಗಾಗಲೇ ಟಿಎಂಸಿ ಕಬೀರ್ ಅವರನ್ನು ಉಚ್ಚಾಟನೆ ಮಾಡಿದೆ. ಈ ಕಾರ್ಯಕ್ರಮವನ್ನು ತಡೆಯುವಂತೆ ಕೋಲ್ಕತ್ತಾ ಹೈಕೋರ್ಟ್ಗೆ ಸಾರ್ವಜನಿಕ ಹಿತಾಸಕ್ತಿ ಅರ್ಜಿಯನ್ನು (PIL) ಸಲ್ಲಿಸಲಾಗಿದ್ದು, ಹೈಕೋರ್ಟ್ನ ವಿಭಾಗೀಯ ಪೀಠವು ಈ ಹಂತದಲ್ಲಿ ಮಧ್ಯಪ್ರವೇಶಿಸಲು ನಿರಾಕರಿಸಿದೆ. ಜತೆಗೆ ಹೈಕೋರ್ಟ್ ಸಾರ್ವಜನಿಕ ಸುವ್ಯವಸ್ಥೆಯ ಸಂಪೂರ್ಣ ಜವಾಬ್ದಾರಿಯನ್ನು ರಾಜ್ಯ ಸರ್ಕಾರದ ಮೇಲೆ ವಹಿಸಿದೆ.
ಇದನ್ನು ಓದಿದ್ದೀರಾ? ಡಿ.6ರಂದು ಬಾಬರಿ ಮಸೀದಿಗೆ ಅಡಿಪಾಯ ಹಾಕಲಾಗುವುದು: ವಿವಾದಕ್ಕೀಡಾದ ಟಿಎಂಸಿ ಶಾಸಕರ ಹೇಳಿಕೆ
ಈ ಎಲ್ಲ ಬೆಳವಣಿಗೆ ನಡುವೆ ಪಶ್ಚಿಮ ಬಂಗಾಳದಲ್ಲಿ ಕಟ್ಟೆಚ್ಚರ ವಹಿಸಲಾಗಿದೆ. ಮೂರು ಲಕ್ಷ ಜನರು ಸೇರುತ್ತಾರೆ ಎಂದು ಕಬೀರ್ ಹೇಳಿಕೊಂಡಿದ್ದ ಬೆಲ್ದಂಗಾ ಸ್ಥಳದಲ್ಲಿ ಹೆಚ್ಚಿನ ಭದ್ರತೆಯನ್ನು ನಿಯೋಜಿಸಲಾಗಿದೆ. ರಾಷ್ಟ್ರೀಯ ಹೆದ್ದಾರಿ 12 ರ ಎರಡೂ ಬದಿಗಳಲ್ಲಿ ಆರ್ಎಎಫ್, ಜಿಲ್ಲಾ ಪೊಲೀಸ್ ಮತ್ತು ಕೇಂದ್ರ ಪಡೆಗಳನ್ನು ನಿಯೋಜಿಸಲಾಗಿದೆ.
ಆರ್ಎಎಫ್ ತಂಡಗಳು ಶುಕ್ರವಾರ ರೆಜಿನಗರಕ್ಕೆ ಆಗಮಿಸಿದ್ದು ಮುಂಚಿತವಾಗಿ ಸ್ಥಳೀಯ ಶಾಲೆಯಲ್ಲಿ ಬೀಡುಬಿಟ್ಟಿದ್ದವು. ಇನ್ನು ಜಿಲ್ಲಾ ಪೊಲೀಸರು ಬೆಲ್ಡಂಗಾ, ರಾಣಿನಗರ ಮತ್ತು ರಾಜ್ಯದ ಏಕೈಕ ಉತ್ತರ-ದಕ್ಷಿಣ ಹೆದ್ದಾರಿಯಾದ ಎನ್ಎಚ್ -12ರ ಎಲ್ಲಾ ಸಂಪರ್ಕ ರಸ್ತೆಗಳಲ್ಲಿ ಭದ್ರತೆ ಹೆಚ್ಚಿಸಿದ್ದಾರೆ. ದಿನವಿಡೀ ಸುಮಾರು 3,000 ಸಿಬ್ಬಂದಿಯನ್ನು ನಿಯೋಜಿಸಲಾಗುವುದು ಎಂದು ಹಿರಿಯ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
ಈ ನಡುವೆ ರಾಜ್ಯಪಾಲ ಸಿ ವಿ ಆನಂದ ಬೋಸ್, ಜನರು ಪ್ರಚೋದನಕಾರಿ ಹೇಳಿಕೆಗಳು ಮತ್ತು ವದಂತಿಗಳಿಂದ ಪ್ರಭಾವಿತರಾಗಬಾರದು ಎಂದು ಒತ್ತಾಯಿಸಿದ್ದಾರೆ. ಎಲ್ಲಿಯೂ ಯಾವುದೇ ಅಡಚಣೆ ಉಂಟಾಗದಂತೆ ಖಚಿತಪಡಿಸಿಕೊಳ್ಳುವಂತೆ ತಿಳಿಸಿದ್ದಾರೆ.
