“ಸಾರ್, ಸಿದ್ದರಾಮಯ್ಯ ಅವರು ಸಿಎಂ ಪೋಸ್ಟ್ ಬಿಟ್ ಕೊಡ್ತಾರಾ? ಹೈಕಮಾಂಡ್ ಡಿ ಕೆ ಶಿವಕುಮಾರ್ ಅವರನ್ನು ಸಿಎಂ ಆಗಿ ಆಯ್ಕೆ ಮಾಡುತ್ತಾ? ಡಿಕೆಶಿ ಸಿಎಂ ಆದ್ರೆ, ಸಿದ್ರಾಮಯ್ಯನವರಿಗೆ ಏನ್ ಜವಾಬ್ದಾರಿ ಸರ್? ಡಿಕೆಶಿ ಸಿಎಂ ಪೋಸ್ಟ್ ಸಿಗದೇ ಇದ್ರೆ ಏನ್ ಮಾಡಬಹುದು? ಯಾರಿಗೆಲ್ಲ ಮಿನಿಸ್ಟರ್ ಪೋಸ್ಟ್ ತಪ್ಪಬಹುದು? ಹೊಸಬರಿಗೆ ಯಾರಿಗಾದರೂ ಅವಕಾಶ ಸಿಗಬಹುದಾ?
ಇದು ವಿಧಾನಸೌಧದ ಪಡಸಾಲೆ ಮಾತ್ರವಲ್ಲ ರಾಜ್ಯದ ಹಳ್ಳಿಗಳ ಪಂಚಾಯ್ತಿ ಕಟ್ಟೆಗಳಲ್ಲೂ ಕಳೆದ ಕೆಲವು ದಿನಗಳಿಂದ ಕೇಳಿ ಬರುತ್ತಿರುವ ಮಾತು, ಚರ್ಚೆ ಸಂಭಾಷಣೆಗಳು…
ರಾಜ್ಯದಲ್ಲಿ ನಡೆಯುತ್ತಿರುವ ‘ಅಧಿಕಾರ ಹಂಚಿಕೆ ಸೂತ್ರ’ದ ಬಗ್ಗೆ ಕಳೆದ ಕೆಲವು ದಿನಗಳಿಂದ ನಡೆಯುತ್ತಿರುವ ಬೆಳವಣಿಗೆ ರಾಜ್ಯದ ರಾಜಕೀಯ ನಾಯಕರಲ್ಲಿ ಮಾತ್ರವಲ್ಲದೇ ಜನಸಾಮಾನ್ಯರಲ್ಲೂ ಕುತೂಹಲ ಮೂಡಿಸಿರುವುದಂತೂ ನಿಜ. ಈ ಎಲ್ಲ ಬೆಳವಣಿಗೆಗಳ ನಡುವೆ ಕಾಂಗ್ರೆಸ್ ಹೈಕಮಾಂಡ್ ತೀರ್ಮಾನ ಏನು ಎಂಬ ಕುತೂಹಲ ಕೂಡ ಕಾಡತೊಡಗಿದೆ.
ಹೈಕಮಾಂಡ್ ಕಡೆಗೆ ಎಲ್ಲರ ‘ಕೈ’
ರಾಜ್ಯದಲ್ಲಿ ‘ಕೈ’ ಸರ್ಕಾರ ಅಧಿಕಾರಕ್ಕೆ ಬರಲು ಒಂದು ಕಡೆ ಅಹಿಂದ ವರ್ಗ ಸಿದ್ದರಾಮಯ್ಯನವರನ್ನು ಕೈ ಹಿಡಿದರೆ, ಡಿ ಕೆ ಶಿವಕುಮಾರ್ ಸಿಎಂ ಆಗಲಿ ಎಂಬ ಬಯಕೆಯಿಂದಲೂ ಕೂಡ ಹಲವರು ಬೆಂಬಲ ಸೂಚಿಸಿರುವುದರ ಜೊತೆಗೆ ‘ಗ್ಯಾರಂಟಿ’ಗಳು ಕೈ ಹಿಡಿದಿದ್ದರಿಂದ ಕಾಂಗ್ರೆಸ್ ರಾಜ್ಯದಲ್ಲಿ ಅಧಿಕಾರಕ್ಕೆ ಬಂದಿತ್ತು.
