ವಿಜಯ್ ಕೊನೆಯ ಚಿತ್ರ ‘ಜನ ನಾಯಗನ್’ ಮತ್ತು ತಮಿಳುನಾಡಿನ ರಾಜಕಾರಣ

Date:

ಟಿವಿಕೆ ಪಕ್ಷದ ದಳಪತಿ ವಿಜಯ್ ಅವರ ಕೊನೆಯ ಚಿತ್ರ 'ಜನ ನಾಯಗನ್' ಬಿಡುಗಡೆ ಮತ್ತು ಕ್ರಿಸ್ಮಸ್ ಆಚರಣೆಗಳಿಂದ ತಮಿಳುನಾಡಿನ ರಾಜಕಾರಣ ಹೊಸ ರಂಗು ಪಡೆಯುತ್ತಿದೆ, ಕುತೂಹಲ ಕೆರಳಿಸುತ್ತಿದೆ.  

2026ರಲ್ಲಿ ನಡೆಯುವ ವಿಧಾನಸಭಾ ಚುನಾವಣೆಗೆ ತಮಿಳುನಾಡು ಸಜ್ಜಾಗುತ್ತಿದೆ. ಆಡಳಿತಾರೂಢ ಡಿಎಂಕೆ, ಮತ್ತೆ ಅಧಿಕಾರಕ್ಕೇರಲು ಇನ್ನಿಲ್ಲದ ಕಸರತ್ತುಗಳಿಗೆ ಕೈಹಾಕಿದೆ. ಎಐಡಿಎಂಕೆ, ಬಿಜೆಪಿ, ಕಾಂಗ್ರೆಸ್ ಪಕ್ಷಗಳು ಯಾವ ಪಕ್ಷದೊಂದಿಗೆ ಮೈತ್ರಿ ಮಾಡಿಕೊಂಡರೆ ಹೆಚ್ಚು ಸ್ಥಾನಗಳನ್ನು ಗೆಲ್ಲಬಹುದು, ಅಧಿಕಾರಕ್ಕೇರಬಹುದು ಎಂಬ ಜಿಜ್ಞಾಸೆಯಲ್ಲಿವೆ. ಜನರನ್ನು ಓಲೈಸುವ ಹೊಸ ಹೊಸ ತಂತ್ರಗಳನ್ನು ಅಳವಡಿಸಿಕೊಳ್ಳುವತ್ತ, ಜಾರಿಗೊಳಿಸುವತ್ತ ರಾಜಕೀಯ ನಾಯಕರು ಗಮನ ಹರಿಸುತ್ತಿದ್ದಾರೆ.

ಇಂತಹ ಹೊತ್ತಿನಲ್ಲಿ ದಳಪತಿ ವಿಜಯ್, ಸಿನೆಮಾ ಜಗತ್ತಿನಲ್ಲಿ ಗಳಿಸಿದ ಹಣ, ಅಭಿಮಾನಿಗಳ ಬೆಂಬಲ ಮತ್ತು ಜನಪ್ರಿಯತೆಯಿಂದ ತಮಿಳಗ ವೆಟ್ರಿ ಕಳಗಂ(ಟಿವಿಕೆ) ಎಂಬ ಪಕ್ಷ ಸ್ಥಾಪಿಸಿ ರಾಜಕಾರಣಕ್ಕೆ ಧುಮುಕಿದ್ದಾರೆ. ಹೋದಲ್ಲಿ ಬಂದಲ್ಲಿ ಭಾರೀ ಜನಸ್ತೋಮದ ಜೈಕಾರ ಮತ್ತು ಬೆಂಬಲ ಗಳಿಸುತ್ತಿದ್ದಾರೆ. ಮುಂದಿನ ಚುನಾವಣೆಯಲ್ಲಿ ಸ್ಪರ್ಧಿಸಿ, ಗೆದ್ದು, ತಮಿಳುನಾಡಿನ ಮುಖ್ಯಮಂತ್ರಿಯಾಗುವ ಕನಸು ಕಾಣುತ್ತಿದ್ದಾರೆ.

