ತಮಿಳುನಾಡಿನ ಪಾರಂಪರಿಕ ಮಧುರೈನ ಸುಬ್ರಮಣ್ಯಸ್ವಾಮಿ ದೇವಸ್ಥಾನ, ಅರಿಯಲೂರ್ ಜಿಲ್ಲೆಯ ಗಂಗೈಕೊಂಡ ಚೋಳಪುರಂ ಬೃಹದೀಶ್ವರ ದೇವಸ್ಥಾನ, ಮತ್ತು ತಿರುಚಿರಾಪಳ್ಳಿಯ ಶ್ರೀ ರಂಗನಾಥಸ್ವಾಮಿ ದೇವಸ್ಥಾನಗಳಿಗೆ ಭೇಟಿ ನೀಡಿದರೂ, ತಮಿಳುನಾಡಿನ ಚೋಳ ಸಾಮ್ರಾಜ್ಯದ ಸಂಪ್ರದಾಯದ ಹಿನ್ನೆಲೆಯಿರುವ ಸೆಂಗೋಲ್ ಅನ್ನು ವೇದ ಪಾರಾಯಣದ ಮೂಲಕ ಸಂಸತ್ತಿನಲ್ಲಿ ಇರಿಸಿದರೂ ಚುನಾವಣೆಯಲ್ಲಿ ಫಲ ನೀಡಿಲ್ಲ. ಸಾಮಾಜಿಕ ನ್ಯಾಯ, ಹಿಂದಿ ವಿರೋಧ, ತಮಿಳು ಭಾಷಾಭಿಮಾನ ಮತ್ತು ಆರ್ಯ ಸಂಸ್ಕೃತಿಯನ್ನು ವಿರೋಧಿಸಿದ ದ್ರಾವಿಡ ಚಳವಳಿ ಇನ್ನೂ ತಮಿಳುನಾಡಿನ ರಾಜಕೀಯದ ಮೂಲಾಂಶವಾಗಿದೆ.
ತಮಿಳುನಾಡಿನ ಪ್ರಾದೇಶಿಕ ಸಿದ್ಧಾಂತವನ್ನು ಮೀರಿ ಬೆಳೆಯುವುದಕ್ಕೆ ಯಾವುದೇ ರಾಷ್ಟ್ರೀಯ ಪಕ್ಷಗಳಿಗೆ ಈವರೆಗೆ ಸಾಧ್ಯವಾಗಿಲ್ಲ. ಇನ್ನು ಮುಂದೆಯೂ ಸಾಧ್ಯವಾಗಲ್ಲ ಎನ್ನುವ ವಾತಾವರಣ ತಮಿಳುನಾಡಿನಲ್ಲಿದೆ. ಪೆರಿಯಾರ್ ಅವರ ಸ್ವಾಭಿಮಾನಿ ಚಳವಳಿ ಬೇರೂರಿರುವ ತಮಿಳುನಾಡಿನ ರಾಜಕೀಯವೇ ಬೇರೆ. ಸಾಮಾಜಿಕ ನ್ಯಾಯ, ಹಿಂದಿ ವಿರೋಧ, ತಮಿಳು ಭಾಷಾಭಿಮಾನ ಮತ್ತು ಆರ್ಯ ಸಂಸ್ಕೃತಿಯನ್ನು ವಿರೋಧಿಸಿದ ದ್ರಾವಿಡ ಚಳವಳಿ ಇನ್ನೂ ತಮಿಳುನಾಡಿನ ರಾಜಕೀಯದ ಮೂಲಾಂಶವಾಗಿದೆ. ಹಾಗಾಗಿ ಕಾಂಗ್ರೆಸ್ ಮತ್ತು ಬಿಜೆಪಿಯಂತಹ ರಾಷ್ಟ್ರೀಯ ಪಕ್ಷಗಳಿಗೆ ತನ್ನ ನೆಲೆ ವಿಸ್ತರಿಸಿಕೊಳ್ಳುವುದಕ್ಕೆ ಸಾಧ್ಯವಾಗುತ್ತಿಲ್ಲ.