ಸದ್ಯ ರಾಜ್ಯದಲ್ಲಿ ಕಾಂಗ್ರೆಸ್ ಅಧಿಕಾರಕ್ಕೆ ಬಂದು ಎರಡೂವರೆ ವರ್ಷ ಕಳೆದಿದೆ. ಮಾಜಿ ಸಚಿವ ಕೆ ಎನ್ ರಾಜಣ್ಣ ಹೇಳುತ್ತಿದ್ದ ನವೆಂಬರ್ ಕ್ರಾಂತಿಗಿಂತಲೂ ಮೊದಲೇ, ವೋಟ್ ಚೋರಿಯ ಬಗ್ಗೆ ಮಾತಿನ ಹಿಡಿತ ತಪ್ಪಿದ ಪರಿಣಾಮ ರಾಜಣ್ಣನವರನ್ನೇ ಹೈಕಮಾಂಡ್ ಸಂಪುಟದಿಂದ ಕೈಬಿಟ್ಟಿತ್ತು. ಸದ್ಯ ರಾಜಣ್ಣ ಸಂಪುಟದಲ್ಲಿ ಇಲ್ಲದಿದ್ದರೂ, ಅವರು ನೀಡಿದ್ದ ‘ನವೆಂಬರ್ ಕ್ರಾಂತಿ’ಯ ಹೇಳಿಕೆ ಇನ್ನೂ ಚಾಲ್ತಿಯಲ್ಲಿರುವುದಂತೂ ವಾಸ್ತವ.

ಅಧಿಕಾರ ಹಂಚಿಕೆಯ ಸೂತ್ರದ ಬಗ್ಗೆ ಸಿಎಂ ಸಿದ್ದರಾಮಯ್ಯ, ಡಿಕೆ ಶಿವಕುಮಾರ್ ಹಾಗೂ ಸಚಿವರನ್ನು ಬೆನ್ನು ಬಿಡದ ಮಾಧ್ಯಮಗಳ ಪ್ರತಿನಿಧಿಗಳು, ವಿಧಾನಸೌಧದ ಒಳಗೆ ಮಾತ್ರವಲ್ಲದೇ, ಹೊರಗೂ ಕೂಡ ಪ್ರತಿಯೊಂದು ಬೆಳವಣಿಗೆಗಳ ಬಗ್ಗೆ ‘ಬೈಟ್’ ಪಡೆಯಲು ಬಕ ಪಕ್ಷಿಯಂತೆ ಕಾಯುತ್ತಿದ್ದಾರೆ. ಡಿಸಿಎಂ ಡಿಕೆ ಶಿವಕುಮಾರ್ ಅವರನ್ನಂತೂ ‘ಬೆನ್ನು ಬಿಡದ ಬೇತಾಳ’ಗಳಂತೆ ಬೆನ್ನು ಹತ್ತುತ್ತಿದ್ದಾರೆ.
ಡಿಕೆಶಿಗೆ ಮಾತು ಕೊಟ್ಟಿದ್ದರೇ ‘ಹೈಕಮಾಂಡ್’ ನಾಯಕರು?