ಕಳೆದ ಸೆಪ್ಟೆಂಬರ್‍‌ನಲ್ಲಿ ತಮಿಳುನಾಡಿನ ಕರೂರಿನಲ್ಲಿ ನಡೆದ ನಟ ವಿಜಯ್ ಅವರ ರ್‍ಯಾಲಿಯಲ್ಲಿ ಸಂಭವಿಸಿದ ಭಾರಿ ಕಾಲ್ತುಳಿತದಲ್ಲಿ 39 ಜನರು ಸಾವನ್ನಪ್ಪಿದ್ದರು ಮತ್ತು 51 ಜನರು ಗಾಯಗೊಂಡಿದ್ದರು. ಆನಂತರ ತಮಿಳುನಾಡು ಡಿಎಂಕೆ ಸರ್ಕಾರ, ವಿಜಯ್ ಮೇಲೆ ಕಾನೂನು ಕ್ರಮ ಕೈಗೊಂಡು, ಸಾರ್ವಜನಿಕ ಸಭೆ-ಸಮಾರಂಭಗಳಲ್ಲಿ ವಿಜಯ್ ಭಾಗವಹಿಸದಂತೆ ನಿರ್ಬಂಧ ಹೇರಿತ್ತು. ಆ ಮೂಲಕ, ರಾಜಕೀಯವಾಗಿ ವಿಜಯ್‌ರನ್ನು ಹಣಿಯಲು ಹವಣಿಸಿತ್ತು.

ಇನ್ನಷ್ಟು ವಿಶೇಷ ಲೇಖನಗಳಿಗಾಗಿ, ಇಲ್ಲಿ ಕ್ಲಿಕ್ ಮಾಡಿ

ಹಾಸನ ಮಣ್ಣಿನ ಹೆಣ್ಣು ದನಿಗಳು | ಮಾಧ್ಯಮ ಕ್ಷೇತ್ರದಲ್ಲಿ...

ಹಾಸನ ಜಿಲ್ಲೆಯ ಹೆಣ್ಣುಮಕ್ಕಳು ವಿವಿಧ ಕ್ಷೇತ್ರಗಳಲ್ಲಿ ತೊಡಗಿಸಿಕೊಂಡು ಸದ್ದಿಲ್ಲದೆ ಕೆಲಸ ಮಾಡುತ್ತಾ, ತಮ್ಮ ಛಾಪು ಮೂಡಿಸುತ್ತ, ಕೊಡುಗೆ ನೀಡುತ್ತಾ, ಸಾಧಿಸುತ್ತಾ ಹೋಗಿದ್ದಾರೆ. ಇದು, ಅವರ ಕುರಿತು ವಿವಿಧ ಲೇಖಕ/ಲೇಖಕಿಯರಿಂದ ಒಂದು ಪುಟ್ಟ ದಾಖಲೀಕರಣ… ಸೃಜನಶೀಲತೆ,...

ಬೀದರ್ | ನಮ್ಮೂರಾಗ ಕುಡಿಲಾಕ್ ನೀರಿಲ್ಲ, ಎಲ್ರೂ ವರ್ಷಕ್ಕೆ...

ಸರ್ಕಾರಿ ನಲ್ಲಿಗಳಲ್ಲಿ ಹನಿ ನೀರಿಲ್ಲ, ಮನೆ-ಮನೆಯಲ್ಲಿ ಜೋತಾಡುತ್ತಿವೆ ಖರೀದಿ ನೀರಿನ ಪೈಪ್‌ಗಳು! ಹೋಕ್ರಾಣಾ ಗ್ರಾಮದಲ್ಲಿ ಜನರ ನೀರಿನ ದಾಹವನ್ನೇ ಬಂಡವಾಳ ಮಾಡಿಕೊಂಡು ಖಾಸಗಿ ಬೋರ್‌ವೆಲ್‌ಗಳು ದರ್ಬಾರ್‌ ನಡೆಸುತ್ತೆವೆಯೇ? ಖುದ್ದು ಗ್ರಾಮಸ್ಥರ ಜೊತೆಗೆ ನಿಂತು...

ತಮಿಳುನಾಡು ಚುನಾವಣೆ | ಪ್ರಾದೇಶಿಕ ಸಿದ್ಧಾಂತವನ್ನು ಮೀರಿ ಬೆಳೆಯುತ್ತಾ...

