ಈ ವರ್ಷ ನಡೆಯಲಿರುವ ಪಶ್ಚಿಮ ಬಂಗಾಳ, ಅಸ್ಸಾಂ, ತಮಿಳುನಾಡು, ಕೇರಳ ಹಾಗೂ ಪುದುಚೇರಿ ವಿಧಾನಸಭಾ ಚುನಾವಣೆಗಳು ದೇಶದ ಚಿತ್ತ ಸೆಳೆಯುತ್ತಿವೆ. ಈ ಚುನಾವಣೆಗಳು ದೇಶದ ರಾಜಕಾರಣ ಮಾತ್ರವಲ್ಲದೆ, ಕಾಂಗ್ರೆಸ್ನ ಚಲನಶೀಲತೆಯ ಮೇಲೂ ನಿರ್ಣಾಯಕ ಪ್ರಭಾವ ಬೀರಲಿವೆ. ಕಾಂಗ್ರೆಸ್ ತನ್ನ ಪ್ರಾಬಲ್ಯತೆಯನ್ನು ಮರಳಿ ಪಡೆಯುವ ಪ್ರಯತ್ನದಲ್ಲಿರುವಾಗ, ಈ ಚುನಾವಣೆಗಳು ಕಾಂಗ್ರೆಸ್ಗೆ ನಿರ್ಣಾಯಕವಾಗಿವೆ.
ಬಂಗಾಳದಲ್ಲಿ ಆಟಕ್ಕುಂಟು ಲೆಕ್ಕಕ್ಕಿಲ್ಲ ಎಂಬಂತಾಗಿರುವ ಕಾಂಗ್ರೆಸ್, ತಮಿಳುನಾಡಿನಲ್ಲಿ ಡಿಎಂಕೆ ಸಖ್ಯದಲ್ಲಿ ಅಧಿಕಾರದಲ್ಲಿದೆ. ಪುದುಚೇರಿಯನ್ನು ಗಮನಾರ್ಹವಾಗಿ ನೋಡಲಾಗುತ್ತಿಲ್ಲ. ಆದ್ದರಿಂದ, ಅಸ್ಸಾಂ ಮತ್ತು ಕೇರಳ ರಾಜ್ಯಗಳು ಕಾಂಗ್ರೆಸ್ನ ದಿಕ್ಕು-ದೆಸೆ ಬದಲಿಸುವಲ್ಲಿ ಗಮನಾರ್ಹವಾಗಿವೆ. ಈ ಹಿನ್ನೆಲೆ, ಈ ಎರಡೂ ರಾಜ್ಯಗಳಿಗೆ ಕಾಂಗ್ರೆಸ್ ತನ್ನ ತಂಡಗಳನ್ನು ರಚಿಸಿದೆ. ತಂಡಗಳ ಉಸ್ತುವಾರಿಯನ್ನು ವಿಪಕ್ಷ ನಾಯಕ ರಾಹುಲ್ ಗಾಂಧಿ ಮತ್ತು ಸಂಸದೆ ಪ್ರಿಯಾಂಕಾ ಗಾಂಧಿ ಅವರಿಗೆ ನೀಡಲಾಗಿದೆ ಎಂದು ತಿಳಿದುಬಂದಿದೆ. ಸದ್ಯ, ಕೇರಳದಲ್ಲಿ ಕಾಂಗ್ರೆಸ್ ನೇತೃತ್ವದ ಯುಡಿಎಫ್ ಗೆಲ್ಲುವ ಸಾಧ್ಯತೆ ಹೆಚ್ಚಿದ್ದರೆ, ಅಸ್ಸಾಂನಲ್ಲಿ ಕಾಂಗ್ರೆಸ್ ಕೇವಲ ಅದೃಷ್ಟವನ್ನು ಮಾತ್ರವೇ ನಂಬಿದೆ ಎನ್ನಲಾಗುತ್ತಿದೆ.