ಕಾಂಗ್ರೆಸ್ ರಾಜ್ಯದಲ್ಲಿ ಅಧಿಕಾರಕ್ಕೆ ಬಂದಾಗ ಸಿಎಂ ಯಾರಾಗಬೇಕು ಎಂಬ ಬಗ್ಗೆಯೂ ಸುದೀರ್ಘ ದಿನಗಳ ಕಾಲ ನಡೆದ ಮಾತುಕತೆಯ ಬಳಿಕ, ಕೊನೆಗೂ ಮುಖ್ಯಮಂತ್ರಿಯಾಗಿ ಸಿದ್ದರಾಮಯ್ಯನವರ ಹೆಸರನ್ನು ಘೋಷಿಸಿದರೆ, ಉಪ ಮುಖ್ಯಮಂತ್ರಿಯಾಗಿ ಡಿ ಕೆ ಶಿವಕುಮಾರ್ ಅವರ ಹೆಸರನ್ನು ಘೋಷಿಸಿತ್ತು. ಮಾತುಕತೆ ಕೊನೆಯಾದ ನಂತರ ಡಿಕೆಶಿ-ಸಿದ್ದರಾಮಯ್ಯನವರನ್ನು ಪಕ್ಕದಲ್ಲಿ ನಿಲ್ಲಿಸಿದ್ದ ಎಐಸಿಸಿ ಅಧ್ಯಕ್ಷರಾದ ಮಲ್ಲಿಕಾರ್ಜುನ ಖರ್ಗೆ, ಇಬ್ಬರ ‘ಕೈ’ಯನ್ನು ಎತ್ತಿ, ಫೋಟೋಗೆ ಪೋಸ್ ಕೊಟ್ಟಿದ್ದಲ್ಲದೇ, ಸರ್ಕಾರವನ್ನು ನಡೆಸಿಕೊಂಡು ಹೋಗಿ ಎಂಬ ಸಂದೇಶವನ್ನು ಕೊಟ್ಟಿದ್ದರು.

ಚುನಾವಣೆಯ ಬಳಿಕ ನಡೆದಿದ್ದ ಮಾತುಕತೆಯ ವೇಳೆ ಎರಡೂವರೆ ವರ್ಷಗಳ ಕಾಲ ಸಿಎಂ ಆಗಿ ಸಿದ್ದರಾಮಯ್ಯ, ಆ ಬಳಿಕ ಡಿಕೆಶಿ ಸಿಎಂ ಎಂಬ ಮಾತುಕತೆ ನಡೆದಿತ್ತು ಎಂಬುದಕ್ಕೆ ಡಿಕೆ ಶಿವಕುಮಾರ್, ನ.27ರ ಗುರುವಾರದಂದು ನಡೆಯುವ ಸಚಿವ ಸಂಪುಟ ಸಭೆಗೂ ಮುನ್ನ ‘ಕೊಟ್ಟ ಮಾತು ಉಳಿಸಿಕೊಳ್ಳುವುದೇ ವಿಶ್ವದಲ್ಲಿರುವ ದೊಡ್ಡ ಶಕ್ತಿ’ ಎಂಬ ಪೋಸ್ಟ್ ಅನ್ನು ಎಕ್ಸ್ನಲ್ಲಿ ಹಾಕಿರುವುದು ಇಂಬು ನೀಡಿದಂತಾಗಿದೆ.
ಬುಧವಾರ ತಮ್ಮ ಫೋಟೋವನ್ನು ಒಳಗೊಂಡಿರುವ ಇಂಗ್ಲಿಷ್ ಪೋಸ್ಟರ್ ಅನ್ನು ಡಿ.ಕೆ ಶಿವಕುಮಾರ್ ಹಂಚಿಕೊಂಡು, “ವರ್ಡ್ ಪವರ್ ಈಸ್ ವರ್ಲ್ಡ್ ಪವರ್. ಅದು ನ್ಯಾಯಾಧೀಶರಾಗಿರಲಿ, ಅಧ್ಯಕ್ಷರಾಗಿರಲಿ ಅಥವಾ ನಾನೂ ಸೇರಿದಂತೆ ಯಾರೇ ಆಗಿರಲಿ, ಆಡಿದ ಮಾತಿನಂತೆ ನಡೆದುಕೊಳ್ಳಬೇಕು” ಎಂದು ಬರೆದಿದ್ದ ಸಾಲನ್ನು ಹಂಚಿಕೊಂಡಿದ್ದಲ್ಲದೇ, ‘ಕೊಟ್ಟ ಮಾತು ಉಳಿಸಿಕೊಳ್ಳುವುದೇ ವಿಶ್ವದಲ್ಲಿರುವ ದೊಡ್ಡ ಶಕ್ತಿ’ ಎಂದು ಕನ್ನಡದಲ್ಲಿ ಬರೆದುಕೊಂಡಿದ್ದರು. ಈ ಎಲ್ಲವೂ ಹೈಕಮಾಂಡ್ ಈ ಹಿಂದೆ ನಡೆಸಿದ್ದ ಅಧಿಕಾರ ಹಂಚಿಕೆ ಸೂತ್ರ ವಿಚಾರವನ್ನು ಬಯಲಿಗೆಳೆದಿದೆ.