ತಮಿಳುನಾಡಿನ ಪಾರಂಪರಿಕ ಮಧುರೈನ ಸುಬ್ರಮಣ್ಯಸ್ವಾಮಿ ದೇವಸ್ಥಾನ, ಅರಿಯಲೂರ್ ಜಿಲ್ಲೆಯ ಗಂಗೈಕೊಂಡ ಚೋಳಪುರಂ ಬೃಹದೀಶ್ವರ ದೇವಸ್ಥಾನ, ಮತ್ತು ತಿರುಚಿರಾಪಳ್ಳಿಯ ಶ್ರೀ ರಂಗನಾಥಸ್ವಾಮಿ ದೇವಸ್ಥಾನಗಳಿಗೆ ಭೇಟಿ ನೀಡಿದರೂ, ತಮಿಳುನಾಡಿನ ಚೋಳ ಸಾಮ್ರಾಜ್ಯದ ಸಂಪ್ರದಾಯದ ಹಿನ್ನೆಲೆಯಿರುವ ಸೆಂಗೋಲ್...

ಇದನ್ನು ಓದಿದ್ದೀರಾ?: ನುಡಿ ನಮನ | ಕಿಟಕಿ ದಾಟಿ ಮಾಯವಾದರು ವಿನೋದ ಕುಮಾರ್ ಶುಕ್ಲಾ

ಈ ಆಕಸ್ಮಿಕ ಅವಘಡದಿಂದ ಬೆಚ್ಚಿಬಿದ್ದ ವಿಜಯ್, ಕೆಲವು ಕಾಲ ಮೌನಕ್ಕೆ ಜಾರಿದ್ದರು. ಅವಘಡದಲ್ಲಿ ಅಸುನೀಗಿದವರ ಕುಟುಂಬಗಳನ್ನು ಭೇಟಿ ಮಾಡಿ ಸಾಂತ್ವನ ಹೇಳಿದ್ದರು. ಇದಾಗಿ ಕೇವಲ ಮೂರು ತಿಂಗಳು ಕಳೆದಿಲ್ಲ, ಆಗಲೇ ನಟ ವಿಜಯ್ ಮತ್ತೆ ಜನರೊಂದಿಗೆ ಬೆರೆಯಲು, ಸಾರ್ವಜನಿಕ ಕಾರ್ಯಕ್ರಮಗಳಲ್ಲಿ ಕಾಣಿಸಿಕೊಳ್ಳಲು ಮುಂದಾಗಿದ್ದಾರೆ. ಕ್ರಿಸ್ಮಸ್ ಹಬ್ಬದ ಆಚರಣೆಗೂ ಮುನ್ನ, ಕನ್ಯಾಕುಮಾರಿಯಲ್ಲಿ ನಡೆದ ಕಾರ್ಯಕ್ರಮದಲ್ಲಿ ಕಾಂಗ್ರೆಸ್ ನಾಯಕರೊಂದಿಗೆ ವೇದಿಕೆ ಹಂಚಿಕೊಂಡು, ರಾಜಕೀಯ ರಂಗದಲ್ಲಿ ಸಂಚಲನ ಉಂಟು ಮಾಡಿದ್ದಾರೆ. ವಿರೋಧ ಪಕ್ಷ ಡಿಎಂಕೆ ನಾಯಕರ ಎದೆಯಲ್ಲಿ ಅವಲಕ್ಕಿ ಕುಟ್ಟಿದ್ದಾರೆ.

ವಿಧಾನಸಭಾ ಚುನಾವಣೆಯ ಹಿನ್ನೆಲೆಯಲ್ಲಿ ನಡೆದ ತಮಿಳುನಾಡಿನ ರಾಜಕೀಯ ರಂಗದ ಈ ಹೊಸ ವಿದ್ಯಮಾನವನ್ನು ಬಿಜೆಪಿ ನಾಯಕ ಕೆ. ಅಣ್ಣಾಮಲೈ ‘ಪ್ಲಮ್ ಕೇಕ್’ಗೆ ಹೋಲಿಸಿ ವ್ಯಂಗ್ಯವಾಡಿದ್ದಾರೆ. ‘ಕೇಕ್ ತಿನ್ನುವುದು ಯಾರು ಎಂಬ ಜಿಜ್ಞಾಸೆಯಲ್ಲಿರುವ ಡಿಎಂಕೆ ಹಾಗೂ ಟಿವಿಕೆ ಕಾದಾಟದಲ್ಲಿ, ಕಾಂಗ್ರೆಸ್‌ ಕೇಕ್ ಜೊತೆ ಹೋಗಲಿದೆಯೇ’ ಎಂದು ರಾಜಕೀಯ ನಾಯಕರ ತಲೆ ಕೆಡಿಸಿದ್ದಾರೆ.

