ಮೂರು ಬಾರಿ ತಮಿಳುನಾಡಿನ ಮುಖ್ಯಮಂತ್ರಿಯಾಗಿದ್ದ ಮತ್ತು ಎಐಎಡಿಎಂಕೆಯಿಂದ ಉಚ್ಚಾಟನೆಗೊಂಡಿರುವ ಓ. ಪನ್ನೀರ್ಸೆಲ್ವಂ (75) ಶುಕ್ರವಾರ ಬೆಳಿಗ್ಗೆ ಡಿಎಂಕೆ ಸೇರಿದ್ದಾರೆ. ಚುನಾವಣೆಗೂ ಮುನ್ನ ನಡೆದಿರುವ ಈ ಬೆಳವಣಿಗೆ ಸದ್ಯ ರಾಜಕೀಯ ವಲಯದಲ್ಲಿ ಚರ್ಚೆಗೆ ಗ್ರಾಸವಾಗಿದೆ.
ಡಿಎಂಕೆ ಪ್ರಧಾನ ಕಚೇರಿಯಾದ ಅಣ್ಣಾ ಅರಿವಲಯಂನಲ್ಲಿ ಮುಖ್ಯಮಂತ್ರಿ ಎಂ. ಕೆ. ಸ್ಟಾಲಿನ್ ಅವರ ಸಮ್ಮುಖದಲ್ಲಿ ಪನ್ನೀರ್ಸೆಲ್ವಂ ಡಿಎಂಕೆ ಸೇರಿದರು. ಇನ್ನು 2021ರಲ್ಲಿ ತಾವು ಗೆದ್ದ ಥೇನಿಯಕ್ಕನೂರ್ ಸ್ಥಾನದಲ್ಲೇ ಈ ಬಾರಿ ಪನ್ನೀರ್ಸೆಲ್ವಂ ಡಿಎಂಕೆ ಟಿಕೆಟ್ ಮೂಲಕ ಸ್ಪರ್ಧಿಸುವ ಸಾಧ್ಯತೆಯಿದೆ.
ಇದನ್ನು ಓದಿದ್ದೀರಾ? ತಮಿಳುನಾಡು | ಬಿಜೆಪಿ ನಾಯಕನ ಕೊಲೆ; ಡಿಎಂಕೆ ಸರ್ಕಾರದ ವಿರುದ್ಧ ವಿಪಕ್ಷಗಳ ವಾಗ್ದಾಳಿ
ಡಿಎಂಕೆ ಸೇರಿದ ಬಳಿಕ ಮಾತನಾಡಿದ ಓ. ಪನ್ನೀರ್ಸೆಲ್ವಂ, “ಸ್ಟಾಲಿನ್ ಜನರಿಗೆ ಉತ್ತಮ ಆಡಳಿತ ನೀಡುತ್ತಿದ್ದಾರೆ ಮತ್ತು ಇದನ್ನು ಇಡೀ ದೇಶವೇ ಗಮನಿಸುತ್ತಿದೆ. ರಾಜಕೀಯ ಪಕ್ಷವನ್ನು ಹೇಗೆ ನಡೆಸಬೇಕು ಎಂಬುದಕ್ಕೆ ಅವರು ಹೊಸ ಮಾದರಿ ರೂಪಿಸಿದ್ದಾರೆ” ಎಂದು ಶ್ಲಾಘಿಸಿದರು.
ಹಾಗೆಯೇ, “ದ್ರಾವಿಡ ಚಳುವಳಿಯನ್ನು ಉಳಿಸಲು, ದ್ರಾವಿಡರ ನೀತಿ, ಡಿಎಂಕೆ ಕೆಲಸ ಮಾಡುತ್ತಿದೆ. ನಾನು ಇದೀಗ ಕೇಡರ್ ಆಗಿ ಸೇರಿದ್ದೇನೆ. ನಾನು ಪಕ್ಷದ ಕಾರ್ಯಕರ್ತರಲ್ಲಿ ಒಬ್ಬನಾಗಿ ಪಕ್ಷದ ಅಭಿವೃದ್ಧಿಗಾಗಿ ಕೆಲಸ ಮಾಡುತ್ತೇನೆ” ಎಂದು ತಿಳಿಸಿದರು. ಇನ್ನು ಡಿಎಂಕೆ ಪಕ್ಷವನ್ನು ‘ತಾಯಿ ಪಕ್ಷ’ ಎಂದು ಕರೆದ ಪನ್ನೀರ್ಸೆಲ್ವಂ ಪೆರಿಜ್ಞಾರ್ ಅಣ್ಣಾ ಅವರು ಸ್ಥಾಪಿಸಿದ ಈ ಪಕ್ಷಕ್ಕೆ ಸೇರ್ಪಡೆಯಾಗಿರುವುದು ತಮಗೆ ಅಪಾರ ಸಂತೋಷ ತಂದಿದೆ ಎಂದರು.