ಅಸ್ಸಾಂಗೆ ಪ್ರಿಯಾಂಕಾ ತಂಡ
ಅಸ್ಸಾಂ ಚುನಾವಣೆಯಲ್ಲಿ ಕಾಂಗ್ರೆಸ್ಅನ್ನು ಪ್ರಿಯಾಂಕಾ ಗಾಂಧಿ ನೇತೃತ್ವದ ತಂಡ ಮುನ್ನಡೆಸಲಿದೆ. ಅಸ್ಸಾಂನಲ್ಲಿ ‘ಟೀಮ್ ಪ್ರಿಯಾಂಕಾ’ ಕಣದಲ್ಲಿದೆ. ಅಸ್ಸಾಂನ 126 ಅಭ್ಯರ್ಥಿಗಳನ್ನು ಆಯ್ಕೆ ಮಾಡುವ ಸ್ಕ್ರೀನಿಂಗ್ ಕಮಿಟಿಯ ಅಧ್ಯಕ್ಷರೂ ಪ್ರಿಯಾಂಕಾ ಗಾಂಧಿಯೇ ಆಗಿದ್ದಾರೆ. ವೀಕ್ಷಕರ ಪಟ್ಟಿಯಲ್ಲಿ ಕರ್ನಾಟಕ ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಮತ್ತು ಭೂಪೇಶ್ ಬಘೇಲ್ ಅವರಿದ್ದು, ಇವರಿಬ್ಬರೂ ಪ್ರಿಯಾಂಕಾ ಅವರ ಆಪ್ತರೆಂದೇ ಗುರುತಿಸಲ್ಪಟ್ಟಿದ್ದಾರೆ. ಚುನಾವಣಾ ತಂತ್ರಜ್ಞ ನರೇಶ್ ಅರೋರಾ ಅವರನ್ನು ಪ್ರಚಾರಕ್ಕೆ ಬಳಸಿಕೊಳ್ಳುವ ಪ್ರಯತ್ನಗಳು ನಡೆದಿದ್ದರೂ, ಸದ್ಯಕ್ಕೆ ಅವರು ದೂರ ಉಳಿದಿದ್ದಾರೆ ಎನ್ನಲಾಗಿದೆ. ರಾಜ್ಯದ ಉಸ್ತುವಾರಿ ಎಐಸಿಸಿ ಪ್ರಧಾನ ಕಾರ್ಯದರ್ಶಿ ಭುನ್ವರ್ ಜಿತೇಂದ್ರ ಸಿಂಗ್ ಅವರು ಗಾಂಧಿ ಕುಟುಂಬಕ್ಕೆ ನಿಷ್ಠರಾಗಿದ್ದು, ವನ್ಯಜೀವಿಗಳ ಬಗ್ಗೆ ಅವರಿಗಿರುವ ಆಸಕ್ತಿ ಪ್ರಿಯಾಂಕಾ ಅವರಿಗೆ ಇನ್ನಷ್ಟು ಹತ್ತಿರವಾಗಿಸಿದೆ.
ಕೇರಳಕ್ಕೆ ರಾಹುಲ್ ನೇತೃತ್ವ
ಕೇರಳದಲ್ಲಿ ರಾಹುಲ್ ಗಾಂಧಿ ನೇತೃತ್ವದ ತಂಡವು ಕಾಂಗ್ರೆಸ್ಅನ್ನು ಮುನ್ನಡೆಸಲಿದೆ. ‘ಟೀಮ್ ರಾಹುಲ್’ ಕೇರಳ ಚುನಾವಣೆಯ ಕಾರ್ಯತಂತ್ರಗಳು ಮತ್ತು ಪ್ರಚಾರವನ್ನು ಮುನ್ನಡೆಸಲಿದೆ. ಕೇರಳ ಚುನಾವಣೆಯಲ್ಲಿ ರಾಜಸ್ಥಾನ ಕಾಂಗ್ರೆಸ್ ನಾಯಕ ಸಚಿನ್ ಪೈಲಟ್ ಕೂಡ ಪ್ರಮುಖ ಜವಾಬ್ದಾರಿ ನಿರ್ವಹಿಸಲಿದ್ದಾರೆ. ಇನ್ನು, ಕಳೆದ ಒಂದು ವರ್ಷದಿಂದ ಕಾಂಗ್ರೆಸ್ ನಾಯಕರೊಂದಿಗೆ ಮುನಿಸಿಕೊಂಡಿದ್ದ ಕೇರಳದವರೇ ಆದ ಸಂಸದ ಶಶಿ ತರೂರ್ ಕೂಡ ಈಗ ಕಾಂಗ್ರೆಸ್ನಲ್ಲಿ ಸಕ್ರಿಯರಾಗಿದ್ದಾರೆ. ‘ಟೀಮ್ ರಾಹುಲ್’ನಲ್ಲಿ ಕರ್ನಾಟಕದ ಸಚಿವ ಕೆ.ಜೆ. ಜಾರ್ಜ್, ಇಮ್ರಾನ್ ಪ್ರತಾಪಗರ್ಹಿ ಹಾಗೂ ಕನ್ಹಯ್ಯಾ ಕುಮಾರ್ ಇದ್ದು, ಈ ಮೂವರು ವೀಕ್ಷಕರಾಗಿದ್ದಾರೆ. ಕೆ.ಸಿ ವೇಣುಗೋಪಾಲ್ ಅವರು ರಾಹುಲ್ ಗಾಂಧಿಯವರ ನಂಬಿಕಸ್ತ ಪ್ರತಿನಿಧಿಯಾಗಿದ್ದು, ಅವರ ಮೂಲಕವೇ ಈ ತಂಡ ಕಾರ್ಯನಿರ್ವಹಿಸುತ್ತದೆ.