ರಾಜ್ಯದಲ್ಲಿ ನಡೆಯುತ್ತಿರುವ ರಾಜಕೀಯ ಬೆಳವಣಿಗೆಗಳ ನಡುವೆಯೇ ಡಿಕೆ ಶಿವಕುಮಾರ್ ಪರವಾಗಿ ಕರ್ನಾಟಕ ಒಕ್ಕಲಿಗರ ಸಂಘವೂ ಸುದ್ದಿಗೋಷ್ಠಿ ನಡೆಸಿದ್ದು, ‘ಕೊಟ್ಟ ಮಾತಿನಂತೆಯೇ ಹೈಕಮಾಂಡ್ ಡಿ ಕೆ ಶಿವಕುಮಾರ್ ಅವರನ್ನು ಸಿಎಂ ಮಾಡಬೇಕು’ ಎಂದು ಒತ್ತಡ ಹಾಕಿದ್ದಾರೆ.
‘ಸಿಎಂ ಹಾಗೂ ಡಿಸಿಎಂ ಇಬ್ಬರನ್ನೂ ದಿಲ್ಲಿಗೆ ಕರೆದು ಚರ್ಚೆ ಮಾಡುತ್ತೇವೆ’ ಎಂದು ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಮಾಧ್ಯಮಗಳ ಪ್ರಶ್ನೆಗೆ ಉತ್ತರಿಸುತ್ತಾ ತಿಳಿಸಿದ್ದರು. ಹೀಗಾಗಿ, ರಾಜ್ಯ ರಾಜಕಾರಣದ ಬೆಳವಣಿಗೆ ಶೀಘ್ರವೇ ದೆಹಲಿಗೆ ‘ಶಿಫ್ಟ್’ ಆಗುವ ಲಕ್ಷಣಗಳು ಗೋಚರಿಸಿದೆ.
ಹೈಕಮಾಂಡ್ ಕರೆದರೆ ದೆಹಲಿಗೆ ಹೋಗಲು ರೆಡಿ!
ಅಧಿಕಾರ ಹಂಚಿಕೆ ಚರ್ಚೆ ತೀವ್ರವಾಗಿರುವ ನಡುವೆಯೇ ಸಿಎಂ ಸಿದ್ದರಾಮಯ್ಯ ಹಾಗೂ ಡಿಸಿಎಂ ಡಿ ಕೆ ಶಿವಕುಮಾರ್ ಅವರನ್ನು ದೆಹಲಿಗೆ ಕರೆಸಿಕೊಂಡು ಮಾತನಾಡಲು ಹೈಕಮಾಂಡ್ ಮುಂದಾಗಿದೆ. ಈ ನಡುವೆ ಇಬ್ಬರೂ ಕೂಡ ದೆಹಲಿಗೆ ಹೋಗಲು ‘ರೆಡಿ’ಯಾಗಿದ್ದಾರೆ.
“ಹೈಕಮಾಂಡ್ ನನ್ನನ್ನು ಹಾಗೂ ಮುಖ್ಯಮಂತ್ರಿಗಳನ್ನು ಕರೆದರೆ ನಾವು ಮಾತನಾಡಿಕೊಂಡು ದೆಹಲಿಗೆ ಹೋಗುತ್ತೇವೆ” ಎಂದು ಡಿಸಿಎಂ ಡಿ ಕೆ ಶಿವಕುಮಾರ್ ತಿಳಿಸಿದರೆ, ಸಿಎಂ ಸಿದ್ದರಾಮಯ್ಯನವರೂ ಕೂಡ ‘ಕರೆ ಬಂದರೆ ದೆಹಲಿಗೆ ಹೋಗುತ್ತೇವೆ’ ಎಂದು ಹೇಳಿಕೆ ನೀಡಿದ್ದಾರೆ.
ಇದನ್ನು ಓದಿದ್ದೀರಾ? ಅಧಿಕಾರ ಹಂಚಿಕೆ ವಿಚಾರ: ರಾಜಕೀಯ ಅಂದ್ರೆ ಇದೇ ಎಂದ ನಟಿ ರಮ್ಯ
ಸಚಿವರಲ್ಲಿಯೂ ಭಯ, ಆತಂಕ!