ಬಿಜೆಪಿ ನಾಯಕ ಅಣ್ಣಾಮಲೈ ಆಡಿರುವ ಮಾತುಗಳು, ಯಾರ ವಿರುದ್ಧ, ಯಾರ ಪರ ಎನ್ನುವುದಕ್ಕಿಂತ ಸಂದರ್ಭವನ್ನು ಬಳಸಿಕೊಂಡ ಬುದ್ಧಿವಂತಿಕೆಯನ್ನು ಹೇಳುತ್ತಿವೆ. ಆ ಮೂಲಕ ಒಂದು ಸಮುದಾಯದ ಅವಕೃಪೆಗೆ ಒಳಗಾದ ಡಿಎಂಕೆ, ರಾಜಕೀಯ ಲಾಭ ಪಡೆದ ಟಿವಿಕೆಯ ಜಾಣ್ಮೆ ಕುರಿತು ವಿಶ್ಲೇಷಿಸಿದ್ದಾರೆ. ಸೋಜಿಗದ ಸಂಗತಿ ಎಂದರೆ, ಡಿಎಂಕೆ ಮತ್ತು ಟಿವಿಕೆಗಳ ನಡುವೆ ಕಾಂಗ್ರೆಸ್- ಯಾರೊಂದಿಗೆ ಮೈತ್ರಿ ಮಾಡಿಕೊಳ್ಳಲಿದೆ ಎಂದು ಕಟಕಿಯಾಡಿದ್ದಾರೆ. ಹಾಗೆಯೇ ಅಲ್ಪಸಂಖ್ಯಾತ ಕ್ರಿಶ್ಚಿಯನ್ ಸಮುದಾಯವನ್ನು ಕಡೆಗಣಿಸಿದ ಬಿಜೆಪಿ, ಸಮರಕ್ಕೆ ಮುನ್ನವೇ ಸೋಲೊಪ್ಪಿಕೊಂಡಿರುವುದನ್ನು ಸಾಬೀತುಪಡಿಸಿದ್ದಾರೆ.

AB t5u q
ಕನ್ಯಾಕುಮಾರಿಯಲ್ಲಿ ಕ್ರಿಸ್ಮಸ್ ಕಾರ್ಯಕ್ರಮದಲ್ಲಿ ಮಕ್ಕಳೊಂದಿಗೆ ವಿಜಯ್

ಪ್ರತಿವರ್ಷ ಡಿಸೆಂಬರ್ ಕೊನೆಯಲ್ಲಿ, ಕ್ರಿಸ್ಮಸ್ ಹಬ್ಬದ ಹಿನ್ನೆಲೆಯಲ್ಲಿ ಕನ್ಯಾಕುಮಾರಿಯಲ್ಲಿ ಬಹಳ ದೊಡ್ಡ ಕಾರ್ಯಕ್ರಮ ಆಯೋಜಿಸಲಾಗುತ್ತದೆ. ಕಳೆದವರ್ಷ ತಮಿಳುನಾಡಿನ ಆಡಳಿತಾರೂಢ ಡಿಎಂಕೆ ಸರ್ಕಾರವೇ ಈ ಕಾರ್ಯಕ್ರಮದ ನೇತೃತ್ವ ವಹಿಸಿತ್ತು. ಮುಖ್ಯಮಂತ್ರಿ ಸ್ಟಾಲಿನ್ ಮುಖ್ಯ ಅತಿಥಿಗಳಾಗಿ, ಅಲ್ಪಸಂಖ್ಯಾತರ ಬೆನ್ನಿಗೆ ನಿಂತಿದ್ದರು. ಹಬ್ಬವನ್ನು ಸಂಭ್ರಮದಿಂದ ಆಚರಿಸಲು ಅಲ್ಪಸಂಖ್ಯಾತರಿಗೆ ಅನುವು ಮಾಡಿಕೊಟ್ಟಿದ್ದರು.

