ಸ್ವಾಮಿ ವಿವೇಕಾನಂದ... ಭಾರತದ ಅತ್ಯಂತ ಪ್ರಸಿದ್ಧ ಮತ್ತು ಪ್ರಭಾವಶಾಲಿ ತತ್ತ್ವಜ್ಞಾನಿಗಳಲ್ಲಿ ಒಬ್ಬರು. ನಿರ್ಭಯತೆ, ಆಶಾವಾದ ಮತ್ತು ಸಾಮಾಜಿಕ ಸಮಸ್ಯೆಗಳ ಬಗೆಗಿನ ವಿಶಾಲ ದೃಷ್ಟಿಯ ಸಂಕೇತವಾಗಿದ್ದರು. ಅವರ ಜನ್ಮದಿನವಿಂದು.
ಈ ಮಹಾನ್ ಇತಿಹಾಸದ, ಬೌದ್ಧಿಕತೆಯ ಪರಂಪರೆಯ ದೇಶ ಯಾಕೆ ಇವತ್ತು ಚಿಂದಿಯಾಗಿದೆ? ಈ ಪ್ರಶ್ನೆಗೆ ನನ್ನ ಉತ್ತರ, ಅಸೂಯೆ. ಬೇರೆಯವರ ನೆಮ್ಮದಿ ಕಂಡರೆ ಹೊಟ್ಟೆಕಿಚ್ಚಿನಿಂದ ಇಷ್ಟು ಉರಿದುಬೀಳುವ ಜನರನ್ನು ನಾನು ಯಾವ ದೇಶದಲ್ಲೂ ನೋಡಿಲ್ಲ…
ನಮ್ಮ ಜನ ಒಟ್ಟಿಗೇ ಸೇರಿ ಐದೇ ಐದು ನಿಮಿಷ ವಿಶ್ವಾಸದಿಂದ ಇರುವುದಿಲ್ಲ. ಅಸೂಯೆಯಿಂದ ಬಡಿದಾಡತೊಡಗುತ್ತಾರೆ. ಅವರ ಪಕ್ಷ ಅಥವಾ ಸಂಸ್ಥೆ ಮುಗ್ಗರಿಸತೊಡಗುತ್ತದೆ… ಇಲ್ಲಿಯ ಮೌಢ್ಯ, ನೀಚತನ, ಜಾತೀಯತೆ, ಮಂಗಾಟಗಳು, ಹೊಟ್ಟೆಕಿಚ್ಚು ಮತ್ತು ಇವೆಲ್ಲವುಗಳಿಗೆ ಕಾರಣವಾದ ಗುಲಾಮಗಿರಿಯನ್ನು ಮೆಟ್ಟಿ ಜನಸಮೂಹ ಬೆಳೆಯಬೇಕಾಗಿದೆ.
ಹೊಟ್ಟೆಕಿಚ್ಚು ಗುಲಾಮರಾದವರ ದೇಹದ ಭಾಗ. ಈ ಗುಲಾಮಗಿರಿ ಅಸೂಯೆಯಾಗಿ ಮುಂದುವರಿಯುತ್ತದೆ. ನೀನು ಭಾರತದಲ್ಲಿ ಸ್ವಲ್ಪ ಮೇಲೆ ಬರಲು ಯತ್ನಿಸು, ಗೊತ್ತಾಗುತ್ತದೆ. ನನ್ನ ಬಗ್ಗೆ ಭಾರತದಲ್ಲಿ ಒಂದು ಹೊಗಳಿಕೆಯ ಸಾಲು ಪ್ರಕಟವಾಗಲಿ; ಎಲ್ಲರೂ ನನ್ನ ಶತ್ರುಗಳಾಗುತ್ತಾರೆ, ಯಾಕೆ? ಅವರ ಮಟ್ಟ ಮೀರುವವನನ್ನು ಅವರು ಸಹಿಸುವುದಿಲ್ಲ.
ಇದೊಂದು ಸತ್ತುಹೋಗಿರುವ ದೇಶ. ಇಲ್ಲಿ ಏನೇನೂ ಚಲಿಸುತ್ತಿಲ್ಲ. ಧರ್ಮ ಬೋಧಿಸುವ ಸನ್ಯಾಸಿಗಳ ಸೋಗಿನ ಸಾವಿರಾರು ಜನರನ್ನುಳ್ಳ ಈ ದೇಶ ಮೃತ ಅವಸ್ಥೆಯಲ್ಲಿದೆ. ಈ ಸನ್ಯಾಸಿಗಳು, ಬಾಬಾಗಳಿಗೆ ಬದಲು ಲಕ್ಷಾಂತರ ಜನ ಅಧ್ಯಾಪಕರು ಇಡೀ ದೇಶವನ್ನು ಎಚ್ಚರಿಸಬೇಕಾಗಿದೆ, ಶಾಕ್ ಕೊಟ್ಟು ಜೀವ ತರಬೇಕಾಗಿದೆ.
ಕೃಪೆ: ಪಿ. ಲಂಕೇಶ್ ‘ಟೀಕೆ-ಟಿಪ್ಪಣಿ’ (ಸಂಪುಟ-2, ಪುಟ: 152-154, 1998)