ಮದ್ರಾಸ್ ರಾಜ್ಯವಾಗಿದ್ದಾಗ 1920ರಿಂದ 1937ರವರೆಗೂ ಅಲ್ಲಿ ಸೌತ್ ಇಂಡಿಯನ್ ಲಿಬರಲ್ ಫೆಡರೇಷನ್ ಪಾರುಪತ್ಯವನ್ನ ಸಾಧಿಸಿತ್ತು. ಬಳಿಕ ಕಾಂಗ್ರೆಸ್ ಅಧಿಕಾರ ಹಿಡಿಯುವುದಕ್ಕೆ ಆರಂಭಿಸಿತ್ತು. ಮದ್ರಾಸ್ ರಾಜ್ಯದಲ್ಲಿ 14 ಜುಲೈ 1937ರಲ್ಲಿ ಮುಖ್ಯಮಂತ್ರಿಯಾಗಿ ಕಾಂಗ್ರೆಸ್ ಪಕ್ಷದ ಸಿ. ರಾಜಗೋಪಾಲಾಚಾರಿ ಅಧಿಕಾರದಲ್ಲಿದ್ದರು. 29 ಅಕ್ಟೋಬರ್ 1939ರಿಂದ 29 ಏಪ್ರಿಲ್ 1946ರವರೆಗೆ ಮುಖ್ಯಮಂತ್ರಿ ಹುದ್ದೆ ಖಾಲಿಯಾಗಿತ್ತು. 03.ಏಪ್ರಿಲ್ 1946ರಿಂದ ಮಾರ್ಚ್ 06 1967ರವರೆಗೆ ಕಾಂಗ್ರೆಸ್ ಅಧಿಕಾರದಲ್ಲಿತ್ತು. ದ್ರಾವಿಡ ಚಳವಳಿ ತೀವ್ರ ಸ್ವರೂಪ ಪಡೆದಿಕೊಂಡಿತ್ತು. ಸಿ.ಎನ್ ಅಣ್ಣಾದುರೈ ಜಾತಿ-ವಿರೋಧಿ, ತಮಿಳು ಭಾಷಾಭಿಮಾನ, ಮತ್ತು ಕೇಂದ್ರ ಸರ್ಕಾರದ ವಿರುದ್ಧ ರಾಜ್ಯದ ಸ್ವಾಯತ್ತತೆಗಾಗಿ ಬಲವಾಗಿ ಹೋರಾಡಿದ್ದರು. ಪರಿಣಾಮವಾಗಿ ಜನವರಿ 14, 1969 ರಂದು ಅಣ್ಣಾದುರೈ ಅವರ ನೇತೃತ್ವದಲ್ಲೇ ಅಧಿಕೃತವಾಗಿ ಮದ್ರಾಸ್ ರಾಜ್ಯ ʼತಮಿಳುನಾಡುʼ ಎಂದು ಮರು ನಾಮಕರಣ ಹೊಂದಿತ್ತು. ಅಲ್ಲಿಂದ ಇಲ್ಲಿಯವರೆಗೆ ಡಿಎಂಕೆ ಮತ್ತು ಡಿಎಂಕೆಯಿಂದ ಕವಲೊಡೆದ ಎಐಎಡಿಎಂಕೆ ಪಕ್ಷಗಳೇ ಅಧಿಕಾರದಲ್ಲಿವೆ. ದ್ರಾವಿಡ ಪಕ್ಷಗಳು ಕೋಮುವಾದ ಸಂಕಥನಗಳನ್ನು ತಮಿಳುನಾಡಿನಲ್ಲಿ ಮೀರಿ ಬೆಳೆದಿವೆ. ರಾಷ್ಟ್ರೀಯ ಪಕ್ಷಗಳೊಂದಿಗೆ ಡಿಎಂಕೆ ಮತ್ತು ಎಐಎಡಿಎಂಕೆ ಪಕ್ಷಗಳು ಮೈತ್ರಿ ಮಾಡಿಕೊಂಡರೂ, ತನ್ನ ಮೂಲ ಸಿದ್ಧಾಂತವನ್ನು ಬಿಟ್ಟುಕೊಟ್ಟಿಲ್ಲ.