ಇನ್ನು ಕಾರ್ಯಕ್ರಮ ನಡೆಯಲಿರುವ ಸ್ಥಳದಲ್ಲಿ 150 ಅಡಿ ಉದ್ದ, 80 ಅಡಿ ಅಗಲದ ವೇದಿಕೆ ನಿರ್ಮಿಸಲಾಗಿದೆ. 400 ಅತಿಥಿಗಳಿಗೆ ಆಸನ ವ್ಯವಸ್ಥೆ ಮಾಡಲಾಗಿದೆ. ಸೌದಿ ಅರೇಬಿಯಾದ ಇಬ್ಬರು ಧರ್ಮಗುರುಗಳು ಕೋಲ್ಕತ್ತಾ ವಿಮಾನ ನಿಲ್ದಾಣದಿಂದ ವಿಶೇಷ ಬೆಂಗಾವಲು ಪಡೆಯಲ್ಲಿ ಆಗಮಿಸುತ್ತಾರೆ ಎಂದು ಸಂಘಟಕರು ಹೇಳಿಕೊಂಡಿದ್ದಾರೆ. ಸುಮಾರು 3,000 ಸ್ವಯಂಸೇವಕರನ್ನು ನಿಯೋಜಿಸಲಾಗಿದೆ. ಈ ಸ್ವಯಂಸೇವಕರಿಗೆ ರಸ್ತೆಗಳಲ್ಲಿ ಜನಸಂದಣಿ, ವಾಹನ ಸಂದಣಿ ನಿಯಂತ್ರಿಸುವುದು, ಕಾರ್ಯಕ್ರಮಕ್ಕೆ ಅಡಚಣೆ ತಡೆಯವುದು, ರಾಷ್ಟ್ರೀಯ ಹೆದ್ದಾರಿಯಲ್ಲಿ ವಾಹನ ಸಂಚಾರಕ್ಕೆ ತಡೆಯಾಗದಂತೆ ನೋಡಿಕೊಳ್ಳುವ ಜವಾಬ್ದಾರಿಯನ್ನು ವಹಿಸಲಾಗಿದೆ ಎಂದು ಹೇಳಲಾಗಿದೆ.
ಮುರ್ಷಿದಾಬಾದ್ ಮೂಲದ ಏಳು ಕ್ಯಾಟೆರಿಂಗ್ಗಳಿಗೆ ಶಾಹಿ ಬಿರಿಯಾನಿ ತಯಾರಿಸಲು ತಿಳಿಸಲಾಗಿದ್ದು ಅತಿಥಿಗಳಿಗೆ ಅಂದಾಜು 40,000 ಪ್ಯಾಕೆಟ್ಗಳು ಮತ್ತು ಸ್ಥಳೀಯ ನಿವಾಸಿಗಳಿಗೆ ಇನ್ನೂ 20,000 ಪ್ಯಾಕೆಟ್ಗಳಷ್ಟು ಬಿರಿಯಾನಿ ತಯಾರಿಗೆ ತಿಳಿಸಲಾಗಿದೆ. ಆಹಾರಕ್ಕಾಗಿಯೇ 30 ಲಕ್ಷ ರೂ.ಗಳಿಗಿಂತ ಹೆಚ್ಚು ಖರ್ಚು ಅಂದಾಜಿಸಲಾಗಿದೆ. ಒಟ್ಟು ಖರ್ಚು 70 ಲಕ್ಷ ರೂಪಾಯಿ ಎಂದು ಹೇಳಲಾಗಿದೆ.
ಬಾಬರಿ ಮಸೀದಿ ಧ್ವಂಸ ದಿನ
1992ರ ಡಿಸೆಂಬರ್ 6ರಂದು ಅಯೋಧ್ಯೆಯಲ್ಲಿದ್ದ 16ನೇ ಶತಮಾನದ ಬಾಬರಿ ಮಸೀದಿಯ ಮೇಲೆ ಕರಸೇವಕರು ಎಂದು ಕರೆಯಲ್ಪಡುವ ಆರ್ಎಸ್ಎಸ್, ಬಿಜೆಪಿ ಕಾರ್ಯಕರ್ತರ ದೊಡ್ಡ ಗುಂಪು ದಾಳಿ ನಡೆಸಿ ಸಂಪೂರ್ಣವಾಗಿ ನೆಲಸಮ ಮಾಡಿದೆ. ಬಲಪಂಥೀಯರು ಈ ದಿನವನ್ನು ವಿಜಯೋತ್ಸವ ದಿನ ಎಂದು ಕರೆದರೆ, ಮುಸ್ಲಿಂ ಸಮುದಾಯ ಸೇರಿದಂತೆ ಹಲವು ವಿಪಕ್ಷಗಳು ಈ ದಿನವನ್ನು ಕಪ್ಪು ದಿನ ಎಂದು ಆಚರಿಸುತ್ತದೆ. ಈ ಘಟನೆಯು ದೇಶದಲ್ಲಿ ವ್ಯಾಪಕ ಕೋಮು ಗಲಭೆಗಳಿಗೆ ಮತ್ತು ರಾಜಕೀಯ ಬದಲಾವಣೆಗಳಿಗೆ ಕಾರಣವಾಯಿತು.