ಆದರೆ, ಈ ವರ್ಷ ಅದೇ ಕನ್ಯಾಕುಮಾರಿಯ ಕ್ರಿಸ್ಮಸ್ ಕಾರ್ಯಕ್ರಮಕ್ಕೆ ನಟ ವಿಜಯ್ ಅವರನ್ನು- ಅವರು ಕ್ರಿಶ್ಚಿಯನ್ ಧರ್ಮಕ್ಕೆ ಸೇರಿದವರು ಎಂಬ ಕಾರಣಕ್ಕೋ ಅಥವಾ ರಾಜಕಾರಣಕ್ಕೆ ಧುಮುಕಿದ್ದಾರೆಂಬುದಕ್ಕೋ- ಮುಖ್ಯ ಅತಿಥಿಯನ್ನಾಗಿ ಆಹ್ವಾನಿಸಲಾಗಿತ್ತು. ಟಿವಿಕೆ ಮುಖಂಡ ವಿಜಯ್ ಆ ಕಾರ್ಯಕ್ರಮದಲ್ಲಿ ಉಪಸ್ಥಿತರಿರುತ್ತಾರೆಂಬ ಕಾರಣದಿಂದಾಗಿಯೇ ಮುಖ್ಯಮಂತ್ರಿ ಸ್ಟಾಲಿನ್, ಆ ಕಾರ್ಯಕ್ರಮದಿಂದ ಹೊರಗುಳಿದಿದ್ದರು. ಕ್ರಿಸ್ಮಸ್ ಹಬ್ಬದ ಹಿನ್ನೆಲೆಯಲ್ಲಿ ಆಯೋಜಿಸಲಾಗಿದ್ದ ಆ ಕಾರ್ಯಕ್ರಮದಲ್ಲಿ ಅಲ್ಪಸಂಖ್ಯಾತರು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಂಡಿದ್ದರು. ಮಕ್ಕಳು ನಟ ವಿಜಯ್‌ರೊಂದಿಗೆ ಹಾಡಿ ಕುಣಿದಿದ್ದರು. ಕ್ರಿಶ್ಚಿಯನ್ ಸಮುದಾಯದ ಮನ ಗೆದ್ದಿದ್ದರು.

ಈ ಪ್ರಸಂಗವನ್ನು ಅಣ್ಣಾಮಲೈ, ಬರಲಿರುವ ಚುನಾಣೆಯನ್ನು ಕೇಕ್‌ಗೇ ಹೋಲಿಸಿ, ಕೇಕ್ ತಿನ್ನುವವರು ಯಾರು, ಕೇಕ್ ವಾಕ್ ಯಾರಿಗೆ ಎಂದೆಲ್ಲ ಬಣ್ಣಿಸಿದ್ದಾರೆ. ವಿಪರ್ಯಾಸಕರ ಸಂಗತಿ ಎಂದರೆ, ಆ ಸ್ಪರ್ಧೆಯಲ್ಲಿ ತಾವು ಪ್ರತಿನಿಧಿಸುವ ಬಿಜೆಪಿ ಎಂಬ ರಾಷ್ಟ್ರೀಯ ಪಕ್ಷವೇ ಪಾಲ್ಗೊಳ್ಳದಿರುವುದು! ಕ್ರಿಶ್ಚಿಯನ್ನರ ಮೇಲೆ ಬಿಜೆಪಿ ಭಕ್ತರು ದೇಶದಾದ್ಯಂತ ಹಲ್ಲೆ ಎಸಗುತ್ತಿರುವುದು!

ಕ್ರಿಸ್ಮಸ್ ಮುಗಿದು, ಈಗ ಪೊಂಗಲ್ ಬರುತ್ತಿದೆ. ಶ್ರಮಿಕ ತಮಿಳರಿಗೆ ಪೊಂಗಲ್ ಹಬ್ಬ ಬಹಳ ಮುಖ್ಯವಾದದ್ದು. ಸುಖ, ಸಮೃದ್ಧಿ, ಸಂತೃಪ್ತಿಯ ಭಾವ ಹೊಮ್ಮಿಸುವ ಪೊಂಗಲ್ ಹಬ್ಬಕ್ಕೆ ತಮಿಳುನಾಡಿನಲ್ಲಿ ಸಾಂಸ್ಕೃತಿಕ ಮಹತ್ವವಿದೆ. ಹಾಗೆಯೇ ಆ ಪೊಂಗಲ್ ಹಬ್ಬವನ್ನು ಹೊಸ ವರ್ಷಾಚರಣೆ ಎಂದು ನಂಬಲಾಗುತ್ತದೆ. ಈ ನೆಪದಲ್ಲಿ ಚಿತ್ರರಂಗದ ಘಟಾನುಘಟಿಗಳ ಹೊಸ ಚಿತ್ರಗಳು ಬಿಡುಗಡೆಯಾಗುವ ಜಾಯಮಾನವೂ ಇದರೊಂದಿಗೆ ತಳಕು ಹಾಕಿಕೊಂಡಿದೆ. ಆ ಸಂದರ್ಭದಲ್ಲಿ ಬಿಡುಗಡೆಯಾದ ಚಿತ್ರಗಳು ಸೂಪರ್ ಹಿಟ್ ಆಗುತ್ತವೆ ಎಂಬ ಭಾವನೆ ಚಿತ್ರರಂಗದ ಜನರಲ್ಲಿದೆ.