ಪೆರಿಯಾರ್ ಇ.ವಿ. ರಾಮಸ್ವಾಮಿ ಅವರ ಸ್ವಾಭಿಮಾನ ಚಳವಳಿ, ವಿಚಾರವಾದ, ಜಾತಿ ವಿರೋಧ, ಹೆಣ್ಣುಮಕ್ಕಳ ರಕ್ಷಣೆ, ಸಬಲೀಕರಣದ ಪ್ರಯತ್ನಗಳು ಬೀರಿದ ಪರಿಣಾಮ ತಮಿಳುನಾಡಿನಲ್ಲಿ ಅಚ್ಚಳಿಯದೆ ಉಳಿದಿವೆ. ಅವೇ ಇನ್ನೂ ತಮಿಳುನಾಡಿನ ರಾಜಕಾರಣವನ್ನು ಪೊರೆಯುತ್ತಿವೆ. ಇನ್ನು, ಭಕ್ತಿ ಚಳವಳಿ-ಸಾಹಿತ್ಯ, ಬೃಹತ್ ದೇವಾಲಯಗಳು ಮತ್ತು ಸಂಗಂ ಕಾವ್ಯದ ಪ್ರಭಾವವಿರುವ ತಮಿಳುನಾಡಿನ ಜನರು ಧಾರ್ಮಿಕತೆಯನ್ನು ಹೆಚ್ಚಾಗಿ ಅನುಸರಿಸುತ್ತಾರೆ. ದ್ರಾವಿಡ ಚಳುವಳಿಯಿಂದ ರಾಜಕಾರಣವನ್ನು ಪ್ರವೇಶಿಸಿದ ಅನೇಕ ರಾಜಕಾರಣಿಗಳು ಕೂಡ ತಮ್ಮ ವೈಯಕ್ತಿಕ ಜೀವನದಲ್ಲಿ ಧಾರ್ಮಿಕರು. ಅಷ್ಟಾಗಿಯೂ ತಮಿಳರನ್ನು ʼಧರ್ಮ ರಾಜಕಾರಣಕ್ಕೆʼ ಬಲಿ ಕೊಡುವುದಕ್ಕೆ ಬಿಜೆಪಿಯಂತಹ ಪಕ್ಷಗಳಿಗೆ ಆಗಿಲ್ಲ ಎನ್ನುವುದು ಉಲ್ಲೇಖನೀಯ. ಆರ್ಯರ ಸಂಸ್ಕೃತಿ ಅಥವಾ ವೈದಿಕ ಪರಂಪರೆ, ಆಚರಣೆ-ಸಂಪ್ರದಾಯ ಮತ್ತು ಸಂಸ್ಕೃತವನ್ನು ಆಧರಿಸಿದ ಪೂಜಾ ವಿಧಾನಗಳನ್ನು ದ್ರಾವಿಡ ಚಳವಳಿ ಬಲವಾಗಿ ವಿರೋಧಿಸಿತ್ತು. ಹಾಗಾಗಿ ಬಿಜೆಪಿಯಂತಹ ಪಕ್ಷಕ್ಕೆ ತಮಿಳಿಗರು ಮಣೆ ಹಾಕಿದ್ದು ಇಲ್ಲ.
