ಬಿಹಾರದಲ್ಲಿ ವಿರೋಧ ಪಕ್ಷಗಳ ಒಕ್ಕೂಟ ಮಹಾಘಟಬಂಧನ ಮುಂದಿನ ಸರ್ಕಾರವನ್ನು ರಚಿಸುವ ವಿಶ್ವಾಸವನ್ನು ವ್ಯಕ್ತಿಪಡಿಸಿರುವ ಆರ್ಜೆಡಿ ನಾಯಕ, ಮುಖ್ಯಮಂತ್ರಿ ಅಭ್ಯರ್ಥಿ ತೇಜಸ್ವಿ ಯಾದವ್ ಪ್ರಮಾಣವಚನ ಸ್ವೀಕಾರ ದಿನಾಂಕವನ್ನೂ ಘೋಷಿಸಿದ್ದಾರೆ.
ಪಟನಾದಲ್ಲಿ ಮಾಧ್ಯಮ ಪ್ರತಿಕ್ರಿಯಿಸಿದ ಯಾದವ್, ಚುನಾವಣೆ ಫಲಿತಾಂಶ ಪ್ರಕಟವಾದ ನಾಲ್ಕು ದಿನಗಳ ನಂತರ ಪ್ರಮಾಣವಚನ ಸ್ವೀಕಾರ ಸಮಾರಂಭ ನಡೆಯಲಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದ್ದಾರೆ. “ನವೆಂಬರ್ 14ರಂದು ಬಿಹಾರ ವಿಧಾನಸಭಾ ಚುನಾವಣೆಯ ಫಲಿತಾಂಶಗಳನ್ನು ಘೋಷಿಸಲಾಗುವುದು. ನವೆಂಬರ್ 18ರಂದು ಪ್ರಮಾಣವಚನ ಸ್ವೀಕಾರ ನಡೆಯಲಿದೆ” ಎಂದು ವರದಿಗಾರರಿಗೆ ತಿಳಿಸಿದ್ದಾರೆ.
ಇದನ್ನು ಓದಿದ್ದೀರಾ? ಬಿಹಾರ ಚುನಾವಣೆ | ಶಿಕ್ಷಣ, ನಿರುದ್ಯೋಗ – ಬಿಹಾರಿ ಯುವಜನರು ಬಯಸುತ್ತಿರುವುದೇನು?
ಬಿಹಾರ ಮುಖ್ಯಮಂತ್ರಿ ನಿತೀಶ್ ಕುಮಾರ್ ಅವರ ಜೆಡಿಯು ಅಭ್ಯರ್ಥಿಯಾಗಿ ಕಣದಲ್ಲಿರುವ ಮಾಜಿ ಮೊಕಾಮಾ ಶಾಸಕ ಅನಂತ್ ಸಿಂಗ್ ಅವರ ಬಂಧನದ ಬಗ್ಗೆ ಪ್ರತಿಕ್ರಿಯಿಸುತ್ತಾ ತೇಜಸ್ವಿ ಯಾದವ್ ಈ ಹೇಳಿಕೆಯನ್ನು ನೀಡಿದ್ದಾರೆ. “ಅಂತಹ ಗಂಭೀರ ಘಟನೆ ನಡೆದಾಗ ಈ ಬಂಧನವಾಗಲೇಬೇಕು” ಎಂದು ಹೇಳಿದರು. ಪ್ರಶಾಂತ್ ಕಿಶೋರ್ ಅವರ ಜನ್ ಸುರಾಜ್ ಪಕ್ಷವನ್ನು ಬೆಂಬಲಿಸುತ್ತಿದ್ದ ದುಲಾರ್ ಚಂದ್ ಯಾದವ್ ಅವರ ಹತ್ಯೆಗೆ ಸಂಬಂಧಿಸಿದಂತೆ ಜೆಡಿಯು ಮಾಜಿ ಶಾಸಕ ಅನಂತ್ ಸಿಂಗ್ ಬಂಧನ ನಡೆದಿದೆ.
“ಇಂದು ಪ್ರಧಾನಿ ಬಿಹಾರಕ್ಕೆ ಭೇಟಿ ನೀಡುತ್ತಿದ್ದಾರೆ. ಘೋರ ಅಪರಾಧಗಳು ನಡೆಯದೆ ಒಂದು ದಿನವೂ ಸಾಗದ ರಾಜ್ಯದ ಪರಿಸ್ಥಿತಿಯನ್ನು ಅವರು ಗಮನಿಸಬೇಕು. ಆದರೆ ಮಹಾಘಟಬಂಧನ್ ಸರ್ಕಾರ ರಚಿಸಿದ ಕೂಡಲೇ ಎಲ್ಲವೂ ಬದಲಾಗುತ್ತದೆ. ನವೆಂಬರ್ 26 ಮತ್ತು ಜನವರಿ 26ರ ನಡುವೆ ಒಂದು ತಿಂಗಳ ಅವಧಿಯಲ್ಲಿ ಜಾತಿ ಮತ್ತು ಧರ್ಮವನ್ನು ಲೆಕ್ಕಿಸದೆ ಎಲ್ಲಾ ಅಪರಾಧಿಗಳು ಜೈಲು ಸೇರುತ್ತಾರೆ. ಸಾಧ್ಯವಾದಷ್ಟು ಕಠಿಣ ಕ್ರಮ ಎದುರಿಸುವುದನ್ನು ನಾವು ಖಚಿತಪಡಿಸಿಕೊಳ್ಳುತ್ತೇವೆ” ಎಂದು ಯಾದವ್ ಹೇಳಿದರು.