ಇದನ್ನು ಓದಿದ್ದೀರಾ?: ಧುರಂಧರ್: ಪ್ರೊಪಗ್ಯಾಂಡ ಸಿನಿಮಾಗೆ ಹೊಸ ಚೌಕಟ್ಟು 

ಈ ಹಿನ್ನೆಲೆಯಲ್ಲಿ, ನಟ ಕಮ್ ರಾಜಕಾರಣಿ ವಿಜಯ್ ಅವರ ಕೊನೆಯ ಚಿತ್ರ ‘ಜನ ನಾಯಗನ್‘ ಚಿತ್ರ ಈ ಪೊಂಗಲ್ ಹಬ್ಬದ ದಿನದಂದು ಬಿಡುಗಡೆಯಾಗುತ್ತಿದೆ. ಕೊನೆಯ ಚಿತ್ರ ಎನ್ನುವ ಕಾರಣಕ್ಕೆ, ಇದು ನೆಲಮುಗಿಲು ಒಂದಾಗುವಷ್ಟು ನಿರೀಕ್ಷೆ ಸೃಷ್ಟಿಸಿದೆ. ಅದಕ್ಕೆ ತಕ್ಕಂತೆ ಚಿತ್ರತಂಡದಿಂದ ಪ್ರಚಾರಕ್ಕಾಗಿ ಭವ್ಯ ಕಾರ್ಯಕ್ರಮಗಳನ್ನು ಆಯೋಜಿಸಲಾಗಿದೆ. ನೆರೆಯ ರಾಷ್ಟ್ರವಾದ ಮಲೇಷ್ಯಾನಲ್ಲಿ ಸಿನಿಮಾದ ಅದ್ಧೂರಿ ಪ್ರೀ ರಿಲೀಸ್ ಈವೆಂಟ್ ನಡೆಯಲಿದೆ. ಮಲೇಷ್ಯಾನಲ್ಲಿ ಅತ್ಯಧಿಕ ಸಂಖ್ಯೆಯಲ್ಲಿ ತಮಿಳು ಜನರಿರುವ ಕಾರಣಕ್ಕೆ, ಅದು ತಮಿಳರಿಗೆ ಎರಡನೇ ತಮಿಳುನಾಡು ಆಗಿರುವುದಕ್ಕೆ ವಿಜಯ್, ಅಲ್ಲಿ ಆಡಿಯೋ ಲಾಂಚ್ ಆಯೋಜಿಸಿದ್ದಾರೆ.

‘ಜನ ನಾಯಗನ್’ ಚಿತ್ರದ ಮುಖ್ಯ ಕಥಾವಸ್ತು ಕೂಡ ಸಿದ್ಧಾಂತಗಳ ಸಂಘರ್ಷವನ್ನೇ ಎತ್ತಿ ಹೇಳುತ್ತದೆ ಎನ್ನುವ ಮಾತುಗಳಿವೆ. ‘ಒಬ್ಬರು ಜನರಿಗಾಗಿ ನಿಂತರೆ, ಇನ್ನೊಬ್ಬರು ಅಧಿಕಾರವನ್ನು ನಿಯಂತ್ರಿಸುವುದರಲ್ಲಿ ಖುಷಿಪಡುತ್ತಾರೆ’ ಎಂಬ ಎರಡು ವಿಭಿನ್ನ ಸಿದ್ಧಾಂತಗಳ ನಾಯಕರ ನಡುವಿನ ಮುಖ್ಯ ಸಂಘರ್ಷವೇ ಚಿತ್ರದ ತಿರುಳು ಎನ್ನಲಾಗಿದೆ. ಇದು ಅಭಿಮಾನಿಗಳ ರಾಜಕೀಯ ನಿರೀಕ್ಷೆಗಳನ್ನು ಪೂರೈಸುವ ಸೂಚನೆಯಾಗಿದೆ. ಹಾಗೆಯೇ ಅದನ್ನು ರಾಜಕೀಯ ಲಾಭಕ್ಕಾಗಿ ಬಳಸಿಕೊಳ್ಳಲು ಯೋಜಿಸಲಾಗಿದೆ.