2019ರಲ್ಲಿ ಐಪಿಎಸ್ ಹುದ್ದೆಗೆ ರಾಜೀನಾಮೆ ನೀಡಿದ ಕೆ. ಅಣ್ಣಾಮಲೈ ಅವರನ್ನು ತಮಿಳುನಾಡಿನ ಬಿಜೆಪಿ ರಾಜ್ಯಾಧ್ಯಕ್ಷರನ್ನಾಗಿ ನೇಮಿಸಿತು. ಎಲ್. ಮುರುಗನ್ ಅವರಿಂದ ಜುಲೈ 2021ರಲ್ಲಿ ಅಧಿಕಾರ ಸ್ವೀಕರಿಸಿದ ಅಣ್ಣಾಮಲೈ, ವಿಧಾನಸಭಾ ಚುನಾವಣೆಯಲ್ಲಿ ಹೀನಾಯ ಸೋಲು ಕಂಡರು. 2024ರ ಲೋಕಸಭೆ ಚುನಾವಣೆಯಲ್ಲೂ ಮುಖಭಂಗವಾಯಿತು. ಎಐಎಡಿಎಂಕೆ ಜೊತೆಗಿನ ಮೈತ್ರಿಯನ್ನು ಒಪ್ಪದ ಅಣ್ಣಾಮಲೈ ಅವರನ್ನು ರಾಜ್ಯಾಧ್ಯಕ್ಷ ಸ್ಥಾನದಿಂದ ಕೆಳಗಿಳಿಸಿ ನೈನಾರ್ ನಾಗೇಂದ್ರನ್ ಅವರಿಗೆ ರಾಜ್ಯಾಧ್ಯಕ್ಷ ಪಟ್ಟ ಕಟ್ಟಲಾಯಿತು. ಎಂಜಿಆರ್(ಎಂಜಿ ರಾಮಚಂದ್ರನ್) ಮತ್ತು ಜಯಲಲಿತ ಅವರ ಮೃದು ಹಿಂದುತ್ವದಿಂದ ಬಿಜೆಪಿ ಬೆಳೆಯುವುದಕ್ಕೆ ಆಗಿಲ್ಲ. ತನ್ನ ಧರ್ಮ ರಾಜಕಾರಣವನ್ನು ತಮಿಳುನಾಡಿನ ನೆಲದಲ್ಲಿ ಬಿತ್ತುವುದಕ್ಕೆ ಆಗಿಲ್ಲ. ಡಿಎಂಕೆಯಯನ್ನು ತೊರೆದು ಎಐಎಡಿಎಂಕೆ ಪಕ್ಷವನ್ನು ಎಂಜಿಆರ್ ಕಟ್ಟಿಲ್ಲವೆಂದಾಗಿದ್ದರೆ, ಬಹುಶಃ ಕಾಂಗ್ರೆಸ್ ಇಂದು ತಮಿಳುನಾಡಿನಲ್ಲಿ ವಿಪಕ್ಷದ ಸ್ಥಾನದಲ್ಲಿರುತ್ತಿತ್ತು.
ಇದನ್ನೂ ಓದಿ : 900 ಬಿಲಿಯನ್ ಡಾಲರ್ ನಷ್ಟದ ಅಮೆರಿಕ – ಇರಾನ್ ಸಂಘರ್ಷದಲ್ಲಿ ನಿಜಕ್ಕೂ ಗೆದ್ದವರಾರು?
ತಮಿಳುನಾಡಿನ ಪಾರಂಪರಿಕ ಮಧುರೈನ ಸುಬ್ರಮಣ್ಯಸ್ವಾಮಿ ದೇವಸ್ಥಾನ, ಅರಿಯಲೂರ್ ಜಿಲ್ಲೆಯ ಗಂಗೈಕೊಂಡ ಚೋಳಪುರಂ ಬೃಹದೀಶ್ವರ ದೇವಸ್ಥಾನ, ಮತ್ತು ತಿರುಚಿರಾಪಳ್ಳಿಯ ಶ್ರೀ ರಂಗನಾಥಸ್ವಾಮಿ ದೇವಸ್ಥಾನಗಳಿಗೆ ಭೇಟಿ ನೀಡಿದರೂ, ತಮಿಳುನಾಡಿನ ಚೋಳ ಸಾಮ್ರಾಜ್ಯದ ಸಂಪ್ರದಾಯದ ಹಿನ್ನೆಲೆಯಿರುವ ಸೆಂಗೋಲ್ ಅನ್ನು ವೇದ ಪಾರಾಯಣದ ಮೂಲಕ ಸಂಸತ್ತಿನಲ್ಲಿ ಇರಿಸಿದರೂ ಚುನಾವಣೆಯಲ್ಲಿ ಫಲ ನೀಡಿಲ್ಲ. 1994ರಲ್ಲಿ ಸಂಘ ಪರಿವಾರದ ಗುಂಪೊಂದು ಮದುರೈ ಪಕ್ಕದ ತಿರುಪ್ಪರನ್ಕುಂದ್ರಂ ಬೆಟ್ಟದ ಮೇಲಿರುವ ದರ್ಗಾದಲ್ಲಿ ದೀಪ ಬೆಳಗುವ ಪ್ರಯತ್ನವನ್ನು ಮಾಡಿತ್ತು. ಸಿಕಂದರ್ ಬಾದುಷಾ ಔಲಿಯಾ ದರ್ಗಾದಲ್ಲಿ ಇತ್ತೀಚೆಗೆ ಮತ್ತೊಮ್ಮೆ ನಡೆದ ದೀಪ ಬೆಳಗುವ ಪ್ರಯತ್ನವನ್ನು ಮಾಡಿತ್ತು. ಈ ಸಂಬಂಧಿಸಿದಂತೆ ಪ್ರಕರಣ ಕೋರ್ಟ್ ಅಂಗಳದಲ್ಲಿರುವಾಗಲೂ ಕೋಮು ರಾಜಕಾರಣ ಮಾಡಲಾಗಿತ್ತು. ಹೀಗೆ ಧರ್ಮ ರಾಜಕಾರಣವನ್ನು ಬಿಜೆಪಿ ತನಗೆ ಸಾಧ್ಯವಾಗುವಷ್ಟರ ಮಟ್ಟಿಗೆ ಮಾಡುತ್ತಲೇ ಬಂದಿದೆ. ಆದರೇ, ತನ್ನ ರಾಜಕೀಯದ ಬೇರೂರುವುದಕ್ಕೆ ಸಾಧ್ಯವಾಗುತ್ತಿಲ್ಲ. ಪ್ರತಿ ಚುನಾವಣೆಯಲ್ಲಿ ತನ್ನ ನೆಲೆ ವಿಸ್ತರಿಸಿಕೊಳ್ಳುವುದಕ್ಕೆ ಪ್ರಯತ್ನಿಸುತ್ತಿದ್ದರೂ ತಮಿಳಿನ ಮತದಾರರು ಕೈ ಹಿಡಿಯುತ್ತಿಲ್ಲ.
ಇನ್ನು, ಸಿ.ಎನ್. ಅಣ್ಣಾದುರೈ, ಎಂ.ಜಿ. ರಾಮಚಂದ್ರನ್, ಎಂ. ಕರುಣಾನಿಧಿ ಮತ್ತು ಜೆ. ಜಯಲಲಿತ ಸಿನೆಮಾ ಕ್ಷೇತ್ರದಿಂದ ರಾಜಕಾರಣಕ್ಕೆ ಪ್ರವೇಶಿಸಿ ತಮಿಳುನಾಡನ್ನು ಆಳಿದವರು. ಸಿನೆಮಾ ಕ್ಷೇತ್ರದಿಂದ ರಾಜಕೀಯಕ್ಕೆ ಪ್ರವೇಶಿಸಲು ಯತ್ನಿಸಿದ್ದ ರಜನಿಕಾಂತ್, ರಾಜಕೀಯದ ಸಹವಾಸ ಬೇಡ ಎಂದು ವಾಪಾಸ್ಸಾದರು. 2021ರ ವಿಧಾನಸಭಾ ಚುನಾವಣೆಯಲ್ಲಿ ಕಮಲ್ ಹಾಸನ್ ನೇತೃತ್ವದ ಮಕ್ಕಳ್ ನೀತಿ ಮಯ್ಯಂ ಶೇ.2.4 ಮತ ಗಳಿಸಿತ್ತು. ರಾಹುಲ್ ಗಾಂಧಿ ಜೊತೆಗೆ ಭಾರತ್ ಜೋಡೋ ಯಾತ್ರೆಯಲ್ಲಿ ಕಮಲ್ ಹಾಸನ್ ಗುರುತಿಸಿಕೊಂಡಿದ್ದರು. ಕಮಲ್ ಹಾಸನ್ ಈಗ ರಾಜ್ಯಸಭೆಗೆ ನೇಮಕಗೊಂಡಿದ್ದಾರೆ.