ಇನ್ನು ಈ ಸಂದರ್ಭದಲ್ಲೇ ಎಐಎಡಿಎಂಕೆಯ ಎಡಪ್ಪಾಡಿ ಕೆ. ಪಳನಿಸ್ವಾಮಿ (EPS) ಅವರು ಸರ್ವಾಧಿಕಾರಿಯಂತೆ ವರ್ತಿಸುತ್ತಿದ್ದಾರೆ. ಎಐಎಡಿಎಂಕೆಯನ್ನು ಎಂದಿಗೂ ಗೆಲ್ಲದ ಸ್ಥಿತಿಗೆ ತಂದಿಟ್ಟಿದ್ದಾರೆ ಎಂದು ವಾಗ್ದಾಳಿ ನಡೆಸಿದರು. “ದ್ರಾವಿಡ ಚಳವಳಿ ಮತ್ತು ಅದರ ಸಿದ್ಧಾಂತಗಳನ್ನು ಉಳಿಸಲು ಇಂದು ಡಿಎಂಕೆ ಮಾತ್ರ ಕೆಲಸ ಮಾಡುತ್ತಿದೆ” ಎಂದೂ ಹೇಳಿದರು.
ಜೆ. ಜಯಲಲಿತಾ ಬೆಂಬಲಿಗರಾಗಿದ್ದ ಪನ್ನೀರ್ಸೆಲ್ವಂ
ದೀರ್ಘಕಾಲದವರೆಗೆ ಎಐಎಡಿಎಂಕೆ (AIADMK) ಹಿರಿಯ ನಾಯಕರಾಗಿದ್ದ ಪನ್ನೀರ್ಸೆಲ್ವಂ, ಮಾಜಿ ಮುಖ್ಯಮಂತ್ರಿ ಜೆ. ಜಯಲಲಿತಾ ಅವರ ಅತ್ಯಂತ ನಂಬಿಕಸ್ತ ಬೆಂಬಲಿಗರಾಗಿದ್ದರು. ಒಟ್ಟು ಮೂರು ಬಾರಿ ತಮಿಳುನಾಡಿನ ಮುಖ್ಯಮಂತ್ರಿಯಾಗಿ ಸೇವೆ ಸಲ್ಲಿಸಿದ್ದಾರೆ. ಎಡಪ್ಪಾಡಿ ಕೆ. ಪಳನಿಸ್ವಾಮಿ ಸರ್ಕಾರದಲ್ಲಿ (2017-21) ಉಪ ಮುಖ್ಯಮಂತ್ರಿಯಾಗಿಯೂ ಕಾರ್ಯನಿರ್ವಹಿಸಿದ್ದಾರೆ. 2022ರಲ್ಲಿ ಎಐಎಡಿಎಂಕೆ ಪಕ್ಷದಲ್ಲಿ ಉಂಟಾದ ನಾಯಕತ್ವದ ಸಂಘರ್ಷದ ನಂತರ ಅವರನ್ನು ಪಕ್ಷದಿಂದ ಉಚ್ಚಾಟಿಸಲಾಗಿದೆ. ಅದಾದ ಬಳಿಕ ಎನ್ಡಿಎಯೊಂದಿಗೆ ಸಹಯೋಗ ಮಾಡಿದ್ದರು, ಆದರೆ ಕಳೆದ ವರ್ಷ ಅದರಿಂದಲೂ ಹೊರಗೆ ಬಂದಿದ್ದಾರೆ. ಇದೀಗ ಡಿಎಂಕೆ ಸೇರಿದ್ದಾರೆ.
ತಮಿಳುನಾಡು ವಿಧಾನಸಭೆಯ 234 ಸ್ಥಾನಗಳಿಗೆ ಏಪ್ರಿಲ್ ಅಥವಾ ಮೇ ತಿಂಗಳಲ್ಲಿ ಚುನಾವಣೆ ನಡೆಯುವ ಸಾಧ್ಯತೆಯಿದೆ. ಅದಕ್ಕೂ ಕೆಲವೇ ವಾರಗಳ ಮೊದಲು ಈ ಬೆಳವಣಿಗೆ ನಡೆದಿದೆ. ಪನ್ನೀರ್ಸೆಲ್ವಂ ಡಿಎಂಕೆ ಸೇರ್ಪಡೆಯಾಗಿರುವುದು ರಾಷ್ಟ್ರೀಯ ಪ್ರಜಾಸತ್ತಾತ್ಮಕ ಮೈತ್ರಿಕೂಟ (ಎನ್ಡಿಎ)ಗೆ ನಷ್ಟವನ್ನುಂಟುಮಾಡಬಹುದು. ಒಪಿಎಸ್ ಅವರ ಬೆಂಬಲಿಗರು, ವಿಶೇಷವಾಗಿ ದಕ್ಷಿಣ ಜಿಲ್ಲೆಗಳಲ್ಲಿ ಥೇವರ್ ಸಮುದಾಯವು ಡಿಎಂಕೆಗೆ ಬೆಂಬಲ ನೀಡುವ ಸಾಧ್ಯತೆಯಿದೆ. ಜಯಲಲಿತಾ ಅವರ ನಿಷ್ಠಾವಂತರಾಗಿದ್ದ ಒಪಿಎಸ್ ಅವರು ಡಿಎಂಕೆಗೆ ಸೇರ್ಪಡೆಯಾಗಿರುವುದು ಎಐಎಡಿಎಂಕೆಯ ಹಳೆಯ ಕಾರ್ಯಕರ್ತರನ್ನು ಡಿಎಂಕೆ ಕಡೆಗೆ ಆಕರ್ಷಿಸಬಹುದು.