ಈ ನಿಟ್ಟಿನಲ್ಲಿ ‘ಜನ ನಾಯಗನ್’ ಸುತ್ತಲಿನ ಪ್ರಚಾರ ಮತ್ತು ಚರ್ಚೆಯನ್ನು ಜೀವಂತವಾಗಿರಿಸಿದೆ. ಆ ಚಿತ್ರದ ಯಶಸ್ಸು, ವಿಜಯ್ ರಾಜಕಾರಣದ ಏರು-ಪೇರುಗಳನ್ನು ಸೂಚಿಸುತ್ತದೆ. ವಿಶೇಷವಾಗಿ ತಮಿಳುನಾಡಿನಲ್ಲಿ ಸಿನಿಮಾ ಮತ್ತು ರಾಜಕಾರಣದ ನಡುವಿನ ಸಂಬಂಧವನ್ನು ಎತ್ತಿಹಿಡಿಯುತ್ತದೆ. ಇಲ್ಲಿ ಚಿತ್ರತಾರೆಯರು ರಾಜಕೀಯ ನಾಯಕ/ನಾಯಕಿಯರಾಗಿ ಹೊರಹೊಮ್ಮಿದ್ದನ್ನು ನೆನಪಿಗೆ ತರುತ್ತದೆ.

ತಮಿಳುನಾಡಿನ ಜನಜೀವನವನ್ನು, ಭಾಷಾಭಿಮಾನವನ್ನು, ಅಭಿಮಾನದ ಅತಿರೇಕಗಳನ್ನು ಸೂಕ್ಷ್ಮವಾಗಿ ಅವಲೋಕಿಸಿದರೆ, ಅಲ್ಲಿನ ಜನರ ನರನಾಡಿಗಳಲ್ಲಿ ಸಿನೆಮಾ ಬೆರೆತುಹೋಗಿರುವುದಕ್ಕೆ ಪುರಾವೆ ಸಿಗುತ್ತದೆ. ಚಿತ್ರರಂಗದ ನಟನಟಿಯರು ನಾಯಕ-ನಾಯಕಿಯರಾಗಿ ಹೊರಹೊಮ್ಮಿರುವುದು, ರಾಜಕಾರಣಕ್ಕೆ ಬಂದು ರಾಜ್ಯವಾಳಿರುವುದು ಎದ್ದು ಕಾಣುತ್ತದೆ. 10 ವರ್ಷ ಮುಖ್ಯಮಂತ್ರಿಯಾಗಿ ಮೆರೆದ ಜನಪ್ರಿಯ ಚಿತ್ರನಟ ಎಂಜಿಆರ್ ತಮಿಳಿರ ಆರಾದ್ಯದೈವವೇ ಆಗಿಹೋಗಿದ್ದಾರೆ. ಹಾಗೆಯೇ 14 ವರ್ಷಗಳ ಕಾಲ ಮುಖ್ಯಮಂತ್ರಿಯಾಗಿ ಆಳಿದ ಚಿತ್ರನಟಿ ಜಯಲಲಿತಾ ತಮಿಳರ ‘ಅಮ್ಮ’ನಾಗಿ ಚರಿತ್ರೆಯ ಪುಟಗಳಲ್ಲಿ ದಾಖಲಾಗಿದ್ದಾರೆ. ಇವರಿಬ್ಬರಿಗೂ ಮೊದಲೇ ಸಿನೆಮಾ ಕ್ಷೇತ್ರದಿಂದ ರಾಜಕಾರಣಕ್ಕಿಳಿದು, 19 ವರ್ಷಗಳ ಕಾಲ ತಮಿಳುನಾಡನ್ನು ಆಳಿದ ಕರುಣಾನಿಧಿ, ಶೂದ್ರ ಸಂಕೇತವಾಗಿ-ದ್ರಾವಿಡ ಅಸ್ಮಿತೆಯಾಗಿ ಅಜರಾಮರರಾಗಿದ್ದಾರೆ.