ಟಿ.ಟಿ.ವಿ. ದಿನಕರನ್ ಅವರ ಅಮ್ಮ ಮಕ್ಕಳ್ ಮುನ್ನೇಟ್ರ ಕಳಗಂ ಎಐಎಡಿಎಂಕೆ ಜೊತೆಗೆ ಮೈತ್ರಿ ಮಾಡಿಕೊಂಡಿದೆ. ಸೀಮನ್ ನೇತೃತ್ವದ ನಾಮ್ ತಮಿಳ್ ಕಚ್ಚಿ 2010ರಲ್ಲಿ ಸ್ಥಾಪನೆಯಾದ ತಮಿಳು ರಾಷ್ಟ್ರೀಯವಾದಿ ಪಕ್ಷ. ತಮಿಳರನ್ನು ಇತರ ಭಾಷಾ ಗುಂಪುಗಳ ವಿರುದ್ಧ ಎತ್ತಿಕಟ್ಟುತ್ತದೆ. ಈ ಬಾರಿಯ ಚುನಾವಣೆಗೆ ಐದು ಆಡಳಿತ ರಾಜಧಾನಿಯನ್ನಾಗಿ ಮಾಡುವುದಾಗಿ ಹೇಳಿದ್ದು, ಆಡಳಿತ ಸುಧಾರಣಾ ಕ್ರಮಗಳನ್ನು ಕೂಡ ಪ್ರಸ್ತಾಪಿಸಿದೆ. ತಿರುಚ್ಚಿಯನ್ನು ಆಡಳಿತ ರಾಜಧಾನಿಯಾಗಿ, ಕೊಯಮತ್ತೂರನ್ನು ಕೈಗಾರಿಕಾ ಮತ್ತು ವ್ಯವಹಾರ ರಾಜಧಾನಿಯಾಗಿ, ಚೆನ್ನೈಯನ್ನು ತಂತ್ರಜ್ಞಾನ ರಾಜಧಾನಿಯಾಗಿ, ಮಧುರೈಯನ್ನು ಸಾಂಸ್ಕೃತಿಕ ಮತ್ತು ಪರಂಪರೆಯ ರಾಜಧಾನಿಯಾಗಿ ಮತ್ತು ಕನ್ಯಾಕುಮಾರಿಯನ್ನು ತಾತ್ವಿಕ ರಾಜಧಾನಿಯನ್ನಾಗಿ ಮಾಡಲಾಗುವುದು ಎಂದು ತಿಳಿಸಿದೆ. ಆದರೆ ತಮಿಳಿಗರು ಇದನ್ನು ಎಷ್ಟರ ಮಟ್ಟಿಗೆ ಸ್ವೀಕರಿಸುತ್ತಾರೆ ಎನ್ನುವುದು ಪ್ರಶ್ನೆ. ಇನ್ನು, ವಿ.ಕೆ ಶಶಿಕಲಾ ನೇತೃತ್ವದ ʼಆಲ್ ಇಂಡಿಯಾ ಪುರಚ್ಚಿ ತಲೈವರ್ ಮಕ್ಕಳ್ ಮುನ್ನೇತ್ರ ಕಳಗಂ’ (ಎಐಪಿಟಿಎಂಎಂಕೆ) ಪಕ್ಷ ಎಸ್. ರಾಮದಾಸ್ ನೇತೃತ್ವದ ಪಿಎಂಕೆ ಬಣದೊಂದಿಗೆ ಮೈತ್ರಿ ಮಾಡಿಕೊಂಡಿದೆ. ಹೀಗೆ ಸಣ್ಣ ಪುಟ್ಟ ಪಕ್ಷಗಳು ಅಲ್ಲಲ್ಲಿ ಒಂದೊಂದು ಕ್ಷೇತ್ರದಲ್ಲಿ ಸಣ್ಣ ಪುಟ್ಟ ವ್ಯತ್ಯಾಸ ತರಬಹುದು ವಿನಃ ಬಹಳ ದೊಡ್ಡ ಪರಿಣಾಮವನ್ನೇನೂ ಬೀರಲಾರವು.