ಈ ಲೇಖನ ಓದಿದ್ದೀರಾ?: ಆಂಧ್ರ ಚುನಾವಣೆಯಲ್ಲಿ ಮಹಾಮೋಸದ ಸಾಧ್ಯತೆ!- ಪರಕಾಲ ಪ್ರಭಾಕರ್ ಆಸ್ಫೋಟಕ ವಿಶ್ಲೇಷಣೆ
ಅಸ್ಸಾಂ ಸವಾಲು
ಸಮೀಕ್ಷೆಗಳ ಪ್ರಕಾರ, ಕೇರಳದಲ್ಲಿ ಕಾಂಗ್ರೆಸ್ ಅಧಿಕಾರಕ್ಕೆ ಬರುವ ಸಾಧ್ಯತೆಯಿದೆ. ಆದರೆ, ಅಸ್ಸಾಂನಲ್ಲಿ ಹಿಮಂತ ಬಿಸ್ವ ಶರ್ಮಾ ನೇತೃತ್ವದ ಬಿಜೆಪಿಯನ್ನು ಸೋಲಿಸುವುದು ದೊಡ್ಡ ಸವಾಲಾಗಿದೆ. ಚುನಾವಣಾ ವಸ್ತಿಲಿನಲ್ಲಿ, ಅಸ್ಸಾಂ ಕಾಂಗ್ರೆಸ್ನಲ್ಲಿ ರಾಜೀನಾಮೆ ಮತ್ತು ಬಂಡಾಯ ಹೆಚ್ಚುತ್ತಿದೆ. ಪಕ್ಷದ ಮಾಜಿ ರಾಜ್ಯಾಧ್ಯಕ್ಷ ಭೂಪೇನ್ ಬೋರಾ ಅವರು ಕಾಂಗ್ರೆಸ್ ತೊರೆಯಲು ಮುಂದಾಗಿದ್ದು, ಅವರು ಬಿಜೆಪಿ ಸೇರುವ ಸಾಧ್ಯತೆ ದಟ್ಟವಾಗಿದೆ. ಮುಸ್ಲಿಂ ನಾಯಕರು ಮತ್ತು ಶಾಸಕರು ಪಕ್ಷದ ಆಂತರಿಕ ನಿರ್ಧಾರಗಳಿಂದ ಅತೃಪ್ತರಾಗಿದ್ದಾರೆ. ಅವರೆಲ್ಲರೂ ಅಖಿಲ್ ಗೊಗೊಯ್ ಅವರ ‘ರೈಜೋರ್ ದಳ’ ಪಕ್ಷ ಸೇರುವ ಸಾಧ್ಯತೆಗಳಿವೆ.
ಪ್ರಿಯಾಂಕಾ ಭವಿಷ್ಯ
ಈ ಚುನಾವಣಾ ಫಲಿತಾಂಶಗಳು ಪ್ರಿಯಾಂಕಾ ಗಾಂಧಿಯವರ ಮುಂದಿನ ಜವಾಬ್ದಾರಿಯನ್ನು ನಿರ್ಧರಿಸಲಿವೆ. ಸದ್ಯಕ್ಕೆ ಅವರು ಯಾವುದೇ ರಾಜ್ಯದ ಉಸ್ತುವಾರಿ ಹೊಂದಿಲ್ಲದಿದ್ದರೂ, ಪಕ್ಷದ ಎಲ್ಲ ಬಿಕ್ಕಟ್ಟುಗಳನ್ನು ನಿವಾರಿಸುವ ‘ಫೈರ್ ಫೈಟರ್’ ಪಾತ್ರವನ್ನು ನಿರ್ವಹಿಸುತ್ತಿದ್ದಾರೆ.