1000023853
ಜನ ನಾಯಗನ್ ಚಿತ್ರದಲ್ಲಿ ವಿಜಯ್

ವಿಜಯ್ ಕೂಡ ಅತ್ಯಂತ ಜನಪ್ರಿಯ ನಟರಲ್ಲಿ ಒಬ್ಬರು. ತಮಿಳುನಾಡಷ್ಟೇ ಅಲ್ಲ, ಜಾಗತಿಕ ಮಟ್ಟದಲ್ಲೂ ಜನಪ್ರಿಯತೆ ಗಳಿಸಿದವರು. ಭಾರತೀಯ ಸೆಲೆಬ್ರಿಟಿಗಳ ಗಳಿಕೆಯ ಆಧಾರದ ಮೇಲೆ ಫೋರ್ಬ್ಸ್ ಪಟ್ಟಿಯಲ್ಲಿ ಹಲವಾರು ಬಾರಿ ಕಾಣಿಸಿಕೊಂಡವರು. ಈ ಹಿನ್ನೆಲೆಯಲ್ಲಿ ಟಿವಿಕೆ ಪಕ್ಷದ ದಳಪತಿ ವಿಜಯ್ ಅವರ ಕೊನೆಯ ಚಿತ್ರದ ಬಿಡುಗಡೆ, ಕ್ರಿಸ್ಮಸ್ ಆಚರಣೆ ಮತ್ತು ರಾಜಕಾರಣ ತಳಕು ಹಾಕಿಕೊಂಡಿದೆ. ತಮಿಳುನಾಡು ರಾಜಕಾರಣಕ್ಕೆ ಮತ್ತೊಮ್ಮೆ ಬೆಳ್ಳಿತೆರೆಯ ಬಣ್ಣ ಬೆರೆತಿದೆ. ಕುತೂಹಲ ಕೆರಳಿಸಿದೆ.  

Basavaraju Megalkeri
+ posts

ಲೇಖಕ, ಪತ್ರಕರ್ತ

ಪೋಸ್ಟ್ ಹಂಚಿಕೊಳ್ಳಿ:

ಬಸವರಾಜು ಮೇಗಲಕೇರಿ
ಬಸವರಾಜು ಮೇಗಲಕೇರಿ
ಲೇಖಕ, ಪತ್ರಕರ್ತ

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಸ್ಥಳೀಯ ಸಂಸ್ಥೆಗಳ ಚುನಾವಣೆಯಲ್ಲಿ ಬ್ಯಾಲೆಟ್ ಪೇಪರ್ ಬಳಕೆ; ವಿಧಾನಸಭೆಯಲ್ಲಿ ಮಸೂದೆ ಅಂಗೀಕಾರ

ರಾಜ್ಯದ ಸ್ಥಳೀಯ ಸಂಸ್ಥೆಗಳ ಚುನಾವಣಾ ಪ್ರಕ್ರಿಯೆಯಲ್ಲಿ ಬದಲಾವಣೆ ತರಲು ರಾಜ್ಯ ಸರ್ಕಾರ...

ಪ್ರಧಾನಿ ಮೋದಿ ಅಮೆರಿಕಕ್ಕೆ 100% ಶರಣಾಗಿದ್ದಾರೆ: ರಾಹುಲ್ ಗಾಂಧಿ

ಪಶ್ಚಿಮ ಏಷ್ಯಾದಲ್ಲಿನ ಯುದ್ಧದ ಪರಿಸ್ಥಿತಿ ಮತ್ತು ದೇಶದ ಆರ್ಥಿಕ ನೀತಿಗಳ ಕುರಿತು...

‘ಟ್ರಂಪ್ ನಿಯಂತ್ರಣದಲ್ಲಿ ಮೋದಿ’: ಲೋಕಸಭೆಯ ಭಾಷಣದಲ್ಲಿ ಅಮೆರಿಕದ ಬಗ್ಗೆ ಮೌನಕ್ಕೆ ರಾಹುಲ್ ವಾಗ್ದಾಳಿ

ಮಧ್ಯಪ್ರಾಚ್ಯ ಬಿಕ್ಕಟ್ಟಿನ ಕುರಿತು ಭಾರತದ ನಿಲುವಿನ ಬಗ್ಗೆ ರಾಜಕೀಯ ವಾಗ್ದಾಳಿ ಸೋಮವಾರ...

ತಮಿಳುನಾಡು ಚುನಾವಣೆ | ಪ್ರಾದೇಶಿಕ ಸಿದ್ಧಾಂತವನ್ನು ಮೀರಿ ಬೆಳೆಯುತ್ತಾ ರಾಷ್ಟ್ರೀಯವಾದ?

ತಮಿಳುನಾಡಿನ ಪಾರಂಪರಿಕ ಮಧುರೈನ ಸುಬ್ರಮಣ್ಯಸ್ವಾಮಿ ದೇವಸ್ಥಾನ, ಅರಿಯಲೂರ್ ಜಿಲ್ಲೆಯ ಗಂಗೈಕೊಂಡ ಚೋಳಪುರಂ...