ಇನ್ನು, ಸಿನೆಮಾ ಕ್ಷೇತ್ರದಿಂದ ರಾಜಕೀಯ ಪ್ರವೇಶ ಮಾಡಿ ತಮಿಳುನಾಡಿಗೆ ʼಪರ್ಯಾಯ ರಾಜಕೀಯʼದ ಭರವಸೆ ನೀಡಿದ್ದ ದಳಪತಿ ವಿಜಯ್, ಏಕಾಂಗಿಯಾಗಿ ಚುನಾವಣಾ ಸ್ಪರ್ಧೆಗೆ ಇಳಿದಿದ್ದಾರೆ. ಸಿನೆಮಾ ಅಭಿಮಾನಿಗಳನ್ನೇ ಆಧಾರವನ್ನಾಗಿಟ್ಟುಕೊಂಡಿರುವ ವಿಜಯ್ ನೇತೃತ್ವದ ಟಿವಿಕೆ ಪಕ್ಷಕ್ಕೆ ಪ್ರಬಲವಾದ ಸಿದ್ಧಾಂತವೇನೂ ಇಲ್ಲ. ಒಂದಿಷ್ಟು ಯುವ ಮತದಾರರನ್ನು ವಿಜಯ್ ಸೆಳೆಯಬಹುದು ಎನ್ನುವ ರಾಜಕೀಯ ವಿಶ್ಲೇಷಣೆಗಳಿವೆ. 2021ರ ವಿಧಾನಸಭಾ ಚುನಾವಣೆಯಲ್ಲಿ ಎಂ.ಕೆ ಸ್ಟ್ಯಾಲಿನ್ ನೇತೃತ್ವದ ಡಿಎಂಕೆ 234 ವಿಧಾನಸಭಾ ಕ್ಷೇತ್ರಗಳ ಪೈಕಿ 133 ಕ್ಷೇತ್ರಗಳಲ್ಲಿ ಜಯಿಸಿತ್ತು. 2024ರ ಲೋಕಸಭಾ ಚುನಾವಣೆಯಲ್ಲಿ ಡಿಎಂಕೆ ನೇತೃತ್ವದ ಜಾತ್ಯತೀತ ಪ್ರಗತಿಪರ ಒಕ್ಕೂಟ(ಕಾಂಗ್ರೆಸ್, ವಿಸಿಕೆ ಮತ್ತು ಎಡ ಪಕ್ಷಗಳ ಮೈತ್ರಿಕೂಟ) ಎಲ್ಲ 39 ಕ್ಷೇತ್ರಗಳನ್ನು ಗೆದ್ದಿತ್ತು. ಹಾಗಾಗಿ ಡಿಎಂಕೆ ನೇತೃತ್ವದ ಮೈತ್ರಿಗೆ ಈ ಬಾರಿ ಅಧಿಕಾರಕ್ಕೇರುವ ವಿಶ್ವಾಸವಿದೆ. ಮಾಸಿಕವಾಗಿ ಮಹಿಳೆಯರಿಗೆ ಸರ್ಕಾರದಿಂದ ನೀಡಲಾಗುವ ಹಣದ ಜೊತೆಗೆ ‘ಬೇಸಿಗೆ ವಿಶೇಷ’ ಬೋನಸ್ ಆಗಿ ಹೆಚ್ಚುವರಿ 2,000 ರೂಪಾಯಿ ವಿತರಿಸಲಾಗಿದೆ. ಈಗಾಗಲೇ 1.31 ಕೋಟಿ ಮಹಿಳೆಯರ ಖಾತೆಗೆ ಈ ಹಣ ಜಮೆಯಾಗಿದೆ. ಇವೆಲ್ಲವೂ ಡಿಎಂಕೆ ಪಕ್ಷಕ್ಕೆ ವರದಾನವಾಗಲಿದೆ ಎನ್ನುವ ಅಭಿಪ್ರಾಯಗಳಿವೆ. ಇದೇ ಮೊಟ್ಟ ಮೊದಲ ಬಾರಿಗೆ ಬಹುಕೋನದ ಚುನಾವಣೆ ತಮಿಳುನಾಡಿನಲ್ಲಿ ನಡೆಯುತ್ತಿದ್ದು, ಮತದಾರರ ಒಲವು ದ್ರಾವಿಡ ರಾಜಕಾರಣದೆಡೆಗೆಯೇ ಇರುತ್ತದೆಯೇ ಅಥವಾ ವಿಮುಖವಾಗುತ್ತದೆಯೇ ಎನ್ನುವ ಕುತೂಹಲ ಸೃಷ್ಟಿಸಿದೆ.
ಇದನ್ನೂ ಓದಿ : ಸೌಜನ್ಯ ಪ್ರಕರಣ | ಸುಪ್ರೀಂ ನೋಟಿಸ್: ‘ಸರ್ಕಾರ ಹಿಂದೆ ಸರಿಯದಿರಲಿ’ ಎಂದ ಮಹಿಳಾಪರ ಹೋರಾಟಗಾರರು