ಸಿದ್ದರಾಮಯ್ಯ ಹಾಗೂ ಡಿಕೆ ಶಿವಕುಮಾರ್ ನಡುವೆ ‘ಸಿಎಂ ಕುರ್ಚಿ’ ಯಾರಿಗೆ ಎಂಬ ಚರ್ಚೆಯ ನಡುವೆಯೇ ಕೆಲವು ಸಚಿವರಿಗೆ ತಮ್ಮ ಕುರ್ಚಿಯ ಬಗ್ಗೆಯೂ ಭಯ, ಆತಂಕ ಶುರುವಾಗಿದೆ.
ಒಂದು ವೇಳೆ ಕಾಂಗ್ರೆಸ್ ಹೈಕಮಾಂಡ್ ಸಿಎಂ ಬದಲಾವಣೆ ಮಾಡಲು ಒಪ್ಪಿದಲ್ಲಿ, ನಮ್ಮನ್ನು ಕೂಡ ಬದಲಾವಣೆ ಮಾಡಬಹುದು ಎಂಬ ಭಯ, ಆತಂಕ ಕೆಲವು ಸಚಿವರಿಗೆ ಶುರುವಾಗಿದೆ. ತಮಗೆ ಈಗಾಗಲೇ ಕೊಟ್ಟಿರುವ ಇಲಾಖೆಗಳಲ್ಲಿ ಯಾವ ರೀತಿಯಲ್ಲಿ ಪರಿಣಾಮಕಾರಿಯಾಗಿ ಕೆಲಸ ಮಾಡಿದ್ದೇವೆ ಎಂಬ ಬಗ್ಗೆಯೂ ‘ರಿಪೋರ್ಟ್ ಕಾರ್ಡ್’ ಅನ್ನು ಹೈಕಮಾಂಡ್ಗೆ ಹತ್ತಿರವಿರುವವರ ಮೂಲಕ ನಾಯಕರ ಗಮನಕ್ಕೆ ತರುತ್ತಿದ್ದಾರೆ ಎಂಬ ಮಾತುಗಳು ಪಕ್ಷದೊಳಗಿನಿಂದ ಕೇಳಿಬರುತ್ತಿದೆ.
ರಾಜ್ಯದಲ್ಲಿ ನಡೆಯುತ್ತಿರುವ ಎಲ್ಲ ಬೆಳವಣಿಗೆಗೆ ಕಾಂಗ್ರೆಸ್ ಹೈಕಮಾಂಡ್ ಅಂತಿಮವಾಗಿ ಏನು ಪರಿಹಾರ ನೀಡಲಿದೆ ಎಂಬ ಕಾತರ, ಕುತೂಹಲ ಎಲ್ಲರಲ್ಲೂ ಮೂಡಿಸಿದೆ.
ಇವರು ದಕ್ಷಿಣ ಕನ್ನಡ ಜಿಲ್ಲೆಯ ಬೆಳ್ತಂಗಡಿ ತಾಲೂಕಿನ ವೇಣೂರು ಸಮೀಪದವರು. ಕಳೆದ 13 ವರ್ಷಗಳಿಂದ ಪತ್ರಿಕೋದ್ಯಮದಲ್ಲಿದ್ದು, ವಾರ್ತಾಭಾರತಿ ದಿನಪತ್ರಿಕೆ, ಸಂಜೆ ವಾಣಿ, ಕೋಸ್ಟಲ್ ಡೈಜೆಸ್ಟ್ ಹಾಗೂ ಸನ್ಮಾರ್ಗ ವಾರಪತ್ರಿಕೆಯಲ್ಲಿ ಕಾರ್ಯ ನಿರ್ವಹಿಸಿದ್ದಾರೆ. ಸದ್ಯ ಈದಿನ ಡಾಟ್ ಕಾಮ್ನಲ್ಲಿ ಹಿರಿಯ ಉಪಸಂಪಾದಕರಾಗಿದ್ದಾರೆ.





